ಪ್ರಚಲಿತ

ಸಿದ್ದರಾಮಯ್ಯನವರ ಸುಳ್ಳಿನ ಕಂತೆಯನ್ನು ಬಿಚ್ಚಿಟ್ಟ ಮೋದಿ..! ಬೆಂಗಳೂರಿನಲ್ಲಿ ಮೋದಿ ಹವಾ..!

ಮೊನ್ನೆಯಷ್ಟೇ ಕರ್ನಾಟಕದಲ್ಲಿ ಕಾಂಗ್ರೆಸ್ ವಿರುದ್ಧ ಗುಡುಗಿದ್ದ ಪ್ರಧಾನಿ ಮೋದಿ ಇಂದು ಮತ್ತೆ ಛಾಟಿ ಏಟು ಬೀಸಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಿದರು. ಬಿಜೆಪಿಯನ್ನು ರಾಜ್ಯದಲ್ಲಿ ಗೆಲ್ಲಿಸಲೇಬೇಕು ಎಂದು ಪಣತೊಟ್ಟಿರುವ ಮೋದಿ ಇದೀಗ ಚುನಾವಣೆಯ ಹೊಸ್ತಿಲಲ್ಲೇ ಸರಣಿ ಸಮಾವೇಶಗಳನ್ನು ನಡೆಸಿ , ಕರ್ನಾಟಕದಲ್ಲೂ ಕೇಸರಿ ಪತಾಕೆ ಹಾರಿಸಲು ಸಜ್ಜಾಗಿದ್ದಾರೆ.!

ಮತ್ತೆ ಕನ್ನಡದಲ್ಲೇ ಮಾತು ಆರಂಭ..!

ಮೋದಿ ಯಾವ ಪ್ರದೇಶಕ್ಕೆ ಹೋದರೂ ಅಲ್ಲಿನ ಭಾಷೆ, ಸಂಸ್ಕ್ರತಿಗೆ ಗೌರವ ನೀಡುತ್ತಾ ಬಂದಿರುವುದರಿಂದ ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲೂ ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ , ‘ಬೆಂಗಳೂರಿನ ಜನರಿಗೆ ನನ್ನ ನಮಸ್ಕಾರಗಳು’ ಎಂದು ಉಚ್ಛರಿಸುತ್ತಿದ್ದಂತೆ ಸೇರಿದ್ದ ಸಹಸ್ರಾರು ಸಂಖ್ಯೆಯ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟುವಂತಿತ್ತು. ರಾಜ್ಯದಲ್ಲಿ ಬೆಂಗಳೂರು ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವುದರಿಂದ ಇದೊಂದು ಕೇಂದ್ರ ಬಿಂದು ಎಂದೇ ಹೇಳಬಹುದು. ಇದೀಗ ಇಲ್ಲೂ ಮೋದಿ ಆರ್ಭಟಿಸಿದ್ದು, ಬದಲಾವಣೆಯ ಗಾಳಿ ಬೀಸಿದೆ.

ಕರ್ನಾಟಕದ ಮಹಾನ್ ವ್ಯಕ್ತಿಗಳನ್ನು ಸ್ಮರಿಸಿದ ಮೋದಿ..!

ಕರ್ನಾಟಕ ಶಾಂತಿಯ ಬೀಡು ಎಂದ ಮೋದಿ, ಸರ್.ಎಂ.ವಿಶ್ವೇಶ್ವರಯ್ಯ, ನಾಡ ಪ್ರಭು ಕೆಂಪೇಗೌಡ, ನಟಸಾರ್ವಭೌಮ ರಾಜ್‌ಕುಮಾರ್ ಅವರ ಹೆಸರು ಹೇಳಿ ಕನ್ನಡದಲ್ಲೇ ನಮನ ಸಲ್ಲಿಸಿದರು. ಮೋದಿ ವೇದಿಕೆಗೆ ಆಗಮಿಸುತ್ತಿದ್ದಂತೆ ಸೇರಿದ್ದ ಕಾರ್ಯಕರ್ತರ ಖುಷಿ ಕಂಡು ಮೋದಿ ಕಾರ್ಯಕರ್ತರತ್ತ ಕೈಬೀಸಿ ಸಂತೋಷ ವ್ಯಕ್ತಪಡಿಸಿದರು. ಈ ಮೂಲಕ ಮೋದಿ ಕರ್ನಾಟಕದ ಮಹಾನ್ ವ್ಯಕ್ತಿಗಳನ್ನು ಈ ವೇಳೆ ಸ್ಮರಿಸಿದ್ದು ರಾಜ್ಯದಲ್ಲಿ ಮತ್ತಷ್ಟು ಸಂಚಲನ ಮೂಡಿಸಿದೆ.!

ಜೆಡಿಎಸ್ ಮೂರನೇ ಸ್ಥಾನಕ್ಕೆ ಸೀಮಿತ..!

ಮೊನ್ನೆಯಷ್ಟೇ ಉಡುಪಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಜೆಡಿಎಸ್ ವರಿಷ್ಠ ದೇವೇಗೌಡರನ್ನು ಹಾಡಿ ಹೊಗಳಿದ್ದರು. ಮೋದಿ ಗೌಡರನ್ನು ಹೊಗಳಿದ ವಿಚಾರ ಮಾಧ್ಯಮಗಳಿಗೆ ಭರ್ಜರಿ ಸುದ್ದಿಯಾಗಿದ್ದರೆ, ಇತ್ತ ರಾಜ್ಯ ರಾಜಕಾರಣದಲ್ಲೇ ಹೊಸ ತಿರುವು ನೀಡುವಂತೆ ಮಾಡಿದ್ದರು. ಬಿಜೆಪಿ – ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತದೆ ಎಂದು ಕೆಲವೊಂದು ಮಾಧ್ಯಮಗಳು ವರದಿ ಮಾಡಿದರೆ, ಇನ್ನೂ ಕೆಲವರು ಇದು ಎಲೆಕ್ಷನ್ ಗಿಮಿಕ್ ಎಂದರು. ಆದರೆ ಮೋದಿ ಮಾತ್ರ ದೇವೇಗೌಡರನ್ನು ಭೇಟಿ ಮಾಡಿದ ವಿಚಾರವಾಗಿ ಹೊಗಳಿಕೊಂಡಿದ್ದರು. ಆದರೆ ಇದೀಗ ಜೆಡಿಎಸ್ ವಿರುದ್ದವೇ ಗುಡುಗಿದ ಮೋದಿ, ಜೆಡಿಎಸ್ ಗೆ ವೋಟ್ ನೀಡಿದರೆ ನಿಮ್ಮ ಒಂದು ವೋಟ್ ಗೆ ಯಾವುದೇ ರೀತಿಯ ಬೆಲೆಯೇ ಇಲ್ಲದಂತಾಗುತ್ತದೆ. ಯಾಕೆಂದರೆ ಜೆಡಿಎಸ್ ಭಯೋತ್ಪಾದಕರಿಗೆ ಬೆಂಬಲ ನೀಡುವ ಪಕ್ಷವಾದ ಓವೈಸಿಯ ಜೊತೆ ಸೇರಿಕೊಂಡಿದೆ. ಇದು ಕರ್ನಾಟಕದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ‌. ಯಾವುದೇ ಕಾರಣಕ್ಕೂ ಜೆಡಿಎಸ್ ಗೆ ಬೆಂಬಲ ಸೂಚಿಸಬೇಡಿ ಎಂದರು. ಇದೇ ವೇಳೆ ಜೆಡಿಎಸ್ ಈ ಬಾರಿ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕೇ ಹೊರತು , ಅಧಿಕಾರದ ಆಸೆ ಇಟ್ಟುಕೊಳ್ಳುವುದು ವ್ಯರ್ಥ ಎಂದರು..!

Related image

ನಲಪಾಡ್ ವಿರುದ್ದವೂ ಕೆಂಡಕಾರಿದ ಮೋದಿ..!

ಎರಡು ತಿಂಗಳ ಹಿಂದೆ ರಾಜ್ಯದಲ್ಲಿ ಭಾರೀ ಸುದ್ದಿ ಮಾಡಿದ್ದ ಕಾಂಗ್ರೆಸ್ ಶಾಸಕ ಹ್ಯಾರಿಸ್ ನಲಪಾಡ್‌ರ ಮಗ ಮಹಮ್ಮದ್ ನಲಪಾಡ್ ನಡೆಸಿದ್ದ ಗೂಂಡಾಗಿರಿಯ ವಿರುದ್ಧವೂ ಹರಿಹಾಯ್ದ ಪ್ರಧಾನಿ ಮೋದಿ, ಕರ್ನಾಟಕದಲ್ಲಿ ಗೂಂಡಾಗಿರಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ‌. ಕಾಂಗ್ರೆಸ್ ನಾಯಕರುಗಳ ಮಕ್ಕಳು ರಾಜಾರೋಷವಾಗಿ ರೌಡಿಸಂ ನಡೆಸುತ್ತಿದ್ದಾರೆ , ಇಂತಹ ಆಡಳಿತದಲ್ಲಿ ಸಾಮಾನ್ಯ ಜನರು ಜೀವನ ಸಾಗಿಸುವುದು ಕಷ್ಟ ಎಂದ ಮೋದಿ ರಾಜ್ಯ ಸರಕಾರದ ಆಡಳಿತ ವೈಫಲ್ಯದ ಬಗ್ಗೆ ವಾಗ್ದಾಳಿ ನಡೆಸಿದರು..!

ಕೆರೆಗಳ ನಾಡನ್ನು ಮತ್ತೆ ನಿಮಗೆ ನೀಡುತ್ತೇವೆ..!

ಬೆಂಗಳೂರು ಕೆರೆಗಳ ನಾಡು ಎಂದರೆ ತಪ್ಪಾಗದು. ಯಾಕೆಂದರೆ ಇಲ್ಲಿ ನೂರಾರು ಕೆರೆಗಳಿವೆ, ಆದರೆ ಇದೀಗ ಅದ್ಯಾವುದೂ ಉಪಯೋಗಕ್ಕೆ ಬಳಸಲಾಗುತ್ತಿಲ್ಲ. ಇದರ ಬಗ್ಗೆ ಕಾಂಗ್ರೆಸ್ ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನೀವು ನಮ್ಮ ಕೈಗೆ ಅಧಿಕಾರ ಕೊಡಿ, ನಿಮಗೆ ನಿಮ್ಮ ಪರಂಪರೆಯ ನಾಡನ್ನು ಮತ್ತೆ ನೀಡುತ್ತೇನೆ ಎಂದು ಭರವಸೆ ನೀಡಿದ ಮೋದಿ , ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಸರಕಾರ ಸಿದ್ಧ ಎಂದರು. ಕೆರೆಗಳಲ್ಲಿ ನೀರಿನ ಬದಲು ವಿಷ ಹರಿಯುತ್ತಿದೆ , ರಾಸಾಯನಿಕಗಳು ಹೆಚ್ಚಾಗಿ ಕೆರೆಗಳಿಗೆ ಬೆಂಕಿ ಬೀಳುತ್ತಿದೆ ಎಂದರೆ ರಾಜ್ಯದಲ್ಲಿ ಅಭಿವೃದ್ಧಿ ಯಾವ ರೀತಿ ನಡೆದಿದೆ ಎಂಬುದು ಅರಿವಾಗುತ್ತಿದೆ ಎಂದರು.!

ಕೆಂಪೇಗೌಡರ ಬೆಂಗಳೂರು ಕಟ್ಟಲು ಬಿಜೆಪಿ ಸಿದ್ದ..!

ಬೆಂಗಳೂರನ್ನು ಕಟ್ಟಿ ಬೆಳೆಸಿದ ನಾಡಪ್ರಭು ಕೆಂಪೇಗೌಡರ ಕನಸಿನ ಬೆಂಗಳೂರು ಇದೀಗ ಕಣ್ಮರೆಯಾಗಿದೆ. ಈ ಕಾಂಗ್ರೆಸ್ ಸರಕಾರ ಇಡೀ ಬೆಂಗಳೂರನ್ನೇ ನಾಶ ಮಾಡಲು ಹೊರಟಿದೆ. ಕೆಂಪೇಗೌಡರ ಬೆಂಗಳೂರು ಇಂದು ವಿನಾಶದ ಅಂಚಿನಲ್ಲಿದೆ ಎಂದು ಅಸಮಧಾನ ವ್ಯಕ್ತಪಡಿಸಿದ ಪ್ರಧಾನಿ ಮೋದಿ , ಬಿಜೆಪಿಗೆ ನೀವು ಒಂದು ಬಾರಿ ಅಧಿಕಾರ ನೀಡಿ , ನಿಮ್ಮ ಕನಸಿನ ಬೆಂಗಳೂರು ಮತ್ತೆ ನಿರ್ಮಾಣ ಮಾಡುತ್ತೇವೆ, ಬೆಂಗಳೂರನ್ನು ಮತ್ತೆ ಸುಸಜ್ಜಿತವಾಗಿ ನಿರ್ಮಿಸಲು ನಮ್ಮ ಸರಕಾರ ತಯಾರಾಗಿದೆ ಎಂದರು.

ಮಹಿಳೆಯರ ರಕ್ಷಣೆಗೆ ಸಿದ್ದ..!

ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಶೋಷಣೆಯ ಬಗ್ಗೆ ಪ್ರಸ್ತಾಪಿಸಿದ ಮೋದಿ , ರಾಜ್ಯ ಸರಕಾರ ಸಂಪೂರ್ಣವಾಗಿ ರಾಜ್ಯದ ಜನತೆಯನ್ನು ಕಡೆಗಣಿಸಿದೆ. ಇಂತಹ ಆಡಳಿತದಲ್ಲಿ ಮಹಿಳೆಯರು ಮಕ್ಕಳು ನೆಮ್ಮದಿಯಿಂದ ಇರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಮೋದಿ , ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ, ನಿಮ್ಮ ಕನಸಿನ ರಾಜ್ಯವನ್ನು ನಿಮಗೆ ನೀಡುತ್ತೇವೆ ಎಂದರು. ಯಡಿಯೂರಪ್ಪನವರನ್ನು ಗೆಲ್ಲಿಸಿ, ನಿಮ್ಮ ಅಭಿವೃದ್ಧಿಗೆ ನೀವೇ ಮುನ್ನುಡಿ ಬರೆಯಿರಿ ಎಂದರು..!

ರಾಜ್ಯದಲ್ಲಿ ಮೋದಿ ಕೈಗೊಂಡಿರುವ ಪ್ರವಾಸದಿಂದಾಗಿ ರಾಜ್ಯ ರಾಜಕಾರಣದ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿದೆ ಎಂದರೆ ತಪ್ಪಾಗದು. ಯಾಕೆಂದರೆ ಕಾಂಗ್ರೆಸ್ ಗೆ ನಡುಕ ಹುಟ್ಟಿದರೆ , ಇತ್ತ ಬಿಜೆಪಿಯಲ್ಲಿ ಹೊಸ. ಹುರುಪು ಕಂಡುಬಂದಿದೆ..!

–ಅರ್ಜುನ್

 

Tags

Related Articles

Close