ಪ್ರಚಲಿತ

ದೂರದರ್ಶನದಲ್ಲಿ ಮತ್ತೆ ಪ್ರಸಾರವಾಗಲಿದೆ ರಾಮಾಯಣ

ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಭವ್ಯ ರಾಷ್ಟ್ರ ಮಂದಿರ ನಿರ್ಮಾಣ, ಲೋಕಾರ್ಪಣೆಯ ಬಳಿಕ ದೇಶದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಶ್ರೀರಾಮನ ಕಾರಣಕ್ಕೆ ದೇಶದಲ್ಲಿ ಹಲವಾರು ಕಾರ್ಯಗಳು ಗಳಿಸಿವೆ. ಇದು ಹಿಂದೂಗಳನ್ನು ಮತ್ತಷ್ಟು ಒಗ್ಗೂಡಿಸುವ ನಿಟ್ಟಿನಲ್ಲಿಯೂ ಮುಖ್ಯ ಪಾತ್ರ ವಹಿಸಿದೆ ಎಂದರೆ ತಪ್ಪಾಗಲಾರದೇನೋ.

ಹಲವು ವರ್ಷಗಳ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಧಾರಾವಾಹಿಯು ಮತ್ತೆ ಪ್ರಸಾರವಾಗಲಿದೆ. ರಮಾನಂದ ಸಾಗರ ಅವರ ರಾಮಾಯಣ ಧಾರಾವಾಹಿ ಇಂದಿಗೂ ಹಲವರ ಮನಸ್ಸಿನಲ್ಲಿ ಅಚ್ಚಾಗಿ ಉಳಿದಿದ್ದು, ಮತ್ತೆ ಆ ಧಾರವಾಹಿ ನೋಡುಗರನ್ನು ಮತ್ತೆ ಸೆಳೆಯಲಿದೆ. ಅರುಣ್ ಗೋವಿಲ್, ದೀಪಿಕಾ ಚಿಕಾಲಿಯಾ, ಸುನೀಲ್ ಲೆಹ್ರಿ ಇವರನ್ನು ಒಳಗೊಂಡ ರಾಮಾಯಣ ಇಂದಿಗೂ ಜನರ ಮನೋಪಟಲದಲ್ಲಿ ಅಚ್ಚೊತ್ತಿದೆ ಎನ್ನಬಹುದು. ಇದಕ್ಕೆ ಸಾಕ್ಷಿ ಆ ನಟರನ್ನು ಇಂದಿಗೂ ರಾಮ, ಲಕ್ಷ್ಮಣ ಮತ್ತು ಸೀತೆ ಎಂಬುದಾಗಿಯೂ ಗುರುತಿಸುತ್ತಿರುವುದು.

ಶ್ರೀರಾಮ ಮಂದಿರದ ಲೋಕಾರ್ಪಣೆಗೂ ಟ್ರಸ್ಟ್ ರಮಾನಂದ ಸಾಗರ್ ಅವರ ರಾಮಾಯಣದ ರಾಮ, ಸೀತೆ, ಲಕ್ಷ್ಮಣ ಪಾತ್ರದಾರಿಗಳಿಗೂ ಅಧಿಕೃತ ಆಹ್ವಾನ ನೀಡಲಾಗಿತ್ತು ಎನ್ನುವುದು ವಿಶೇಷ.

ಭಾರತದಲ್ಲಿ ಪ್ರಭು ಶ್ರೀರಾಮನ ಬಗ್ಗೆ ಅರಿವು, ಒಲವು ಜನರಿಗೆ ಹೆಚ್ಚಾಗಿರುವ ಸಮಯದಲ್ಲಿ ದೇಶದ ಸರ್ಕಾರಿ ಒಡೆತನದ ಟೆಲಿವಿಷನ್ ದೂರದರ್ಶನ ವಾಹಿನಿಯು ರಮಾನಂದ ಸಾಗರರ ರಾಮಾಯಣವನ್ನು ಮರು ಪ್ರಸಾರ ಮಾಡುವುದಾಗಿ ತಿಳಿಸಿದೆ.

ಈ ಹಿಂದಿನ ವರ್ಷಗಳಲ್ಲಿ ಹಲವಾರು ರಾಮಾಯಣ, ಮಹಾಭಾರತ ಆಧಾರಿತ ಧಾರಾವಾಹಿಗಳು ಎಷ್ಟೇ ಬಂದಿದ್ದರೂ ಈ ವರೆಗೆ ರಮಾನಂದ ಸಾಗರರ ರಾಮಾಯಣದಷ್ಟು ಪ್ರಖ್ಯಾತಿ ಪಡೆದಿಲ್ಲ. ಈಗ ಅದೇ ಧಾರಾವಾಹಿಯನ್ನು ಮತ್ತೆ ಪ್ರಸಾರ ಮಾಡುವುದಾಗಿ ಡಿಡಿ ತಿಳಿಸಿದೆ. ಈ ಬಗ್ಗೆ ಡಿಡಿ ಟ್ವೀಟ್ ಮೂಲಕ ಅಧಿಕೃತ ಮಾಹಿತಿ ನೀಡಿದ್ದು, ದಿನಾಂಕವನ್ನು ಮಾತ್ರ ಇನ್ನೂ ಘೋಷಣೆ ಮಾಡಿಲ್ಲ.

ದೂರದರ್ಶನದಲ್ಲಿ ಮತ್ತೆ ರಾಮಾಯಣ ಧಾರಾವಾಹಿ ಪ್ರಸಾರವಾಗುವುದನ್ನು ಹಲವಾರು ಮಂದಿ ಸ್ವಾಗತಿಸಿದ್ದಾರೆ. ಜೊತೆಗೆ ಶ್ರೀ ರಾಮ ಭಕ್ತರು ಮತ್ತು ರಮಾನಂದ ಸಾಗರ್ ಅವರ ರಾಮಾಯಣ ಧಾರಾವಾಹಿಯ ಅಭಿಮಾನಿಗಳು ಮತ್ತೆ ಆ ಧಾರಾವಾಹಿಯ ಸೌಂದರ್ಯ ಆಸ್ವಾದನೆಗೆ ಕಾತರದಿಂದ ಕಾಯುತ್ತಿದ್ದಾರೆ ಎನ್ನುವುದು ಸತ್ಯ.

Tags

Related Articles

Close