ರಾಹುಲ್ ಗಾಂಧಿ ‘ಮೋದಿ’ ಉಪನಾಮ ಹೊಂದಿರುವ ಸಮುದಾಯವನ್ನು ಕೆಣಕಿ ತಮ್ಮ ನಾಲಿಗೆ ಚಪಲ ತೀರಿಸಿಕೊಳ್ಳಲು ಹೋಗಿ ತಮ್ಮ ಲೋಕಸಭಾ ಸದಸ್ಯತ್ವವನ್ನೇ ಕಳೆದುಕೊಂಡಿದ್ದು ಹಳೆಯ ಸುದ್ದಿ. ಇದೀಗ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿ ಎಸ್ ಎನ್ ಎಲ್) ರಾಹುಲ್ ಗಾಂಧಿ ಅವರ ಕಚೇರಿಯ ದೂರವಾಣಿ ಸಂಪರ್ಕವನ್ನು ಕಡಿತಗೊಳಿಸಿದೆ.
ಮೋದಿ ಸಮುದಾಯವನ್ನು ಕೆಣಕಿ ಕೋರ್ಟ್ನಿಂದ ೨ ವರ್ಷದ ಸೆರೆವಾಸ ಶಿಕ್ಷೆಗೆ ತುತ್ತಾಗಿದ್ದ ರಾಹುಲ್ರನ್ನು, ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹ ಎಂದು ಘೋಷಿಸಲಾಗಿತ್ತು. ಆ ಬೆನ್ನಲ್ಲೇ ಅವರಿಗೆ ದೆಹಲಿಯಲ್ಲಿ ನೀಡಲಾಗಿದ್ದ ಸರ್ಕಾರಿ ನಿವಾಸವನ್ನು ತೆರವು ಮಾಡುವಂತೆಯೂ ಈ ಮೊದಲೇ ತಿಳಿಸಲಾಗಿತ್ತು. ಇದೀಗ ಅವರ ಕಚೇರಿಗೆ ಒದಗಿಸಲಾಗಿದ್ದ ದೂರವಾಣಿ ಸಂಪರ್ಕವನ್ನು ಬಿಎಸ್ಎನ್ಎಲ್ ಕಡಿತಗೊಳಿಸಿದೆ. ಈ ಸಂಪರ್ಕದಲ್ಲಿಯೇ ರಾಹುಲ್ ಕಚೇರಿಯಲ್ಲಿ ಅಂತರ್ಜಾಲ ವ್ಯವಸ್ಥೆ ಸಹ ಇತ್ತು.
ಸೂರತ್ ನ್ಯಾಯಾಲಯ ರಾಹುಲ್ ಗಾಂಧಿಗೆ ಜಾಮೀನು ನೀಡಿತ್ತು. ಮುಂದಿನ ವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ವಿಚಾರಣೆ ಸಹ ನಡೆಯಲಿದೆ.
ರಾಹುಲ್ ಗಾಂಧಿ ಮೋದಿ ಸಮುದಾಯಕ್ಕೆ ಮಾತ್ರವಲ್ಲದೆ, ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರಿಗೆ ಅವಮಾನ ಮಾಡುವ ಮೂಲಕವೂ ತಮ್ಮ ನಾಲಿಗೆ ತೀಟೆ ತೀರಿಸಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವರ್ಕರ್ ಮೊಮ್ಮಗ ರಾಹುಲ್ ಗಾಂಧಿ ಕ್ಷಮೆ ಕೋರಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ಎಫ್ಐಆರ್ ದಾಖಲಿಸುವುದಾಗಿಯೂ ಎಚ್ಚರಿಕೆ ನೀಡಿದ್ದರು.
ಒಟ್ಟಿನಲ್ಲಿ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಹೋದಲ್ಲೆಲ್ಲಾ ವಿವಾದಗಳು ಸುತ್ತಿಕೊಳ್ಳುತ್ತಿದ್ದು, ಇದೀಗ ಬಿ ಎಸ್ ಎನ್ ಎಲ್ ಸಹ ರಾಹುಲ್ ಗಾಂಧಿ ಕಚೇರಿಯ ಸಂಪರ್ಕ ಸ್ಥಗಿತಗೊಳಿಸುವ ಮೂಲಕ ಮತ್ತೊಮ್ಮೆ ಶಾಕ್ ನೀಡಿದೆ ಎನ್ನಬಹುದು.