ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ತಂಡ ಮೂರು ಮಂದಿ ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆ ಮಾಡಿದೆ. ರೇಖಾಚಿತ್ರವನ್ನು ಹೋಲುವ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುವಂತೆ ಎಸ್ಐಟಿ ಸಾರ್ವಜನಿಕರ ಮೊರೆ ಹೋಗಿದೆ. ಸಿಸಿಟಿವಿಯ ದೃಶ್ಯಾವಳಿಯನ್ನು ಆದರಿಸಿ ಎಸ್ಐಟಿ ಈ ರೀತಿ ರೇಖಾಚಿತ್ರ ತಯಾರಿಸಿದೆ ಎಂದು ಎಸ್ಐಟಿ ಮುಖ್ಯಸ್ಥ ಬಿ.ಕೆ. ಸಿಂಗ್ ಬೆಂಗಳೂರಿನಲ್ಲಿ ಪತ್ರಕರ್ತರನ್ನುದ್ದೇಶಿಸಿ ತಿಳಿಸಿದ್ದಾರೆ. ಜೊತೆಗೆ ಹಂತಕರ ಸಿಸಿಟಿವಿ ದೃಶ್ಯಾವಳಿಯೂ ಬಿಡುಗಡೆಗೊಂಡಿದೆ.
ಗೌರಿ ಲಂಕೇಶ್ ಹಂತಕರ ಸುಳಿವು ರಾಮಲಿಂಗ ರೆಡ್ಡಿಗೆ ಸಿಕ್ಕಿದ್ದರೆ ಎಸ್ಐಟಿ ರೇಖಾಚಿತ್ರ ಬಿಡುಗಡೆ ಮಾಡುವ ಅಗತ್ಯವೇನಿತ್ತು? ಸುಳ್ಳು ಹೇಳಿ ಸಿಕ್ಕಿಬಿದ್ದರೇ ರಾಮಲಿಂಗ!!
ಈ ಮುಂಚೆ ಗೃಹಸಚಿವ ರಾಮ ಲಿಂಗ ರೆಡ್ಡಿಯವರು ಗೌರಿ ಹಂತಕರ ಸುಳಿವು ಸಿಕ್ಕಿದೆ, ಆದರೆ ಸಾಕ್ಷಿ ಸಿಕ್ಕಿಲ್ಲ ಎಂದು ಹೇಳಿಕೆ ನೀಡಿದ್ದರು. ಹಂತಕ ಸುಳಿವು ಸಿಕ್ಕಿದ್ದರೆ
ಎಸ್ಐಟಿ ರೇಖಾಚಿತ್ರ ಬಿಡುಗಡೆ ಮಾಡುವ ಅವಶ್ಯಕತೆ ಏನಿತ್ತು, ರಾಮಲಿಂಗ ರೆಡ್ಡಿ ಆ ರೀತಿ ಹೇಳಿಕೆ ನೀಡಿದ್ದು ಯಾಕೆ ಎಂಬ ಗಂಭೀರವಾದ ಪ್ರಶ್ನೆ ಹುಟ್ಟಲಾರಂಭಿಸಿದೆ. ಎಸ್ಐಟಿ ಅಧಿಕಾರಿಗಳು ಅಧಿಕೃತ ಹೇಳಿಕೆ ನೀಡುವ ಮುಂಚೆಯೇ ರಾಮಲಿಂಗ ರೆಡ್ಡಿ ಈ ರೀತಿ ಸುಳಿವು ಸಿಕ್ಕಿದೆ ಎಂದಿರುವುದು ಸಾಕಷ್ಟು ಸಂಶಯಕ್ಕೆ ಕಾರಣವಾಗಿದೆ. ಹಂತಕರ ಸ್ಪಷ್ಟ ಸುಳಿವು ದೊರಕದೇ ಇದ್ದಿದ್ದರೂ ಸನಾತನ ಸಂಸ್ಥೆಯ ಮೇಲೆ ಆರೋಪ ಹೊರಿಸಿದ್ದು ಯಾಕೆ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದ್ದು, ಸರಕಾರದ ನಡೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಎಸ್ಐಟಿ ಪ್ರಕಾರ ಗೌರಿ ಲಂಕೇಶ್ ಹಂತಕರು ಒಂದು ವಾರಗಳ ಮುಂಚೆಯೇ ಬೆಂಗಳೂರಿಗೆ ಬಂದು ವಾಸ್ತವ್ಯ ಹೂಡಿದ್ದರು. ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ವಾಸ್ತವ್ಯ ಹೂಡಿರುವ ಸಾಧ್ಯತೆ ಇದ್ದು, ಅಲ್ಲೇ ಸಮೀಪ ಅಡ್ಡಾಡಿರುವ ಸಾಧ್ಯತೆ ಇದೆ. ಆದ್ದರಿಂದ ರೇಖಾಚಿತ್ರದಲ್ಲಿನ ಹೋಲಿಕೆ ಇರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಇದ್ದರೆ ಎಸ್ಐಟಿಗೆ ಮಾಹಿತಿ ಒದಗಿಸುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ. ಇಂಥಾ ವ್ಯಕ್ತಿಗಳು ಹೋಟೆಲ್, ಲಾಡ್ಜ್ನಲ್ಲಿ ಎಲ್ಲಾದರೂ ವಾಸ್ತವ್ಯ ಹೂಡಿದ್ದರೆ ಅಥವಾ ಜಾಲತಾಣಗಳಲ್ಲಿ ಇಂಥವರನ್ನು ಹೋಲುವ ವ್ಯಕ್ತಿಗಳಿದ್ದರೆ ಮಾಹಿತಿ ನೀಡುವಂತೆ ಎಸ್ಐಟಿ ಅಧಿಕಾರಿಗಳು ಸಾರ್ವಜನಿಕರಲ್ಲಿ ಕೋರಿದ್ದಾರೆ.
ಕೊಲೆ ತನಿಖೆ ಯಾವ ಹಂತದಲ್ಲಿದೆ ಎಂದು ಇನ್ನೂ ಸ್ಪಷ್ಟವಾಗಿ ಮಾಹಿತಿ ಇಲ್ಲ. ಒಟ್ಟು 600ಕ್ಕಿಂತಲೂ ಅಧಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದ್ದು, ಆದರೆ ಹಂತಕರ ಸುಳಿವು ಇನ್ನೂ ಸಿಕ್ಕಿಲ್ಲ. ಪ್ರತ್ಯಕ್ಷದರ್ಶಿಗಳು ನೀಡಿದ ಹೇಳಿಕೆಯನ್ನಾಧರಿಸಿ ರೇಖಾಚಿತ್ರ ಬಿಡುಗಡೆ ಮಾಡಲಾಗಿದೆ. ಮೂವರ ರೇಖಾಚಿತ್ರದ ಪೈಕಿ ಒಬ್ಬ ಆರೋಪಿಯ ಎರಡು ರೀತಿಯ ರೇಖಾಚಿತ್ರ ತಯಾರಿಸಲಾಗಿದೆ ಎಂದು ಬಿ.ಕೆ. ಸಿಂಗ್ ತಿಳಿಸಿದ್ದಾರೆ.
ರೇಖಾಚಿತ್ರದಲ್ಲಿನ ವ್ಯಕ್ತಿಯ ಹಣೆಯ ಮೇಲೆ ತಿಲಕ ಇದ್ದು, ಆದರೆ ತಿಲಕ ಇದೆ ಎಂಬ ಕಾರಣಕ್ಕೆ ಹಂತಕರು ಇದೇ ಸಂಘಟನೆಯವರು ಎಂದು ಹೇಳಲು ಸಾಧ್ಯವಿಲ್ಲ,
ತನಿಖೆಯ ದಾರಿ ತಪ್ಪಿಸಲು ಈ ರೀತಿ ಮಾಡಿರುವ ಸಾಧ್ಯತೆಯೂ ಇದೆ ಎಂದು ಬಿ.ಕೆ ಸಿಂಗ್ ತಿಳಿಸಿದರು.
ಹಂತಕರು 7.65 ಎಂ.ಎಂ. ಕಂಟ್ರಿಮೇಡ್ ಪಿಸ್ತೂಲ್ ಬಳಕೆ ಮಾಡಿದ್ದರು. ಪನ್ಸಾರೆ, ದಾಬೋಲ್ಕರ್ ಹತ್ಯೆಗೂ ಇದೇ ಮಾದರಿಯ ಪಿಸ್ತೂಲ್ ಬಳಕೆ ಮಾಡಲಾಗಿತ್ತು ಎಂದು ಈ ಮುಂಚೆ ತಿಳಿಸಿದ್ದರು. ಆದರೆ ಈ ಪಿಸ್ತೂಲ್ ಕಾಳಸಂತೆಯಲ್ಲಿ ಬೇಕಾಬಿಟ್ಟಿಯಾಗಿ ಸಿಗುತ್ತದೆ ಎಂದು ಖಾಸಗಿ ಸುದ್ದಿವಾಹಿನಿಯೊಂದು ಸ್ಫೋಟಕ ಸುದ್ದಿಯನ್ನು ಬಿತ್ತರಿಸಿತ್ತು.
ಹಂತಕರು 25ರಿಂದ 35 ವರ್ಷ ಒಳಗಿನವರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಸುಮಾರು ಮುನ್ನೂರು ಮಂದಿಯನ್ನು ವಿಚಾರಣೆ ನಡೆಸಲಾಗಿದೆ. ನಾವು ಯಾವ
ಸಂಘಟನೆಯನ್ನೂ ಟಾರ್ಗೆಟ್ ಮಾಡಿಲ್ಲ. ಕೆಲವು ಹಿಂದೂ ಸಂಘಟನೆಗಳ ಹೆಸರು ಕೇಳಿ ಬಂದಿದ್ದೇ ಮಾಧ್ಯಮಗಳ ಮೂಲಕ ಎಂದು ಅಚ್ಚರಿ ವ್ಯಕ್ತಪಡಿಸಿದ ಬಿ.ಕೆ ಸಿಂಗ್ ತನಿಖೆಯಲ್ಲಿ ಪ್ರಗತಿ ಸಾಧಿಸಲು ಸಾರ್ವಜನಿಕರ ನೆರವು ಬೇಕು ಎಂದು ತಿಳಿಸಿದರು.
ಗೌರಿ ಹಂತಕ ಬ್ಲ್ಯಾಕ್ ರೆಡ್ ಬಣ್ಣದ ಪಲ್ಸರ್ನಲ್ಲಿ ಅಡ್ಡಾಡುತ್ತಿರುವ ಸಿಸಿ ಟಿವಿ ದೃಶ್ಯ ಬಿಡುಗಡೆ ಮಾಡಲಾಗಿದೆ. ಪಲ್ಸರ್ ಬೈಕನ್ನು ಆಧರಿಸಿ, ಹೆಲ್ಮೆಟ್ ಧರಿಸಿಕೊಂಡು
ಬಂದಿರುವ ವ್ಯಕ್ತಿಯನ್ನಾಧರಿಸಿ ಎಸ್ಐಟಿ ಹಂತಕರ ಶೋಧ ನಡೆಸುತ್ತಿದೆ.
ಹಂತಕರ ಸುಳಿವು ಸಿಕ್ಕಿದೆ ಎಂದಿದ್ಯಾಕೆ ರಾಮಲಿಂಗ?
ಗೌರಿ ಲಂಕೇಶ್ ಹಂತಕರ ಸುಳಿವು ಸಿಕ್ಕಿದೆ ಆದರೆ ಸಾಕ್ಷ್ಯಗಳಿಗಾಗಿ ಹುಡುಕಾಡುತ್ತಿದ್ದೇವೆ ಎಂದು ಗೃಹಸಚಿವ ರಾಮಲಿಂಗ ರೆಡ್ಡಿ ಹೇಳಿಕೆ ಚರ್ಚೆಗೆ ಗ್ರಾಸ ಒದಗಿಸಿದೆ. ಎಸ್ಐಟಿ ಹಂತಕರನ್ನು ಪತ್ತೆಹಚ್ಚಿದೆ ಎಂದು ರೆಡ್ಡಿ ಹೇಳಿಕೆ ನೀಡಿದ್ದು, ಒಂದು ವೇಳೆ ಹಂತಕರು ಪತ್ತೆಯಾಗಿದ್ದರೆ ಎಸ್ಐಟಿ ರೇಖಾಚಿತ್ರ ಬಿಡುಗಡೆ ಮಾಡುವ ಅವಶ್ಯಕತೆ ಏನಿತ್ತು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಹಂತಕರ ಸುಳಿವು ಸಿಕ್ಕಿದೆ. ಆ ಸುಳಿವುಗಳಿಗೆ ಸಂಬಂಧಿಸಿ ಸೂಕ್ತ ಸಾಕ್ಷ್ಯಗಳನ್ನು ಕಲೆ ಹಾಕಲಾಗುತ್ತಿದೆ ಎಂದು ಚಿಕ್ಕಬಳ್ಳಾಪುರದಲ್ಲಿ ರಾಮಲಿಂಗ ರೆಡ್ಡಿ ಹೇಳಿಕೆ ನೀಡಿದ್ದರು.
ಎಸ್ಐಟಿ ಇಷ್ಟರವರೆಗೆ ನಡೆಸಿದ ತನಿಖೆಯಲ್ಲಿ ಬರೇ ರೇಖಾಚಿತ್ರವನ್ನಷ್ಟೇ ತಯಾರಿಸಲು ಶಕ್ತವಾಗಿದೆ. ಆದರೆ ಹಂತಕರ ಬಗ್ಗೆ ಯಾವುದೇ ಸುಳಿವು ಎಸ್ಐಟಿಗೆ
ಲಭಿಸಿಲ್ಲ. ಒಂದು ವೇಳೆ ಸುಳಿವು ಸಿಕ್ಕಿದ್ದೇ ಆಗಿದ್ದರೆ ಖಂಡಿತಾ ರೇಖಾಚಿತ್ರ ಬಿಡುಗಡೆಗೊಳಿಸಿ ಸಾರ್ವಜನಿಕರಲ್ಲಿ ಮಾಹಿತಿ ನೀಡುವಂತೆ ಕೋರುವ ಅಗತ್ಯವಿರಲಿಲ್ಲ. ಎಸ್ಐಟಿಗೆ ಹಂತಕರ ಯಾವುದೇ ಮಾಹಿತಿ ಸಿಗದಿದ್ದರೂ ಒಂದು ರಾಜ್ಯದ ಗೃಹಸಚಿವ ಎಂಬ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯಾಗಿರುವ ರಾಮಲಿಂಗ ರೆಡ್ಡಿಯವರು ಹಂತರಕ ಸುಳಿವು ಸಿಕ್ಕಿದೆ ಎಂದು ಹೇಳಿರುವುದು ಯಾಕೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಅಲ್ಲದೆ ರಾಮಲಿಂಗ ರೆಡ್ಡಿ ಸುಳ್ಳು ಹೇಳಿದ್ದಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
-ಚೇಕಿತಾನ