ಅಂತೂ ಇಂತೂ ಅಂಬರೀಶ್ಗೆ ನೇರ ಎಚ್ಚರಿಕೆಯನ್ನು ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ನ ಒಳಗೊಳಗೇ ಬೇಯುತ್ತಿದ್ದ ಭಿನ್ನಮತವನ್ನು ಸ್ಪೋಟಿಸಿದ್ದಾರೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಸ್ಫರ್ಧಿಸುವ ವಿಚಾರವಾಗಿ ಬಲುದೊಡ್ಡ ತಲೆನೋವಾಗಿರುವ ಮಂಡ್ಯ ಶಾಸಕ ಅಂಬರೀಶ್ ವಿರುದ್ಧ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕವಚನದಲ್ಲೇ ವಾಗ್ದಾಳಿ ನಡೆಸಿ ನೇರ ಎಚ್ಚರಿಕೆಯನ್ನು ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮಾತನಾಡಿದ್ದ ಮಾಜಿ ಸಚಿವ ಹಾಗೂ ಶಾಸಕ ಅಂಬರೀಶ್ ಅವರ ಆಪ್ತ ಸ್ನೇಹಿತ ಅಮರಾವತಿ ಚಂದ್ರ ಶೇಕರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡು ಕಳಿಸಿದ್ದಾರೆ. ತನ್ನ ಭೇಟಿಗೆ ಬಂದಿದ್ದ ಅಮರಾವತಿ ಚಂದ್ರಶೇಖರ್ ಅವರಲ್ಲಿ ಅಂಬರೀಶ್ ಅವರನ್ನು ನಿಂದಿಸುವ ಮೂಲಕ ಉರಿಯುತ್ತಿದ್ದ ಬೆಂಕಿಗೆ ತುಪ್ಪವನ್ನು ಎರೆದಿದ್ದಾರೆ.
ಅಂಬರೀಶ್ ಅವರಿಗೆ ಈ ಬಾರಿಯೂ ಮಂಡ್ಯದಿಂದ ಟಿಕೆಟ್ ಖಾತ್ರಿಪಡಿಸಲಾಗಿತ್ತು. ಬಿ-ಫಾರಂ ಸ್ವೀಕರಿಸಲೂ ಆಹ್ವಾನ ನೀಡಲಾಗಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಚಿವ ಅಂಬರೀಶ್ ಗರಂ ಆಗಿದ್ದರು. ಈ ಕಾರಣಕ್ಕಾಗಿಯೇ ಅವರು ಬಿ ಫಾರಂ ಸ್ವೀಕರಿಸಲೂ ಬಾರದೆ ಮೀನಾ ಮೇಷ ಎನಿಸುತ್ತಿದ್ದರು. ಅದೆಷ್ಟೇ ಪ್ರಯತ್ನಿಸಿದರೂ ಅಂಬರೀಶ್ ಸಂಪರ್ಕಕ್ಕೆ ಸಿಗಲೇ ಇಲ್ಲ. ಇದರಿಂದ ಮುಖ್ಯಮಂತ್ರಿ ಏಕವಚನದಲ್ಲೇ ಅವರನ್ನು ನಿಂದಿಸಿದ್ದಾರೆ.
ಸಂಧಾನಕ್ಕೆ ತೆರಳಿದ್ದ ಅಂಬಿ ಆಪ್ತ ಅಮರಾವತಿ ಚಂದ್ರಶೇಖರ್ ಅವರೊಂದಿಗೆ ಮಾತಿಗಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಅವನು ಕೇಳದೆನೇ ಟಿಕೆಟ್ ನೀಡಿದ್ದೇವೆ. ಇನ್ನೂ ಏನು ಬೇಕಂತೆ ಅವನಿಗೆ? ಬಿ ಫಾರಂ ಕೂಡ ಕೊಂಡು ಹೋಗಿ ಎಂದು ಹೇಳಿದ್ದೇವೆ. ಮತ್ತೆ ಏನಾಗ್ಬೇಕಂತೆ ಅವನಿಗೆ? ಇದೆಲ್ಲಾ ಅಗೋದಿಲ್ಲ ಅಂತ ಹೇಳು ಹೋಗು. ಆಗುವುದಾದರೆ ಚುನಾವಣೆಗೆ ಸ್ಪರ್ಧಿಸಲಿ. ಇಲ್ಲವಾದಲ್ಲಿ ಯಾರು ಸ್ಪರ್ಧಿಸಬೇಕೆಂದು ಕಾಂಗ್ರೆಸ್ ಪಕ್ಷ ತೀರ್ಮಾನ ಕೈಗೊಳ್ಳುತ್ತದೆ. ಅವನು ಹೇಳಿದವರಿಗೆಲ್ಲಾ ಟಿಕೆಟ್ ನೀಡಲು ಆಗೋದಿಲ್ಲ. ನಮ್ಮಲ್ಲಿ ಹೈಕಮಾಂಡ್ ಎಂಬ ಪದ್ದತಿ ಇದೆ. ಹೀಗಾಗಿ ಅದನ್ನೆಲ್ಲಾ ನೋಡಬೇಕಾಗುತ್ತದೆ. ಬೇಕಾಬಿಟ್ಟಿ ಪಕ್ಷದಲ್ಲಿ ಇರುವ ಹಾಗಿಲ್ಲ ಅಂತ ಅವನಲ್ಲಿ ಹೋಗಿ ಹೇಳು. ಮಾತಾಡ್ಬೇಕು ಅಂತ ಹೇಳ್ತಾನೆ. ಆದರೆ ಅವನೇ ಸಿಗ್ತಾ ಇಲ್ಲ. ಇದಕ್ಕೆ ನಾವೇನೂ ಮಾಡೋಕೆ ಆಗೋದಿಲ್ಲ. ಸ್ಪರ್ಧಿಸೋಕ್ಕೆ ಆಗುತ್ತಾ ಇಲ್ವಾ ಎಂದು ಹೇಳಲಿ. ಪದೇ ಪದೇ ಕಾಲು ಹಿಡಿದುಕೊಂಡು ಹೋಗಲು ಸಾಧ್ಯವಿಲ್ಲ ಎಂದು ಹೋಗಿ ಹೇಳು ಅವನಲ್ಲಿ” ಎಂದು ವಾಗ್ದಾಳಿ ನಡೆಸಿದ್ದಾರೆ.
ಕೇಳದೆನೇ ಟಿಕೆಟ್ ಕೊಟ್ಟ ಕಾಂಗ್ರೆಸ್..,!
ತನಗೆ ಟಿಕೆಟ್ ಬೇಕು ಅಂತ ಅಂಬರೀಶ್ ಅವರು ಈ ಬಾರಿ ಕೇಳಲೇ ಇಲ್ಲ. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸಹಿತ ಅನೇಕ ಮುಖಂಡರು ಈ ಬಾರಿಯೂ ಅಂಬರೀಶ್ ಅವರೇ ಮಂಡ್ಯದಲ್ಲಿ ಸ್ಪರ್ಧಿಸಬೇಕೆಂಬ ಒಲವನ್ನು ಹೊಂದಿದ್ದರು. ಒಂದು ವೇಳೆ ಅಂಬರೀಶ್ ಸ್ಪರ್ಧಿಸದಿದ್ದರೆ ಅವರು ತಮ್ಮ ಸ್ಥಾನದಿಂದ ತಟಸ್ಥರಾಗುತ್ತಾರೆ. ಈ ಮೂಲಕ ಕಾಂಗ್ರೆಸ್ ಪಕ್ಷವನ್ನು ತಮ್ಮ ಪ್ರಾಬಲ್ಯವುಳ್ಳ ಕ್ಷೇತ್ರಗಳಲ್ಲಿ ಸೋಲಿಸುತ್ತಾರೆ. ಹೀಗಾಗಿಯೇ ಅವರು ಟಿಕೆಟ್ಗಾಗಿ ಯಾವುದೇ ಅರ್ಜಿ ಹಾಕದೇ ಸುಮ್ಮನಿದ್ದರು. ಆದರೂ ಕಾಂಗ್ರೆಸ್ ನಾಯಕರು ಅವರ ಅನಿವಾರ್ಯತೆಯನ್ನು ಅರಿತುಕೊಂಡು ಟಿಕೆಟ್ ನೀಡಿದ್ದರು.
ಬಿ-ಫಾರಂ ಕೊಳ್ಳಲೇ ಇಲ್ಲ ಅಂಬರೀಶ್..!
ಕೇಳದೆನೇ ಟಿಕೆಟ್ ನೀಡಿದ್ದರೂ ಅಂಬರೀಶ್ ಮಾತ್ರ ತನ್ನ ರೆಬೆಲ್ತನದಿಂದ ಹೊರ ಬರಲೇ ಇಲ್ಲ. ತಮ್ಮ ಪಕ್ಷದ ಮುಖಂಡರಾದ ಕೆಜೆ ಜಾರ್ಜ್, ಕೆಪಿಸಿಸಿ ಅಧ್ಯಕ್ಷ ಸಹಿತ ಕಾಂಗ್ರೆಸ್ ದಿಗ್ಗಜರೇ ಬಿ-ಫಾರಂ ಹಿಡಿದುಕೊಂಡು ಅಂಬರೀಶ್ ಮನೆಗೆ ಹುಡುಕುತ್ತಾ ಹೋಗಿದ್ದರು. ಆದರೂ ಅಂಬರೀಶ್ ಕಾಂಗ್ರೆಸ್ ನಾಯಕರ ಕೈಗೆ ಸಿಗಲೇ ಇಲ್ಲ. ಅಂಬರೀಶ್ ತಮ್ಮ ಪಕ್ಷದ ನಾಯಕರ ವಿರುದ್ಧವೇ ಸಿಡಿದೆದ್ದಿದ್ದರು. ಈ ಹಿಂದೆ ತನ್ನನ್ನು ಸಚಿವ ಸ್ಥಾನದಿಂದ ಕಿತ್ತೆಸೆದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ನಾಯಕರ ವಿರುದ್ಧ ಅಸಮಧಾನವನ್ನು ಹೊಂದಿದ್ದರು.
ಕಾಂಗ್ರೆಸ್ನಲ್ಲಿ ಒಳಜಗಳ ಇದೀಗ ಭುಗಿಲೆದ್ದಿದ್ದು ಇದು ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತಲುಪುತ್ತೆ ಅನ್ನೋದೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಭಯಕ್ಕೆ ಕಾರಣವಾಗಿದೆ. ತನ್ನದೇ ಕ್ಷೇತ್ರದಲ್ಲಿ ಸೋಲಿನ ಭೀತಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮಂಡ್ಯ ಕ್ಷೇತ್ರದ ಚುನಾವಣೆಯೇ ದೊಡ್ಡ ತಲೆನೋವಾಗಿ ಪರಿಣಮಿಸುವುದರಲ್ಲಿ ಸುಳ್ಳಲ್ಲ.
source: public tv
-ಏಕಲವ್ಯ