ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ದೇಶದ ಎಲ್ಲರನ್ನೂ ಕಳೆದ ಹತ್ತು ವರ್ಷಗಳ ಆಡಳಿತಾವಧಿಯಲ್ಲಿ ಸಮಾನ ಭಾವದಿಂದ ಕಂಡಿದೆ. ಯಾವುದೇ ಮತ, ಧರ್ಮಗಳ ಬೇಧ ತೋರದೆ ಎಲ್ಲರ ಅಭಿವೃದ್ಧಿಗೆ ಏನು ಮಾಡಬೇಕೋ ಅದೆಲ್ಲವನ್ನೂ ಮಾಡಿದೆ ಎನ್ನುವುದರಲ್ಲಿ ಸಂದೇಹ ಇಲ್ಲ.
ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಎಲ್ಲಾ ಧರ್ಮದವರಿಗೂ ಹತ್ತಿರವಾಗಿದ್ದು, ದೇಶದ ಬಹು ಕೋಟಿ ಜನರು ಮತ್ತೆ ಪ್ರಧಾನಿ ನರೇಂದ್ರ ಮೋದಿ ಅವರೇ ಆಡಳಿತ ವಹಿಸಿಕೊಳ್ಳಬೇಕು. ಅವರ ಪಕ್ಷವೇ ಮತ್ತೆ ಸರ್ಕಾರ ರಚಿಸಬೇಕು ಎನ್ನುವ ಬಯಕೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ. ಇದು ಅವರ ವಿರೋಧಿಗಳಿಗೆ ವಿಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ವಿರೋಧಿಗಳಿಗೆ ಚುನಾವಣೆಯಲ್ಲಿ ಯಾವುದೇ ವಿಷಯ ಪ್ರಧಾನಿ ಮೋದಿ ವಿರುದ್ಧ ಸಿಗದೇ ಇದ್ದು, ಈ ಹಿನ್ನೆಲೆಯಲ್ಲಿ ಜನರನ್ನು ವಿಭಜಿಸಿಯಾದರೂ ಮತ ಪಡೆಯಬೇಕು ಎಂದು ತೀರ್ಮಾನಿಸಿದ ಹಾಗಿದೆ. ಇದಕ್ಕಾಗಿ ಕಾಂಗ್ರೆಸ್ ಸೇರಿದಂತೆ ಪ್ರಧಾನಿ ಮೋದಿ ವಿರೋಧಿಗಳು ಸೃಷ್ಟಿಸಿದ್ದೇ ‘ಮುಸ್ಲಿಂ ಮೀಸಲಾತಿ’.
ಲೋಕಸಭಾ ಚುನಾವಣೆಯ ಈ ಸಮಯದಲ್ಲಿ ದೇಶದಲ್ಲಿ ಮುಸ್ಲಿಂ ಮೀಸಲಾತಿ ಎನ್ನುವ ವಿಷಯ ದೊಡ್ಡದಾಗಿ ಸದ್ದು ಮಾಡುತ್ತಿದೆ. ಪ್ರಧಾನಿ ಮೋದಿ ಅವರು ಒಬಿಸಿ ಮೀಸಲಾತಿಯನ್ನು ಮುಸಲ್ಮಾನರಿಗೆ ನೀಡಲಾಗದು ಎಂದು ಸ್ಪಷ್ಟ ಪಡಿಸಿದ್ದಾರೆ. ಇದೇ ಸಮಯದಲ್ಲಿ ಇಂಡಿ ಒಕ್ಕೂಟದಲ್ಲಿ ಸೇರಿಕೊಂಡ ಆರ್ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಎಲ್ಲಾ ಮೀಸಲಾತಿಯನ್ನೂ ಮುಸಲ್ಮಾನರಿಗೆಯೇ ನೀಡಬೇಕು ಎನ್ನುವ ಮೂಲಕ ಮತ್ತೆ ವಿವಾದ ಸೃಷ್ಟಿ ಮಾಡಿದ್ದಾರೆ.
ಈ ಬಗ್ಗೆ ಲಾಲೂ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದು, ಮುಸಲ್ಮಾನರಿಗೆ ಮೀಸಲಾತಿ ದೊರೆಯ ಬೇಕು. ಅದರಲ್ಲೂ ಎಲ್ಲಾ ಮೀಸಲಾತಿ ಸಹ ಮುಸಲ್ಮಾನರಿಗೆಯೇ ದೊರೆಯಬೇಕು ಎನ್ನುವ ಮೂಲಕ ಹಿಂದೂ ಗಳಲ್ಲಿರುವ ಬಡವರಿಗೆ ಅನ್ಯಾಯ ಮಾಡುವ ಮಾತುಗಳನ್ನು ಹೇಳಿದ್ದಾರೆ. ಬಿಹಾರ ದಲ್ಲಿ ಜನರು ಬಿಜೆಪಿಯನ್ನು ಈಗಾಗಲೇ ದೂರವಿಟ್ಟಿದ್ದು, ಅವರ ಮತಗಳು ನಮಗೆ ಬರುತ್ತವೆ. ಬಿಜೆಪಿಗರನ್ನು ಜನರು ನಂಬುತ್ತಿಲ್ಲ ಎಂದು ಅವರು ನಾಲಿಗೆ ಹರಿಯ ಬಿಟ್ಟಿದ್ದಾರೆ.
ಲಾಲೂ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ. ಇಂಡಿ ಒಕ್ಕೂಟದ ಸದಸ್ಯರೊಬ್ಬರು ಎಲ್ಲಾ ಮೀಸಲಾತಿ ಮುಸಲ್ಮಾನರಿಗೆಯೇ ನೀಡಬೇಕು ಎಂದು ಹೇಳಿದ್ದಾರೆ. ಇವರು ಮೇವು ಹಗರಣದಲ್ಲಿ ಜೈಲು ಸೇರಿ, ಹೊರ ಬಂದ ವ್ಯಕ್ತಿ. ಜಾಮೀನಿನ ಮೇಲೆ ಹೊರಗಿರುವವರು. ಅವರು ಇಂತಹ ಹೇಳಿಕೆ ನೀಡಿದಾಗಲೂ ಕಾಂಗ್ರೆಸ್ ಸುಮ್ಮನಿದೆ. ಇಂಡಿ ಒಕ್ಕೂಟದ ಗುರಿಯೇ ಈ ದೇಶದ ಎಸ್.ಸಿ., ಎಸ್.ಟಿ. ಹಿಂದುಳಿದ ವರ್ಗದ ಜನರ ಮೀಸಲಾತಿ ಹಕ್ಕನ್ನು ಕಿತ್ತು, ಮುಸಲ್ಮಾನರಿಗೆ ನೀಡುವುದೇ ಆಗಿದೆ ಎಂದು ಹೇಳಿದ್ದಾರೆ. ಆ ಮೂಲಕ ಇಂಡಿ ಒಕ್ಕೂಟ ಬಹುಸಂಖ್ಯಾತ ಹಿಂದೂಗಳ ವಿರೋಧಿ ಎನ್ನುವುದನ್ನು ಮತ್ತೆ ಜನರೆದುರು ಬೆತ್ತಲಾಗಿಸಿದ್ದಾರೆ.