ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಶಾಸಕ ಹ್ಯಾರಿಸ್ ನಲಪಾಡ್ ಅವರ ಪುತ್ರ ಮಹಮ್ಮದ್ ನಲಪಾಡ್ ಎಂಬಾತನ ಗೂಂಡಾಗಿರಿ ರಾಜ್ಯ ಮಾತ್ರವಲ್ಲದೆ ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿತ್ತು. ರೆಸ್ಟೋರೆಂಟ್ನಲ್ಲಿದ್ದ ಓರ್ವ ಅಮಾಯಕ ಯುವಕನನ್ನು ಮನಬಂದಂತೆ ಥಳಿಸಿ, ರಕ್ತ ಬರುವ ಹಾಗೆ ಅಮಾನವೀಯತೆ ಮೆರೆದಿರುವ ಈತನ ಗೂಂಡಾಗಿರಿ ರಾಷ್ಟ್ರಮಟ್ಟದಲ್ಲಿಯೇ ಚರ್ಚೆಯಾಗಿತ್ತು. ಅತ್ತ ನಲಪಾಡ್ ಗೂಂಡಾಗಿರಿ ಮುಗಿಲು ಮುಟ್ಟುತ್ತಿದ್ದಂತೆಯೇ ಇತ್ತ ರಾಜ್ಯ ಕಾಂಗ್ರೆಸ್ನ ಕೃಷಿ ಸಚಿವ ಕೃಷ್ಣ ಬೈರೇ ಗೌಡರ ಪುಡಾರಿ ಗೂಂಡಾಗಳ ಅಟ್ಟಹಾಸವೂ ತಾರಕ್ಕೇರಿತ್ತು. ಕೃಷ್ಣ ಬೈರೇಗೌಡರ ದರ್ಪ ಅಹಂಕಾರಕ್ಕೆ ಅಮಾಯಕರು ಸೋತು ಸುಣ್ಣವಾಗಿ ಪ್ರತಿಭಟನೆಗೆ ಇಳಿದಿದ್ದರು. ಆದರೆ ಕಾಂಗ್ರೆಸ್ ಮಾತ್ರ ಇದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳಲೇ ಇಲ್ಲ.
4 ದಿನಗಳ ನಂತರ ಹೊರಬಿತ್ತು ಮತ್ತೊಂದು ಪ್ರಕರಣ…
ಬಹುಷಃ ಈ ಕಾಂಗ್ರೆಸ್ ಎಂಬ ರಾಷ್ಟ್ರೀಯ ಪಕ್ಷದ ಪಾಪದ ಕೊಡ ತುಂಬಿರಬೇಕು. ಒಂದಲ್ಲಾ ಒಂದು ಪ್ರಕರಣಗಳು ಬಯಲಾಗುತ್ತಲೇ ಇದೆ. ಈಗ 4 ದಿನಗಳ ಹಿಂದಿನ ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ. ಇದು ಮತ್ತೆ ರಾಷ್ಟ್ರೀಯ ಮಟ್ಟದಲ್ಲಿ ಸುದ್ಧಿಯಾಗುತ್ತಿದೆ. ಇದು ಕೂಡಾ ಕೇವಲ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತನೋ ಅಥವಾ ಕಾಂಗ್ರೆಸ್ ನಾಯಕರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡ ಸಾಮಾನ್ಯ ಅಭಿಮಾನಿಯೂ ಅಲ್ಲ. ಈತ ಕೆ.ಆರ್.ಪುರಂನ ಬ್ಲಾಕ್ ಕಾಂಗ್ರೆಸ್ನ ಅಧ್ಯಕ್ಷ ನಾರಾಯಣ ಸ್ವಾಮಿ.
ಕೆ.ಆರ್. ಪುರಂನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆ.ಆರ್.ಪುರಂ ವಿಧಾನ ಸಭಾ ಕ್ಷೇತ್ರದ ಶಾಸಕ ಬೈರತಿ ಬಸವರಜ್ ರವರ ಆಪ್ತನಾದ ನಾರಾಯಣ ಸ್ವಾಮಿಯೇ ಇಂದಿನ ಸ್ಟೋರಿಯ ಕಾಂಗ್ರೆಸ್ ಗೂಂಡಾ… ಸತತ 3 ದಿನಗಳಿಂದ ಕಾಂಗ್ರೆಸ್ನ ಗೂಂಡಾಗಿರಿಯೇ ಸುದ್ಧಿಯಾಗುತ್ತಿರುವ ಕರ್ನಾಟಕದಲ್ಲಿ ಇಂದು ಈ ಗೂಂಡಾ ಕಾಂಗ್ರೆಸ್ಸಿಗನ ಪ್ರಕರಣ ಬೆಳಕಿಗೆ ಬಂದಿದ್ದು, ಕಾಂಗ್ರೆಸ್ನ ಪಾಪದ ಕೊಡ ತುಂಬಿದೆ ಎಂಬುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.
ಬಿಬಿಎಂಪಿಗೆ ಪೆಟ್ರೋಲ್ ಸುರಿದ ಕಾಂಗ್ರೆಸ್ ಗೂಂಡಾ…
ಕೆ.ಆರ್.ಪುರಂನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಮುಖ್ಯಮಂತ್ರಿ ಸಿದ್ದರಾಮಯ್ಯರ ಆಪ್ತ ನಾರಾಯಣ ಸ್ವಾಮಿಯಿಂದ ಬಿಬಿಎಂಪಿ ಕಛೇರಿಗೆ ಪೆಟ್ರೋಲ್ ದಾಳಿಯಾಗಿದೆ. ಮದವೇರಿದ ಹೋರಿಯಂತೆ ಬಿಬಿಎಂಪಿ ಕಛೇರಿಗೆ ನುಗ್ಗಿದ ಕಾಂಗ್ರೆಸ್ ಗೂಂಡಾ ನಾರಾಯಣ ಸ್ವಾಮಿ ಬಿಬಿಎಂಪಿ ಕಛೇರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ತನ್ನನ್ನು ಬೆಳೆಸಿದ ಕಾಂಗ್ರೆಸ್ ಪಕ್ಷದ ಗೂಂಡಾಗಿರಿಯನ್ನು ಮುಂದುವರೆಸಿದ ಈ ಗೂಂಡಾ ಈಗ ಬೆಂಗಳೂರಿನ ಶಕ್ತಿ ಕೇಂದ್ರಕ್ಕೇ ಬೆಂಕಿ ಹಚ್ಚಲು ಮುಂದಾಗುವಷ್ಟು ದರ್ಪವನ್ನು ತೋರಿದ್ದಾನೆ. ಒಂದು ಕೈನಲ್ಲಿ ಪೆಟ್ರೋಲನ್ನು ಹಿಡಿದು, ಇಡೀ ಕಛೇರಿಗೆ ಚೆಲ್ಲುತ್ತಾ, ಕಛೇರಿಯಲ್ಲಿದ್ದ ದಾಖಲೆಗಳಿಗೆ ಚೆಲ್ಲುತ್ತಾ ಬೆಂಕಿ ಹಚ್ಚುತ್ತೇನೆ ಎಂದು ದರ್ಪ ತೋರಿದ್ದಾನೆ.
ಕಾರಣ ಏನು ಗೊತ್ತಾ..?
ಇದು ಫೆಬ್ರವರಿ 16ರಂದು ನಡೆದ. ಬೆಳಗ್ಗೆ 11 ಗಂಟೆಗೆ ಬಿಬಿಎಂಪಿ ಕಛೇರಿಗೆ ನುಗ್ಗಿದ ಕಾಂಗ್ರೆಸ್ ಗೂಂಡಾ ಅಲ್ಲಿದ್ದ ಸಹಾಯಕ ಕಂದಾಯ ಅಧಿಕಾರಿ ಮೇಲೆ ತನ್ನ ದರ್ಪವನ್ನು ಮೆರೆದು ಪಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾಗಿದ್ದಾನೆ. ಕೆಲ ದಿನಗಳ ಹಿಂದೆ ತನ್ನ ಜಮೀನಿ ಬಡಾವಣೆಗೆ ಎನ್.ಆರ್.ಐ. ಜಮೀನು ಖಾತೆ ಮಾಡಿಕೊಡಬೇಕೆಂದು ಬಿಬಿಎಂಪಿಯ ಸಹಾಯಕ ಕಂದಾಯ ಅಧಿಕಾರಿಯಾದ ಚೆಂಗಲ್ ರಾಯಪ್ಪನವರ ಬಳಿ ಕೇಳಿದ್ದಾನೆ. ಆದರೆ ಖಡಕ್ ಅಧಿಕಾರಿ ಎಂದೇ ಹೆಸರಾಗಿರುವ ಚೆಂಗಲ್ ರಾಯಪ್ಪ ಕಾಂಗ್ರೆಸ್ ಗೂಂಡಾನ ಈ ಮಾತಿಗೆ ಒಲ್ಲೆ ಎನ್ನುತ್ತಾರೆ. ಆಗಲ್ಲ ಸಾರ್. ಆ ಜಮೀನಿನ ವ್ಯಾಜ್ಯ ನ್ಯಾಯಾಲಯದಲ್ಲಿದೆ. ಹೀಗಾಗಿ ಇದರ ಖಾತೆಯನ್ನು ಮಾಡಿಕೊಡಲು ಸಾಧ್ಯವಿಲ್ಲ ಎಂದಿದ್ದಾರೆ. ಅಧಿಕಾರಿಯ ಈ ಮಾತಿಗೆ ಒಪ್ಪದ ಕಾಂಗ್ರೆಸ್ ಗೂಂಡಾ ನಾರಾಯಣ ಸ್ವಾಮಿ, ಪರವಾಗಿಲ್ಲ ನೀವು ನಕಲಿ ಖಾತೆಯನ್ನು ಮಾಡಿಕೊಡಿ. ಅದು ನಿಜಮ್ಮಿಂದ ಸಾಧ್ಯವಿದೆ ಎಂದಿದ್ದಾನೆ. ಆದರೆ ಕಾಂಗ್ರೆಸ್ ಗೂಂಡಾನ ಈ ಮಾತಿಗೆ ಕೋಪಗೊಂಡ ಖಡಕ್ ಅಧಿಕಾರಿ ಚೆಂಗಲ್ ರಾಯಪ್ಪ ನಕಲಿ ಖಾತೆ ಮಾಡಿ ಕೊಡಲು ಸಾಧ್ಯವಿಲ್ಲ ಸಾರ್ ಎಂದು ಹೇಳಿದ್ದಾರೆ.
ಖಡಕ್ ಅಧಿಕಾರಿಯ ಈ ಖಡಕ್ ಮಾತಿಗೆ ಕೆಂಡಾಮಂಡಲವಾದ ಕಾಂಗ್ರೆಸ್ ಗೂಂಡಾ ನಾರಾಯಣ ಸ್ವಾಮಿ ಅವರ ಕಛೇರಿಗೆ ಪೆಟ್ರೋಲ್ ಸುರಿಸಿದ್ದಾನೆ. “ನನ್ ಹತ್ತಿರಕ್ಕೆ ಯಾರೂ ಬರಬೇಡಿ. ನಾನು ಯಾರು ಗೊತ್ತಲ್ವಾ. ನಿಮ್ಮನ್ನ ಮಾತ್ರವಲ್ಲ ನಿಮ್ಮ ದಾಖಲೆಗಳನ್ನೂ ಸುಟ್ಟು ಬಿಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ. ಸದ್ಯ ಈ ವೀಡಿಯೋ ಈಗ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಕಾಂಗ್ರೆಸ್ಗೆ ಇರಿಸು ಮುರಿಸು ತಂದಿದೆ.
ಕ್ಷಣ ಮಾತ್ರದಲ್ಲೇ ವರ್ಗಾವಣೆ…
ಈ ಪ್ರಕರಣ ನಡೆದು ಬೆಳಕಿಗೆ ಬಂದೇ ಇಲ್ಲ. ಆದರೆ ಅಷ್ಟರಲ್ಲೇ ಸಹಾಯಕ ಕಂದಾಯ ಅಧಿಕಾರಿ ಚೆಂಗಲ್ ರಾಯಪ್ಪರನ್ನು ವರ್ಗಾವಣೆ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆ.ಆರ್.ಪುರಂ ಕ್ಷೇತ್ರದ ಶಾಸಕ ಬೈರತಿ ಬಸವರಾಜು ಅವರ ಪ್ರಭಾವ ಬಳಸಿ ಜಟಾಪಟಿಯಲ್ಲಿ ಹೊರಮಾವುನಿಂದ ಮಹದೇವ ಪುರಕ್ಕೆ ವರ್ಗಾವಣೆ ಮಾಡಿದ್ದಾರೆ. ಆದರೆ ಸತ್ಯ ಹೊರ ಬರಲೇ ಬೇಕು. ಪ್ರಕರಣ ನಡೆದು 5 ದಿನಗಳ ನಂತರ ಪ್ರಕರಣ ಬೆಳಕಿಗೆ ಬಂದಿದ್ದು, ಈಗ ಹೊಸ ರಾದ್ದಾಂತವನ್ನೇ ಸೃಷ್ಟಿಸಿದೆ.
ಸೊಲ್ಲೆತ್ತುತ್ತಿಲ್ಲ ಕಾಂಗ್ರೆಸ್ ನಾಯಕರು…
ವಿರೋಧ ಪಕ್ಷಗಳ ಕಾರ್ಯಕರ್ತರು ಸಣ್ಣ ರಾದ್ದಾಂತವನ್ನು ಮಾಡಿದರೆ ಅವರ ಮೇಲೆ ಪ್ರಕರಣಗಳ ಮೇಲೆ ಪ್ರಕರಣಗಳನ್ನು ದಾಖಲಿಸುವ ಕಾಂಗ್ರೆಸ್ ಪಕ್ಷದ ನಾಯಕರು ತನ್ನದೇ ಪಕ್ಷದ ನಾಯಕ ಈ ರೀತಿಯ ದರ್ಪವನ್ನು ಮೆರೆದಿದ್ದರೂ ಖ್ಯಾರೇ ಅನ್ನುತ್ತಿಲ್ಲ. ಇಷ್ಟು ಮಾತ್ರವಲ್ಲದೆ ಕಾಂಗ್ರೆಸ್ ಗೂಂಡಾನಿಗೆ ಸೆಡ್ಡು ಹೊಡೆದ ಕಂದಾಯ ಅಧಿಕಾರಿಯನ್ನೇ ವರ್ಗಾವಣೆ ಮಾಡುತ್ತಾರೆ.
ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳನ್ನು ಅಥವಾ ಅಲ್ಲಿನ ಮೇಯರನ್ನು ಸಂಪರ್ಕಿಸಿದರೆ ಯಾವೊಬ್ಬ ಅಧಿಕಾರಿಯೂ ಕಾಲ್ ರಿಸೀವ್ ಮಾಡುತ್ತಿಲ್ಲ. ಕೇಳಿದರೆ ನಮಗೇನು ಗೊತ್ತೇ ಇಲ್ಲ ಎನ್ನುವ ಉಡಾಫೆ ಉತ್ತರವನ್ನೇ ಬಿಬಿಎಂಪಿ ಅಧಿಕಾರಿಗಳು ನೀಡುತ್ತಿದ್ದಾರೆ. ಮಾತ್ರವಲ್ಲದೆ ಕೆ.ಆರ್.ಪರಂ ಕ್ಷೇತ್ರದ ಬೈರತಿ ಬಸವರಾಜು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೃಪಾ ಕಟಾಕ್ಷವೂ ಈ ಗೂಂಡಾನ ಮೇಲೆ ಇದೆ ಎಂದು ಸಾಭೀತಾಗಿದೆ. ಬಿಬಿಎಂಪಿ ಕಛೇರಿ ಇಡೀ ಕಾಂಗ್ರೆಸ್ ಮಯವಾಗಿದ್ದು ಈ ಘಟನೆಯಿಂದ ಎದ್ದು ಕಾಣುತ್ತದೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಒಂದಲ್ಲಾ ಒಂದು ಅಹಿತಕರ ಘಟನೆಯಿಂದಲೇ ಸುದ್ಧಿಯಾಗುತ್ತಿದ್ದ ಕಾಂಗ್ರೆಸ್ ಗೂಂಡಾಗಳು ರಾಜ್ಯದಲ್ಲಿ ರಾಜಾರೋಷವಾಗಿ ಮೆರೆಯುತ್ತಿದ್ದಾರೆ. ಆದರೆ ಕಾಂಗ್ರೆಸ್ ದೊರೆಗಳು, ರಾಜ್ಯವನ್ನು ಆಳುವ ಅರಸರು ಹಾಯಾಗಿ ಈ ಗೂಂಡಾಗಳಿಗೆ ಬೆಂಬಲ ನೀಡುತ್ತಿದ್ದಾರೆ. ಇದು ರಾಜ್ಯದ ದುಸ್ಥಿತಿಯನ್ನು ತೋರಿಸುವುದಲ್ಲದೆ ಮತ್ತೇನೂ ಅಲ್ಲ.
-ಸುನಿಲ್ ಪಣಪಿಲ