ಕಾಂಗ್ರೆಸ್ ನಾಯಕರಲ್ಲಿ ಹಿಂದಿನಿಂದಲೂ ವೈಮನಸ್ಸಿದೆ, ಅದು ಪದೇ ಪದೇ ಬಹಿರಂಗಗೊಳ್ಳುತ್ತಿದೆ ಅನ್ನುವ ವಿಚಾರ ಇಂದು ನಿನ್ನೆಯದಲ್ಲ. ಆದರೆ ಇದೀಗ ಈ ವೈಮನಸ್ಸು ಮತ್ತಷ್ಟು ಸ್ಪೋಟಗೊಳ್ಳುವ ಎಲ್ಲಾ ಸಾಧ್ಯತೆಗಳೂ ಗೋಚರಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ನಡುವಿನ ಮನಸ್ತಾಪ ಮತ್ತಷ್ಟು ಹೆಚ್ಚಾಗಿದೆ.
ಸಿದ್ದರಾಮಯ್ಯರನ್ನು ಓಡಿಸಲು ಮುಂದಾದ ಪರಂ..!
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಅವರ ನಿವಾಸದಿಂದಲೇ ಓಡಿಸಲು ಕಾಂಗ್ರೆಸ್ ನಾಯಕ ಹಾಗೂ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಮುಂದಾಗಿದ್ದಾರೆ. ಹೌದು. ಆಶ್ಚರ್ಯವಾದರೂ ಸತ್ಯ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಸ್ತುತ ವಾಸವಿರುವ ಕಾವೇರಿ ನಿವಾಸವನ್ನು ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಕೇಳುತ್ತಿದ್ದಾರೆ. ಈವರೆಗೂ ಮಾಜಿ ಮುಖ್ಯಮಂತ್ರಿ ಅವರು ಈ ನಿವಾಸವನ್ನು ಬಿಟ್ಟು ಕೊಡದ ಕಾರಣ ಅದನ್ನು ಸ್ವತಃ ಮುಖ್ಯಮಂತ್ರಿ ಕುಮಾರ ಸ್ವಾಮಿಯವರೇ ಕೇಳುವ ಗೋಜಿಗೆ ಹೋಗಲಿಲ್ಲ. ಆದರೆ ಇದೀಗ ದಿಢೀರ್ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಈ ನಿವಾಸವನ್ನು ಕೇಳುತ್ತಿದ್ದಾರೆ;
ಹಿಂದಿನಿಂದಲೂ ಒಳಗೊಳಗೇ ಕತ್ತಿ ಮಸೆಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ಜಗಳ ಗುಟ್ಟಾಗಿ ಉಳಿದಿಲ್ಲ. ಆದರೆ ಈ ಜಗಳ ಇದೀಗ ಬಹಿರಂಗವಾಗಿದೆ. ಸ್ವತಃ ತನ್ನ ರಾಜಕೀಯ ಶತ್ರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇರುವ ಮನೆಗೇ ಕಣ್ಣು ಹಾಕುವ ಮೂಲಕ ಮತ್ತೆ ಜಗಳವನ್ನು ಬಹಿರಂಗಗೊಳಿಸಿದ್ದಾರೆ.
ಇದಿಷ್ಟು ಮಾತ್ರವಲ್ಲದೆ ಸಚಿವ ಡಿಕೆ ಶಿವಕುಮಾರ್ ಅವರಿಗೂ ಮತ್ತೊಬ್ಬರ ಮನೆಯ ಮೇಲೆ ಕಣ್ಣು ಬಿದ್ದಿದೆ. ಕಾಂಗ್ರೆಸ್ ನಾಯಕರೇ ಆಗಿರುವಂತಹಾ ಪಾಟೀಲ್ ಅವರ ಮನೆ ಬೇಕು ಎಂದು ಹಠ ಹಿಡಿದಿದ್ದಾರೆ. ಈ ಹಿಂದೆ ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ತನಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳಸುತ್ತಿದ್ದ ಫಾರ್ಚುನರ್ ಕಾರು ಬೇಕು ಎಂದು ಕೇಳಿದ್ದರು. ಆದರೆ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಈ ಮಾತಿಗೆ ಸೊಪ್ಪು ಹಾಕಲಿಲ್ಲ. ಹೀಗಾಗಿ ಕಾಂಗ್ರೆಸ್ ನಾಯಕರ ಈ ಬೇಡಿಕೆಗಳಿಗೆ ಕುಮಾರ ಸ್ವಾಮಿಯವರು ಮೊದಲೇ ತಣ್ಣೀರು ಎರಚಿದ್ದರು. ಇದೀಗ ಸ್ವತಃ ಉಪಮುಖ್ಯಮಂತ್ರಿಯವರೇ ಇಂತಹಾ ನಿರ್ಧಾರಕ್ಕೆ ಬಂದಿರೋದ್ರಿಂದ ಸರ್ಕಾರಕ್ಕೇ ಕಗ್ಗಂಟಾಗಿದ್ದಂತು ಸುಳ್ಳಲ್ಲ.
-ಏಕಲವ್ಯ