ಅತಂತ್ರ ವಿಧಾನ ಸಭೆ ಸೃಷ್ಟಿಯಾದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ನಿಮಿಷಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವುದು ರಾಜ್ಯದ ಜನತೆಗೆ ಗೊತ್ತೇ ಇದೆ. ಸರ್ಕಾರ ರಚನೆ ಮಾಡಲು ಕಾಂಗ್ರೆಸ್ ಜನತಾ ದಳ ಮೈತ್ರಿ ಮಾಡಿಕೊಂಡಿದ್ದು, ಇದರ ಮಧ್ಯೆಯೇ ಭಾರತೀಯ ಜನತಾ ಪಕ್ಷ ನಾವು ಸರ್ಕಾರ ರಚಿಸಿಯೇ ಸಿದ್ದ ಎಂದು ರಾಜ್ಯಪಲರ ಬಳಿಯಿಂದ ಒಪ್ಪಿಗೆ ಪಡೆದುಕೊಂಡು ಬಂದಿದ್ದು ಇದೀಗ ಇತಿಹಾಸ. ಆದರೆ ಇದೀಗ ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತ ಸ್ಪೋಟಗೊಂಡಿರುವ ಬಗ್ಗೆ ವ್ಯಾಪಕವಾಗಿ ಚರ್ಚೆಗಳಾಗುತ್ತಿವೆ.
ಕಾಂಗ್ರೆಸ್ ವಿರುದ್ಧ ಡಿಕೆಶಿ ಟೀಂ ಗರಂ..!
ಭಾರತೀಯ ಜನತಾ ಪಕ್ಷ ತನ್ನ ಪಕ್ಷದ ಶಾಸಕಾಂಗ ನಾಯಕನನ್ನಾಗಿ ಮಾಜಿ ಮುಖ್ಯಮಂತ್ರಿ ಬಿಸ್ ಯಡಿಯೂರಪ್ಪನವರನ್ನು ಆಯ್ಕೆ ಮಾಡಿಕೊಂಡಿದೆ. ಈ ಮೂಲಕ ನಮ್ಮ ಮುಖ್ಯಮಂತ್ರಿ ಆಗುವುದಾದರೆ ಅದು ಯಡಿಯೂರಪ್ಪನವರು ಎಂದು ಭಾರತೀಯ ಜನತ ಪಕ್ಷದ ಶಾಸಕರು ಒಮ್ಮತದ ನಿರ್ಧಾರವನ್ನು ಕೈಗೊಂಡಿದ್ದಾರೆ.
ಇದು ಭಾರತೀಯ ಜನತ ಪಕ್ಷದ ವಿಚಾರವಾದರೆ ಇನ್ನು ಜನತಾ ದಳದಲ್ಲೂ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರನ್ನು ತಮ್ಮ ಪಕ್ಷದ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಮೂಲಕ ಜನತಾ ದಳದ ಮುಖ್ಯಮಂತ್ರಿ ಸ್ಥಾನಕ್ಕೆ ಕುಮಾರ ಸ್ವಾಮಿಯವರೇ ಪಕ್ಕಾ ಎನ್ನುವ ನಿರ್ಧಾರವನ್ನೂ ಪಕ್ಕಾ ಮಾಡಿಕೊಂಡಿದ್ದಾರೆ.
ಆದರೆ ಕಾಂಗ್ರೆಸ್ನಲ್ಲಿ ಮಾತ್ರ ಭಾರೀ ತಳಮಳವೇ ಉಂಟಾಗಿದೆ. ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆಯನ್ನು ಸಮರ್ಪಕವಾಗಿ ನಡೆಸಿಕೊಳ್ಳುವಲ್ಲಿ ಕಾಂಗ್ರೆಸ್ ಪಕ್ಷ ವಿಫಲವಾಗಿದೆ. ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಬಿಗ್ ವಾರ್ ನಡೆದು ಹೋಗಿದೆ. ಕಾಂಗ್ರೆಸ್ ಪಕ್ಷದ ಶಾಸಕರನ್ನು ಕಾಪಾಡಿಕೊಳ್ಳಲು ಡಿಕೆ ಶಿವಕುಮಾರ್ ಅವರಿಗೆ ಅಧಿಕಾರ ನೀಡಲಾಯಿತು. ಆದರೆ ಈ ವಿಚಾರ ಕಾಂಗ್ರೆಸ್ನ ಕೆಲ ಶಾಸಕರಿಗೆ ಸಿಟ್ಟು ನೆತ್ತಿಗೇರುವಂತೆ ಮಾಡಿತ್ತು.
“ನೀವು ಸದಾ ಡಿಕೆ ಶಿವಕುಮಾರ್ ಅವರಿಗೆ ಇಂತದ್ದೇ ಜವಬ್ದಾರಿಗಳನ್ನು ನೀಡಿ ಅವಮಾನ ಮಾಡುತ್ತಿದ್ದೀರಿ. ಶಾಸಕರನ್ನು ರಕ್ಷಿಸಿ ಅವರನ್ನು ರೆಸಾರ್ಟ್ನಲ್ಲಿಡಲು ನಿಮಗೆ ಡಿಕೆ ಶಿವಕುಮಾರ್ ಬೇಕೆ. ಆದರೆ ಅಧಿಕಾರದ ವಿಚಾರ ಬಂದರೆ ನೀವೇ ಹಂಚಿಕೊಳ್ಳುತ್ತೀರಾ. ಉಪ ಮುಖ್ಯಮಂತ್ರಿ ಸ್ಥಾನವನ್ನು ಡಿಕೆ ಶಿವಕುಮಾರ್ಗೆ ಬಿಟ್ಟು ಕೊಡಿ. ನಂತರ ಅವರು ರೆಸಾರ್ಟ್ ರಾಜಕೀಯದ ಜವಬ್ಧಾರಿಗಳನ್ನು ನೋಡಿಕೊಳ್ಳಲಿ” ಎಂದು ಡಿಕೆಶಿ ಬೆಂಬಲಿಗ ಶಾಸಕರೋರ್ವರು ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ಹಾಗೂ ಜನತಾ ದಳ ಮೈತ್ರಿಯಾದರೆ ಮುಖ್ಯಮಂತ್ರಿ ಸ್ಥಾನ ಖಂಡಿತವಾಗಿಯೂ ಕುಮಾರ ಸ್ವಾಮಿಗೆ ಹೋಗುತ್ತದೆ. ಇನ್ನು ಉಪಮುಖ್ಯಮಂತ್ರಿ ಸ್ಥಾನವಾದರೂ ಕಾಂಗ್ರೆಸ್ ಮಡಿಲಿಗೆ ಬಂದರೆ ಯಾರು ಉಪಮುಖ್ಯಮಂತ್ರಿ ಆಗುತ್ತಾರೆ ಎಂಬ ಪ್ರಶ್ನೆಯೂ ಎದುರಾಗಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಉಪಮುಖ್ಯಮಂತ್ರಿ ಆಗುವ ಎಲ್ಲಾ ಸಾಧ್ಯತೆಗಳೂ ಇವೆ. ಹೀಗಾಗಿ ಡಿಕೆಶಿ ಬಣಕ್ಕೆ ಇದು ಸಿಟ್ಟಿಗೇರುವಂತೆ ಮಾಡಿದೆ.
ಕೂಸು ಹುಟ್ಟೋಕ್ಕು ಮುಂಚೆ ಕುಲಾಯಿ ಹೊಲಿಸಿದ್ರು ಎಂಬ ಗಾದೆ ಮಾತಿನಂತೆ ಇನ್ನೂ ಸರ್ಕಾರ ರಚನೆಯೇ ಮಾಡಿಲ್ಲ ಅದಕ್ಕೂ ಮುನ್ನ ಯಾರು ಉಪಮುಖ್ಯಮಂತ್ರಿ ಎಂಬ ಗಲಾಟೆಗಳು ಜೋರಾಗಿಯೇ ನಡೆಯುತ್ತಿದೆ. ಕ್ಲೈಮಾಕ್ಸ್ ಏನಾಗುತ್ತೆ ಕಾದು ನೋಡಬೇಕಾಗಿದೆ.
-ಸುನಿಲ್ ಪಣಪಿಲ