ಕೆಲ ಸಮಯದ ಹಿಂದಷ್ಟೇ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದಲ್ಲಿ ಉಗ್ರ ಕೃತ್ಯಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ನಿಜಾಮಾಬಾದ್ ಉಗ್ರ ದಾಳಿ, ಸಂಚಿನಲ್ಲಿ ಭಾಗಿಯಾಗಿದ್ದ, ಮೋಸ್ಟ್ ವಾಂಟೆಡ್ ನಾಸನ್ ಮೊಹಮ್ಮದ್ ಯೂನಸ್ ಎಂಬಾತನನ್ನು ಎನ್ಐಎ ವಶಕ್ಕೆ ಪಡೆದಿದೆ.
ಬಂಧಿತ ಯೂನಸ್ನನ್ನು ಕರ್ನಾಟಕದ ಬಳ್ಳಾರಿಯಿಂದ ವಶಕ್ಕೆ ಪಡೆಯಲಾಗಿದ್ದು, ಈ ಭಯೋತ್ಪಾದಕ ನಿಷೇಧಿತ ಪಿಎಫ್ಐ ಸಂಘಟನೆಯ ಶಸ್ತ್ರಾಸ್ತ್ರ ತರಬೇತುದಾರ ಎಂಬ ಸ್ಪೋಟಕ ಮಾಹಿತಿ ಸಹ ಇದೇ ಸುಂದರ್ಭದಲ್ಲಿ ಬಯಲಾಗಿದೆ. ಈತ ಆಂಧ್ರ ಪ್ರದೇಶದವನಾಗಿದ್ದು, ತನ್ನ ಸಹೋದರನ ಜೊತೆ ವ್ಯಾಪಾರ ವಹಿವಾಟು ನಡೆಸುತ್ತಿದ್ದ. ೨೦೨೨ ರಲ್ಲಿ ತನಿಖಾ ದಳಗಳು ದೇಶ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಈತನ ಮನೆಯನ್ನು ಶೋಧಿಸಿದ್ದು, ಆ ಬಳಿಕ ಈತ ತಲೆಮರೆಸಿಕೊಂಡಿದ್ದ. ಇದೀಗ ಆತನನ್ನು ಬಳ್ಳಾರಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಗುರುತು ಮರೆಮಾಚಿ ಈತ ತನ್ನ ಪತ್ನಿ ಮತ್ತು ಮಕ್ಕಳ ಜೊತೆ ಬಳ್ಳಾರಿಯಲ್ಲಿ ವಾಸ್ತವ್ಯ ಹೂಡಿದ್ದಾಗಿಯೂ ತನಿಖೆ ವೇಳೆ ತಿಳಿದು ಬಂದಿದೆ.
ದೇಶವನ್ನು ಇಸ್ಲಾಮಿಕ್ ಸ್ಟೇಟ್ ಸ್ಥಾಪನೆಯ ಗುರಿಯನ್ನಿರಿಸಿಕೊಂಡು ಪಿಎಫ್ಐ ಸಂಘಟನೆ ಯುವಕರ ತಲೆ ಕೆಡಿಸಿ, ಅವರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿ ಉಗ್ರ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಪ್ರೇರೇಪಣೆ, ಸಹಕಾರ ನೀಡುತ್ತಿತ್ತು. ಈ ಕೃತ್ಯಕ್ಕೆ ತರಬೇತಿ ನೀಡುವ ಕೆಲಸವನ್ನು ಈತ ಮಾಡುತ್ತಿದ್ದ. ಆಂಧ್ರ, ತೆಲಂಗಾಣಗಳಲ್ಲಿ ತರಬೇತಿ ನೀಡುವ ಯೋಜನೆಯನ್ನು ಸಹ ಬಂಧಿತ ಉಗ್ರ ಹೊಂದಿದ್ದ ಎಂಬುದಾಗಿ ತಿಳಿದು ಬಂದಿದೆ. ಈ ಎರಡು ರಾಜ್ಯಗಳಿಗೆ ಈತ ಪಿಎಫ್ಐಯ ದೈಹಿಕ ತರಬೇತಿಯ ರಾಜ್ಯ ಸಂಯೋಜಕನಾಗಿಯೂ ಈತ ತೊಡಗಿಸಿಕೊಂಡಿದ್ದ ಎಂಬ ಆಘಾತಕಾರಿ ಮಾಹಿತಿಯನ್ನೂ ತನಿಖಾ ಸಂಸ್ಥೆ ಬಯಲು ಮಾಡಿದೆ.
ಕೆಲ ಸಮಯದ ಹಿಂದಷ್ಟೇ ನಿಷೇಧಿತ ಪಿಎಫ್ಐ ಗೆ ಸಂಬಂಧಿಸಿದ ಶಸ್ತ್ರಾಸ್ತ್ರ ತರಬೇತಿ ನೀಡಲಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದ ಕೆಲ ಕಡೆಗಳಲ್ಲಿ ತನಿಖಾ ಸಂಸ್ಥೆ ದಾಳಿ ನಡೆಸಿದ ಘಟನೆಯನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.