ಪ್ರಚಲಿತ

ಸಾವರ್ಕರ್ ನಿಂದನೆಯಲ್ಲಿ ರಾಹುಲ್ ಗಾಂಧಿಗೆ ಮತ್ತೊಂದು ಸಂಕಷ್ಟ: ಪರ್ಮನೆಂಟ್ ಅಂದರ್ ಆಗುತ್ತಾರಾ ಯುವನಾಯಕ?

ರಾಹುಲ್ ಗಾಂಧಿಗೆ ಅದ್ಯಾವ ಶನಿ ಮೆಟ್ಟಿಕೊಂಡಿದೋ ತಿಳಿಯದು. ಸದಾ ವಿವಾದಗಳ ಸುಳಿಯಲ್ಲಿಯೇ ಸಿಲುಕುವಂತೆ ತಮ್ಮ ನಾಲಿಗೆ ಹರಿಯಬಿಡುತ್ತಿರುವುದು ವಿಪರ್ಯಾಸ. ತಮ್ಮ ಎಲುಬಿಲ್ಲದ ನಾಲಿಗೆಯ ಕಾರಣದಿಂದಲೇ ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡು, ಲೋಕಸಭೆಯಿಂದಲೇ ಅನರ್ಹರಾಗಿದ್ದಾರೆ.

ಈಗ ಈ ಹಿಂದೆ ರಾಗಾ ನೀಡಿದ್ದ ಮತ್ತೊಂದು ಹೇಳಿಕೆ ಆವರ ಪಾಲಿಗೆ ಮುಳುವಾಗಿದೆ. ನನ್ನ ಹೆಸರು ಸಾವರ್ಕರ್ ಅಲ್ಲ. ಗಾಂಧಿ. ಗಾಂಧಿ ಎಂದೂ ಕ್ಷಮೆ ಕೇಳುವುದಿಲ್ಲ ಎಂದು ರಾಹುಲ್ ಗಾಂಧಿ ಅವರು ಈ ಹಿಂದೆ ನೀಡಿದ್ದ ಹೇಳಿಕೆ ಅವರಿಗೆ ಮತ್ತೆ ಸಂಕಷ್ಟ ಒಡ್ಡುವಂತಿದೆ. ಈ ಹೇಳಿಕೆ ವಿರೋಧಿಸಿ ವೀರ ಸಾವರ್ಕರ್ ಅವರ ಮೊಮ್ಮಗ ರಂಜಿತ್ ಸಾವರ್ಕರ್ ಮಾತನಾಡಿದ್ದು, ವಿನಾಯಕ ದಾಮೋದರ ಸಾವರ್ಕರ್ ಅವರ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನೀಡಿದ ವಿವಾದಾತ್ಮಕ ಹೇಳಿಕೆಯ ಬಗ್ಗೆ ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ. ಹಾಗೆಯೇ ಈ ಹೇಳಿಕೆ ನೀಡಿರುವ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕು ಎಂಬುದಾಗಿಯೂ ಸಾವರ್ಕರ್ ಮೊಮ್ಮಗ ತಿಳಿಸಿದ್ದಾರೆ. ಈ ಬಗ್ಗೆ ಎನ್ ಸಿ ಪಿ ಮುಖಂಡ ಶರದ್ ಪವಾರ್ ಅವರನ್ನು ಸಹ ಒತ್ತಾಯಿಸಿದ್ದಾರೆ. ಹಾಗೆಯೇ ರಾಹುಲ್ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಉದ್ಧವ್ ಠಾಕ್ರೆ ಅವರಿಗೆ ಒತ್ತಾಯಿಸಿದ್ದಾರೆ.

ಹಾಗೆಯೇ ಉದ್ಧವ್ ಠಾಕ್ರೆ ಹಾಗೂ ಸಂಜಯ್ ರಾವತ್ ಅವರಿಗೆ ವೈಯಕ್ತಿಕವಾಗಿಯೂ ಸಾವರ್ಕರ್ ಬಗ್ಗೆ ಗೌರವ ಇದೆ. ಆದ್ದರಿಂದ ರಾಹುಲ್ ಕ್ಷಮೆ ಯಾಚನೆಗೆ ಅವರು ಆಗ್ರಹಿಸಬೇಕು. ಯಾರು ನಮ್ಮ ದೇವರನ್ನು ಅವಮಾನಿಸುವರೋ, ಅವರೊಂದಿಗೆ ನಾವು ಸಂಬಂಧ ಇರಿಸಿಕೊಳ್ಳಬಾರದು. ಸಾವರ್ಕರ್ ಬಗ್ಗೆ ಗೌರವ ಇದ್ದದ್ದೇ ಆದಲ್ಲಿ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಂಜಿತ್ ಸಾವರ್ಕರ್ ಆಗ್ರಹಿಸಿದ್ದಾರೆ. ಉದ್ಧವ್ ಠಾಕ್ರೆ ಸಿ ಎಂ ಆಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಮುಖವಾಣಿ ಸಾವರ್ಕರ್ ಬಗ್ಗೆ ಕೊಳಕು ಪದಗಳನ್ನು ಬಳಕೆ ಮಾಡಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ನಾನು ಪತ್ರ ಬರೆದಿದ್ದೆ. ಆದರೂ ಕ್ರಮ ಕೈಗೊಂಡಿರಲಿಲ್ಲ. ರಾಹುಲ್ ಈ ಹಿಂದೆ ನೀಡಿದ್ದ ಹೇಳಿಕೆಯ ಬಗ್ಗೆ ದೂರು ನೀಡಿದ್ದೆ. ಈಗ ನೀಡಿರುವ ಹೇಳಿಕೆಗೆ ಸಂಬಂಧಿಸಿದ ಹಾಗೆ ಎಫ್‌ಐಆರ್ ದಾಖಲು ಮಾಡುವುದಾಗಿಯೂ ಅವರು ಗುಡುಗಿದ್ದಾರೆ.

ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ರಾಹುಲ್ ಗಾಂಧಿ ಅವರಿಗೆ ಅವರ ನಾಲಿಗೆಯೇ ವೈರಿಯಾಗುತ್ತಿದೆ. ಆದರೂ ಎಚ್ಚೆತ್ತುಕೊಳ್ಳದಿರುವ ರಾಗಾ ಅವರ ಭವಿಷ್ಯ ದುರಂತಮಯವಾಗಿರಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Tags

Related Articles

Close