ಕಾಂಗ್ರೆಸ್ ಹಾಗೂ ಜನತಾ ದಳದ ಹೆಗಲೇರಿರುವ ಈ ಭಿನ್ನಮತ ಎಂಬ ಭೂತ ಶಮನವಾಗುವ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ. ಒಬ್ಬರ ಮೇಲೆ ಒಬ್ಬರಂತೆ ಕಾಂಗ್ರೆಸ್ ಶಾಸಕರು ಬಂಡಾಯವನ್ನು ಸಾರುವ ಮೂಲಕ ಮೈತ್ರಿ ಸರ್ಕಾರವನ್ನು ಉರುಳಿಸುವ ಲೆಕ್ಕಾಚಾರವನ್ನು ಮಾಡುತ್ತಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಪಕ್ಷ ಹಾಗೂ ಮುಖ್ಯಮಂತ್ರಿ ಕುಮಾರ ಸ್ವಾಮಿ ನೇತೃತ್ವದ ಕಾಂಗ್ರೆಸ್ ಜನತಾ ದಳ ಸರ್ಕಾರಕ್ಕೆ ಮೊದಲ ಅತಿದೊಡ್ಡ ಶಾಕ್ ಎದುರಾಗಿದೆ.
ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಹೆಚ್.ಕೆ.ಪಾಟೀಲ್ಗೆ ಈ ಬಾರಿ ಸಚಿವ ಸ್ಥಾನ ನೀಡಿಲ್ಲ ಎಂಬ ಕಾರಣಕ್ಕಾಗಿ ಭಿನ್ನಮತವನ್ನು ಸಾರಿದ್ದಾರೆ. ಹಿಂದಿನಿಂದಲೂ ಕಾಂಗ್ರೆಸ್ ಕಟ್ಟಾಳುವಾಗಿ ಬೆಳೆದ ತಮಗೆ ಸಚಿವ ಸ್ಥಾನ ನೀಡಲೇಬೇಕು. ಇಲ್ಲವಾದಲ್ಲಿ ನಾವು ಸುಮ್ಮನೆ ಕೂರೋದಿಲ್ಲ ಎಂಬ ಸಂದೇಶವನ್ನು ಈ ಹಿಂದೆನೇ ಸಾರಿದ್ದ ಪಾಟೀಲ್ ಇದೀಗ ಉಭಯ ಪಕ್ಷಗಳಿಗೆ ದೊಡ್ಡ ಹೊಡೆತವನ್ನೇ ನೀಡಿದ್ದಾರೆ.
ಹೆಚ್.ಕೆ.ಪಾಟೀಲ್ಗೆ ಈ ಬಾರಿ ಸಚಿವ ಸ್ಥಾನವನ್ನು ನೀಡಿಲ್ಲ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಗದಗದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆದಿತ್ತು. ನಂತರ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರುಗಳು ರಾಜೀನಾಮೆ ನೀಡಿದ್ದಾರೆ. ಮಾತ್ರವಲ್ಲದೆ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದವರೂ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಹೆಚ್.ಕೆ.ಪಾಟೀಲ್ಗೆ ಸಚಿವ ಸ್ಥಾನ ನೀಡಲೇ ಬೇಕು ಎಂದು ಹಠ ಹಿಡಿದಿರುವ ಪಾಟೀಲ್ ಬೆಂಬಲಿಗರು ಕಾಂಗ್ರೆಸ್ ಹೈಕಮಾಂಡ್ಗೆ ಸಾಮೂಹಿಕ ರಾಜೀನಾಮೆಯನ್ನು ನೀಡಿ ಎಚ್ಚರಿಕೆಯನ್ನು ನೀಡಿದ್ದಾರೆ.
ಈಗಾಗಲೇ ಈ ಜನಪ್ರತಿನಿಧಿಗಳು ರಾಜೀನಾಮೆ ನೀಡಿದ್ದು ಮುಂದಿನ ರಾಜೀನಾಮೆಯ ಪರ್ವ ತಮ್ಮದೇ ಎಂಬ ಸ್ಪಷ್ಟ ಸಂದೇಶವನ್ನೂ ಹೆಚ್.ಕೆ.ಪಾಟೀಲ್ ನೀಡಿದ್ದಾರೆ. ತಾನೋರ್ವ ಹಿರಿಯ ಶಾಸಕ. ನನ್ನನ್ನು ಕಡೆಗಣಿಸಿದ್ದು ಯಾವ ಮಾನದಂಡದಲ್ಲಿ ಎಂಬುವುದು ನನಗೆ ತಿಳಿಯುತ್ತಿಲ್ಲ. ಕಳೆದ ಸರ್ಕಾರದಲ್ಲೂ ಸಚಿವನಾಗಿ ಉತ್ತಮ ಕೆಲಸಗಳನ್ನು ಮಾಡಿದ್ದೇನೆ. ಹೀಗಾಗಿ ತನಗೆ ಮಂತ್ರಿ ಸ್ಥಾನ ನೀಡಬೇಕು ಎಂಬುವುದು ಪಾಟೀಲ್ ಬಯಕೆ.
ಒಟ್ಟಾರೆ ಶತಾಯ ಗತಾಯ ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತವಾಗಬಾರದು ಎಂದಿರುವ ಕಾಂಗ್ರೆಸ್ ಪಕ್ಷ ಜನತಾ ದಳದೊಂದಿಗೆ ಮೈತ್ರಿ ಸರ್ಕಾರ ನಡೆಸಿ ಇಕ್ಕಟ್ಟಿಗೆ ಸಿಕ್ಕಿಹಾಕುಕೊಂಡಿದ್ದು ಮಾತ್ರ ಸುಳ್ಳಲ್ಲ.
-ಏಕಲವ್ಯ