ಪ್ರಚಲಿತ

ನುಡಿದಂತೆ ನಡೆಯುವ ದೇಶದ ಏಕೈಕ ಪಕ್ಷ ಬಿಜೆಪಿ: ರಾಜನಾಥ್ ಸಿಂಗ್

ಭಾರತದಲ್ಲಿ ಹೇಳಿದ್ದನ್ನು ಮಾಡುವ, ನುಡಿದಂತೆ ನಡೆಯುವ ಪಕ್ಷ ಭಾರತೀಯ ಜನತಾ ಪಕ್ಷ ಮಾತ್ರ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ತಿಳಿಸಿದ್ದಾರೆ.

ಅವರು ಆಂಧ್ರ ಪ್ರದೇಶದ ಎಲ್ಲೂರಿನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಭಾರತೀಯ ಜನತಾ ಪಕ್ಷ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

ಆಂಧ್ರದಲ್ಲಿ ಅಧಿಕ ಪ್ರಮಾಣದಲ್ಲಿ ಭತ್ತ ಬೆಳೆಯುವ ರೈತರಿದ್ದಾರೆ. ಯುಪಿಎ ಸರ್ಕಾರದ ಆಡಳಿತದ ಅವಧಿಯಲ್ಲಿ ಭತ್ತ ಬೆಳೆಯುವ ಕೃಷಿಕರ ಪರಿಸ್ಥಿತಿ ಶೋಚನೀಯವಾಗಿತ್ತು. ಅನೇಕ ಜಿಲ್ಲೆಗಳಲ್ಲಿ ಕೃಷಿ ಲಾಭ ತಂದು ಕೊಡುತ್ತಿಲ್ಲವಾಗಿದ್ದರಿಂದ ಕೃಷಿಕರು ಆ ಕ್ಷೇತ್ರವನ್ನೇ ತೊರೆಯುವ ಪರಿಸ್ಥಿತಿ ಇತ್ತು. ಆದರೆ ಪ್ರಸ್ತುತ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿ‌ಎ ಸರ್ಕಾರದ ಆಡಳಿತದಲ್ಲಿ ರೈತರಿಗೆ ಪೂರಕವಾದ ಕಾನೂನುಗಳನ್ನು ತರಲಾಗುತ್ತಿದೆ. ರೈತರಿಂದ ಸರ್ಕಾರ ಎಂ ಎಸ್‌ ಪಿ ದರದಲ್ಲಿ ಭತ್ತ ಮತ್ತು ಗೋಧಿ ಬೆಳೆಗಳನ್ನು ಖರೀದಿ ಮಾಡುತ್ತಿದೆ. ನಮ್ಮ ಸರ್ಕಾರ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಭತ್ತ ಮತ್ತು ಗೋಧಿ ಬೆಳೆಯುವ ರೈತರಿಗೆ ಸುಮಾರು ಹದಿನೆಂಟು ಲಕ್ಷ ಕೋಟಿ ರೂ. ಗಳನ್ನು ಪಾವತಿಸಿದೆ ಎಂದು ಹೇಳಿದ್ದಾರೆ.

ಮೀನುಗಾರಿಕಾ ವಲಯಕ್ಕೆ ಸಂಬಂಧಿಸಿದ ಹಾಗೆಯೂ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಮೀನುಗಾರಿಕಾ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೆ ಪ್ರಸ್ತುತ ಸುಮಾರು ಮೂವತ್ತೆಂಟು ಕೋಟಿ ರೂ. ಗಳ ಯೋಜನೆ ಚಾಲ್ತಿಯಲ್ಲಿದೆ. ಕೇಂದ್ರ ಸರ್ಕಾರದ ಆ ಕ್ರಮದಿಂದಾಗಿ ಮೀನುಗಾರಿಕೆ ಅಭಿವೃದ್ಧಿ ಹೊಂದಿದ್ದು, ದೇಶದಲ್ಲಿ ಮೀನು ಉತ್ಪಾದನೆ ತೊಂಬತೈದು ಲಕ್ಷ ಮೆಟ್ರಿಕ್ ಟನ್‌ಗಳಿಂದ ನೂರ ಎಪ್ಪತೈದು ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಏರಿಕೆ ಕಂಡಿದೆ ಎಂದು ಅವರು ತಿಳಿಸಿದ್ದಾರೆ.

ಒಟ್ಟಿನಲ್ಲಿ ದೇಶದ ಎಲ್ಲಾ ವಲಯಗಳ ಅಭಿವೃದ್ಧಿಯ ದೃಷ್ಟಿಯಿಂದ ಪ್ರಧಾನಿ ಮೋದಿ ಸರ್ಕಾರ ಹಲವಾರು ಯೋಜನೆಗಳಿಗೆ ಜೀವ ತುಂಬಿದೆ. ಜೊತೆಗೆ ದೇಶದ ಜನರಿಗೆ ಸಹಕಾರಿಯಾಗುವಂತೆ ಆಡಳಿತ ನಡೆಸಿದೆ ಎನ್ನುವುದು ಸತ್ಯ. ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಪ್ರಧಾನಿ ಮೋದಿ ಅವರೇ ಕೇಂದ್ರದಲ್ಲಿ ಅಧಿಕಾರ ಪಡೆಯುವಂತಾಗಲಿ ಎನ್ನುವುದು ದೇಶದ ಬಹು ಜನರ ಅಪೇಕ್ಷೆ.

Tags

Related Articles

Close