ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಹಾಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದು, ಈ ಚುನಾವಣೆಯಲ್ಲಿ ಎನ್ಡಿಎ ಯಾತಕ್ಕಾಗಿ ಗೆಲುವು ಸಾಧಿಸಬೇಕು ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ ಯು 400 ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಈ ಗೆಲುವಿನ ಲೆಕ್ಕಾಚಾರಕ್ಕೆ ಕಾರಣ ಏನು ಎಂಬುದನ್ನು ಪ್ರಧಾನಿ ಮೋದಿ ಅವರು ಬಿಚ್ಚಿಟ್ಟಿರುವುದಾಗಿದೆ.
ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲದೇ ಹೋದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಎನ್ಡಿಎ ಸರ್ಕಾರ ತೆಗೊದುಕೊಂಡ ಮಹತ್ವದ ನಿರ್ಣಯಗಳನ್ನು, ರದ್ದತಿಗಳನ್ನು ಮರು ಸ್ಥಾಪನೆ ಮಾಡುವ ಸಾಧ್ಯತೆ ಇದೆ. ಬಿಜೆಪಿ 400 ಕ್ಕೂ ಹೆಚ್ಚು ಮತಗಳನ್ನು ಪಡೆದಲ್ಲಿ ಕಾಂಗ್ರೆಸ್ ಇಂತಹ ಕುಕೃತ್ಯ ನಡೆಸುವುದನ್ನು ಇಲ್ಲವಾಗಿಸಬಹುದು. ಜಮ್ಮು ಕಾಶ್ಮೀರವನ್ನು ಭಾರತದಿಂದ ಬೇಧಿಸಿದ್ದ 370 ನೇ ವಿಧಿಯನ್ನು ನಾವು ರದ್ದು ಮಾಡಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಇದನ್ನು ಮತ್ತೆ ಜಾರಿಗೆ ತರುವ ಹುನ್ನಾರ ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಹಾಗೆಯೇ ನಾವು ಬಹು ಕೋಟಿ ರಾಮ ಭಕ್ತರ ಸುಮಾರು ಐನೂರು ವರ್ಷಗಳ ಹೋರಾಟಕ್ಕೆ ನ್ಯಾಯ ಕೊಟ್ಟಿದ್ದೇವೆ. ಅಯೋಧ್ಯೆಯ ರಾಮ ಜನ್ಮಸ್ಥಾನ ಆತನಿಗೇ ದೊರೆಯುವ ಹಾಗೆ ಮಾಡಿದ್ದು ಮಾತ್ರವಲ್ಲದೆ, ಅಲ್ಲಿ ನಿರೀಕ್ಷೆಯ ರಾಮ ಮಂದಿರ ಸಹ ನಿರ್ಮಾಣ ಮಾಡಿದ್ದೇವೆ. ಒಂದು ವೇಳೆ ನಮಗೆ ಈ ಬಾರಿ ಬಹುಮತ ಬಾರದೇ ಹೋದಲ್ಲಿ ರಾಮ ಮಂದಿರಕ್ಕೆ ಮತ್ತೆ ಬಾಬರಿ ಬೀಗ ಬೀಳುವ ಸಾಧ್ಯತೆಯನ್ನು ಸಹ ಅಲ್ಲಗಳೆಯುವ ಹಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ದೇಶದ ಜನತೆ ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರ ಈಗಾಗಲೇ ಸಂಸತ್ತಿನಲ್ಲಿ ನಾನೂರಕ್ಕೂ ಹೆಚ್ಚು ಸ್ಥಾನಗಳನ್ನು ಹೊಂದಿದೆ ಎನ್ನುವುದನ್ನು ಗಮನದಲ್ಲಿ ಇರಿಸಿಕೊಳ್ಳಬೇಕು. ಈ ನಮ್ಮ ಸಂಖ್ಯಾ ಬಲವನ್ನು ನಾವು ಜಮ್ಮು ಕಾಶ್ಮೀರವನ್ನು ಆರ್ಟಿಕಲ್ 370 ಎಂಬ ಬಂಧನದಿಂದ ಬಿಡಿಸಲು ಬಳಕೆ ಮಾಡಿದ್ದೇವೆ ಎನ್ನುವುದನ್ನು ಸಹ ಜನರಿಗೆ ತಿಳಿಸುವುದಾಗಿ ಹೇಳಿದ್ದಾರೆ.
ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಕೊಡುಗೆಗಳನ್ನು ಕಾಂಗ್ರೆಸ್ ಪಕ್ಷ ಅವಗಣಿಸುತ್ತಿದೆ. ವಿರೋಧ ಪಕ್ಷ ಸಂವಿಧಾನ ರಚನೆಯಲ್ಲಿ ಅವರ ಕನಿಷ್ಠ ಪಾಲ್ಗೊಳ್ಳುವಿಕೆಯನ್ನು ಪ್ರತಿಪಾದಿಸಲು ಪ್ರಾರಂಭ ಮಾಡಿದೆ. ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ದ್ವೇಷಿಸುತ್ತಿದೆ. ನಾವು ಮತ್ತೆ ಬಹುಮತ ಪಡೆದರೆ ಸಂವಿಧಾನ ಬದಲಾಯಿಸುತ್ತೇವೆ ಎನ್ನುವ ಸುಳ್ಳು ಸುದ್ದಿ ಹರಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಅವರು ಕಿಡಿ ಕಾರಿದ್ದಾರೆ.