ಪ್ರಚಲಿತ

ಲೂಟಿಕೋರ ಪಕ್ಷ ಆರ್ಥಿಕ ದಿವಾಳಿಯ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ: ಜೆ.ಪಿ. ನಡ್ಡಾ

ಕಳೆದ ಹತ್ತು ವರ್ಷಗಳ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಆಡಳಿತಕ್ಕೆ ಮೆಚ್ಚಿದ ಜನರು, ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ಆದ ಮೋಸದ ಬಗ್ಗೆ ಅರಿತುಕೊಂಡಿದ್ದಾರೆ. ಒಂದರ್ಥದಲ್ಲಿ ದೇಶದಲ್ಲಿ ಕಾಂಗ್ರೆಸ್ ಪಕ್ಷ, ಅದರ ನಾಯಕರು ಗೌರವ ಕಳೆದುಕೊಂಡಿದ್ದಾರೆ. ಅವರ ಭ್ರಷ್ಟ ಮುಖಗಳ ಪರಿಚಯ ಜನರಿಗೆ ಆಗಿದೆ ಎನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ.

ಕಾಂಗ್ರೆಸ್‌‌ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ವಾಗ್ದಾಳಿ ‌ನಡೆಸಿದ್ದು, ಕೆಲವೇ ಸಮಯದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಾರ್ವಜನಿಕರು ಸಂಪೂರ್ಣವಾಗಿ ತಿರಸ್ಕರಿಸಲಿದ್ದಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ಈ ಚುನಾವಣೆಯಲ್ಲಿ ತನ್ನ ಐತಿಹಾಸಿಕ ಸೋಲಿನ ಭಯದಿಂದ ನಡುಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್ ನಾಯಕರು ಮಾಧ್ಯಮ ಗೋಷ್ಠಿ ನಡೆಸಿರುವುದಾಗಿದೆ. ಈ ಸದಾ ಭಾರತದ ಪ್ರಜಾಪ್ರಭುತ್ವ ಮತ್ತು ಸಂಸ್ಥೆಗಳ ವಿರುದ್ಧ ವಾಗ್ದಾಳಿ ನಡೆಸಿದೆ ಎಂದು ನಡ್ಡಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಸದ್ಯ ಅಪ್ರಸ್ತುತ ವಿಷಯವಾಗಿದೆ. ಇದನ್ನು ಸಾರ್ವಜನಿಕ ವಲಯದಲ್ಲಿ ಗೊತ್ತಾದ ಹಾಗೆ ಮಾಡಲು ‘ಆರ್ಥಿಕತೆಯ ಮೇಲೆ ಗೂಬೆ ಕೂರಿಸುವ’ ಪ್ರಯತ್ನ ನಡೆಸುತ್ತಿದೆ. ತಮ್ಮ ಅಪ್ರಸ್ತುತತೆಗೆ ಆರ್ಥಿಕ ತೊಂದರೆಯನ್ನು ಹೊಣೆ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಆದರೆ ವಾಸ್ತವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೌದ್ಧಿಕ ಮತ್ತು ನೈತಿಕವಾಗಿ ದಿವಾಳಿಯಾಗಿದೆ. ಅವರಿಗೆ ಯಾವುದೇ ಆರ್ಥಿಕ ಸಮಸ್ಯೆಗಳು ಇಲ್ಲ ಎಂದು ನಡ್ಡಾ ಅವರು ಕಾಂಗ್ರೆಸ್ ವಿರುದ್ಧ ಚಾಟಿ ಬೀಸಿದ್ದಾರೆ.

ಕಾಂಗ್ರೆಸ್ ತನ್ನ ತಪ್ಪುಗಳನ್ನು ಅಧಿಕಾರಿಗಳ ಮೇಲೆ ಹೊರಿಸಿ, ಅವರನ್ನು ಸಾರ್ವಜನಿಕರು ತಪ್ಪು ತಿಳಿಯುವ ಹಾಗೆ ಮಾಡುವ ಪ್ರಯತ್ನ ಮಾಡುತ್ತಿದೆ. ಆ ಪಕ್ಷಕ್ಕೆ ತನ್ನ ತಪ್ಪನ್ನು ಸರಿ ಮಾಡಿಕೊಳ್ಳಬೇಕು ಎನ್ನುವ ಕಲ್ಪನೆ ಇಲ್ಲ. ಸರ್ಕಾರಿ ಸಂಸ್ಥೆಯಾಗಲಿ, ನ್ಯಾಯಾಲಯಗಳಾಗಲಿ ಕಾಂಗ್ರೆಸ್‌ಗೆ ಬಾಕಿ ತೆರಿಗೆಗಳನ್ನು ಪಾವತಿಸಲು, ನಿಯಮಗಳನ್ನು ಪಾಲನೆ ಮಾಡಲು ಆಜ್ಞಾಪಿಸಿದೆ. ಆದರೆ ಅವರು ಈ ವರೆಗೆ ಇದನ್ನು ಪಾಲನೆ ಮಾಡಿಲ್ಲ ಎಂದು ಅವರು ತಿಳಿಸಿದ್ದಾರೆ.

ಆರ್ಥಿಕ ಅಸಹಾಯಕತೆಯ ಬಗ್ಗೆ ದೇಶದ ಎಲ್ಲಾ ವಲಯಗಳಿಂದಲೂ ಕೊಳ್ಳೆ ಹೊಡೆದ ಕಾಂಗ್ರೆಸ್‌ನಂತಹ ಭ್ರಷ್ಟ ಪಕ್ಷ ಮಾತನಾಡುವುದು ಹಾಸ್ಯಾಸ್ಪದ. ಹಗರಣ ಗಳ ಮೂಲಕ ಕಾಂಗ್ರೆಸ್ ಅಪಾರ ಸಂಪತ್ತು ಕ್ರೋಢೀಕರಿಸಿದೆ. ಅದನ್ನು ಚುನಾವಣೆಗೆ ಬಳಕೆ ಮಾಡಬಹುದಾಗಿದೆ. ಕಾಂಗ್ರೆಸ್ ಪಕ್ಷದ ಅರೆಕಾಲಿಕ ನಾಯಕರು ನಮ್ಮ ದೇಶದ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ. ಪ್ರಜಾಪ್ರಭುತ್ವ ಸುಳ್ಳು ಎಂದು ನಾಲಿಗೆ ಉದ್ದ ಮಾಡುತ್ತಾರೆ. 1975-77 ರ ನಡುವೆ ನಮ್ಮ ದೇಶದಲ್ಲಿ ಕೆಲ ಸಮಯ ಪ್ರಜಾಪ್ರಭುತ್ವ ಇರಲಿಲ್ಲ. ಆಗ ಭಾರತದ ಪ್ರಧಾನಿ ಆಗಿದ್ದವರು ಕಾಂಗ್ರೆಸ್ ಪಕ್ಷದ ಇಂದಿರಾ ಗಾಂಧಿ ಎಂಬುದನ್ನು ಕಾಂಗ್ರೆಸ್ ನಾಯಕರಿಗೆ ನಾನು ನೆನಪು ಮಾಡಿಸುತ್ತಿದ್ದೇನೆ ಎಂದು ನಡ್ಡಾ ಕಿಡಿ ಕಾರಿದ್ದಾರೆ.

Tags

Related Articles

Close