ಅಲಹಾಬಾದ್ ಹೈ ಕೋರ್ಟ್ ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ ತೀರ್ಪನ್ನು ಪ್ರಕಟಿಸಿದೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಕೆಲವೊಂದು ಷರತ್ತುಗಳನ್ನು ವಿಧಿಸಿ, ಅದರನ್ವಯ ಜ್ಞಾನವಾಪಿ ಆವರಣದ ಸಮೀಕ್ಷೆಯನ್ನು ನಡೆಸುವ ಹಾಗೆ ಅನುಮತಿ ಕಲ್ಪಿಸಿದೆ. ಆ ಮೂಲಕ ಹಿಂದೂಗಳ ಭಾವನೆಗಳಿಗೆ ಮನ್ನಣೆ ನೀಡಿದೆ. ಈ ಸಮೀಕ್ಷೆ ನಡೆಸದಂತೆ ಕೋರಿ, ತಡೆ ನೀಡುವಂತೆ ಮುಸಲ್ಮಾನರು ಸಲ್ಲಿಸಿದ್ದ ಮನವಿಯನ್ನು ಸಹ ಹೈಕೋರ್ಟ್ ತಿರಸ್ಕರಿಸಿ, ವಜಾಗೊಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ನ್ಯಾಯ ತೀರ್ಮಾನವಾಗಲು ಮಸೀದಿಯ ಸರ್ವೆ ಅಗತ್ಯ ಎಂಬುದಾಗಿಯೂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಹೈಕೋರ್ಟ್ನ ತೀರ್ಪು ಹಿಂದೂ ಸಮುದಾಯಕ್ಕೆ ಸಂತಸ ನೀಡಿದ್ದು, ಕೂಡಲೇ ಮಸೀದಿ ಆವರಣವನ್ನು ಸರ್ವೇ ಮಾಡುವಂತೆಯೂ ಒತ್ತಾಯಿಸಿದ್ದಾರೆ. ಈ ಮಸೀದಿಗೆ ಸಂಬಂಧಿಸಿದ ಹಾಗೆ ಹುದುಗಿ ಹೋಗಿರುವ ಸತ್ಯವನ್ನು ಬಹಿರಂಗ ಮಾಡುವ ನಿಟ್ಟಿನಲ್ಲಿ ಕೋರ್ಟ್ ನೀಡಿರುವ ಈ ತೀರ್ಪು ಮುಖ್ಯವಾಗಲಿದೆ.
ಅಲಹಾಬಾದ್ ಕೋರ್ಟ್ ನೀಡಿರುವ ಈ ತೀರ್ಪಿಗೆ ಸಂಬಂಧಿಸಿದ ಹಾಗೆ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಪ್ರತಿಕ್ರಿಯೆ ನೀಡಿದ್ದು, ಈ ತೀರ್ಪನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ. ಎಎಸ್ಐ ಸಮೀಕ್ಷೆ ಬಳಿಕ ಜ್ಞಾನವಾಪಿಯ ನೈಜ ಸತ್ಯ ಅನಾವರಣವಾಗುವ ವಿಶ್ವಾಸವನ್ನು ಸಹ ಅವರು ವ್ಯಕ್ತಪಡಿಸಿದ್ದಾರೆ. ಜೊತೆಗೆ ಈ ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ಪರ ವಾದವನ್ನು ಮಂಡಿಸಿದ ವಕೀಲ ವಿಷ್ಣು ಶಂಕರ್ ಅವರು ಪ್ರತಿಕ್ರಿಯೆ ನೀಡಿದ್ದು, ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಆ ಪ್ರದೇಶದ ಸರ್ವೇಗೆ ಅಲಹಾಬಾದ್ ಹೈ ಕೋರ್ಟ್ ಅನುಮತಿ ನೀಡಿದೆ. ಆ ಮೂಲಕ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಕಳೆದ ಜುಲೈ 27 ರಂದು ಎರಡೂ ಕಡೆಯವರ ವಾದವನ್ನು ಆಲಿಸಿದ್ದ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಇಂದು ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ. ಆಮೂಲಕ ಮಸೀದಿಯ ವೈಜ್ಞಾನಿಕ ಸಮೀಕ್ಷೆಗೆ ಅನುವು ಮಾಡಿಕೊಟ್ಟಿದೆ. ಆ ಮೂಲಕ ಕೋಟ್ಯಂತರ ಹಿಂದೂಗಳ ಮನದಲ್ಲಿ ಆಶಾವಾದ ಹುಟ್ಟಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಸಂಬಂಧ ಮುಸ್ಲಿಂ ಸಮುದಾಯದವರು ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಗಳನ್ನೂ ನಾವು ಅಲ್ಲಗಳೆಯುವಂತಿಲ್ಲ.