ಪ್ರಚಲಿತ

ಭಾರತಕ್ಕೆ ಬೇಕಾಗಿದ್ದ ಖಲೀಸ್ತಾನಿ ಉಗ್ರ ಗುಂಡಿನ ದಾಳಿಯಲ್ಲಿ ಹತ

ಭಾರತಕ್ಕೆ ಬೇಕಾಗಿದ್ದ ಖಲಿಸ್ತಾನಿ ಉಗ್ರನೊಬ್ಬನನ್ನು ಹತ್ಯೆ ಮಾಡಲಾಗಿದೆ. ಹತ್ಯೆಯಾದ ಉಗ್ರನನ್ನು ಹರ್ದೀಪ್ ಸಿಂಗ್ ನಿಜ್ಜರ್ ಎಂದು ಗುರುತಿಸಲಾಗಿದೆ.

ಕೆನಡಾದ ಸರ್ರೆ ಎಂಬಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಈ ಉಗ್ರನ ಹತ್ಯೆಯಾಗಿದೆ. ಇತ್ತೀಚೆಗಷ್ಟೇ ಭಾರತ ಬಿಡುಗಡೆ ಮಾಡಿದ್ದ ಖಲೀಸ್ತಾನಿ ನಲವತ್ತು ಮಂದಿ ನಿಯೋಜಿತ ಉಗ್ರಗಾಮಿಗಳ ಪಟ್ಟಿಯಲ್ಲಿ ಈಗ ಗುಂಡಿನ ದಾಳಿಯಲ್ಲಿ ಮೃತಪಟ್ಟ ಉಗ್ರನ ಹೆಸರು ಸಹ ಇತ್ತು.

ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದ ನಿಜ್ಜರ್‌‌ನ ಪತ್ತೆಗೆ ಹತ್ತು ಲಕ್ಷ ಬಹುಮಾನವನ್ನು ಸಹ ಘೋಷಣೆ ಮಾಡಲಾಗಿತ್ತು. ೨೦೨೨ ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು ಈತನ ಪತ್ತೆಗೆ ಬಲೆ ಬೀಸಿದ್ದು, ಆ ಸುಂದರ್ಭದಲ್ಲಿ ಆತನ ಸುಳಿವು ನೀಡಿದವರಿಗೆ ಈ ಮೊತ್ತವನ್ನು ನೀಡುವುದಾಗಿ ತಿಳಿಸಿತ್ತು. ಜಲಂದರ್ ಪ್ರದೇಶದಲ್ಲಿ ಹಿಂದೂ ಅರ್ಚಕನ ಹತ್ಯೆಗೆ ಈ ಉಗ್ರ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಆತನ ಸುಳಿವಿಗಾಗಿ ಹತ್ತು ಲಕ್ಷ ಮೊತ್ತವನ್ನು ಆತನ ತಲೆಗೆ ಘೋಷಣೆ ಮಾಡಿತ್ತು.

ಪ್ರಸ್ತುತ ಕೆನಡಾದಲ್ಲಿ ನೆಲೆಸಿದ್ದ ಉಗ್ರ ನಿಜ್ಜರ್ ಕೆಟಿಎಫ್‌ನ ಮುಖ್ಯಸ್ಥನಾಗಿದ್ದ. ಭಾರತದ ವಿರುದ್ಧ ಈ ಹಿಂದೆಯೂ ಈತ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಸಂಚು ರೂಪಿಸಿದ ಗುರುತರ ಆರೋಪ ಸಹ ಈತನ ಮೇಲಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ನಿಜ್ಜರ್ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಚಾರ್ಜ್‌ಶೀಟ್ ಸಲ್ಲಿಸುವ ಕೆಲಸವನ್ನು ಮಾಡಿತ್ತು.

ಪಾಕಿಸ್ತಾನದ ಭಯೋತ್ಪಾದಕರಂತೆಯೇ ಖಲಿಸ್ತಾನಿ ಉಗ್ರರೂ ಸಹ ಭಾರತದ ವಿರುದ್ಧ ಕತ್ತಿ ಮಸೆಯುತ್ತಲೇ ಬಂದಿದ್ದಾರೆ. ಈ ಹಿಂದೆ ಕೇಂದ್ರ ಸರ್ಕಾರದ ರೈತೋಪಯೋಗಿ ಕೃಷಿ ಕಾಯ್ದೆಯ ವಿರುದ್ಧ ನಕಲಿ ರೈತ ಹೋರಾಟಗಾರರು ನಡೆಸಿದ್ದ ಪ್ರತಿಭಟನೆಯಲ್ಲಿಯೂ, ಈ ಖಲಿಸ್ತಾನಿ ಉಗ್ರರ ಕೈವಾಡದ ವಾಸನೆ ಮೂಗಿಗೆ ಬಡಿದಿತ್ತು. ಅಲ್ಲದೆ, ಇದೇ ಪ್ರತಿಭಟನೆಯಲ್ಲಿ ಭಾರತದ ಧ್ವಜವನ್ನು ಕೆಳಕ್ಕೆ ಇಳಿಸಿ, ಖಲೀಸ್ತಾನಿ ಧ್ವಜವನ್ನು ಹಾರಾಡಿಸಿದ್ದನ್ನು ಸಹ ನಾವಿಲ್ಲಿ ನೆನಪಿಸಿಕೊಳ್ಳಬಹುದು.

ಹಾಗೆಯೇ ಕೆಲ ಸಮಯದ ಹಿಂದೆ ವಿದೇಶಿ ನೆಲಗಳಲ್ಲಿ ಭಾರತದ ಪತಾಕೆಗೆ ಅಗೌರವ ತೋರಿ, ಖಲೀಸ್ತಾನಿ ಪರ ಬರಹಗಳನ್ನು ಪ್ರಕಟಿಸಿದ್ದು, ಭಾರತದಲ್ಲಿಯೂ ಕೆಲವೊಂದು ಧಾರ್ಮಿಕ ಪ್ರದೇಶಗಳ ಗೋಡೆಗಳ ಮೇಲೆ ಖಲೀಸ್ತಾನಿ ಉಗ್ರರ ಪರ ಬರಹಗಳನ್ನು ಪ್ರಕಟಿಸಿದ್ದನ್ನು ನೆನಪಿಸಿಕೊಳ್ಳಬಹುದು. ಹೀಗೆ ಭಾರತ ವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಮೋಸ್ಟ್ ವಾಂಟೆಡ್ ಪಟ್ಟಿ ಸೇರಿದ್ದ ಉಗ್ರ ನಿಜ್ಜರ್ ಇದೀಗ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾನೆ.

Tags

Related Articles

Close