ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ನಾಯಕರ ಜಟಾಪಟಿಯೂ ಹಚ್ಚುತ್ತಿದ್ದು , ಟಿಕೆಟ್ ಗಾಗಿ ಲಾಭಿ ನಡೆಸುತ್ತಿದ್ದಾರೆ. ಕಾಂಗ್ರೆಸ್ ರಾಜ್ಯ ನಾಯಕರಲ್ಲಿ ಈಗಾಗಲೇ ಒಳಜಗಳ ಬಹಿರಂಗಗೊಂಡಿದ್ದು , ಪಕ್ಕದಲ್ಲೇ ಸರಿಯಾಗಿ ಹೊಂದಾಣಿಕೆ ಇಲ್ಲದ ನಾಯಕರು ಬಹಿರಂಗವಾಗಿಯೇ ತಮ್ಮ ಟಿಕೆಟ್ ಆಸೆಯನ್ನು ಪ್ರದರ್ಶನಗೊಳಿಸುತ್ತಿದ್ದಾರೆ.
ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ, ಕಾಂಗ್ರೆಸ್ ನ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡಲಿದ್ದಾರೆ. ಆದರೆ ಇದೀಗ ಕಾಂಗ್ರೆಸ್ ನಾಯಕರು ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ನೇರವಾಗಿ ಬೀದಿಗಿಳಿದಿದ್ದಾರೆ. ಕಾಂಗ್ರೆಸ್ ನಲ್ಲಿ ಹಿಂದಿನಿಂದಲೂ ಪಕ್ಷಕ್ಕಾಗಿ ಕೆಲಸ ಮಾಡುತ್ತಿರುವವರನ್ನು ಕಡೆಗಣಿಸಿ ಹೊಸದಾಗಿ ಸೇರ್ಪಡೆಗೊಂಡವರಿಗೆ ಕಾಂಗ್ರೆಸ್ ಮಣೆಹಾಕಲು ನಿರ್ಧರಿಸಿದೆ.
ಖೇಣಿಗೆ ಟಿಕೆಟ್ ನೀಡದಂತೆ ಆಗ್ರಹ..!
ಇತ್ತೀಚೆಗೆ ಕಾಂಗ್ರೆಸ್ ಗೆ ಹೊಸದಾಗಿ ಸೇರ್ಪಡೆಗೊಂಡ ಅಶೋಕ್ ಖೇಣಿ , ಚುನಾವಣೆ ಸಮೀಪಿಸುತ್ತಿದ್ದಂತೆ ಸ್ಪರ್ಧೀಸುವ ಹಂಬಲ ವ್ಯಕ್ತಪಡಿಸಿದ್ದರು. ಪ್ರಭಾವಿ ವ್ಯಕ್ತಿ ಆಗಿರುವುದರಿಂದ ಕಾಂಗ್ರೆಸ್ ಕೂಡಾ ಖೇಣಿಗೆ ಮಣೆ ಹಾಕಲು ಸಿದ್ಧತೆ ನಡೆಸಿತ್ತು. ಆದರೆ ಪಕ್ಷದ ನಾಯಕರ ಈ ನಿರ್ಧಾರಕ್ಕೆ ತೀವ್ರ ಆಕ್ರೋಷಗೊಂಡ ಬೀದರ್ ಕಾಂಗ್ರೆಸ್ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಖೇಣಿ ಹೊಸದಾಗಿ ಪಕ್ಷಕ್ಕೆ ಸೇರಿಕೊಂಡವರು, ಪಕ್ಷದಲ್ಲಿ ಸ್ಥಾನಮಾನ ನೀಡಿ ಗೌರವಿಸಬಹುದೇ ವಿನಃ , ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಬೀದರ್ ನ ಕಾಂಗ್ರೆಸ್ ನಾಯಕ ಅಜಯ್ ಸಿಂಗ್ ಹೇಳಿದ್ದಾರೆ.
ರಾಜ್ಯ ಸರಕಾರಕ್ಕೆ ಖಡಕ್ ಎಚ್ಚರಿಕೆ..!
ಹೊಸದಾಗಿ ಸೇರ್ಪಡೆಯಾದ ಅಶೋಕ್ ಖೇಣಿ ಗೆ ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ನೀಡುವ ಬಗ್ಗೆ ಚರ್ಚೆ ನಡೆಸಿತ್ತು. ಆದರೆ ಬೀದರ್ ಕಾಂಗ್ರೆಸ್ ಸೇರಿದಂತೆ ಅನೇಕ ನಾಯಕರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದು , ಖೇಣಿಗೆ ಟಿಕೆಟ್ ನೀಡಿದ್ದೇ ಆದಲ್ಲಿ ಬೀದರ್ ನಿಂದ ನಮ್ಮ ಯಾವುದೇ ಬೆಂಬಲ ಕಾಂಗ್ರೆಸ್ ಗೆ ಸಿಗುವುದಿಲ್ಲ ಮತ್ತು ನಮ್ಮ ದಾರಿ ನಾವೇ ನೋಡಿಕೊಳ್ಳಬೇಕಾಗುತ್ತದೆ ಎಂದು ಪರಮೇಶ್ವರ್ ಗೆ ಖಡಕ್ಕಾಗಿ ಹೇಳಿದ್ದಾರೆ.
ಅಶೋಕ್ ಖೇಣಿಗೆ ಟಿಕೆಟ್ ನೀಡಿದರೆ ನಮ್ಮ ಕುಟುಂಬದ ಯಾವುದೇ ಸಹಕಾರ ಇರುವುದಿಲ್ಲ ಎಂದು ನೇರವಾಗಿ ಹೇಳಿದ ಬೀದರ್ ಕಾಂಗ್ರೆಸ್ ನಾಯಕ ಅಜಯ್ ಸಿಂಗ್ ಪಕ್ಷಕ್ಕೆ ವಿರುದ್ಧ ನಡೆದುಕೊಳ್ಳಬೇಕಾಗುತ್ತದೆ ಎಂದು ಪಕ್ಷದ ಅಧ್ಯಕ್ಷ ಜಿ ಪರಮೇಶ್ವರ್ ಗೆ ಎಚ್ಚರಿಸಿದ್ದಾರೆ. ಅಜಯ್ ಸಿಂಗ್ ಕಾಂಗ್ರೆಸ್ ನ ಹಿರಿಯ ನಾಯಕ ಧರಂ ಸಿಂಗ್ ನ ಕುಟುಂಬದವರಾಗಿರುವುದರಿಂದ ಕಾಂಗ್ರೆಸ್ ಗೆ ಇದೀಗ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಈಗಾಗಲೇ ಕಾಂಗ್ರೆಸ್ ನಾಯಕರಲ್ಲಿ ಬಿಕ್ಕಟ್ಟು ಉಂಟಾಗಿದ್ದು , ಇದೀಗ ಬಹಿರಂಗವಾಗಿಯೇ ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಸರಕಾರದ ವಿರುದ್ಧ ಬಂಡಾಯ ಏಳುವ ಎಚ್ಚರಿಕೆ ನೀಡಿದ್ದಾರೆ. ಪ್ರಭಾವಿ ನಾಯಕನ ಬೆನ್ನ ಹಿಂದೆ ಬಿದ್ದ ರಾಜ್ಯ ಸರಕಾರಕ್ಕೆ ಪಕ್ಷದ ಕಾರ್ಯಕರ್ತರೇ ತಕ್ಕ ಉತ್ತರ ನೀಡಿದ್ದಾರೆ.
–ಅರ್ಜುನ್