ಪ್ರಧಾನಿ ನರೇಂದ್ರ ಮೋದಿ ಅವರ “ಸ್ವಚ್ಛ ಭಾರತ‘ದ ಕರೆ, ನೆರೆಯ ಚೀನದವರೆಗೂ ತಲುಪಿದೆ! ಆಶ್ಚರ್ಯವಾದರೂ ಇದು ಸತ್ಯ. ಪ್ರಧಾನಿ ಮೋದಿ ಅವರಿಂದಲೇ ಸ್ಫೂರ್ತಿ ಪಡೆದು ಈಗ ಚೀನ ಅಧ್ಯಕ್ಷ ಕ್ಸಿ ಜಿನ್ಪಿಂಗ್ “ಸ್ವಚ್ಛ ಚೀನ’ಕ್ಕಾಗಿ ಪಣ ತೊಟ್ಟಿದ್ದಾರೆ. ಚೀನದಾದ್ಯಂತ ಸ್ವಚ್ಛ ಶೌಚಾಲಯ ಸ್ಥಾಪಿಸುವಂತೆ ಕರೆ ನೀಡಿದ್ದಾರೆ.
ಪ್ರಧಾನಿ ಹುದ್ದೆಗೇರಿದ ಅನಂತರ ಮೋದಿ ಅವರು ಆರಂಭಿಸಿದ ಅತಿದೊಡ್ಡ ಆಂದೋಲನವೇ “ಸ್ವತ್ಛ ಭಾರತ’. 2014ರಲ್ಲಿ ಈ ಯೋಜನೆ ಯನ್ನು ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ, ತಾವು ಎಲ್ಲೇ ಹೋದರೂ ಭಾಷಣದಲ್ಲಿ ಸ್ವಚ್ಛತೆಯ ಕುರಿತು ಒಂದೆರಡು ವಿಚಾರ ಪ್ರಸ್ತಾವಿಸದೇ ಇರುತ್ತಿರಲಿಲ್ಲ.
ಶೌಚಾಲಯಗಳನ್ನು ನಿರ್ಮಿಸಲು ಸರಕಾರದಿಂದಲೇ ಹಣಕಾಸಿನ ನೆರವು ನೀಡುವುದರಿಂದ ಹಿಡಿದು, ತ್ಯಾಜ್ಯ ಸಂಸ್ಕರಣೆ, ತ್ಯಾಜ್ಯದಿಂದ ರಸಗೊಬ್ಬರ ಉತ್ಪಾದನೆ ಅಥವಾ ವಿದ್ಯುತ್ ಉತ್ಪಾದನೆಯವರೆಗೆ ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ನೈರ್ಮಲ್ಯ ಕಾಪಾಡಿ ಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟರು. ಅದರ ಜತೆಗೆ ಬಯಲು ಶೌಚ ಮುಕ್ತ ಭಾರತ ನಿರ್ಮಾಣಕ್ಕೂ ಮುಂದಾದರು.
ಜಿನ್ಪಿಂಗ್ಗೂ ಮೋದಿ ಮಾದರಿ:
ಪ್ರಧಾನಿ ಮೋದಿ ಅವರ ಸ್ವತ್ಛ ಭಾರತ ಆಂದೋಲನದಿಂದ ಪ್ರೇರಣೆಗೊಂಡು 2015ರಲ್ಲಿ ಚೀನ ಪ್ರಧಾನಿಯೂ ಪ್ರವಾಸಿ ತಾಣಗಳಲ್ಲಿ ಟಾಯ್ಲೆಟ್ ನಿರ್ಮಿಸುವಂತ “ಶೌಚಾಲಯ ಕ್ರಾಂತಿ’ಗೆ ಕರೆಕೊಟ್ಟರು. ಈಗ ಗ್ರಾಮೀಣ ಪ್ರದೇಶಗಳೂ ಸೇರಿದಂತೆ ಇಡೀ ದೇಶದಲ್ಲೇ ಟಾಯ್ಲೆಟ್ ಕ್ರಾಂತಿ ನಡೆಯಬೇಕು ಎಂದು ಜನತೆಗೆ ಕರೆನೀಡಿದ್ದಾರೆ. “ಟಾಯ್ಲೆಟ್ ಎನ್ನುವುದು ಸಣ್ಣ ವಿಚಾರವಲ್ಲ. ನಾಗರಿಕ ಸಮಾಜವನ್ನು ನಿರ್ಮಿಸುವಂಥ ಪ್ರಮುಖ ಅಂಶ’ ಎಂದಿದ್ದಾರೆ ಜಿನ್ಪಿಂಗ್.
ಚೀನದ ಗ್ರಾಮೀಣ ಪ್ರದೇಶಗಳಲ್ಲಿ ಟಾಯ್ಲೆಟ್ನದ್ದೇ ಸಮಸ್ಯೆ. ಕೆಲವರು ಸಿಕ್ಕ ಸಿಕ್ಕ ವಸ್ತುಗಳನ್ನು ಬಳಸಿ ತಾತ್ಕಾಲಿಕ ಟೆಂಟ್ ಥರ ಶೌಚಾಲಯ ನಿರ್ಮಿಸಿಕೊಂಡಿದ್ದರೆ, ಇನ್ನು ಕೆಲವರು ಸಣ್ಣ ಗುಂಡಿ ತೋಡಿ ಅಲ್ಲೇ ಶೌಚಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇನ್ನು ಪ್ರವಾಸಿತಾಣಗಳಲ್ಲಂತೂ ಸೂಕ್ತ ಟಾಯ್ಲೆಟ್ಗಳಿಲ್ಲ, ಇದ್ದರೂ ಸ್ವತ್ಛವಾಗಿಲ್ಲ ಎಂಬ ದೂರುಗಳೇ ಹೆಚ್ಚು. ಈ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡು, ಮೋದಿ ಮಾದರಿಯನ್ನು ಅನುಸರಿಸ ಹೊರಟಿದ್ದಾರೆ ಜಿನ್ಪಿಂಗ್.
ಅದರಂತೆ, ಈ ವರ್ಷದ ಅಕ್ಟೋಬರ್ ಅಂತ್ಯದವರೆಗೆ, ಚೀನದ ಪ್ರವಾಸಿ ತಾಣಗಳಲ್ಲಿ 68 ಸಾವಿರ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದು ಚೀನ ಹಾಕಿಕೊಂಡಿದ್ದ ಗುರಿಗಿಂತ ಶೇಕಡಾ 19.3ರಷ್ಟು ಹೆಚ್ಚು. 2018ರಿಂದ 2020ರ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳ ಪ್ರವಾಸಿ ಸ್ಥಳಗಳಲ್ಲಿ ಇನ್ನೂ 64 ಸಾವಿರ ಟಾಯ್ಲೆಟ್ಗಳನ್ನು ನಿರ್ಮಿಸುವ ಅಥವಾ ಮೇಲ್ದರ್ಜೆಗೇರಿಸುವ ಯೋಜನೆಯನ್ನು ಚೀನ ರಾಷ್ಟ್ರೀಯ ಪ್ರವಾಸೋದ್ಯಮ ಆಡಳಿತವು ಹಾಕಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು `ಸ್ವಚ್ಛ ಭಾರತ’ ನಿರ್ಮಾಣ ಮಾಡಲು ದೇಶ ಬಾಂಧವರಿಗೆ ಕರೆ ಕೊಟ್ಟಿರುವುದು ಸಕಾಲಿಕವಾಗಿದೆ. ಭಾರತ ಈಗ ಕೊಳಕು, ಕಸದಿಂದ ಕೂಡಿದ ಕುರೂಪಿ ದೇಶವಾಗುತ್ತಿದೆ. ಈ ಕಹಿ ಸತ್ಯವನ್ನು ಎದುರಿಸುವುದನ್ನು ಬಿಟ್ಟು, ಅಂತಹ ಕೊಳಕುತನ ನಮ್ಮಲ್ಲಿ ಇಲ್ಲವೇ ಎಂದು ಹೇಳಿಕೊಳ್ಳುವುದು ಆತ್ಮವಂಚನೆಯಾದೀತು. ವಾಸ್ತವಕ್ಕೆ ಬೆನ್ನು ಮಾಡಿ ಓಡಿ ಹೋಗುವುದರಿಂದ ನಾವು ಇನ್ನಷ್ಟು ಅಪಾಯವನ್ನು ಆಹ್ವಾನಿಸಿಕೊಂಡಂತಾಗುವುದು.
ಅಹಿಂಸೆ ಮತ್ತು ಸ್ವಾತಂತ್ರ್ಯ ಹೋರಾಟದಂತಹ ಉದಾತ್ತ ಚಿಂತನೆಗಳಿಗೆ ನೀಡಿದ್ದ ಮಹತ್ವವನ್ನು ದೇಹ ಮತ್ತು ಮನಸ್ಸಿನ ಸ್ವಚ್ಛತೆಗೂ ನೀಡಿದ್ದ ಮಹಾತ್ಮ ಗಾಂಧಿ ಅವರ ಜಯಂತಿ ದಿನ ಈ ಆಂದೋಲನಕ್ಕೆ ಚಾಲನೆ ನೀಡಿರುವುದೂ ಹೆಚ್ಚು ಸಮಯೋಚಿತವಾಗಿದೆ.
ಸ್ವಾತಂತ್ರ್ಯ ಹೋರಾಟದಂತಹ ಮಹಾ ಪರಿವರ್ತನೆಯ ಚಳವಳಿಯಲ್ಲಿ ತೊಡಗಿಕೊಂಡಾಗಲೂ ಗಾಂಧೀಜಿ ಅವರಿಗೆ ಸ್ವಚ್ಛತೆಯು ಸಣ್ಣ ಸಂಗತಿಯಾಗಿರಲಿಲ್ಲ. ಅವರು ತಮ್ಮ ಶೌಚಾಲಯವನ್ನು ತಾವೇ ಸ್ವಚ್ಛಗೊಳಿಸುತ್ತಿದ್ದರು. ಬಟ್ಟೆಗಳನ್ನು ತೊಳೆದುಕೊಳ್ಳುತ್ತಿದ್ದರು. ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ರಾಜಕೀಯ ಸಂಗತಿಗಳಿಗಾಗಿ ಪಟ್ಟು ಹಿಡಿದಾಗಲೂ ಅವರು ಸ್ವಚ್ಛತೆಯ ಮಂತ್ರವನ್ನು ಯಾವತ್ತೂ ನಿರ್ಲಕ್ಷಿಸಿರಲಿಲ್ಲ. ಮೋದಿ ಅವರು ಅಮೆರಿಕ ಭೇಟಿಯ ಪ್ರಚಾರ ಭರಾಟೆ ಮತ್ತು ಕಾಂಗ್ರೆಸ್ನ ಟೀಕಾ ಪ್ರಹಾರದ ಮಧ್ಯೆಯೂ `ಸ್ವಚ್ಛ ಭಾರತ’ ಆಂದೋಲನ ತಮ್ಮ ಮುಖ್ಯ ಕಾರ್ಯಸೂಚಿಯಾಗಿರುವುದನ್ನು ಅಮೆರಿಕದಿಂದ ಸ್ವದೇಶಕ್ಕೆ ಮರಳುತ್ತಿದ್ದಂತೆಯೇ ಪ್ರಕಟಿಸಿ ಅಚ್ಚರಿ ಮೂಡಿಸಿದ್ದರು.
ಪ್ರಧಾನ ಮಂತ್ರಿಗಳು ತಮ್ಮ ಮಾತು, ಸಂದೇಶ ಮತ್ತು ಕೃತಿಯ ಮೂಲಕ ಸ್ವಚ್ಛ ಭಾರತದ ಸಂದೇಶವನ್ನು ಜನರಿಗೆ ತಲುಪಿಸಿದ್ದಾರೆ. ವಾರಣಾಸಿಯಲ್ಲೂ ಅವರು ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿದ್ದಾರೆ. ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ವಾರಣಾಸಿಯ ಗಂಗಾ ತಟದಲ್ಲಿನ ಅಸ್ಸಿ ಘಾಟ್ ಸ್ವಚ್ಛತೆಗೆ ಚಾಲನೆ ನೀಡಿದ್ದಾರೆ. ಸ್ವಚ್ಛ ಭಾರತ ಅಭಿಯಾನಕ್ಕೆ ಕೈ ಜೋಡಿಸಿದ ಸಾವಿರಾರು ಮಂದಿಯ ಜೊತೆ ಖುದ್ದು ಪ್ರಧಾನಿಯವರೂ ಸೇರಿಕೊಂಡರು. ನೈರ್ಮಲೀಕರಣದ ಅನಿವಾರ್ಯತೆಯನ್ನು ಮನಗೊಂಡಿರುವ ಪ್ರಧಾನಿಯವರು ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಶೌಚಾಲಯಗಳ ಹೆಚ್ಚಳಕ್ಕೆ ಆದ್ಯತೆ ನೀಡಿದ್ದಾರೆ.
ವಿವಿಧ ಕ್ಷೇತ್ರಗಳ ಜನರು ಸ್ವ-ಇಚ್ಛೆಯಿಂದ ಈ ಸಾಮೂಹಿಕ ಆಂದೋಲನದಲ್ಲಿ ಭಾಗಿಯಾಗುತ್ತಿದ್ದಾರೆ. ಸರಕಾರಿ ಅಧಿಕಾರಿಗಳಿಂದ ಹಿಡಿದು ಜವಾನರವರೆಗೆ, ಬಾಲಿವುಡ್ ನಟರಿಂದ ಹಿಡಿದು ಕ್ರೀಡಾಪಟುಗಳವರೆಗೆ, ಕೈಗಾರಿಕೋದ್ಯಮಗಳಿಂದ ಆರಂಭಿಸಿ ಆಧ್ಯಾತ್ಮಿಕ ನಾಯಕರವರೆಗೆ, ಈ ಕಾರ್ಯಕ್ಕಾಗಿ ಎಲ್ಲರೂ ಕೈಜೋಡಿಸಿದ್ದಾರೆ. ದೇಶಾದ್ಯಂತ ಲಕ್ಷಾಂತರ ಜನರು ಪ್ರತಿದಿನ ಈ ಆಂದೋಲನಕ್ಕೆ ಧುಮುಕುತ್ತಿದ್ದಾರೆ. ಸರಕಾರಿ ಇಲಾಖೆಗಳು, ಎನ್ಜಿಇಗಳು, ಸ್ಥಳೀಯ ಸಮುದಾಯ ಕೇಂದ್ರಗಳು ಭಾರತವನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಹಾಗೆಯೇ ವಿದೇಶದಲ್ಲೂ ಇಂತಹ ಯೋಜನೆಯಲ್ಲಿ ತೊಡಗಿದ್ದಾರೆ.
ಅಷ್ಟೇ ಅಲ್ಲ ದೇಶಾದ್ಯಂತ ಸಂಗೀತ, ನಾಟಕಗಳ ಮೂಲಕವೂ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಬಾಲಿವುಡ್ ನಟರಿಂದ ಆರಂಭಿಸಿ ಕಿರುತೆರೆ ಕಲಾವಿದರು,ಕ್ರೀಡಾಪಟುಗಳು ಸ್ವಚ್ಛಭಾರತ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಆಶ್ಚರ್ಯ ಎಂಬಂತೆ ಈಗ ನಮ್ಮ ದೇಶದಲ್ಲಿ ಅಲ್ಲದೇ ಇದೀಗ ವಿದೇಶದಲ್ಲೂ ಮೋದಿ ಹವಾ ಎಷ್ಟರ ಮಟ್ಟಿಗೆ ಬೀರಿದೆ ಎನ್ನುವಂತಹದ್ದು ನಾವು ನೋಡಬಹುದು!!
-ಪವಿತ್ರ