ಉತ್ತರ ಪ್ರದೇಶದಲ್ಲಿ ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡ ಅತೀ ದೊಡ್ಡ ಗೋಶಾಲೆಯನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಈ ಸಂಬಂಧ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ ಖಾತೆ ರಾಜ್ಯ ಸಚಿವ ಸಂಜೀವ್ ಬಲ್ಯಾನ್ ಅವರು ಮಾಹಿತಿ ನೀಡಿದ್ದು, ಸುಮಾರು 800 ಬಿಘಾ ಭೂಮಿಯನ್ನು ಬಳಸಿ, 700 ಕೋಟಿ ರೂ. ವೆಚ್ಚದಲ್ಲಿ 5000 ಕ್ಕೂ ಆಧಿಕ ಬಿಡಾಡಿ ದನಗಳನ್ನು ಪೋಷಿಸಲು ಸಾಧ್ಯವಿರುವ ಗೋಶಾಲೆ ಇದಾಗಿರಲಿದೆ ಎಂದು ಹೇಳಿದ್ದಾರೆ. ಈ ಗೊಶಾಲೆಯನ್ನು ಮುಜಾಫರ್ ನಗರ ಜಿಲ್ಲೆಯ ಚಂದನ್ ಗ್ರಾಮದ ಸೋಲಾನಿ ನದಿ ದಡದಲ್ಲಿ ನಿರ್ಮಾಣವಾಗಲಿದ್ದು, ಆ ಮೂಲಕ ಬಿಡಾಡಿ ದನಗಳಿಗೆ ಆಶ್ರಯ ತಾಣವಾಗಲಿದೆ.
ಈ ಸಂಬಂಧ ಕಳೆದ ಭಾನುವಾರ ಸಚಿವರು ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಸ್ಥಳ ಪರಿಶೀಲನೆಯನ್ನು ಸಹ ನಡೆಸಿದ್ದಾರೆ. ಮುಂದಿನ ಆರು ತಿಂಗಳೊಳಗಾಗಿ ಈ ಯೋಜನೆ ಸಂಪೂರ್ಣಗೊಳಿಸಲು ನಿರ್ಧರಿಸಿದ್ದು, ಬಿಡಾಡಿ ದನಗಳು ಬೀದಿಗಳಲ್ಲಿ, ಜಮೀನಿನಲ್ಲಿ ಕಂಡುಬರದಂತೆ ನೋಡಿಕೊಳ್ಳಬೇಕು. ಈ ಸಂಬಂಧ ಕಾರ್ಯಾಚರಣೆ ನಡೆಸಲು ಜಿಲ್ಲಾ ಮಟ್ಟದಲ್ಲಿ ಸಂಚಲನ ಸಮಿತಿ ರಚಿಸುವುದಕ್ಕೂ ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಈ ಉದ್ದೇಶಿತ ಗೋಶಾಲೆಯಲ್ಲಿ ಪ್ರಾಣಿಗಳಿಗೆ ಆಧುನಿಕ ಸ್ಮಶಾನ ವ್ಯವಸ್ಥೆ, ಜೈವಿಕ ಅನಿಲ ಘಟಕ, ಬೃಹತ್ ಗಾತ್ರದ ನೀರಿನ ತೊಟ್ಟಿ, ಮೇವು ಸಂಗ್ರಹಿಸಿಡುವ ಉಗ್ರಾಣ ಇತ್ಯಾದಿ ಸೌಲಭ್ಯಗಳನ್ನು ಒಳಗೊಳ್ಳಲಿದೆ.
ಒಟ್ಟಿನಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರ ರಾಜ್ಯದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು, ಅಭಿವೃದ್ಧಿ ಯೋಜನೆಗಳು ನಡೆದಿದ್ದು, ಇತರ ರಾಜ್ಯಗಳಿಗೆ ಮಾದರಿಯಾಗಿದೆ. ಹಾಗೆಯೇ ಇದೀಗ ಬಿಡಾಡಿ ಹಸುಗಳ ಸಂರಕ್ಷಣೆಗೆ ಗೋಶಾಲೆ ನಿರ್ಮಾಣ ಸಹ ನಡೆಯಲಿದ್ದು, ಆ ಮೂಲಕ ದೇಶಕ್ಕೆ ಮಾದರಿಯಾಗಲಿದೆ. ಒಟ್ಟಿನಲ್ಲಿ ಗೋ ರಕ್ಷಣೆಗೆ ತೆಗೆದುಕೊಂಡ ಕೇಂದ್ರ ಹಾಗೂ ಉತ್ತರ ಪ್ರದೇಶದ ಸರ್ಕಾರಗಳ ಈ ನಿಲುವು ಸ್ವಾಗತಾರ್ಹ.