ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಬಿಸಿ ಹೆಚ್ಚುತ್ತಿದ್ದಂತೆ ಪಕ್ಷದೊಳಗಿನ ವೈಮನಸ್ಸು ಇದೀಗ ಸ್ಫೋಟಗೊಂಡಿದೆ. ಟಿಕೆಟ್ ಹಂಚಿಕೆ ವಿಚಾರದಲ್ಲಿ ರಾಜಕೀಯ ಮುಖಂಡರ ಕಿತ್ತಾಟ ಇದೀಗ ಬೀದಿಗಿಳಿದಿದೆ. ದೇಶಾದ್ಯಂತ ತನ್ನ ಬಲ ಕಳೆದುಕೊಂಡಿರುವ ಕಾಂಗ್ರೆಸ್ ಕರ್ನಾಟಕವನ್ನು ಹೇಗಾದರೂ ಉಳಿಸಿಕೊಳ್ಳಲೇಬೇಕೆಂಬ ಹರಸಾಹಸಕ್ಕೆ ಇಳಿದಿದೆ. ಕಾಂಗ್ರೆಸ್ ನಲ್ಲಿ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಟಿಕೆಟ್ ಆಕಾಂಕ್ಷೆಗಳ ಆಕ್ರೋಶ ಬೀದಿಗಿಳಿದಿದೆ. ಕಾಂಗ್ರೆಸ್ ಹೈಕಮಾಂಡ್ ನ ನಿರ್ಧಾರಕ್ಕೆ ಆಕ್ರೋಶಗೊಂಡ ಕಾರ್ಯಕರ್ತರು ಪಕ್ಷದ ವಿರುದ್ಧ ಪ್ರತಿಭಟಿಸುತ್ತಾ ಸೋಲಿನ ಮುನ್ಸೂಚನೆ ನೀಡಿದ್ದಾರೆ.!
ಕಾಂಗ್ರೆಸ್ ನಲ್ಲಿ ಈ ಹಿಂದಿನಿಂದಲೂ ಪಕ್ಷಕ್ಕಾಗಿ ಪ್ರಾಮಾಣಿಕತೆಯಿಂದ ದುಡಿದವರನ್ನು ಕಡೆಗಣಿಸುತ್ತಲೇ ಬರಲಾಗುತ್ತಿದೆ. ಇದೇ ರೀತಿ ಈ ಬಾರಿಯೂ ಮರುಕಳಿಸಿದ್ದು, ಕರಾವಳಿಯಲ್ಲಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುತ್ತೇವೆ ಎಂದು ಬೇಕಾಬಿಟ್ಟಿ ದುಡಿಸಿಕೊಂಡು , ಸ್ವಂತ ಖರ್ಚಿನಿಂದ ಪಕ್ಷದ ಕಾರ್ಯಕ್ರಮ ಮಾಡಿಸಿಕೊಂಡು , ಇದೀಗ ಕೊನೇ ಹಂತದಲ್ಲಿ ಟಿಕೆಟ್ ನೀಡದೆ ವಂಚಿಸಿದೆ.
ಪ್ರಭಾವಿ ನಾಯಕನ ಟಿಕೆಟ್ ಕಸಿದುಕೊಂಡ ಮಾಜಿ ಮುಖ್ಯಮಂತ್ರಿ.!
ಟಿಕೆಟ್ ಹಂಚಿಕೆ ವಿಚಾರದಲ್ಲಿ ಪಕ್ಷದ ನಾಯಕರೊಳಗೆ ವೈಮನಸ್ಸು ಮೂಡುವುದು ಸಹಜ. ಇಂತಹ ಘಟನೆ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ನಡೆಯುತ್ತದೆ. ಆದರೆ ಇದೀಗ ಕಾಂಗ್ರೆಸ್ ನಲ್ಲಿ ಉಂಟಾಗಿರುವ ಬಿರುಕು ಚುನಾವಣೆಯಲ್ಲಿ ಭಾರೀ ಹೊಡೆತ ನೀಡುವುದು ಖಂಡಿತ. ಯಾಕೆಂದರೆ ಕರಾವಳಿಯ ಕಾರ್ಕಳ ತಾಲೂಕಿನಲ್ಲಿ ಕಳೆದ ಚುನಾವಣೆಯ ನಂತರ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು , ತನ್ನ ಕ್ಷೇತ್ರದಲ್ಲಿ ಬಿಜೆಪಿಯ ಮುಂದೆ ಮಂಕಾಗಿದ್ದ ಕಾಂಗ್ರೆಸ್ ಗೆ ಜೀವಕಳೆ ತುಂಬಿ, ಕಾರ್ಯಕರ್ತರನ್ನು ಒಗ್ಗೂಡಿಸಿ ಚುನಾವಣೆಗೂ ತಯಾರಿ ನಡೆಸಿದ್ದ ಮುನಿಯಾಲ್ ಉದಯ ಕುಮಾರ್ ಶೆಟ್ಟಿಗೆ ಕಾಂಗ್ರೆಸ್ ಟಿಕೆಟ್ ನೀಡದೆ ವಂಚಿಸಿದೆ.
ಮಾಜಿ ಮುಖ್ಯಮಂತ್ರಿ , ಸದ್ಯ ಸಂಸದರೂ ಆಗಿರುವಂತಹ ವೀರಪ್ಪ ಮೊಯ್ಲಿ ಅವರು ತನ್ನ ಮಗ ಹರ್ಷ ಮೊಯ್ಲಿ ಗೆ ಕಾರ್ಕಳದಲ್ಲಿ ಟಿಕೆಟ್ ನೀಡಬೇಕೆಂದು ಭಾರೀ ಪ್ರಯತ್ನಿಸಿದ್ದರು. ಅದಕ್ಕಾಗಿ ಎಲ್ಲಾ ತಯಾರಿಯೂ ನಡೆಸಿದ್ದರು. ಆದರೆ ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಉದಯ ಕುಮಾರ್ ಶೆಟ್ಟಿಗೆ ಜನಬೆಂಬಲ ಹೆಚ್ಚಿರುವುದರಿಂದ ಇವರಿಗೇ ಟಿಕೆಟ್ ನೀಡಬೇಕೆಂದು ಕಾರ್ಯಕರ್ತರೂ ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಆದರೆ ಇದೀಗ ಅಭ್ಯರ್ಥಿಯ ಹೆಸರು ಘೋಷಣೆಯಾಗಿದೆ, ಆಕಾಂಕ್ಷಿಗಳಾದ ಉದಯ ಕುಮಾರ್ ಶೆಟ್ಟಿ ಮತ್ತು ಹರ್ಷ ಮೊಯ್ಲಿಗೆ ಕಾರ್ಕಳದಲ್ಲಿ ಟಿಕೆಟ್ ನೀಡಲಿಲ್ಲ. ಹರ್ಷ ಮೊಯ್ಲಿಗೆ ಕುಂದಾಪುರದಲ್ಲಿ ಟಿಕೆಟ್ ನೀಡಲಾಗಿದೆ. ಆದರೆ ಪಕ್ಷಕ್ಕಾಗಿ ದುಡಿದ ಉದಯ ಕುಮಾರ್ ಶೆಟ್ಟಿಗೆ ಕಾಂಗ್ರೆಸ್ ನಿಂದ ಭಾರೀ ವಂಚನೆಯಾಗಿರುವುದು ಸ್ಪಷ್ಟ.!
ಪಕ್ಷದ ವಿರುದ್ಧ ಬೀದಿಗಿಳಿದ ಕಾರ್ಯಕರ್ತರು..!
ಅಭ್ಯರ್ಥಿಯ ಹೆಸರು ಘೋಷಣೆಯಾಗುತ್ತಿದ್ದಂತೆ ಕಾರ್ಕಳದಲ್ಲಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಬೆಂಬಲಿಗರು ಕಾಂಗ್ರೆಸ್ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಶೆಟ್ಟಿಗೆ ಟಿಕೆಟ್ ನೀಡದಂತೆ ಒತ್ತಡ ಹಾಕಿ , ಮೋಸಗೊಳಿಸಿರುವುದು ವೀರಪ್ಪ ಮೊಯ್ಲಿ ಎಂದು ಗಂಭೀರ ಆರೋಪ ಮಾಡಿರುವ ಕಾರ್ಯಕರ್ತರು , ವೀರಪ್ಪ ಮೊಯ್ಲಿ ಅವರ ಪ್ರತಿಕ್ರತಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಯಲ್ಲಿ ಮೊಯ್ಲಿ ಅವರ ಅಣಕು ಶವ ಯಾತ್ರೆ ಮಾಡುವ ಮೂಲಕ ಪ್ರತಿಭಟಿಸಿದ ಕಾಂಗ್ರೆಸ್ ಕಾರ್ಯಕರ್ತರು, ಮೊಯ್ಲಿ ವಿರುದ್ಧ ದಿಕ್ಕಾರ ಕೂಗಿದರು.
ಕಾರ್ಕಳ ವೀರಪ್ಪ ಮೊಯ್ಲಿ ಅವರ ತವರು ಕ್ಷೇತ್ರ. ಸ್ವತಃ ತವರಲ್ಲೇ ಛೀಮಾರಿ ಹಾಕಿದ ಕಾರ್ಯಕರ್ತರು ಮೊಯ್ಲಿ ಅವರ ಪ್ರತಿಕ್ರತಿ ರಚಿಸಿ ಕಾಲಿನಿಂದ ತುಳಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕಾರ್ಕಳ ಕಾಂಗ್ರೆಸ್ ನಲ್ಲಿ ಈಗಾಗಲೇ ಬಿರುಕು ಉಂಟಾಗಿದ್ದು ಚುನಾವಣಾ ಹೊಸ್ತಿಲಲ್ಲೇ ಕಾರ್ಯಕರ್ತರೂ ಕೂಡ ಪಕ್ಷದ ವಿರುದ್ಧ ಸಿಡಿದೆದ್ದಿದ್ದು ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಖಚಿತ ಎಂಬಂತಾಗಿದೆ..!
– ಅರ್ಜುನ್