ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎನ್ನುವ ಗಾದೆ ಮಾತು ಸದ್ಯ ಆಡಳಿತ ಚುಕ್ಕಾಣಿ ಹಿಡಿದಿರುವ ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಹೇಳಿ ಮಾಡಿರುವಂತಿದೆ.
ಬಿಟ್ಟಿ ಭಾಗ್ಯಗಳನ್ನು ನೀಡುವುದಾಗಿ ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡುವುದಕ್ಕೂ ಮುನ್ನ, ಮಾಡಿದ ಎಲ್ಲಾ ಘೋಷಣೆಗಳನ್ನೂ ಈಡೇರಿಸುವಷ್ಟು ಸಂಪತ್ತು ಇದೆಯೋ, ಇಲ್ಲವೋ, ನೀಡಿದ ಭರವಸೆಗಳನ್ನು ಈಡೇರಿಸಲು ಸಂಪನ್ಮೂಲ ಕ್ರೋಢೀಕರಣ ಸಾಧ್ಯವೋ? ಎಂಬುದನ್ನೆಲ್ಲಾ ಆಲೋಚಿಸದೆ, ಚುನಾವಣೆ ಗೆದ್ದರೆ ಸಾಕು, ಉಳಿದದ್ದೆಲ್ಲವನ್ನೂ ಮುಂದೆ ನೋಡಿಕೊಳ್ಳೋಣ ಎಂಬಂತೆ ವರ್ತಿಸಿದ್ದರ ಪರಿಣಾಮವನ್ನು ಕಾಂಗ್ರೆಸ್ ಇಂದು ಅನುಭವಿಸುವಂತಾಗಿದೆ.
ಉಚಿತವಾಗಿ ರಾಜ್ಯದ ಜನರಿಗೆ ೧೦ ಕೆಜಿ ಅಕ್ಕಿ ನೀಡುವುದಾಗಿ ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ್ದ ಕಾಂಗ್ರೆಸ್ಗೆ, ತನ್ನ ಈ ಭರವಸೆ ಸದ್ಯ ದೊಡ್ಡ ತಲೆನೋವಾಗಿ ಪರಿಣಮಿಸಿರುವುದಂತೂ ಸುಳ್ಳಲ್ಲ. ಇದೀಗ ಹತ್ತು ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲು ಕಾಂಗ್ರೆಸ್ ಕೇಂದ್ರ ಸರ್ಕಾರ, ಬೇರೆ ರಾಜ್ಯಗಳ ಜೊತೆಗೆ ಬೇಡುವ ಸ್ಥಿತಿಯನ್ನು ತಂದೊಡ್ಡಿದೆ.
ರಾಜ್ಯದಲ್ಲಿ ಉಚಿತವಾಗಿ ಹತ್ತು ಕೆಜಿ ಅಕ್ಕಿ ನೀಡುವಷ್ಟು ಸಂಪನ್ಮೂಲ ಇದೆಯೋ, ಇಲ್ಲವೋ ಎಂಬುದರ ಪರಾಮರ್ಷೆಯನ್ನೂ ನಡೆಸದೆ, ಏಕಾಏಕಿ ಬಿಟ್ಟಿ ಅಕ್ಕಿ ಭಾಗ್ಯ ಘೋಷಿಸಿ ಈಗ ಪರಿತಪಿಸುವ ಸ್ಥಿತಿ ಕಾಂಗ್ರೆಸ್ನದ್ದು. ಹಾಗೆಯೇ ಈಗ ತನ್ನ ಭರವಸೆಯನ್ನು ಈಡೇರಿಸಲಾಗದೆ, ಇದರ ಹೊಣೆಯನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ತಲೆಯ ಮೇಲೆ ಹೊರಿಸಲು ನೋಡುತ್ತಿರುವ ಕಾಂಗ್ರೆಸ್ ನ ಸ್ಥಿತಿ ಹಾಸ್ಯಾಸ್ಪದವೇ ಸರಿ.
ಸದ್ಯ ಕಾಂಗ್ರೆಸ್ ಸರ್ಕಾರ ನೆರೆಯ ರಾಜ್ಯಗಳಾದ ಆಂಧ್ರ ಪ್ರದೇಶ, ಪಂಜಾಬ್, ಹರಿಯಾಣ, ತೆಲಂಗಾಣ, ಮಧ್ಯ ಪ್ರದೇಶ ಮೊದಲಾದ ರಾಜ್ಯಗಳಿಗೆ ಅಕ್ಕಿ ಒದಗಿಸುವಂತೆ ಕೇಳಿಕೊಂಡಿದೆ. ನಮ್ಮ ರಾಜ್ಯದಲ್ಲಿಯೇ ಸಾಕಷ್ಟು ರೈತರು ಭತ್ತ ಬೆಳೆಯುತ್ತಿದ್ದರೂ, ಅವರಿಂದ ಅಕ್ಕಿ ಖರೀದಿ ಮಾಡದಿರುವ ಕಾಂಗ್ರೆಸ್ ನಡೆಗೆ ಸಾರ್ವಜನಿಕ ವಲಯದಲ್ಲಿ ವಿರೋಧವೂ ವ್ಯಕ್ತವಾಗಿದೆ.
ಒಟ್ಟಿನಲ್ಲಿ ಉಚಿತ ಅಕ್ಕಿ ಘೋಷಿಸಿ, ಕಾಂಗ್ರೆಸ್ ತನ್ನ ಮರ್ಯಾದೆಯನ್ನು ತಾನೇ ಹರಾಜಿಗಿರಿಸಿಕೊಳ್ಳುವ ಸ್ಥಿತಿ ತಲುಪಿದೆ ಎಂದರೂ ಅತಿಶಯವಲ್ಲ.