ಡೋಕ್ಲಾಂನಲ್ಲಿನ ಮಿಲಿಟರಿ ಬಿಕ್ಕಟ್ಟಿನ ಬಳಿಕ ಮೊದಲ ಬಾರಿಗೆ ಎನ್ನುವಂತೆ ಭಾರತ ಮತ್ತು ಚೀನಾ ರಾಷ್ಟ್ರಗಳು ಗಡಿ ಮಾತುಕತೆ ನಡೆಸಿ ಶಾಂತಿ ಒಪ್ಪಂದವನ್ನು ಮಾಡಿಕೊಂಡರು ಕೂಡ ಮತ್ತೆ ಚೀನಾ ಕ್ಯಾತೆ ತೆಗೆಯಲು ಆರಂಭಿಸಿತ್ತು!! ಆದರೆ ಈ ಬಾರಿ ಭಾರತ ಚೀನಾ ಮಧ್ಯೆ ತೀವ್ರ ಗಡಿ ವಿವಾದಕ್ಕೆ ಕಾರಣವಾಗಿರುವ ಡೋಕ್ಲಾಂ ಬಿಕ್ಕಟ್ಟನ್ನು ಬಗೆ ಹರಿಸಲು, ಭಾರತದ ಅಧಿಕಾರಿಗಳು ಭೂತಾನ್ ಗೆ ಭೇಟಿ ನೀಡಿ ಚೀನಾಗೆ ಶಾಕ್ ನೀಡಿದ್ದಾರೆ.
ಮೇಲ್ನೋಟಕ್ಕೆ ಡೋಕ್ಲಾಂ ಬಿಕ್ಕಟ್ಟು ಬಗೆಹರಿದಿರುವಂತೆ ಕಂಡುಬಂದಿದ್ದರೂ ಚೀನಾ ಮತ್ತು ಅಲ್ಲಿನ ಅಧ್ಯಕ್ಷ ಕ್ಷಿ ಜಿಂಗ್ ಪಿಂಗ್ ಅವರ ಸರ್ಕಾರದ ದೂರದೃಷ್ಟಿಯ ರಾಜಕಾರಣವನ್ನು ಗಮನಿಸಿ ಭಾರತ ಸದಾ ಎಚ್ಚರದಿಂದಿರುವುದು ಅಗತ್ಯವಾಗಿದೆ. ಅಷ್ಟೇ ಅಲ್ಲದೇ, 1980ರ ನಂತರದಲ್ಲಿ ಅತ್ಯಂತ ಗಂಭೀರ ಸಮಸ್ಯೆಯಾಗಿ ಉದ್ಭವಿಸಿದ್ದ ಡೋಕ್ಲಾಂ ವಿವಾದದಲ್ಲಿ ಚೀನಾ ಹಲವಾರು ತಪ್ಪು ಹೆಜ್ಜೆಗಳನ್ನು ಇರಿಸುವ ಮೂಲಕ ಮುಜುಗರಕ್ಕೀಡಾಗಿದೆ.
1980ರ ದಶಕದ ಸಂಡೊರುಂಗ್ ಚು ಪ್ರಕರಣ ಎಂಟು ವರ್ಷಗಳ ನಂತರ ಪರಿಹಾರ ಕಂಡಿತ್ತು. ಆದರೆ 2013, 2014 ಮತ್ತು ಇತ್ತೀಚಿನ ಡೋಕ್ಲಾಂ ವಿವಾದ ಶೀಘ್ರವಾಗಿ ಪರಿಹಾರ ಕಂಡಿತ್ತು. ಕಾರಣ, ಭಾರತದ ರಾಷ್ಟ್ರೀಯ ಶಕ್ತಿಯಾಗಿ ಉಲ್ಬಣಗೊಂಡಿದೆಯಲ್ಲದೇ, ದೀರ್ಘ ಕಾಲ ಭಾರತದ ಮೇಲೆ ಒತ್ತಡ ಹೇರಲು ಚೀನಾಗೆ ಸುಲಭ ಸಾಧ್ಯವಲ್ಲ ಎಂದು!! ಎರಡನೆಯ ಕಾರಣ ಎಂದರೆ ಸ್ಥಳೀಯ ಒತ್ತಡಗಳು ಮತ್ತು ಬಹುಮುಖೀ ರಾಜಕಾರಣದ ಪರಿಣಾಮವಾಗಿ ದೊಡ್ಡ ದೇಶಗಳು ಸಣ್ಣ ದೇಶಗಳ ಮೇಲೆ ನಿಯಂತ್ರಣ ಸಾಧಿಸುವುದು ಕಷ್ಟವಾಗಿದೆ. ಡೋಕ್ಲಾಂ ವಿವಾದಲ್ಲಿ ಭಾರತ ತನ್ನ ಗಡಿರೇಖೆಯನ್ನು ದಾಟಿ ಭೂತಾನ್ ದೇಶದ ನೆರವಿಗೆ ಧಾವಿಸುತ್ತದೆ ಎಂದು ಚೀನಾ ಊಹಿಸಿಯೂ ಇರಲಿಲ್ಲ. ಭೂತಾನ್ ಸುಲಭವಾಗಿ ತನ್ನ ಬೃಹತ್ ಶಕ್ತಿಗೆ ಶರಣಾಗುತ್ತದೆ ಎಂದು ಚೀನಾ ಭಾವಿಸಿತ್ತು.
ಅಷ್ಟೇ ಅಲ್ಲದೆ ತನ್ನ ಮಾಧ್ಯಮ ಕ್ಷೇತ್ರವನ್ನು ಬಳಸಿಕೊಂಡು ವಿಶ್ಲೇಷಕರ ಮೂಲಕ, ಅಧಿಕೃತ ವಕ್ತಾರರ ಮೂಲಕ ಭೂತಾನ್ ಮೇಲೆ ಒತ್ತಡ ಹೇರಲಾರಂಭಿಸಿತ್ತು. ಆದರೆ ಇದಾವುದನ್ನೂ ಲೆಕ್ಕಿಸದೆ ಭಾರತ ಸರ್ಕಾರ ಚೀನಾಗೆ ಮುಜುಗರ ಉಂಟು ಮಾಡುವ ರೀತಿಯಲ್ಲಿ ಪ್ರಬುದ್ಧ ನಿರ್ಧಾರಗಳನ್ನು ಕೈಗೊಂಡಿತ್ತು. ಚೀನಾದ ಪ್ರಚೋದನೆಯ ಹೊರತಾಗಿಯೂ ಭಾರತ ಸರ್ಕಾರ ರಾಜತಾಂತ್ರಿಕ ಸಂಪರ್ಕವನ್ನು ಕಡಿದುಕೊಳ್ಳಲಿಲ್ಲ. ಎರಡೂ ದೇಶಗಳು ಜಂಟಿಹೇಳಿಕೆಯನ್ನೂ ನೀಡಲಿಲ್ಲ. ಏಕೆಂದರೆ ಯಾವುದೇ ಸಂದರ್ಭದಲ್ಲಿ ಡೋಕ್ಲಾಂ ವಿವಾದ ಕೊನೆಗೊಂಡರೆ ಎರಡೂ ದೇಶಗಳು ಯಶಸ್ಸಿನ ಶ್ರೇಯಸ್ಸು ತಮ್ಮದಾಗಿಸಿಕೊಳ್ಳಲು ಸಿದ್ಧವಾಗಿದ್ದವು.
ಆದರೆ ಭಾರತ ಸರ್ಕಾರ ತನ್ನ ಸೇನೆಯನ್ನು ಹಿಂಪಡೆಯುವ ಬಗ್ಗೆ ಒಮ್ಮೆಯೂ ಪ್ರಸ್ತಾಪಿಸಿರಲಿಲ್ಲ. ಆದರೆ ಡೋಕ್ಲಾಂನಲ್ಲಿ ಹೆದ್ದಾರಿ ನಿರ್ಮಿಸುವದನ್ನು ನಿಲ್ಲಿಸುವುದರ ಮೂಲಕ ಚೀನಾ ಭಾರತದೊಡನೆ ಸಂಘರ್ಷವನ್ನು ತಪ್ಪಿಸಿದೆ. ಈ ಸಂಘರ್ಷದ ದೀರ್ಘಕಾಲಿಕ ಪರಿಣಾಮಗಳೆಂದರೆ ಚೀನಾದ ಸುತ್ತಮುತ್ತ ಇರುವ ಚಿಕ್ಕಪುಟ್ಟ ದೇಶಗಳು ಚೀನಾದೊಡನೆ ವ್ಯವಹರಿಸುವಾಗ ಎಚ್ಚರದಿಂದಿರುವುದು!! ಏನೇ ಆದರೂ ಕೂಡ ಚೀನಾ ಭಾರತದೊಂದಿಗೆ ಪದೇ ಪದೇ ಕ್ಯಾತೆ ತೆಗೆಯುತ್ತಲೇ ಇದ್ದು ಇದಕ್ಕೆ ಅಂತ್ಯ ಕಾಣಲು ಭಾರತದ ಅಧಿಕಾರಿಗಳು ಇದೀಗ ಮುಂದಾಗಿದ್ದಾರೆ.
ಹೌದು…. ಭಾರತ ಚೀನಾ ಮಧ್ಯೆ ತೀವ್ರ ಗಡಿ ವಿವಾದಕ್ಕೆ ಕಾರಣವಾಗಿರುವ ಡೋಕ್ಲಾಂ ಬಿಕ್ಕಟ್ಟು ಬಗೆ ಹರಿಸಲು ಭೂತಾನ್ ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜೀತ್ ದೋವಾಲ್ ಭೇಟಿ ನೀಡಿದ್ದು, ಭೂತಾನ್ ನ ಪ್ರಮುಖ ಅಧಿಕಾರಿಗಳೊಂದಿಗೆ ಡೋಕ್ಲಾಂ ಗಡಿ ಬಿಕ್ಕಟ್ಟು ಬಗೆಹರಿಸಿ, ಗಡಿಯಲ್ಲಿ ಶಾಂತಿ ನೆಲೆಸುವ ಕುರಿತು ಮಾತುಕತೆ ನಡೆಸಿದ್ದಾರೆ.
ಅಜಿತ್ ದೋವಲ್ ನೇತೃತ್ವದ ತಂಡದಲ್ಲಿ ರಾಷ್ಟ್ರೀಯ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಭೂತಾನ್ ಗೆ ಭೇಟಿ ನೀಡಿದ್ದು, ಶಾಂತಿ ಮಾತುಕತೆ ನಡೆಸಿದ್ದಾರೆ. ಡೋಕ್ಲಾಂನಲ್ಲಿ ಭೂತಾನ್ ಪಾಲುದಾರಿಕೆ, ಬಿಕ್ಕಟ್ಟಿಗೆ ಮೂಲ ಕಾರಣ, ಚೀನಾ ಹಸ್ತಕ್ಷೇಪ ಸೇರಿ ನಾನಾ ತಂತ್ರಗಾರಿಕೆಗಳ ಬಗ್ಗೆ ಫೆಬ್ರವರಿ 6 ಮತ್ತು 7 ರಂದು ಭೇಟಿ ನೀಡಿದ ವೇಳೆ ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದೆ.
ಹಾಗಾಗಿ, ಭೂತಾನ್ ಮತ್ತು ಭಾರತ ಉಭಯ ರಾಷ್ಟ್ರಗಳು ಡೋಕ್ಲಾಂನಲ್ಲಿ ಚೀನಾ ಸೈನಿಕ ಕಾರ್ಯಚರಣೆ ಬಗ್ಗೆ ಎಚ್ಚರವಹಿಸಬೇಕು. ಉಭಯ ರಾಷ್ಟ್ರಗಳ ಮಧ್ಯೆ ಸೈನಿಕ ಸಹಕಾರ ಪಡೆಯಬೇಕು. ಡೋಕ್ಲಾಂನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಗಿದೆ. ಇದು ಭಾರತ ಮತ್ತು ಭೂತಾನ್ ಗಳ ಮಧ್ಯೆ ಉತ್ತಮ ಸ್ನೇಹ ಬಾಂಧವ್ಯವನ್ನು ವೃದ್ಧಿಸಲಿದೆ ಎಂದು ಕೇಂದ್ರ ವಿದೇಶಾಂಗ ಇಲಾಖೆ ಮೂಲಗಳು ತಿಳಿಸಿವೆ.
ಡೋಕ್ಲಾಂ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತ ಮತ್ತು ಭೂತಾನ್ ನ ಉನ್ನತ ಮಟ್ಟದ ಅಧಿಕಾರಿಗಳು ಇದೇ ಮೊದಲ ಭಾರಿಗೆ ಬೇಟಿ ಮಾಡಿದ್ದು ಹೆಮ್ಮೆಯ ವಿಚಾರವಾಗಿದೆ. ಆದರೆ ಈ ಮೊದಲು ಅಧಿಕಾರಿಗಳು ಭೇಟಿ ಮಾಡಿದ್ದರು ಕೂಡ ಡೋಕ್ಲಾಂ ವಿವಾದದ ಬಗ್ಗೆ ಮಾತನಾಡಲು ಅವಕಾಶಗಳು ಸಿಕ್ಕಿರಲಿಲ್ಲ!! ಆದರೆ ಇದೇ ಮೊದಲ ಬಾರಿಗೆ ಉನ್ನತ ಮಟ್ಟದ ಅಧಿಕಾರಿಗಳು ಡೋಕ್ಲಾಂಗೆ ಭೇಟಿ ನೀಡಿದ್ದಲ್ಲದೇ ಗಡಿಯಲ್ಲಿ ಶಾಂತಿ ನೆಲೆಸುವ ಕುರಿತು ಮಾತುಕತೆ ನಡೆಸಲಾಗಿದೆ. ಅಷ್ಟೇ ಅಲ್ಲದೇ, ಭೂತಾನ್ ಭಾರತದ ಆಡಳಿತಾತ್ಮಕ ಮತ್ತು ಸೈನಿಕ ಸಹಕಾರ ಬಯಸುತ್ತಿರುವ ಕುರಿತು ಮಾತುಕತೆ ನಡೆದಿವೆ ಎಂದು ತಿಳಿದು ಬಂದಿದೆ.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸಿಗೆ ನಲುಗಿ ಹೋಗಿರುವ ಚೀನಾ, ತನ್ನ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ಇನ್ನಿಲ್ಲದ ಹರಸಾಹಸವನ್ನು ಪಡುತ್ತಿದ್ದರೆ, ಮೇಲ್ನೋಟಕ್ಕೆ ಎನ್ನುವಂತೆ ಇತ್ತ ಪಾಕಿಸ್ತಾನದೊಂದಿಗೂ ತನ್ನ ಮಿತೃತ್ವವನ್ನು ಕಳೆದುಕೊಳ್ಳಲೂ ಮುಂದಾಗಿದೆ. ಆದರೆ ಪದೇ ಪದೇ ಗಡಿ ಭಾಗದಲ್ಲಿ ಕ್ಯಾತೆ ತೆಗೆಯುತ್ತಿದ್ದ ಚೀನಾಗೆ ಇದೀಗ ಮತ್ತೊಮ್ಮೆ ತೀವ್ರ ಮುಖಭಂಗವಾಗಿದೆಯಲ್ಲದೇ, ಭಾರತದ ಅಧಿಕಾರಿಗಳು ಭೂತಾನ್ ಗೆ ಭೇಟಿ ನೀಡಿ ಚೀನಾಗೆ ಶಾಕ್ ನೀಡಿದೆ.
ಈಗಾಗಲೇ ಗಡಿಯಲ್ಲಿ ಡೋಕ್ಲಾಂ ಬಿಕ್ಕಟ್ಟಿನ ನಂತರ ಚೀನಾ ಪದೇ ಪದೇ ಭಾರತೀಯ ಸೈನಿಕರಿಗೆ ಯುದ್ದದ ಬೆದರಿಕೆ ನೀಡುತ್ತಿದೆ. ಅಷ್ಟೇ ಅಲ್ಲದೇ ಭಾರತದ ಗಡಿಯುದ್ದಕ್ಕೂ ತನ್ನ ಸೇನೆಯ ಸಂಖ್ಯೆಯನ್ನು ಹೆಚ್ಚಿಸುತ್ತಿರುವ ಚೀನಾ ಪ್ರತಿ ಬಾರಿಯೂ ಕ್ಯಾತೆ ತೆಗೆಯುತ್ತಲೇ ಇದೆ. ಇದಕ್ಕೆ ಪ್ರತಿಯಾಗಿ ಚೀನಾದ ಯಾವುದೇ ಮೂಲೆಗೂ ತಲುಪಬಲ್ಲ ಪರಮಾಣು ಸಾಮರ್ಥ್ಯದ ಅಗ್ನಿ ಕ್ಷಿಪಣಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿದ್ದು, ಈ ಕ್ಷಿಪಣಿಯನ್ನು ಒಡಿಶಾ ಕರಾವಳಿಯ ಭಾರತದ ಸುರಕ್ಷತಾ ಘಟಕದಿಂದ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿ ಶಾಕ್ ನೀಡಿತ್ತು!!
ಆದರೆ ಇದೀಗ ಭಾರತದ ಅಧಿಕಾರಿಗಳು ಭೂತಾನ್ ಗೆ ಬೇಟಿ ನೀಡಿದ್ದಲ್ಲದೇ ಗಡಿಯಲ್ಲಿ ಶಾಂತಿ ನೆಲೆಸುವ ಕುರಿತು ಮಾತುಕತೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ, ಭೂತಾನ್ ಭಾರತದ ಆಡಳಿತಾತ್ಮಕ ಮತ್ತು ಸೈನಿಕ ಸಹಕಾರ ಬಯಸುತ್ತಿದ್ದು ಭಾರತ ಮತ್ತು ಭೂತಾನ್ ಗಳ ಮಧ್ಯೆ ಉತ್ತಮ ಸ್ನೇಹ ಬಾಂಧವ್ಯವನ್ನು ಬೆಳೆಸಲು ಸಜ್ಜಾಗಿದ್ದೇ ಚೀನಾಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ!!
– ಅಲೋಖಾ