ಚೀನಾದ ಕ್ಸಿಯಾಮೆನ್ನಲ್ಲಿ ಪ್ರತಿಷ್ಠಿತ ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆ ನಡೆಯುತ್ತಿದೆ. ದೋಕಲಾಂ ಗಡಿ ವಿಚಾರದಲ್ಲಿ ಭಾರತದ ಮತ್ತು ಚೀನಾ ನಡುವಣ ವಿವಾದ
ತಿಳಿಯಾಗಿದೆ. ಈ ಸಭೆಯಲ್ಲಿ ವಿಶ್ವದಲ್ಲಿ ಅಶಾಂತಿಗೆ ಕಾರಣವಾಗುತ್ತಿರುವ ಇಸ್ಲಾಂ ಭಯೋತ್ಪಾದನೆಯ ಬಗ್ಗೆ ಮೋದಿ ಗಮನ ಸೆಳೆದು ಭಯೋತ್ಪಾದನೆಯನ್ನು ಮಟ್ಟ ಹಾಕಲು ಸಭೆಯಲ್ಲಿನ ರಾಷ್ಟ್ರಗಳು ಒಕ್ಕೊರಲ ನಿರ್ಣಯ ಕೈಗೊಂಡವು. ಮೋದಿಯವರ ನಡೆಯಿಂದ ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನ ಮೂಲೆಗುಂಪಾಗಿದೆ. ಈ ಬಾರಿ ಚೀನಾದ ಪರಮ ಮಿತ್ರ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಯ ವಿರುದ್ಧ ನಿರ್ಣಯ ತಳೆದಿರುವುದರಿಂದ ಚೀನಾಕ್ಕೂ ಈ ಸಭೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಸಭೆಯಲ್ಲಿ ಮೋದಿ ಚೀನಾವನ್ನು ಯಾವ ರೀತಿ ಖೆಡ್ಡಾಕ್ಕೆ ನೂಕಿದರೆಂಬುವುದೇ ಇಲ್ಲಿನ ಬಹು ಚರ್ಚಿತ ವಿಚಾರ.
ಹೌದು ಚೀನಾಕ್ಕೆ ಕೆಟ್ಟ ಭಯವೊಂದು ಆವರಿಸಿದೆ. ಯಾಕೆ ಗೊತ್ತಾ ಚೀನಾದಲ್ಲಿ ನಡೆಯುವ ಕೆಲವು ದಿನಗಳ ಬ್ರಿಕ್ಸ್ ಸಮ್ಮೇಳನದಲ್ಲಿ ಚೀನಾವು ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನವನ್ನು ರಕ್ಷಿಸಲು ನೋಡಿತ್ತು. ಬ್ರಿಕ್ಸ್ ಸಭೆಯಲ್ಲಿ ಭಯೋತ್ಪಾದನೆಯ ವಿಚಾರದ ಬಗ್ಗೆ ಮಾತಾಡಬಾರದೆಂದು ಚೀನಾ ಮೊದಲೇ ಮೋದಿಯವರನ್ನು ಎಚ್ಚರಿಸಿತ್ತು. ಆದರೆ ಮೋದಿ ಚೀನಾದ ಮಾತಿಗೆ ಸೊಪ್ಪು ಹಾಕಲಿಲ್ಲ. ಸಭೆಯಲ್ಲಿ ಯಾವ ವಿಚಾರದ ಬಗ್ಗೆ ಚರ್ಚೆಯಾಗಬಾರದೆಂದು ಚೀನಾ ಬಯಸಿತ್ತೋ ಅದೇ ವಿಚಾರದ ಬಗ್ಗೆ ಚರ್ಚೆ ನಡೆದಿರುವುದರಿಂದ ಚೀನಾ ಇಂಗುತಿಂದ ಮಂಗನಾಗಿದ್ದಂತೂ ಸುಳ್ಳಲ್ಲ.
ಬ್ರಿಕ್ಸ್ ಸಭೆಯಲ್ಲಿ ಭಯೋತ್ಪಾದನೆ ಮತ್ತು ಭ್ರಷ್ಟಾಚಾರವನ್ನು ಅಳಿಸಿಹಾಕುವ ನಿರ್ಧಾರಕ್ಕೆ ಬರಲಾಯಿತು ಈ ನಡೆಯಿಂದ ಪಾಕಿಸ್ತಾನ ಮೂಲೆಗುಂಪಾಗಲಿದೆ.
ಇಂದು ಭಾರತವು ಭಯೋತ್ಪಾದನೆಯ ವಿರುದ್ಧ ಅತಿದೊಡ್ಡ ಯುದ್ಧವನ್ನು ಗೆದ್ದಿದೆ…. ಅದು ಹೇಗೆ ಗೊತ್ತಾ…?
ಭಯೋತ್ಪಾದನೆಯನ್ನು ಮಟ್ಟ ಹಾಕುವುದು ಅಷ್ಟು ಸುಲಭವಲ್ಲ. ಮಟ್ಟಹಾಕಬೇಕಾದರೆ ಅದರ ಬೆನ್ನುಮೂಳೆಯನ್ನೇ ಮುರಿದುಬಿಡಬೇಕು. ಈ ಸಭೆಯಲ್ಲಿ ಪಾಕಿಸ್ತಾನದ ಬೆನ್ನುಮೂಳೆಯನ್ನೇ ಮುರಿದು ಹಾಕಲಾಯಿತು. ಹೇಗೆ ಗೊತ್ತಾ? ವಿಶ್ವದ ಪ್ರಬಲ ರಾಷ್ಟ್ರಗಳಿಂದ ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನವನ್ನು ಪ್ರತ್ಯೇಕಿಸಬೇಕು. ಇದರಿಂದ ಆಗುವ ಲಾಭ ಏನೆಂದರೆ, ಪ್ರಬಲ ರಾಷ್ಟ್ರಗಳು ಪಾಕಿಸ್ತಾನದ ವಿರುದ್ಧ ನಿರ್ಧಾರ ತಳೆಯುತ್ತದಲ್ಲದೆ ಅದಕ್ಕೆ ನೀಡುವ ಹಣಕಾಸಿನ ನೆರವನ್ನೂ ನಿಲ್ಲಿಸುತ್ತದೆ. ಬ್ರಿಕ್ಸ್ ಸಭೆಯಲ್ಲೂ ಭಯೋತ್ಪಾದನೆಯ ವಿರುದ್ಧ ನಿರ್ಣಯ ತಳೆದಿರುವುದರಿಂದ ಪಾಕಿಸ್ತಾನಕ್ಕೆ ಸಿಗುತ್ತಿದ್ದ ಹಲವು ರೀತಿಯ ನೆರವುಗಳು ನಿಲ್ಲುತ್ತದೆ. ಇದು ಪಾಕಿಸ್ತಾನಕ್ಕೆ ಸಿಕ್ಕ ದೊಡ್ಡ ಮಟ್ಟದ ಹೊಡೆತ. ಪಾಕಿಸ್ತಾನವನ್ನು ಪ್ರಬಲರಾಷ್ಟ್ರಗಳಿಂದ ಪ್ರತ್ಯೇಕಿಸುವ ಮೋದಿ ಪ್ರಯತ್ನಕ್ಕೂ ಗೆಲುವು ಸಿಕ್ಕಿದೆ. ಈ ರೀತಿ ಭಾರತದ ಭಯೋತ್ಪಾದನೆಯ ವಿರುದ್ಧ ಅತಿದೊಡ್ಡ ಯುದ್ಧವನ್ನು ಗೆದ್ದಿದೆ ಎಂದೇ ಹೇಳಬಹುದು.
ಬ್ರಿಕ್ಸ್ ಸಭೆಯಲ್ಲಿ ಮೊದಲ ಬಾರಿಗೆ ಪಾಕಿಸ್ತಾನ ಪ್ರೇರಿತ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಇ ತೈಬಾ, ಜೈಯಿಷೆ ಮೊಹಮ್ಮದ್ ಮತ್ತು ಹಕ್ಕಾನಿ ಜಾಲದ
ವಿರುದ್ಧ ಸಭೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳು ಖಂಡಿಸಿದವು. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಭಯೋತ್ಪಾದನೆಯ ಬಗ್ಗೆ ಖಂಡಿಸಿರುವುದರಿಂದ
ಪಾಕಿಸ್ತಾನ ಮುಂದಿನ ದಿನಗಳಲ್ಲಿ ಏಕಾಂಗಿಯಾದಂತಾಗಿದೆ. ನೆನಪಿರಲಿ, ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾ ಇವೆಲ್ಲಾ ವಿಶ್ವದಲ್ಲೇ ಪ್ರಬಲ ಸೈನ್ಯವನ್ನು
ಹೊಂದಿರುವ ರಾಷ್ಟ್ರಗಳು!
ಒಳ್ಳೆಯ ಅಥವಾ ಕೆಟ್ಟ ಭಯೋತ್ಪಾದನೆ ಎಂಬುವುದಿಲ್ಲ… ಹಾಗಾದರೆ ಚೀನಾ ಏನನ್ನು ಹೇಳಬೇಕಿತ್ತು?
ಬ್ರಿಕ್ಸ್ ಸಭೆಯಲ್ಲಿ ಭಾರತವು ಭಯೋತ್ಪಾದನಾ ವಿವಾದವನ್ನು ತರಬಾರದೆಂದು ಚೀನಾ ಬಯಸಿತ್ತು. ಬ್ರಿಕ್ಸ್ ಸಭೆಯು ಭಯೋತ್ಪಾದನೆಯ ವಿರುದ್ಧ ಮಾತಾಡಲು
ಸೂಕ್ತವಲ್ಲ ಎಂದು ಚೀನಾ ಹೇಳಿತ್ತು. ಈ ಮುಂಚೆ ಚೀನಾ, ಪಾಕಿಸ್ತಾನ ಭಯೋತ್ಪಾದನೆಯ ವಿರುದ್ಧ ನಡೆಸುವ ಕಾರ್ಯಾಚರಣೆಯಿಂದ ವಿಶ್ವದಲ್ಲೇ ಪ್ರಶಂಸೆಗೊಳಪಟ್ಟಿದೆ ಎಂದು ಹೇಳಿತ್ತು. ಒಟ್ಟಿನಲ್ಲಿ ಚೀನಾ ಪಾಕಿಸ್ತಾನವನ್ನು ರಕ್ಷಿಸಲು ತನ್ನ ಸಾಧ್ಯವಾದ ಮಟ್ಟಿನ ಯತ್ನವನ್ನು ನಡೆಸಿತ್ತು.
ಕಳೆದ ಬ್ರಿಕ್ಸ್ ಶೃಂಗಸಭೆಯು ಭಾರತದ ಗೋವಾದಲ್ಲಿ ನಡೆದಿತ್ತು. ಭಾರತವು ಭಯೋತ್ಪಾದನೆಯ ವಿರುದ್ಧ ನಡೆಸುವ ಹೋರಾಟವನ್ನು ಬ್ರಿಕ್ಸ್ ರಾಷ್ಟ್ರಗಳು ಪ್ರಶಂಸಿದ್ದವು. ಆದರೆ ಈ ಸಭೆಯಲ್ಲಿ ಗಡಿಭಾಗದ ಭಯೋತ್ಪಾದನೆ ಮತ್ತು ಭಯೋತ್ಪಾದಕ ಸಂಘಟನೆಗಳ ಹೆಸರನ್ನು ಪ್ರಸ್ತಾಪಿಸಲು ಚೀನಾ ಅವಕಾಶ ಮಾಡಿಕೊಟ್ಟಿರಲಿಲ್ಲ. ಇದರಿಂದಾಗಿ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಸಂಘಟನೆಗಳ ಹೆಸರನ್ನು ಪ್ರಸ್ತಾಪಿಸಿ ಅದರ ವಿರುದ್ಧ ನಿರ್ಣಯ ತಳೆಯುವ ಬಗ್ಗೆ ಜಂಟಿ ಹೇಳಿಕೆಯನ್ನು ಪಡೆಯಲೂ ಸಾಧ್ಯವಾಗಿರಲಿಲ್ಲ.
ಆದರೆ ಇಂದು ನಡೆದ ಸಭೆಯಲ್ಲಿ ಪ್ರಧಾನಿ ಮೋದಿಯವರ ಮುತುವರ್ಜಿಯಿಂದ ಬ್ರಿಕ್ಸ್ ರಾಷ್ಟ್ರಗಳು ಭಯೋತ್ಪಾದಕ ಸಂಘಟನೆಗಳ ಹೆಸರನ್ನು ಪ್ರಸ್ತಾಪಿಸಿ
ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಿನಿಂದ ಕಾರ್ಯಾಚರಣೆ ನಡೆಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಮೋದಿಯವರ ಕಾರ್ಯಸೂಚಿಯಿಂದ ಬ್ರಿಕ್ಸ್ ರಾಷ್ಟ್ರಗಳು ಭಯೋತ್ಪಾದನೆಯ ವಿರುದ್ಧ ಜಂಟಿ ಹೇಳಿಕೆಯನ್ನು ನೀಡಿದೆ. ಪಾಕಿಸ್ತಾನದ ನರಿಬುದ್ಧಿಯನ್ನು ವಿಶ್ವದ ದಿಗ್ಗಜ ರಾಷ್ಟ್ರಗಳ ಮುಂದೆ ಮೋದಿ ಪ್ರಸ್ತಾಪಿಸಿ, ಅದರಿಂದ ವಿಶ್ವಕ್ಕೆ ಉಂಟಾಗುವ ಅಶಾಂತಿಯ ಬಗ್ಗೆ ವಿವರಿಸಿದ್ದಾರೆ. ಇದರಿಂದ ಪಾಕಿಸ್ತಾನವನ್ನು ಪ್ರಬಲ ರಾಷ್ಟ್ರಗಳ ನಡುವಿನಿಂದ ಪ್ರತ್ಯೇಕಿಸುವ ಮೋದಿಯವರ ಪ್ರಯತ್ನ ಯಶಸ್ವಿಯಾಗಿದೆ. ಎಲ್ಲಾ ರಾಷ್ಟ್ರಗಳು ಭಾರತದ ಮಾತಿಗೆ ಉಘೇ ಉಘೇ ಅಂದಿರುವುದರಿಂದ ಚೀನಾ ಕೂಡಾ ವಿಧಿಯಿಲ್ಲದೆ ಭಯೋತ್ಪಾದನೆಯ ವಿರುದ್ಧ
ಕಟುಮಾತಿನಿಂದ ಖಂಡಿಸಿ, ಮೋದಿ ಮಾತಿಗೆ ಒಪ್ಪಿಗೆ ಸೂಚಿಸಿದೆ.
ಭಯೋತ್ಪಾದನೆಯ ವಿರುದ್ಧ ಬ್ರಿಕ್ಸ್ ರಾಷ್ಟ್ರಗಳ ಘೋಷಣೆ ಹೇಗಿತ್ತು, ಭಾರತ ಗೆದ್ದಿದ್ದು ಹೇಗೆ? ಎಲ್ಲವನ್ನೂ ಸ್ಫುಟವಾಗಿ ವಿವರಿಸೋಣ…
“ಭಯೋತ್ಪಾದನಾ ಸಂಘಟನೆಗಳ ವಿರುದ್ಧ ಹೋರಾಟ ನಡೆಸುವ ಅಪಘಾನ್ ರಾಷ್ಟ್ರೀಯ ರಕ್ಷಣಾ ಮತ್ತು ಭದ್ರತಾ ಪಡೆಗಳ ಪ್ರಯತ್ನಗಳನ್ನು ನಾವು ಬೆಂಬಲಿಸುತ್ತಿದ್ದೇವೆ. ಈ ವಿಷಯದಲ್ಲಿ ತಾಲಿಬಾನ್ ಐಎಸ್ಐಎಲ್/ ಡಯಾಶ್, ಅಲ್-ಖೈದಾ ಮತ್ತು ಪೂರ್ವದ ಟರ್ಕಿಸನ್ ಇಸ್ಲಾಮಿಕ್ ಮೂವ್ಮೆಂಟ್, ಇಸ್ಲಾಮಿಕ್ ಮೂವ್ಮೆಂಟ್ ಆಫ್ ಉಜ್ಬೆಕಿಸ್ತಾನ್, ಹಕ್ಕಾನಿ ನೆಟ್ವರ್ಕ್, ಲಷ್ಕರ್-ಇ ತೈಬಾ ಸೇರಿದಂತೆ ಅದರ ಅಂಗಸಂಸ್ಥೆಗಳಿಂದ ಉಂಟಾದ ಹಿಂಸಾಚಾರ ಮತ್ತು ಭದ್ರತಾ ಪರಿಸ್ಥಿತಿ ಬಗ್ಗೆ ನಾವು ಕಳವಳವನ್ನು ವ್ಯಕ್ತಪಡಿಸುತ್ತೇವೆ. ಭಯೋತ್ಪಾದನೆಯಿಂದ ಬ್ರಿಕ್ಸ್ ರಾಷ್ಟ್ರಗಳೂ ಕೂಡಾ ಅಪಾಯಕ್ಕೆ ತುತ್ತಾಗಿದ್ದು, ವಿಶ್ವದಾದ್ಯಂತ ವ್ಯಾಪಿಸಿದೆ. ಭಯೋತ್ಪಾದನೆಯ ವಿರುದ್ಧ ಬ್ರಿಕ್ಸ್ ರಾಷ್ಟ್ರಗಳು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು.
ಭಯೋತ್ಪಾದಕ ಕೃತ್ಯಗಳನ್ನು ಎಸಗುವವರು ಮತ್ತು ಅದಕ್ಕೆ ನೆರವಾಗುವವರ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಡಬೇಕು. ಅಫ್ಗಾನಿಸ್ತಾನದಲ್ಲಿ ಭಯೋತ್ಪಾದನೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಬ್ರಿಕ್ಸ್ `ಕ್ಸಿಯಾಮೆನ್ ಘೋಷಣೆ’ಯಲ್ಲಿ ಹೇಳಲಾಗಿದೆ. ಈ ಪ್ರದೇಶದ ಭದ್ರತಾ ಪರಿಸ್ಥಿತಿಯ ಆತಂಕಕ್ಕೆ ಕಾರಣವಾಗಿದೆ. ಭಯೋತ್ಪಾದನಾ ಕೃತ್ಯಗಳಿಗೆ ಯಾವ ರೀತಿಯ ಸಮರ್ಥನೆಯೂ ಇರುವುದಕ್ಕೆ ಸಾಧ್ಯವಿಲ್ಲ. ಭಾರತದ ಪ್ರಧಾನಿ ಮೋದಿ ಅವರು ಭಯೋತ್ಪಾದನೆಯ ವಿರುದ್ಧ ಹೋರಾಟಕ್ಕೆ ಎಲ್ಲರೂ ಒಂದಾಗಬೇಕಾಗಿದೆ” ಎಂದು ಎಲ್ಲಾ ರಾಷ್ಟ್ರಗಳು ಒತ್ತಿಹೇಳಿದವು.
ಬ್ರಿಕ್ಸ್ ಸಭೆಯಲ್ಲಿ ಭಯೋತ್ಪಾದನೆ ಮತ್ತು ನಿರ್ದಿಷ್ಟ ಉಗ್ರ ಸಂಘಟನೆಗಳ ವಿರುದ್ಧ ಉಲ್ಲೇಖಿಸಿರುವುದು ಇದೇ ಮೊದಲು. ಇದನ್ನು ಮೋದಿ ಯಶಸ್ವಿಯಾಗಿ ಸಾಧಿಸಿದ್ದಾರೆ. ಪಾಕ್ ಭಯೋತ್ಪಾದನೆಯ ಬಗ್ಗೆ ಭಾರತ ಪ್ರಸ್ತಾಪಿಸಬಾರದು ಎಂದು ಚೀನಾ ಎಷ್ಟೇ ಒತ್ತಡ ಹೇರಿದರೂ ಕ್ಯಾರ್ ಮಾಡದ ಮೋದಿ,, ಪಾಕಿಸ್ತಾನದ ಮೂಲದ ಭಯೋತ್ಪಾದಕ ಸಂಘಟನೆಗಳ ಹೆಸರನ್ನು ಉಲ್ಲೇಖಿಸಿ ಖಂಡನಾ ನಿರ್ಣಯವನ್ನು ಘೋಷಣೆಯಲ್ಲು ಸೇರಿಸಬೇಕು ಎಂದು ಪಟ್ಟು ಹಿಡಿದಿದ್ದರು. ಕ್ಯಿಯಾಮೆನ್ ಘೋಷಣೆಯಲ್ಲು `ಭಯೋತ್ಪಾದನೆ’ ಎಂಬ ಪದವನ್ನು 17 ಬಾರಿ ಉಪಯೋಗಿಸಲಾಗಿದೆ. ಜೊತೆಗೆ ತೀವ್ರವಾದ ಧಾರ್ಮಿಕ ಮೂಲಭೂತವಾದಗಳ ಉಲ್ಲೇಖವೂ ಇದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ನಿರ್ಬಂಧಕ್ಕೆ ಒಳಗಾದ ಪಾಕ್ ಪ್ರೇರಿತ ಭಯೋತ್ಪಾದಕ ಸಂಘಟನೆಗಳು ವಿಶ್ವದಾದ್ಯಂತ ಭಾರೀ ಹಿಂಸಾಚಾರ ನಡೆಸುತ್ತಿದೆ. ಇದೀಗ ಅದು ಚೀನಾಕ್ಕೂ ತಟ್ಟಿದ್ದು, ಭಯೋತ್ಪಾದನೆಯ ವಿರುದ್ಧ ನಿರ್ಣಯ ತಳೆಯಲು ಕಾರಣವಾಗಿದೆ. ಬ್ರಿಕ್ಸ್ ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಬ್ರೆಜಿಲ್ ಅಧ್ಯಕ್ಷ ಮೈಕೆಲ್ ಟೆಮರ್ ಮತ್ತು ದಕ್ಷಿಣ ಆಫ್ರಿಕಾ ಅಧ್ಯಕ್ಷ ಜಾಕೊಬ್ ಜುಮಾ ಭಾಗವಹಿಸಿದ್ದು, ಎಲ್ಲರೂ ಭಯೋತ್ಪಾದನೆಯ ವಿರುದ್ಧ ಕರೆ ಕೊಟ್ಟಿದ್ದಾರೆ.
-ಚೇಕಿತಾನ