ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ನೀಡಿದ್ದ ವಾರಣಾಸಿ ಕೋರ್ಟ್ ತೀರ್ಪನ್ನು ಪ್ರಶ್ನೆ ಮಾಡಿ ಸಲ್ಲಿಸಲಾಗಿದ್ದ ಅಂಜುಮನ್ ಇಂತೆ ಜಾಮಿಯಾ ಮಸೀದಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈ ಕೋರ್ಟ್ ತಿರಸ್ಕರಿಸಿದೆ.
ಆ ಮೂಲಕ ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಹಿಂದೂಗಳಿಗೆ ಮತ್ತೆ ಜಯ ದೊರೆತಿದೆ.
ಜ್ಞಾನವಾಪಿ ಮಸೀದಿ ಕಟ್ಟದಲ್ಲಿರುವ ವ್ಯಾಸ್ ಕಾ ತೆಹ್ಕಾನಾ ಪ್ರದೇಶದಲ್ಲಿ ಹಿಂದೂ ದೇವರುಗಳಿಗೆ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅವಕಾಶ ನೀಡಿ ವಾರಣಾಸಿ ಕೋರ್ಟ್ ಆದೇಶಿಸಿತ್ತು. ಆದರೆ ಈ ಆದೇಶವನ್ನು ವಿರೋಧಿಸಿ ಮುಸಲ್ಮಾನರು ಹೈಕೋರ್ಟ್ ಕದ ತಟ್ಟಿದ್ದರು. ಆದರೆ ಅವರು ಸಲ್ಲಿಕೆ ಮಾಡಿದ್ದ ಮೇಲ್ಮನವಿಯನ್ನು ಹೈ ಕೋರ್ಟ್ ವಜಾ ಮಾಡಿರುವುದಾಗಿದೆ.
ಈ ಸಂಬಂಧ ಎರಡೂ ಬದಿಯ ಸುಧೀರ್ಘ ವಾದವನ್ನು ಆಲಿಸಿದ ಕೋರ್ಟ್ನ ನ್ಯಾಯಾಧೀಶ ರೋಹಿತ್ ರಂಜನ್ ಅಗರ್ವಾಲ್, ಇಂದು ಹಿಂದೂಗಳ ಪರ ತೀರ್ಪನ್ನಿತ್ತಿದ್ದಾರೆ. ಮಸೀದಿಯ ನೆಲಮಾಳಿಗೆ ನಾಲ್ಕು ಸೆಲ್ಲಾರ್ಗಳನ್ನು ಒಳಗೊಂಡಿದೆ. ಇದರಲ್ಲಿ ಒಂದು ಈಗಲೂ ಸಹ ಈ ಹಿಂದೆ ಅಲ್ಲಿ ವಾಸ ಮಾಡುತ್ತಿದ್ದ ವ್ಯಾಸ ಕುಟುಂಬದ ಸುಪರ್ಧಿಯಲ್ಲಿದೆ.
ಅದಕ್ಕೂ ಮೊದಲು ಆಲ್ ಇಂಡಿಯಾ ಮಜ್ಲಿಸ್ ಎ ಇತ್ತೇಹಾದುಲ್ ಮುಸ್ಲಿಮೀನ್ನ ಅಧ್ಯಕ್ಷ ಅಸಾವುದ್ದೀನ್ ಓವೈಸಿ, ಜ್ಞಾನವಾಪಿ ಸಂಕೀರ್ಣದ ವ್ಯಾಸ್ ಕಾ ತೆಖಾನಾದಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ನೀಡಿದ್ದ ಹಿನ್ನೆಲೆಯಲ್ಲಿ ವಾರಣಾಸಿ ಕೋರ್ಟ್ ಆದೇಶವನ್ನು ಆರಾಧನಾ ಸ್ಥಳಗಳ ಕಾಯ್ದೆ ಉಲ್ಲಂಘನೆ ಎಂದು ಹೇಳಿದ್ದರು. ಆದರೆ ಅರ್ಜಿದಾರರ ಈ ನ್ಯಾಯವನ್ನು ತಿರಸ್ಕರಿಸಿದ ಹೈ ಕೋರ್ಟ್ ಹಿಂದೂಗಳ ಪರ ತೀರ್ಪು ನೀಡಿದೆ.