ಉತ್ತರಾಖಂಡ್ನಲ್ಲಿ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆಯೊಂದನ್ನು ಬಿಜೆಪಿ ನೆರವೇರಿಸಿದೆ.
ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದಾಗಿ ತಿಳಿಸಿತ್ತು. ಅದರಂತೆ ಈಗ ನುಡಿದಂತೆ ನಡೆದು ಯುಸಿಸಿ ಮಸೂದೆ ಮಂಡನೆ ಮಾಡಲಾಗಿದೆ.
ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಇಂದು ರಾಜ್ಯ ವಿಧಾನಸಭೆ ರಲ್ಲಿ ಈ ಮಸೂದೆಯನ್ನು ಮಂಡನೆ ಮಾಡಿದ್ದಾರೆ. ಉತ್ತರಾಖಂಡದ ನಾಲ್ಕು ದಿನಗಳ ವಿಶೇಷ ಅಧಿವೇಶನ ನಿನ್ನೆ ಆರಂಭವಾಗಿದ್ದು, ಇಂದು ಅವರು ಈ ಮಸೂದೆಯನ್ನು ಮಂಡನೆ ಮಾಡಿದ್ದಾರೆ.
ಆ ಮಸೂದೆ ಅಂಗೀಕಾರವಾಗಿ, ಜಾರಿಗೆ ಬಂದಲ್ಲಿ ಉತ್ತರಾಖಂಡ ರಾಜ್ಯವು ಸ್ವಾತಂತ್ರ್ಯ ನಂತರದಲ್ಲಿ ಈ ಮಸೂದೆಯನ್ನು ಅಳವಡಿಸಿದ ಮೊದಲ ರಾಜ್ಯ ಎಂಬ ಹಿರಿಮೆಗೆ ಭಾಜನವಾಗಲಿದೆ. ಪೋರ್ಚುಗೀಸರ ಆಳ್ವಿಕೆಯ ದಿನದಿಂದಲೂ ಯುಸಿಸಿ ಗೋವಾದಲ್ಲಿ ಜಾರಿಯಲ್ಲಿದೆ.
ಈ ಮಸೂದೆ ಯಾವುದೇ ಜಾತಿ, ಧರ್ಮವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಎಲ್ಲರಿಗೂ ಒಂದೇ ರೀತಿಯಾದ ಕಾನೂನನ್ನು ಪ್ರಸ್ತಾಪಿಸುತ್ತದೆ. ಮದುವೆ, ಡಿವೋರ್ಸ್,ಭೂಮಿ, ಆಸ್ತಿ, ಉತ್ತರಾಧಿಕಾರ ಮೊದಲಾದ ವಿಷಯಗಳಲ್ಲಿ ಕಾನೂನು ಚೌಕಟ್ಟನ್ನು ಒದಗಿಸುತ್ತದೆ.
ಉತ್ತರಾಖಂಡ ರಾಜ್ಯದಲ್ಲಿ ಈ ಕಾನೂನು ಜಾರಿಯಾದಲ್ಲಿ ಮುಂದಿನ ದಿನಗಳಲ್ಲಿ ದೇಶದ ಇತರ ರಾಜ್ಯಗಳೂ ಸಹ ಈ ಕಾನೂನನ್ನು ತಮ್ಮಲ್ಲಿ ಅನುಷ್ಠಾನಕ್ಕೆ ತರುವ ಸಾಧ್ಯತೆ ಇದೆ.