ಬಿಜೆಪಿಯು ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡುತ್ತದೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿಯುತ್ತಿದೆ. ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿದೆ ಇತ್ಯಾದಿ ಆರೋಪಗಳನ್ನು ಬಿಜೆಪಿ ವಿರೋಧಿಗಳು, ಪ್ರಧಾನಿ ನರೇಂದ್ರ ಮೋದಿ ವಿರೋಧಿಗಳು ಮಾಡುತ್ತಲೇ ಬಂದಿದ್ದಾರೆ. ಅಂತಹವರಿಗೆ ಮುಖಕ್ಕೆ ಹೊಡೆದಂತಹ ಸುದ್ದಿಯೊಂದನ್ನು ಪ್ರಧಾನಿ ಮೋದಿ ಅವರು ನೀಡಿದ್ದಾರೆ.
ಹಜ್ ಕೋಟಾ ಹೆಚ್ಚಳ, ಮುಸ್ಲಿಂ ಮಹಿಳೆಯರಿಗೆ ಸುಲಭವಾಗಿ ಹಜ್ ಯಾತ್ರೆ, ವಿಸಾ ಸರಳೀಕರಣ ಸೇರಿದಂತೆ ಅಲ್ಪಸಂಖ್ಯಾತರೆನಿಸಿಕೊಂಡ ಮುಸಲ್ಮಾನರಿಗೆ ಹಲವಾರು ರೀತಿಯ ಕೊಡುಗೆಗಳನ್ನು ಬಿಜೆಪಿ ಮಾಡಿದೆ ಎಂದು ಪ್ರಧಾನಿ ಮಾಹಿತಿ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಂ ವಿರೋಧಿ ಎನ್ನುವ ವಿರೋಧ ಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿರುವ ಅವರು, ಭಾರತೀಯ ಜನತಾ ಪಕ್ಷ ನೇತೃತ್ವದ ಎನ್ಡಿಎ ಸರ್ಕಾರ ಮುಸಾಲ್ಮಾನರಿಗಾಗಿ ಏನೆಲ್ಲಾ ಅಭಿವೃದ್ಧಿ ಯೋಜನೆಗಳನ್ನು ತಂದಿದೆಯೋ, ಅವುಗಳ ಮಾಹಿತಿಯನ್ನು ನೀಡಿದ್ದಾರೆ. ಆ ಮೂಲಕ ವಿರೋಧಿಗಳ ಓಟ್ಬ್ಯಾಂಕ್ ರಾಜಕಾರಣಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.
ಕೇಂದ್ರದ ಎನ್ಡಿಎ ಸರ್ಕಾರ ಮುಸಲ್ಮಾನರಿಗೆ ಅಗತ್ಯವಾದ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುವ ಕೆಲಸ ಮಾಡಿದೆ. ಮುಸ್ಲಿಂ ಹೆಣ್ಣುಮಕ್ಕಳ ಜೀವನಕ್ಕೆ ಮುಳ್ಳಾಗಿ ಪರಿಣಮಿಸಿದ್ದ ತ್ರಿವಳಿ ತಲಾಖ್ ಪದ್ದತಿಯನ್ನು ರದ್ದು ಮಾಡುವ ಮೂಲಕ ಅವರ ಬಾಳಿಗೆ ಭದ್ರತೆ ಒದಗಿಸುವ, ಜೀವನವನ್ನು ಬೆಳಗಿಸುವಂತಹ ಮಹತ್ತರವಾದ ಕೆಲಸವನ್ನು ಸಹ ನಾವು ಮಾಡಿದ್ದೇವೆ ಎಂದು ಪ್ರಧಾನಿ ಮೋದಿ ಮಾಹಿತಿ ನೀಡಿದ್ದಾರೆ.
ಈ ಹಿಂದೆ ಕೇವಲ ಪ್ರಭಾವಿ ವ್ಯಕ್ತಿಗಳಿಗೆ ಮಾತ್ರವೇ ಹಜ್ ನಂತಹ ಮುಸಲ್ಮಾನರ ಪವಿತ್ರ ಯಾತ್ರೆ ಸಾಧ್ಯವಾಗುತ್ತಿತ್ತು. ಸಾಮಾನ್ಯರಿಗೆ ಇದು ಸಾಧ್ಯವಾಗುತ್ತಿರಲಿಲ್ಲ. ಹಜ್ ಯಾತ್ರೊಗೂ ಲಂಚ ತೆರಬೇಕಾದ ಸ್ಥಿತಿ ಇತ್ತು. ಕೆಲವೇ ಕೆಲವು ಮಂದಿಗೆ ಈ ಅವಕಾಶ ದೊರೆಯುತ್ತಿತ್ತು. ಆದರೆ ನಮ್ಮ ಸರ್ಕಾರ ಸೌದಿ ಅರೇಬಿಯಾ ರಾಜನ ಜೊತೆ ಮಾತುಕತೆ ನಡೆಸಿ, ಸಾಮಾನ್ಯರು ಸಹ ಅವರ ಪವಿತ್ರ ಹಜ್ ಯಾತ್ರೆ ನಡೆಸಲು ಬೇಕಾದ ಅನುಕೂಲ ಕಲ್ಪಿಸಿದ್ದೇವೆ.
ಕೇವಲ ಹಜ್ ಯಾತ್ರೆಯ ಕೋಟಾ ಮಾತ್ರವೇ ನಾವು ಬದಲಾಯಿಸಿರುವುದಲ್ಲ. ಬದಲಾಗಿ ವಿಸಾ ನಿಯಮಗಳನ್ನು ಸಹ ಸಡಿಲ ಮಾಡಿದ್ದೇವೆ. ಈ ಹಿಂದೆ ಮುಸ್ಲಿಂ ಮಹಿಳೆಯರಿಗೆ ಏಕಾಂಗಿಯಾಗಿ ಹಜ್ ಯಾತ್ರೆ ನಡೆಸಲು ಅವಕಾಶ ಇರಲಿಲ್ಲ. ಆದರೆ ಹೊಸ ನಿಯಮದನ್ವಯ ಮೊಹರಮ್ ಪ್ರಕಾರ ಮಹಿಳೆಯರೇ ಹಜ್ ಯಾತ್ರೆ ನಡೆಸುವುದಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮುಸಲ್ಮಾನ ಸಮುದಾಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕೈಗೊಂಡ ಯೋಜನೆಗಳು ಹಲವಾರಿದ್ದು, ಈ ಯೋಜನೆಗಳಿಂದ ಬಿಜೆಪಿ ಗೆ ಮುಸಲ್ಮಾನರು ಹರಸಿದ್ದಾರೆ. ಆ ಆಶೀರ್ವಾದದ ಶುಭ ನನ್ನ ಜೊತೆಗೆ ಇದೆ ಎಂದು ಅವರು ಪ್ರತಿಪಕ್ಷಗಳಿಗೆ ಟಾಂಗ್ ನೀಡಿದ್ದಾರೆ.