ಪ್ರಚಲಿತ

ಮಹಾತ್ಮಾನಿಂದ ಶಾಸ್ತ್ರೀಜಿ ಕಳೆಕುಂದಿದ್ದು ಹೇಗೆ ಗೊತ್ತೇ? ಶಾಸ್ತ್ರೀಜಿಯ ಬಗ್ಗೆ ಇತಿಹಾಸ ಮುಚ್ಚಿಟ್ಟ ಪುಟಗಳು!!

ಅಕ್ಟೋಬರ್ 2 ರಂದು ಏನು ವಿಶೇಷ?? ಅದಾ.. ನಮ್ಮ ದೇಶದ ಪಿತಾಮಹನ ಜನುನದಿವಸವಲ್ಲವೇ ಅವತ್ತು?? ಇವಿಷ್ಟೇ ಅನೇಕರಿಗೆ ನೆನಪು. ಎಲ್ಲಾ ಶಾಲಾ
ಕಾಲೇದುಗಳಲ್ಲಿ ಮಹಾತ್ಮನೆಂಬುವವರ ಕುರಿತು ಮಾತ್ರ ಹಾಡಿ ಹೊಗಳುತ್ತಾರೆ. ಆದರೆ ಇದೇ ದಿವಸ ದೇಶ ಕಂಡ ಅತ್ಯಂತ ಪ್ರಾಮಾಣಿಕ, ನಿಷ್ಕಳಂಕ, ಪ್ರಧಾನಿಯ ಜನ್ಮ ದಿವಸವೂ ಅಕ್ಟೋಬರ್ 2 ಎಂಬುದಾಗಿ ಮರೆತಿದ್ದಾರೆ. ನಿಮಗೆ ನೆನಪಿರಲಿ. ಆ ವ್ಯಕ್ತಿ ಈ ದೇಶದ ಸೇವೆಗೈದಿದ್ದು ಕೇವಲ 17 ತಿಂಗಳುಗಳಷ್ಟೇ. ಆದರೆ ಅದರ ಪರಿಣಾಮ ಮಾತ್ರ ಶತಮಾನಗಳವರೆಗೆ ನೆನೆಪಿನಂಗಳದಲ್ಲಿ ಉಳಿಯುವಷ್ಟು.. ಅವರು ಬೇರಾರು ಅಲ್ಲ, ಶ್ರೀ ಲಾಲ್ ಬಹದ್ದೂರ್ ಶಾಸ್ತ್ರೀ..!!

ಶಾಸ್ತ್ರೀಜಿ ಈ ದೇಶವನ್ನು‌‌ ಮುನ್ನಡೆಸಿದ್ದು ಕೇವಲ 17 ತಿಂಗಳು. ಆದರೆ ವಿಪರ್ಯಾಸ ಕೇಳಿ. 17 ವರುಷ‌ ಆಡಳಿತ ಮಾಡಿದ ನೆಹರೂವನ್ನೇ ಮೀರಿಸಿದ್ದರು.ಒ ಅದು ಕೆಲವರ ಕಣ್ಣು ಕೆಂಪಾಗಿಸಿದ್ದೂ ಸತ್ಯವೇ.ತಮ್ಮ ಪಕ್ಷದಲ್ಲೇ ಇದ್ದ ಆಡಳಿತ ಚುಕ್ಕಾಣಿಯನ್ನೇ ಹಿಡಿಯಲು ತಯಾರಾಗಿದ್ದ ಸ್ವಾರ್ಥಿ ರಾಜಕಾರಣಿಗಳು ಇವರಿಗೆ‌ ಮುಳುವಾಗಿದ್ದೂ ಸುಳ್ಳಲ್ಲ.

ಹತ್ಯಾರೋಂ ಕಾ ಜವಾಬ್, ಹತ್ಯಾರೋಂ ಸೆ ದೇಂಗೆ!

ಹಾಗಂತ 1965, ಆಗಸ್ಟ್ 15ರಂದು ಕೆಂಪುಕೋಟೆಯ ಮೇಲೆ ನಿಂತು ಪ್ರಧಾನಿ ಲಾಲ್‌ಬಹಾದ್ದೂರ್ ಶಾಸ್ತ್ರಿಯವರು ಗುಡುಗಿದಾಗ ಅನುಮಾನಪಟ್ಟವರೇ ಹೆಚ್ಚು. ಕಾರಣ, ಇಂತಹ ಒಂದು ಘೋಷಣೆಯನ್ನು ಹಿಂದಿನ ಪ್ರಧಾನಿ ಆಡಿದ ಉದಾಹರಣೆಯೇ ಇರಲಿಲ್ಲ. ಜತೆಗೆ ದುರ್ಬಲ ವ್ಯಕ್ತಿಯಿಂದ ಏನು ತಾನೇ ಸಾಧ್ಯ ಎಂಬ ಅಸಡ್ಡೆ. ದುರ್ಬಲವಾಗಿದ್ದುದು ತಮ್ಮ ದೇಹ ಹೊರತು ಮನಸ್ಸಿನ ಇಚ್ಛಾಶಕ್ತಿಗಲ್ಲವೆಂಬುದು ಅವರಿಗೇನು ಗೊತ್ತು?? ಇದಾಗಿ ಎರಡು ವಾರಗಳಾಗಿವೆಯಷ್ಟೆ. ಅವತ್ತು 1965, ಆಗಸ್ಟ್ 31ನೇ ತಾರೀಖು. ಹೊತ್ತಿಗೆ ಮೊದಲೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಮನೆಗೆ ಬಂದಿದ್ದರು. ಇನ್ನೇನು ಊಟಕ್ಕೆ ಕುಳಿತುಕೊಳ್ಳಬೇಕು. ಹತ್ತಿರಕ್ಕೆ ಬಂದ ಆಪ್ತ ಕಾರ್ಯದರ್ಶಿಯೊಬ್ಬರು ಕಿವಿಯಲ್ಲೇನೋ ಪಿಸುಗುಟ್ಟಿದರು. ಹಸಿವನ್ನೇ ಮರೆತ ಶಾಸ್ತ್ರಿಯವರು ’10 ಜನಪಥ್‌’ ರಸ್ತೆಯಲ್ಲಿದ್ದ ಪ್ರಧಾನಿ ಕಚೇರಿಯತ್ತ ನಡೆದೇ ಬಿಟ್ಟರು.ಭೂಸೇನೆ, ವಾಯುಸೇನೆ ಮತ್ತು ನೌಕಾದಳದ ಮೂವರು ಮುಖ್ಯಸ್ಥರು ಪ್ರಧಾನಿಯ ಹಾದಿಯನ್ನೇ ಎದುರು ನೋಡುತ್ತಿದ್ದರು. ಶಾಸ್ತ್ರಿಯವರು ಬಂದಿದ್ದೇ ತಡ ವೈಸ್ ಅಡ್ಮಿರಲ್ ಭಾಸ್ಕರ ಸದಾಶಿವ ಸೋಮನ್ ಮತ್ತು ಏರ್‌ಚೀಫ್ ಮಾರ್ಷಲ್ ಅರ್ಜನ್ ಸಿಂಗ್ ಪ್ರಧಾನಿ ಕೊಠಡಿಯನ್ನು ಸೇರಿದರು. ಏನಿರಬಹುದು? ಎಂದು ಉಳಿದವರು ಯೋಚಿಸುವ ಮೊದಲೇ ಎಲ್ಲರೂ ಹೊರಬಂದರು.ಕೇವಲ 5 ನಿಮಿಷಗಳಲ್ಲಿ ಪ್ರಧಾನಿ ಶಾಸ್ತ್ರಿಯವರು
ಎದೆ ಝಲ್ಲೆನಿಸುವಂತಹ ನಿರ್ಧಾರ ಕೈಗೊಂಡಿದ್ದರು. ಪಾಪಿ ಪಾಕ್‌ನ ಮೇಲೆ ಯುದ್ಧ ಘೋಷಣೆಯಾಗಿತ್ತು.

ಜಮ್ಮುವಿನ ಛಾಂಬ್ ವಿಭಾಗದಲ್ಲಿ ಅಂತಾರಾಷ್ಟ್ರೀಯ ಗಡಿಯನ್ನು ದಾಟಿದ್ದ ಪಾಕಿಸ್ತಾನಿ ಪಡೆಗಳು ಸುಮಾರು ನೂರಕ್ಕೂ ಅಧಿಕ ಯುದ್ಧ ಟ್ಯಾಂಕ್‌ಗಳ ಮೂಲಕ ಭಾರತದ ಮೇಲೆ ಮುಗಿಬಿದ್ದಿದ್ದವು. ಇನ್ನು ಕೆಲವೇ ಗಂಟೆಗಳಲ್ಲಿ ಇಡೀ ಕಾಶ್ಮೀರವೇ ದೇಶದ ಇತರ ಭಾಗಗಳೊಂದಿಗೆ ಸಂಪರ್ಕ ಕಳೆದುಕೊಳ್ಳುವ ಅಪಾಯ ಎದುರಾಗಿತ್ತು. ಛಾಂಬ್ ಅನ್ನು ರಕ್ಷಿಸಿಕೊಳ್ಳುವುದು ಅಸಾಧ್ಯ ಎಂದು ಅರ್ಜನ್ ಸಿಂಗ್ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಶಾಸ್ತ್ರೀಜಿ ಅಳುಕಲಿಲ್ಲ! ನೆಹರು ಅವರಂತೆ ಗೋಗರೆಯುತ್ತ ವಿಶ್ವಸಂಸ್ಥೆಯ ಕದ ತಟ್ಟಲಿಲ್ಲ. ಅಂತಾರಾಷ್ಟ್ರೀಯ ಒತ್ತಡದ ಬಗ್ಗೆಯೂ ಚಿಂತಿಸಲಿಲ್ಲ. ವಿಶ್ವದ ನಾಯಕರು ಏನನ್ನುತ್ತಾರೋ ಎಂದು ಯೋಚಿಸಲಿಲ್ಲ. ಏಕೆಂದರೆ ‘ಹಮಾರಾ ದೇಶ್ ರಹೇಗಾ ತೋ, ಹಮಾರಾ ತಿರಂಗಾ ರಹೇಗಾ’ ಎಂದು ಹದಿನೈದು ದಿನಗಳ ಹಿಂದಷ್ಟೇ ತಾವೇ ಹೇಳಿದ ಮಾತುಗಳನ್ನು ಅವರು ಮರೆತಿರಲಿಲ್ಲ. ‘ಛಾಂಬ್ ಕೈ ಜಾರುವ ಮೊದಲು, ಲಾಹೋರನ್ನು ವಶಪಡಿಸಿಕೊಳ್ಳಿ’ ಎಂದು ಭಾರತೀಯ ಪಡೆಗಳಿಗೆ ನಿರ್ದೇಶನ ನೀಡಿಯೇ ಬಿಟ್ಟರು!

ಎರಡನೇ ಜಾಗತಿಕ ಸಮರದ ನಂತರ ಭುಗಿಲೆದ್ದ ಅತಿ ದೊಡ್ಡ ಸಂಘರ್ಷ ಅದಾಗಿತ್ತು. ಏಕೆಂದರೆ ಎರಡೂ ರಾಷ್ಟ್ರಗಳು ಸಾವಿರಕ್ಕೂ ಅಧಿಕ ಟ್ಯಾಂಕ್‌ಗಳೊಂದಿಗೆ ಪರಸ್ಪರ ಮುಗಿಬಿದ್ದಿದ್ದವು. ಆರಂಭದಲ್ಲಿ ಪಾಕಿಸ್ತಾನದ್ದೇ ಮೇಲುಗೈ. ಅಮೆರಿಕ ದಾನ ಮಾಡಿದ್ದ ಸುಧಾರಿತ ಎಂ-48 ಪ್ಯಾಟನ್ ಟ್ಯಾಂಕ್‌ಗಳನ್ನು ಹೊಂದಿದ್ದ ಪಾಕಿಸ್ತಾನದ ಎರಡು ಸೇನಾ ತುಕಡಿಗಳು ಭಾರತದ ಮೇಲೆ ಆಕ್ರಮಣ ಮಾಡಿದರೆ, ನಮ್ಮ ಒಂದೇ ತುಕಡಿ ಶತ್ರುವನ್ನು ಹಿಮ್ಮೆಟ್ಟಿಸಬೇಕಿತ್ತು. ಜತೆಗೆ ಪ್ರತಿ ದಾಳಿಯನ್ನು ಮಾಡಬೇಕಿತ್ತು. ಆದರೇನಂತೆ ಸಪ್ಟೆಂಬರ್ 10ರಂದು ‘ಅಸಲ್ ಉತ್ತರ್‌’ (True North) ಬಳಿ ನಡೆದ ನಿರ್ಣಾಯಕ ಸಮರದಲ್ಲಿ ನಮ್ಮ ಸೈನಿಕರು ಪಾಕ್‌ನ 97 ಟ್ಯಾಂಕ್‌ಗಳನ್ನು ವಶಪಡಿಸಿಕೊಂಡರು. ಲಾಹೋರನ್ನು ರಣರಂಗವಾಗಿಸಿದರು. ಶಾಸ್ತ್ರೀಜಿ ಅವರ ತಾಕತ್ತಿನ ಬಗ್ಗೆ ಕೀಳಂದಾಜು ಮಾಡಿದ್ದ ಜನರಲ್ ಅಯೂಬ್‌ಖಾನ್ ಬೆದರಿದ. ಏಕೆಂದರೆ ಚೀನಾ ಕೈಯಲ್ಲಿ ಸೋತಿದ್ದ ನಮ್ಮನ್ನು ಬಗ್ಗುಬಡಿಯಲು ಇದೇ ಸರಿಯಾದ ಸಮಯವೆಂದು ಭಾವಿಸಿದ್ದ ಅಯೂಬ್‌ಖಾನ್‌ಗೆ ಶಾಸ್ತ್ರೀಜಿ ತಕ್ಕ ಪ್ರತ್ಯುತ್ತರ ನೀಡಿದ್ದರು. ಈ ಮಧ್ಯೆ ಪಾಕಿಸ್ತಾನದ ಪರ ನಿಲುವು ತಳೆದಿದ್ದ ಚೀನಾ, ಯುದ್ಧದಲ್ಲಿ ಮೂಗು ತೂರಿಸುವ ಮಾತಾಡಿತು. ಆದರೂ ಬೆದರಿಕೆಗೆ ಬಗ್ಗಲಿಲ್ಲ ಭಾರತ. ಯುದ್ಧ ಮುಂದುವರೆಯಿತು. ಏಕೆಂದರೆ ಅಂದು ಪ್ರಧಾನಿಯಾಗಿದ್ದದ್ದು ನೆಹರು ಅಲ್ಲ. ಲಾಲ್ ಬಹಾದ್ದೂರ್ ಶಾಸ್ತ್ರಿ. ಹಾಗಾಗಿಯೇ ‘ದೇಶಕ್ಕಾಗಿ ಒಂದು ಹೊತ್ತು ಉಪವಾಸ ಮಾಡಿ’ ಎಂಬ ಕರೆಗೆ 50 ಕೋಟಿ ಭಾರತೀಯರು ಮನಃಪೂರ್ವಕವಾಗಿ ಓಗೊಟ್ಟಿದ್ದರು.

ಇತ್ತ ಪರಿಸ್ಥಿತಿ ತೀವ್ರ ಸ್ಥಿತಿಗೆ ತಲುಪಿತು. ಕೈ ಮೀರಿ ಹೋಗುವ ಲಕ್ಷಣ ಕಂಡುಬಂತು. ಮುಂದಾಗಬಹುದಾದ ಅಪಾಯವನ್ನರಿತ ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿತು. ಫಲವಾಗಿ, ಸೆಪ್ಟೆಂಬರ್ 21ರಂದು ಭಾರತ ಮತ್ತು ಪಾಕಿಸ್ತಾನಗಳ ನಡುವೆ ಕದನ ವಿರಾಮ ಒಪ್ಪಂದವೇರ್ಪಟ್ಟಿತು. ಅವುಗಳಲ್ಲಿ 152 ಟ್ಯಾಂಕ್‌ಗಳನ್ನು ನಮ್ಮ ಸೈನಿಕರು ನಾಶಪಡಿಸುವ ಬದಲು ವಶಪಡಿಸಿಕೊಂಡಿದ್ದರು.ಅದು ನಮ್ಮ ಬಹಾದ್ದೂರಿಕೆಯ ಪ್ರತೀಕವಾಗಿತ್ತು. ಆದರೆ ಪ್ರತಿಯಾಗಿ ಭಾರತ ಕಳೆದುಕೊಂಡಿದ್ದು ಕೇವಲ 128 ಟ್ಯಾಂಕುಗಳು.

ಇತ್ತ ಶಾಸ್ತ್ರಿಯವರ ಬಗ್ಗೆ ಹಗುರವಾಗಿ ಮಾತಾಡಿದ್ದವರು ಯುದ್ಧ ಮುಗಿದ ಮೇಲೆ ಮೌನವೇ ಅವರ ಪ್ರತಿಕ್ರಿಯೆಯಾಗಿತ್ತು. ಸೋವಿಯತ್ ರಷ್ಯಾ, ಅಮೇರಿಕ ಮತ್ತು ಚೀನಾಗಳು ಹುಬ್ಬೇರಿಸಿದವು. ರಣರಂಗದಲ್ಲಿ ಶಾಸ್ತ್ರಿಯವರನ್ನು ಮಣಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತವು. ಮಾತುಕತೆಗೆ ಕರೆದವು. ಈಗಿನ
ಕಜಕಿಸ್ತಾನದ ತಾಷ್ಕೆಂಟ್‌ನಲ್ಲಿ ಸಂಧಾನ ಮಾತುಕತೆ ಏರ್ಪಾಡಾಯಿತು.

ಅಲ್ಲಿ ನಡೆದದ್ದು ಮಾತ್ರ ಮಹಾನ್ ದುರಂತವೇ ಸರಿ!!

ರಷ್ಯಾ ಪ್ರಧಾನಿ ಅಲೆಕ್ಸಿ ಕೊಸಿಗಿನ್ ಮಧ್ಯಸ್ಥಿಕೆಯಲ್ಲಿ 1966, ಜನವರಿಯಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಅಯೂಬ್‌ಖಾನ್ ನಡುವೆ ಸಂಧಾನ ಪ್ರಾರಂಭವಾಯಿತು. ‘ಮುಂದೆಂದೂ ಬಲಪ್ರಯೋಗದ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯತ್ನಿಸುವುದಿಲ್ಲ’ ಎಂದು ಲಿಖಿತ ಭರವಸೆ ನೀಡಬೇಕೆಂದು ಶಾಸ್ತ್ರೀಜಿ ಪಟ್ಟು ಹಿಡಿದರು. ಅಯೂಬ್‌ಖಾನ್ ಒಪ್ಪದೇ ಹೋದಾಗ,”Then you will have to find another PM” (ಹಾಗಾದರೆ ನನ್ನ ನಂತರದ ಪ್ರಧಾನಿ ಬರುವವರೆಗೂ ಕಾಯಬೇಕಾಗುತ್ತದೆ!) ಎಂದು ಮುಖಕ್ಕೆ ಹೊಡೆದಂತೆ ಹೇಳಿದರು. ಶಾಸ್ತ್ರಿಯವರನ್ನು ಬಗ್ಗಿಸಲು ಸಾಧ್ಯವಿಲ್ಲ ಎಂದು ಅರಿತ ಅಯೂಬ್ ಖಾನ್ ತಾನೇ ಮಣಿದ. ಲಿಖಿತ ಭರವಸೆ ನೀಡಿದ. ಜನವರಿ 10ರಂದು ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಬಿತ್ತು.

ಆದರೆ ಸಹಿಯ ಶಾಯಿ ಆರುವ ಮೊದಲೇ, ಮಧ್ಯರಾತ್ರಿ 1 ಗಂಟೆ 32 ನಿಮಿಷಕ್ಕೆ ಭಾರತಕ್ಕೆ ಬರಸಿಡಿಲು ಬಂದೆರಗಿತು! ಶಾಸ್ತ್ರೀಜಿ ಅನುಮಾನಾಸ್ಪದವಾಗಿ, ‘ಹೃದಯಾಘಾತ’ಕ್ಕೊಳಗಾಗಿದ್ದರು. ಗಾಂಧೀಜಿ ಕೊಲೆಯಾದ ನಂತರ ಮೊದಲಬಾರಿಗೆ ಇಡೀ ದೇಶವೇ ಕಂಬನಿಯ ಕೋಡಿಯಲ್ಲಿ ತೇಲಿ ಹೋಯಿತು. ಕೇವಲ 17 ತಿಂಗಳು ಪ್ರಧಾನಿಯಾಗಿದ್ದ ಶಾಸ್ತ್ರೀಜಿ, 17 ವರ್ಷಗಳ ಕಾಲ ದೇಶವನ್ನಾಳಿದ ನೆಹರು ಅವರನ್ನೇ ಮೀರಿಸಿದ್ದರು. ಅದು ಕೆಲವರ ಕಣ್ಣು ಕೆಂಪಾಗಿಸಿತ್ತು. ಕಾಂಗ್ರೆಸ್ಸಿಗರ ಹೊಟ್ಟೆಯಲ್ಲೇ ಕಿಚ್ಚು ಹೊತ್ತಿಕೊಂಡಿತ್ತು. ಹಾಗಾಗಿ ಶಾಸ್ತ್ರಿಯವರ ದುರಂತಮಯ ಅಧ್ಯಾಯ ಸಾವಿನ ನಂತರವೂ
ಮುಂದುವರಿಯಿತು.ನೀಲಿಗಟ್ಟಿದ್ದ ದೇಹ ಭಾರತಕ್ಕೆ ಬಂತು!

ಆದರೆ ಶವ ಪರೀಕ್ಷೆ ನಡೆಯಲಿಲ್ಲಕೆಲವು ಕೃತಘ್ನ ಭಾರತೀಯರೇ ಶಾಸ್ತ್ರಿಯವರನ್ನು ಇತಿಹಾಸದ ಕಸದ ತೊಟ್ಟಿಗೆ ದೂಡಿ ಕೈ ತೊಳೆದುಕೊಳ್ಳಲು ವ್ಯವಸ್ಥಿತ ಪಿತೂರಿ ನಡೆಸಿದ್ದರು. ಗಾಂಧೀಜಿ ಮತ್ತು ನೆಹರು ಅವರ ಅಂತ್ಯ ಸಂಸ್ಕಾರ ನಡೆದ ಸ್ಥಳದಲ್ಲಿ ಶಾಸ್ತ್ರಿಯವರ ಅಂತ್ಯ ಸಂಸ್ಕಾರ ನಡೆಸಲು ಅಡ್ಡಗಾಲು ಹಾಕಿ, ದೇಹವನ್ನು ಅಲಹಾಬಾದ್‌ಗೆ ಕೊಂಡೊಯ್ಯಲು ಹವಣಿಸಿದರು. ಮೊದಲೇ ನೊಂದಿದ್ದ ಪತ್ನಿ ಲಲಿತಾಶಾಸ್ತ್ರಿ ದೇಶದ ಜನರ ಮುಂದೆ ಬಣ್ಣ ಬಯಲು ಮಾಡುವ ಬೆದರಿಕೆ ಹಾಕಿದಾಗ ದಿಲ್ಲಿಯಲ್ಲೇ ಅಂತ್ಯಸಂಸ್ಕಾರ ನಡೆಸಲು ಅವಕಾಶ ಮಾಡಿಕೊಡಲಾಯಿತು. ಅಷ್ಟೇ ಅಲ್ಲ, ಶಾಸ್ತ್ರೀಜಿಯವರ ಸಮಾಧಿ ಮೇಲೆ ಅವರದ್ದೇ ಆದ ‘ಜೈ ಜವಾನ್, ಜೈ ಕಿಸಾನ್‌’ ಘೋಷಣೆಯನ್ನು ಕೆತ್ತುವುದಕ್ಕೂ ಅಡ್ಡಿಪಡಿಸಿದರು. ಮತ್ತೆ ಲಲಿತಾಶಾಸ್ತ್ರಿ ಉಪವಾಸ ಸತ್ಯಾಗ್ರಹ ಮಾಡುವೆನೆಂದು
ಬೆದರಿಕೆಯೊಡ್ಡಬೇಕಾಗಿ ಬಂತು. ದುಃಖದಿಂದ ಹೊರಬರುವ ಮೊದಲೇ ಶಾಸ್ತ್ರೀಜಿ ಭಾವಚಿತ್ರ ಕಾಂಗ್ರೆಸ್ ಕಾರ್ಯಾಲಯದಿಂದಲೂ ಕಣ್ಮರೆಯಾಯಿತು. ಇಂದಿರಾಪ್ರೇರಿತ ಕಾಂಗ್ರೆಸ್ಸಿಗರ ಪಿತೂರಿ ಆ ಮಟ್ಟಿಗಿತ್ತು.

ಈ ಧೀಮಂತ ನಾಯಕನ ಸರಳ ಜೀವನಶೈಲಿ ನಮಗೆಲ್ಲಾ ಪ್ರೇರಣಾದಾಯಿ!!

ಯಥಾ ರಾಜಾ ತಥಾ ಪ್ರಜಾ ಎನ್ನುವ ಮಾತು ಒಂದಿದೆಯಲ್ಲಾ.. ಅಕ್ಷರಶ: ಸತ್ಯವದು. 1904, ಅಕ್ಟೋಬರ್ 2ರಂದು ಕಾಶಿ ಸಮೀಪದ ಮೊಘಲ್ ಸರಾಯ್‌ನಲ್ಲಿ ಬಡ ಶಿಕ್ಷಕರ ಮಗನಾಗಿ ಹುಟ್ಟಿದ ಲಾಲ್ ಬಹಾದ್ದೂರ್ ಶಾಸ್ತ್ರಿಯವರದ್ದು ಏಳುಬೀಳಿನ ಹಾದಿ. ನೆನಪಿರಲಿ. ಪ್ರಧಾನಿ ಸ್ಥಾನ ಪಿತ್ರಾರ್ಜಿತ ಆಸ್ತಿಯಂತೆ ಶಾಸ್ತ್ರೀಜೀಯವರಿಗೆ ಒಲಿಗು ಬಂದದ್ದಲ್ಲ. ಬಾಲ ಗಂಗಾಧರ ತಿಲಕ್ ಅವರಿಂದ ಪ್ರಭಾವಿತರಾಗಿದ್ದ ಅವರು 1921ರಲ್ಲಿ ಶಿಕ್ಷಣಕ್ಕೆ ಶರಣು ಹೊಡೆದು ಸ್ವಾತಂತ್ರ್ಯ ಚಳವಳಿಗೆ ಧುಮುಕಿದ್ದರು. ಆರು ವರ್ಷ ಜೈಲುವಾಸವನ್ನೂ ಅನುಭವಿಸಿದ್ದರು. ಆದರೆ ಸ್ವಾತಂತ್ರ್ಯಾನಂತರ ಕೇಂದ್ರ ಸಚಿವರಾದ ಶಾಸ್ತ್ರಿಯವರ ಏಳಿಗೆಯನ್ನು ನೆಹರು ಸಹಿಸದಾದರೆಂಬ ಸಂಗತಿ ಅಲ್ಲಗಳಯಲಾಗದ್ದು.ಅವರ ಅಸಹನೆ ಯಾವ ಮಟ್ಟಕ್ಕೆ ತಲುಪಿತೆಂದರೆ ಎಲ್ಲ ಖಾತೆಗಳನ್ನು ಕಿತ್ತುಕೊಂಡು ‘ಖಾತೆ ರಹಿತ’ ಮಂತ್ರಿಯಾಗಿಸಿ ಅವಮಾನವನ್ನೂ ಮಾಡಿದ್ದರು. ಎಲ್ಲಿ ಶಾಸ್ತ್ರಿಯವರು ಅಡ್ಡಗಾಲಾಗುತ್ತಾರೋ ಎಂಬ ಭಯದಿಂದ ‘ನೆಹರು ನಂತರ ಯಾರು?’ ಎಂಬ ಪ್ರಶ್ನೆಯನ್ನು ಸ್ವತಃ ಹುಟ್ಟು ಹಾಕಿ ತನ್ನ ಮಗಳು ಇಂದಿರಾ ಗಾಂಧಿಯವರನ್ನು ಉತ್ತರಾಧಿಕಾರಿಯಾಗಿ ಮಾಡಲು ಹವಣಿಸಿದರು. ಶಾಸ್ತ್ರಿಯವರ ನಿಗೂಢ ಮರಣದೊಂದಿಗೆ ನೆಹರು ಆಸೆ ಕೂಡ ಈಡೇರಿತ್ತು.ಇಂದಿರಾ ಪ್ರಧಾನಿಯಾದರು. ಭಾರತ ಮತ್ತೆ ನೆಹರು ಕುಟುಂಬಕ್ಕೆ ನೇಣು ಹಾಕಿಕೊಂಡಿತು. ಶಾಸ್ತ್ರೀಜಿ ಪಠ್ಯ ಪುಸ್ತಕಗಳ ಒಂದೆರಡು ಪ್ಯಾರಾಗಳಿಗೆ ಸೀಮಿತರಾದರು.

ಅವರ ಜೀವಶೈಲಿಯೇ ನಮಗೆಲ್ಲಾ ಪ್ರೇರಣೆ. ನುಡಿದಂತೆ ನಡೆದ ಮಹಾನ್ ನಾಯಕನೇ ಸರಿ. ಪಾಪಿಸ್ಥಾನ ಹಾಗೂ ಭಾರತದ ನಡುವೆ ಎರಡು ಘಂಟೆ ಯುದ್ಧ ಮುಂದುವರಿದಿದ್ದರೆ,ಭಾರತೀಯ ಸೇನೆ ಪಾಕಿಸ್ತಾನದ ಲಾಹೋರ್ ತನಕ ತನ್ನ ಅಧಿಪತ್ಯವನ್ನು ಸ್ಥಾಪಿಸುತ್ತಿತ್ತು. ಎಚ್ಚೆತ್ತ ಪಾಕಿಸ್ತಾನ ಅಮೇರಿಕದ ಮುಂದೆ ಮಂಡಿಯೂರಿ ಕೂತಿತು.ಯುದ್ಧವನ್ನು ನಿಲ್ಲಿಸಲು ಭಾರತಕ್ಕೆ ಸೂಚಿಸುವಂತೇ ಗೋಗರೆಯಿತು.

ಆಗ ಅಮೇರಿಕದ ಗೋಧಿ ಭಾರತಕ್ಕೆ ಆಮದಾಗುತ್ತಿತ್ತು.ಆ ಗೋಧಿಯ ಗುಣಮಟ್ಟ ಹೇಗಿತ್ತೆಂದರೆ,ಪ್ರಾಣಿಗಳು ತಿನ್ನಲೂ ಅಸಾಧ್ಯವಾದದ್ದು.ಈ ಆಮದು ಒಪ್ಪಂದಕ್ಕೆ ಸಹಿ ಹಾಕಿದ್ದು ಜವಾಹರಲಾಲ್ ನೆಹರೂ.ಪಾಕಿಸ್ತಾನದ ಜೊತೆಗಿನ ಯುದ್ಧವನ್ನು ನಿಲ್ಲಿಸದಿದ್ದರೆ,ಗೋಧಿಯ ರಫ್ತನ್ನು ನಿಲ್ಲಿಸುತ್ತೇವೆಂಬ ಸೂಚನೆ ಅಮೇರಿಕದಿಂದ ಶಾಸ್ತ್ರೀಜಿಯವರಿಗೆ ಬಂತು.ಶಾಸ್ತ್ರೀಜಿಯವರಿಂದ ಬಂದ ಉತ್ತರ, “ನಿಲ್ಲಿಸಿ ತೊಂದರೆಯಿಲ್ಲ”!!

“ಹೊಟ್ಟೆಗೆ ಆಹಾರವಿಲ್ಲದಿದ್ದರೆ ಭಾರತೀಯರು ಸಾಯುತ್ತಾರೆ”ಅಮೇರಿಕದ ಕುಚೋದ್ಯ ಪ್ರತಿಕ್ರಿಯೆ..!!

“ದೊಡ್ಡು ಕೊಟ್ಟು ನಿಮ್ಮ ಕಳಪೆಗುಣಮಟ್ಟದ ಗೋಧಿಯನ್ನು ತಿಂದು ಆರೋಗ್ಯ ಕೆಡಿಸಿಕೊಳ್ಳುವುದಕ್ಕಿಂತ, ಹಸಿವಿನಿಂದ ಸಾಯುವುದೇ ವಾಸಿ.ಇಂದಿನಿಂದ ನಿಮ್ಮ ಗೋಧಿ ನಮಗೆ ಬೇಕಿಲ್ಲ” ಶಾಸ್ತ್ರೀಜಿಯವರ ತೀಕ್ಷ್ಣ ಪ್ರತಿಕ್ರಿಯೆಯಾಗಿತ್ತಿದು.

ದೆಹಲಿಯ ರಾಮಲೀಲಾ ಮೈದಾನದಲ್ಲಿ ದೇಶದ ಜನತೆಯನ್ನುದ್ದೇಶಿಸಿ ಆಗ ಶಾಸ್ತ್ರೀಜಿ ಮಾತನಾಡುತ್ತಾರೆ..

“ಪಾಕಿಸ್ತಾನದೊಂದಿಗೆ ಯುದ್ಧ ನಡೆಯುತ್ತಿದೆ.ಅಮೇರಿಕದಿಂದ ಗೋಧಿ ಆಮದಾಗುವುದು ನಿಂತಿದೆ.ದೇಶದ ಜನ ಸಹಕರಿಸಬೇಕಿದೆ.ಒಂದು..ನೀವು ನೇರವಾಗಿ ಸೇನೆಗೆ ಧನ ಅಥವಾ ಆಹಾರದ ಸಹಾಯವನ್ನು ಮಾಡಬಹುದು.ಎರಡು..ಪ್ರತಿ ಸೋಮವಾರ ನೀವು ಉಪವಾಸವೃತವನ್ನು ಆಚರಿಸಬಹುದು.ಇದರಿಂದ ದೇಶದ ಹಣಕಾಸಿನ ವ್ಯವಹಾರ ಸರಾಗವಾಗಿ ನಡೆಯಬಹುದು.ಇಲ್ಲದಿದ್ದರೆ ದೇಶ ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಗಬಹುದು”

ಶಾಸ್ತ್ರೀಜಿಯವರ ಈ ಕರೆಗೆ ಇಡೀ ದೇಶ ಓಗೊಟ್ಟಿತು.ಹಲವರು ಸೇನೆಗೆ ಸಹಾಯ ಮಾಡಿದರು.ಲಕ್ಷಾಂತರ ಜನ ಸೋಮವಾರದ ಉಪವಾಸವನ್ನು ಆರಂಭಿಸಿದರು.ಸ್ವತಃ ಶಾಸ್ತ್ರೀಜಿಯವರೂ ಸೋಮವಾರದಂದು ಉಪವಾಸವೃತವನ್ನು ಕೈಗೊಂಡರು.

ಶಾಸ್ತ್ರೀಜಿಯವರ ಪತ್ನಿ,ಲಲಿತಾದೇವಿಯವರು ಅನಾರೋಗ್ಯಪೀಡಿತರಾಗಿದ್ದರು.ಮನೆಗೆಲಸಕ್ಕೆಂದು ಕೆಲಸದವಳೊಬ್ಬಳು ಬರುತ್ತಿದ್ದಳು.ಶಾಸ್ತ್ರೀಜಿಯವರು ಮಹಿಳೆಗೆ ನಾಳೆಯಿಂದ ಕೆಲಸಕ್ಕೆ ಬರಬೇಡ ಎಂದರು.ಆಕೆ”ಅಲ್ಲ,ನಿಮ್ಮ ಬಟ್ಟೆಯನ್ನು ತೊಳೆಯುವುದು,ಮನೆಯನ್ನು ಸ್ವಚ್ಛಗೊಳಿಸುವುದು,ನಿಮ್ಮ ಪತ್ನಿಯ ಆರೈಕೆಯನ್ನು ಯಾರು ಮಾಡಿಕೊಡುತ್ತಾರೆ ಸ್ವಾಮೀ”ಎಂದು ಕೇಳಿದಳು.

“ದೇಶಕ್ಕಾಗಿ ಇದು ಅನಿವಾರ್ಯವಮ್ಮಾ.ನಿನಗೆ ಕೊಡುವ ಸಂಬಳದ ಹಣವಾದರೂ ಉಳಿದೀತು.ದೇಶದ ಒಳಿತಿಗಾದೀತು” ಎಂದು ಹೇಳಿದರು.ನಂತರ ಮನೆಯ ಪ್ರತಿಯೊಂದು ಕೆಲಸವನ್ನೂ ಶಾಸ್ತ್ರೀಜಿಯವರೇ ನಿಭಾಯಿಸುತ್ತಿದ್ದರು.

ಒಂದು ದಿನ ಶಾಸ್ತ್ರೀಜಿಯವರ ಪತ್ನಿ,ಹರಿದುಹೋಗಿರುವ ಅವರ ಧೋತಿಯನ್ನು ನೋಡಿ “ಒಂದು ಹೊಸ ಧೋತಿಯನ್ನಾದರೂ ತೆಗೆದುಕೊಳ್ಳಬಾರದೇ?”ಎಂದು ಕೇಳುತ್ತಾರೆ.”ಅದನ್ನು ಕೊಳ್ಳಲು ಹಣವೆಲ್ಲಿದೆ..?ಬರುವ ಸಂಬಳವನ್ನೂ ಬಿಟ್ಟಾಗಿದೆ.ಮನೆಯ ಖರ್ಚುಗಳನ್ನು ಕಡಿಮೆ ಮಾಡು” ಎಂದಿದ್ದರು.

ತನ್ನ ಮಗನಿಗೆ ಚಿಕ್ಕಂದಿನಿಂದಲೇ ದೇಶಪ್ರೇಮದ ಚಿಂತನೆಯನ್ನೂ ಕೊಟ್ಟು ಬೆಳೆಸಿದ್ದರು ಶಾಸ್ತ್ರೀಜಿ. ಅವರ ಶ್ರೇಷ್ಠ ವ್ಯಕ್ತಿತ್ವದ ಕುರಿತಾಗಿ ಅವರ ಮಗ ಒಂದು ಪುಸ್ತಕವನ್ನೇ ಬರೆದಿದ್ದಾರೆ, “Lal Bahudur Shashtri: Past Forward” . ಸುನಿಲ್ ಶಾಸ್ತ್ರೀ ಬರೆದ ಈ ಪುಸ್ತಕದಲ್ಲಿ ತನ್ನ ತಂದೆಯ ಕುರಿತಾಗಿ ಉಲ್ಲೇಖ ಮಾಡುತ್ತಾ ಹೇಳುತ್ತಾರೆ,

ನನ್ನ ತಂದೆ ನನಗೆ ಯಾವಾಗಲೂ ಹೇಳುತ್ತಿದ್ದ‌ ಮಾತಿದು. ಈ ಮಾತನ್ನು 1965ರಲ್ಲಿ ಕಂಪು ಕೋಟೆಯಲ್ಲೂ ನುಡಿದಿದ್ದು ಇನ್ನೂ ರೋಮಾಂಚನಕಾರಿಯಾದ ಅನುಭವ ನನಗಾಗಿತ್ತು. ಅವರು ಹೇಳಿದ್ದಿಷ್ಟೇ,’ನಾವು ಸದಾ ಬದುಕಿರುತ್ತೇವೋ ಇಲ್ಲವೋ ಅರಿಯದು. ಆದರೆ ನಮ್ಮ ದೇಶ ಮಾತ್ರ ಚಿರಾಯು. ಇವತ್ತು ನಮ್ಮ ರಾಷ್ಟ್ರಧ್ವಜ ದೇಶದ ಸಾಮರಸ್ಯದ ಸಂಕೇತವಾಗಿದೆ ನಿಜ, ಆದರೆ ನಿಜವಾಗಿಯೂ ಭಾರತೀಯರಲ್ಲಿ ಒಂದು ಕೊರತೆಯಿದೆಯೆಂದೆನಿಸುತ್ತದೆ, ರಾಷ್ಟ್ರೀಯತೆಯ ಸ್ವಭಾವ ಹಾಗೂ ಮಾತೃಭೂಮಿ ಮೇಲಿನ ಪ್ರೇಮ”. ಈ ಮಾತುಗಳ ಪ್ರಭಾವದಿಂದಲೇ ಇರಬಹುದು. ನಾನೂ ಒಂದು ಹಾಡನ್ನು ಬರೆದೆ. “ಮಿಲ್ ಜುಲ್ಕರ್ ಸಬ್ ಆವೋ, ಭಾರತ್ ದೇಶ್ ಬಚಾವೋ” ( ಎಲ್ಲರೂ ಒಗ್ಗಟ್ಟಾಗಿ ಸೇರಲಿ ದೇಶವನ್ನು ರಕ್ಷಿಸೋಣ).”

ಲಾಲ್ ಬಹದ್ದೂರ್ ಶಾಸ್ತ್ರೀಜಿ ಯವರು ದೇಶದ ಪ್ರಧಾನಿಯಾದ ‌ಸಂದರ್ಭವಾಗಿತ್ತದು.ಅವರ‌ ಹಿರಿಯ‌ ಮಗ ಹರಿಕೃಷ್ಣ ಆಗ ಅಶೋಕ ಲೈಲ್ಯಾಂಡ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ಶಾಸ್ತ್ರೀಜಿಯವರು ಪ್ರಧಾನಮಂತ್ರಿಯಾದೊಡನೆ ಕಂಪೆನಿಯು ಹರಿಕೃಷ್ಣನಿಗೆ ಸೀನಿಯರ್ ಜನರಲ್ ಮ್ಯಾನೇಜರ್ ಆಗಿ ಬಡ್ತಿ ನೀಡಿತು.

ಒಂದು ದಿನ ಬೆಳಗ್ಗೆ ತಿಂಡಿ ತಿನ್ನುವಾಗ ಮಗ ತಂದೆಯ ಬಳಿ ಈ ಸಂಗತಿ ಹೇಳಿದ. ಇದನ್ನು ಕೇಳಿದ ಕೂಡಲೇ ಶಾಸ್ತ್ರೀಜಿ ಗಂಭೀರವಾದರು. “ಬಡ್ತಿ ನೀಡಿದ್ದು ನಿನ್ನ ಕೆಲಸ ನೋಡಿ ಅಲ್ಲ, ಬದಲಾಗಿ ನನ್ನ ಪದವಿ ನೋಡಿ. ಮುಂದೆ ಎಂದಾದರೂ ಆ ಕಂಪೆನಿಯವರು ಯಾವುದಾದರೂ ಕೆಲಸಕ್ಕೆ ನನ್ನ ಬಳಿ ಬಂದರೆನ್ನು. ಆಗ ನಾನು ಅವರಿಗೆ ನ್ಯಾಯಸಮ್ಮತವಾಗಿ ಕೆಲಸ ಮಾಡಿಕೊಟ್ಟರೂ ಜವರೇನಂದುಕೊಂಡಾರು? ನಿನ್ನ ಸಹೋದ್ಯೋಗಿಗಳು ಈ ಕುರಿತು ಏನು ಭಾವಿಸಿಯಾರು?” ಎಂದರು. ಹರಿಕೃಷ್ಣ ಏನೂ ಮಾತಾಡಲಿಲ್ಲ. ಬಡ್ತಿ ದೊರೆತ ಸಂತಸ ಇಳಿದು ಹೋಗಿತ್ತು.

“ಹರಿಕೃಷ್ಣ, ನೀನು ಆ ಕಂಪೆನಿಗೆ ರಾಜೀನಾಮೆ ಕೊಡು. ನಾನು ಪ್ರಧಾನಿ ಆಗಿರುವವರೆಗೂ ಅಲ್ಲಿ ಕೆಲಸ ಮಾಡಬೇಡ” ಎಂದು ಶಾಸ್ತ್ರೀಜಿ ಮಗನಿಗೆ ಹೇಳಿದರು. ಹರಿಕೃಷ್ಣನೂ ತಂದೆಯ ಮಾತನ್ನು ಪಾಲಿಸಿದ.

ವ್ಹಾ.. ಅದೆಂತಹ ಪ್ರೇರಣೆ ಸಿಕ್ಕಿರಬಹುದು ಅವರಿಗೆ. ಶಾಸ್ತ್ರೀಜಿ “ಜೈ ಜವಾನ್ ಜೈ ಕಿಸಾನ್” ಘೋಷಣೆ ಸಾರುವ ಮುಖಾಂತರ ರಾಷ್ಟ್ರದ‌ ಆಧಾರಗಳ ರಕ್ಷಣೆಗೆ
ಮುಂದಾಗಿ ಬಹು ದೊಡ್ಡ ಆಂದೋಲನವನ್ನೇ ಕೈಗೆತ್ತಿದರು.

ಆದರೆ ನನಗೆ ಒಂದೇ ಒಂದು ಬೇಜಾರು. ಅವರ ಜನುಮದಿವಸದಂದು ಕನಿಷ್ಠಪಕ್ಷ‌‌ ನೆನಪಿಸುವ ಕಾರ್ಯ‌ ಯಾವ ಶಾಲಾ ಕಾಲೇಜುಗಳಲ್ಲಾಗುತ್ತಿಲ್ಲ. ಮಹಾತ್ಮನ ಪ್ರಭಾವದಿಂದಾಗಿ ದೇಶ ಕಂಡ‌ ಅಪ್ರತಿಮ ನಾಯಕನನ್ನು ಇದುವರೆಗೆ ಕಡೆಗಣಿಸಲಾಗಿದೆ. ಇನ್ನಾದರೂ ಅವರು ದೇಶಕ್ಕೆ ಸಲ್ಲಿಸಿದ ಕಾರ್ಯಕ್ಕಾಗಿ ಸದಾ ಸ್ಮರಿಸಿ ಗೌರವವನ್ನು ಸಲ್ಲಿಸಿ ಕೃತಜ್ಞರಾಗಿರೋಣ. ಅವರಂತಹ ನಾಯಕರು ನಮ್ಮ ದೇಶವನ್ನು ಮುನ್ನಡೆಸಲೂ ಇನ್ನು ಮುಂದೆಯೂ ತಾಯಿ ಭಾರತಿ ನಮಗೆ ನೀಡಲಿ ಎಂಬುದಾಗಿಯೂ‌ ಆಶಿಸೋಣ.

ಹಾಂ.. ಆ ಧೀಮಂತ, ಪ್ರಾಮಾಣಿಕ, ದಕ್ಷ ನಾಯಕನಿಗೆ ನಮ್ಮ ಪರವಾಗಿ ಒಂದು ಸಲಾಂ..!!!

– ವಸಿಷ್ಠ

Tags

Related Articles

Close