ಮುಂದಿನ ಜನವರಿ ತಿಂಗಳಲ್ಲಿಯೇ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮ ಮಂದಿರ ಲೋಕಾರ್ಪಣೆಯಾಗಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಿಳಿಸಿದ್ದಾರೆ.
ಶ್ರೀರಾಮ ಜನ್ಮಭೂಮಿಯ ರಾಷ್ಟ್ರ ಮಂದಿರ ರಾಮ ಮಂದಿರದ ನಿರ್ಮಾಣ, ಲೋಕಾರ್ಪಣೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಸಹ ಸ್ವಾಗತ ಕೋರಿದ್ದಾರೆ.
ಉತ್ತರ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ಮಿಂಚಿನ ವೇಗದಲ್ಲಿ ನಡೆಯುತ್ತಿವೆ. ಇನ್ನೇನು ಕೆಲವೇ ಸಮಯದಲ್ಲಿ ಭವ್ಯ ಶ್ರೀರಾಮ ಮಂದಿರ ಸಹ ಲೋಕಕ್ಕೆ ಅರ್ಪಣೆಯಾಗಲಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣ, ರೈಲು ನಿಲ್ದಾಣ ವಿಸ್ತರಣಾ ಕಾಮಗಾರಿಗಳು ಸಹ ಶರವೇಗದಲ್ಲಿ ನಡೆಯುತ್ತಿವೆ. ಈ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಸಹ ಶೀಘ್ರವೇ ನಡೆಸುವಂತೆಯೂ ಉತ್ತರ ಪ್ರದೇಶದ ಸರ್ಕಾರ ಆಯಾ ಕಚೇರಿಗಳಿಗೆ ಸೂಚನೆಯನ್ನು ಸಹ ಈಗಾಗಲೇ ನೀಡಿದೆ.
ಪ್ರಸ್ತುತ ರಾಮ ಪಥ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಹಾಗೆಯೇ ರಾಮಜಾನಕಿ ಪಥ ಮತ್ತು ಭಕ್ತಿ ಪಥ ನಿರ್ಮಾಣದ ಬಗ್ಗೆ ಯೋಜನೆ ರೂಪಿಸುತ್ತಿರುವುದಾಗಿಯೂ ಉತ್ತರ ಪ್ರದೇಶದ ಸರ್ಕಾರ ತಿಳಿಸಿದೆ. ರಾಷ್ಟ್ರ ಮಂದಿರಕ್ಕೆ ಸಂಬಂಧಿಸಿದ ಎಲ್ಲಾ ಮೇಲುಸ್ತುವಾರಿಗಳನ್ನು ಸ್ವತಃ ಸಿ ಎಂ ಯೋಗಿ ಆದಿತ್ಯನಾಥ್ ಅವರೇ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.