ಪ್ರಪಂಚದ ಹಲವು ದೇಶಗಳಲ್ಲಿ ಹಿಂದೂ ಧರ್ಮದ ಮೇಲೆ, ಹಿಂದೂ ಧರ್ಮದ ಧಾರ್ಮಿಕ ಮಂದಿರಗಳ ಮೇಲೆ ಹಿಂಸಾತ್ಮಕ ಘಟನೆಗಳನ್ನು ದುರುಳರು ನಡೆಸುತ್ತಿರುವುದು ಪ್ರತಿನಿತ್ಯ ಕೇಳಿ ಬರುತ್ತಿರುವ ಸುದ್ದಿ. ಇದೀಗ ಕೆನಡಾದಲ್ಲಿಯೂ ಹಿಂದೂಗಳ ಧಾರ್ಮಿಕ ನಂಬಿಕೆಗೆ ಪೆಟ್ಟು ಬೀಳುವ ಘಟನೆಯೊಂದು ನಡೆದಿದೆ.
ಕೆನಡಾದ ಒಂಟಾರಿಯೋ ಪ್ರಾಂತ್ಯದಲ್ಲಿ ಹಿಂದೂ ದೇವಾಲಯದ ಗೋಡೆಯ ಮೇಲೆ ಹಿಂದೂಗಳ ಧಾರ್ಮಿಕ ನಂಬಿಕೆಗೆ ಘಾಸಿ ಮಾಡಿರುವ ಘಟನೆ ನಡೆದಿದೆ. ಕಳೆದ ಒಂದೂವರೆ ವರ್ಷದಲ್ಲಿ ಇಂತಹ ೫ ಪ್ರಕರಣಗಳು ನಡೆದಿದ್ದು, ಈ ಘಟನೆ ಹಿಂದೂಗಳನ್ನು ಕೆರಳಿಸಿದೆ. ಒಂಟಾರಿಯೋದ ವಿಂಡ್ಸರ್ ನಗರದಲ್ಲಿರುವ ಸ್ವಾಮಿ ನಾರಾಯಣ ಮಂದಿರದ ಗೋಡೆಯ ಮೇಲೆ ಹಿಂದೂ ವಿರೋಧಿ ಬರಹಗಳನ್ನು ಪ್ರಕಟಿಸುವ ಮೂಲಕ ವಿರೂಪಗೊಳಿಸಲಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಸ್ಥಳಕ್ಕಾಗಮಿಸಿ ಪರಿಶೀಲನೆಯನ್ನೂ ನಡೆಸಿದೆ.
ದೇಗುಲದ ಗೋಡೆಯ ಮೇಲೆ ಕಪ್ಪು ಬಣ್ಣದಿಂದ ಹಿಂದೂಸ್ಥಾನ್ ಮುರ್ದಾಬಾದ್ ಎಂಬುದಾಗಿ ಬರೆಯಲಾಗಿದೆ. ಈ ದೇಗುಲದ ಮೇಲೆ ನಡೆದ ಮೂರನೇ ದಾಳಿ ಇದಾಗಿದೆ. ಈ ಸಂಬಂಧ ಸಮೀಪದ ಸಿಸಿಟಿವಿ ಪರಿಶೀಲಿಸಿ ಇಬ್ಬರು ಆರೋಪಿಗಳನ್ನು ಗುರುತು ಪತ್ತೆ ಮಾಡಿರುವುದಾಗಿ ತಿಳಿದುಬಂದಿದೆ. ರಾತ್ರಿ ವೇಳೆ ಓರ್ವ ಆರೋಪಿ ಗೋಡೆ ಮೇಲೆ ಬರೆಯುತ್ತಿದ್ದರೆ, ಇನ್ನೋರ್ವ ಕಾವಲು ಕಾಯುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ.
ಒಟ್ಟಿನಲ್ಲಿ ಕೆನಡಾದಲ್ಲಿಯೂ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತಿದ್ದು, ಈ ಬಗ್ಗೆ ಕೆನಡಾ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಕೆನಡಾದಲ್ಲಿ ನಡೆಯುತ್ತಿರುವ ಐದನೇ ಪ್ರಕರಣ ಇದಾಗಿದ್ದು, ಹಿಂದೂ ಧರ್ಮದ ವಿರುದ್ಧ ಇಂತಹ ವಿಧ್ವಂಸಕ ತಂತ್ರಗಳನ್ನು ನಡೆಸುತ್ತಿರುವ ದುರುಳರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.