ಚುನಾವಣೆ ಮುಗಿದರೂ ಯಾವುದೇ ಸರಕಾರ ಆಡಳಿತ ನಡೆಸಲಾಗದ ಸ್ಥಿತಿ ರಾಜ್ಯ ರಾಜಕಾರಣಕ್ಕೆ ಬಂದಿದೆ ಎಂದರೆ , ರಾಜ್ಯದ ಜನರ ಪರಿಸ್ಥಿತಿ ಏನೆಂಬೂದೇ ಮುಂದಿನ ಪ್ರಶ್ನೆ. ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಈಗಾಗಲೇ ರಾಜ್ಯಪಾಲರ ಸಮ್ಮತಿಯಂತೇ ಯಡಿಯೂರಪ್ಪ ನವರನ್ನು ಮುಖ್ಯಮಂತ್ರಿ ಹುದ್ದೆಗೆ ಏರಿಸಿದ್ದು, ಇತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ತಾವೇ ಸರಕಾರ ರಚಿಸುವುದಾಗಿ ಪಟ್ಟು ಹಿಡಿದಿದೆ. ಈಗಾಗಲೇ ನಡೆದ ಎಲ್ಲಾ ಪ್ರಕ್ರಿಯೆಯಲ್ಲೂ ಬಿಜೆಪಿಯೇ ಗೆಲುವು ಸಾಧಿಸಿದ್ದು, ಇದೀಗ ಇಂದು ಕೊನೆಯ ಹಂತಕ್ಕೆ ಬಂದು ತಲುಪಿದೆ. ಇಂದು ಸಂಜೆ ನಾಲ್ಕು ಗಂಟೆಯೊಳಗೆ ಬಿಜೆಪಿ ಬಹುಮತ ಸಾಬೀತು ಪಡಿಸಿದ್ದೇ ಆದಲ್ಲಿ ಯಡಿಯೂರಪ್ಪ ನವರು ಮುಖ್ಯಮಂತ್ರಿ ಆಗಿ ಮುಂದುವರಿಯುತ್ತಾರೆ. ಆದ್ದರಿಂದ ಬಿಜೆಪಿಗೆ ಇದು ಅಗ್ನಿಪರೀಕ್ಷೆ ಎಂದರೆ ತಪ್ಪಾಗದು..!
ಈಗಾಗಲೇ ಬಿಜೆಪಿಯಿಂದ ಆಪರೇಷನ್ ಕಮಲ ನಡೆಯುವ ವಿಚಾರ ಕೇಳಿಯೇ ಬೆಚ್ಚಿಬಿದ್ದಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಬಳಿ ಇರುವ ಶಾಸಕರನ್ನು ಕಾಪಾಡಿಕೊಳ್ಳಲು ಹರಸಾಹಸ ಪಡುವಂತಾಗಿತ್ತು. ಅದೇ ರೀತಿ ಇದೀಗ ಸದನದಲ್ಲಿ ಕೋರ್ಟ್ ಆದೇಶದಂತೆ ಒಟ್ಟು ೨೨೨ ಶಾಸಕರೂ ಹಾಜರಿರಬೇಕು. ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ತಮ್ಮ ಹಿಡಿತದಲ್ಲಿ ಇರುವ ಶಾಸಕರನ್ನು ಇದೀಗ ಹೈದರಾಬಾದ್ ಹೊಟೇಲ್ ನಿಂದ ವಿಧಾನಸೌಧಕ್ಕೆ ಕರೆದುಕೊಂಡು ಬಂದಿದ್ದು, ಕಲಾಪ ಆರಂಭವಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ.
ಕಲಾಪಕ್ಕೆ ಕೈ ಶಾಸಕರ ಗೈರು..!
ಒಂದೆಡೆ ಡಿಕೆಶಿ ನೇತ್ರತ್ವದ ತಂಡ ತಮ್ಮ ಶಾಸಕರನ್ನು ಕಾಪಾಡಿಕೊಂಡು ಇದೀಗ ವಿಧಾನಸೌಧದೊಳಗೆ ಕರೆದುಕೊಂಡು ಬಂದಿದ್ದು, ಕಾಂಗ್ರೆಸ್ ಪಾಳಯದಲ್ಲಿರುವ ಒಟ್ಟು ೭೮ ಶಾಸಕರ ಪೈಕಿ ಇದೀಗ ಕಲಾಪಕ್ಕೆ ಹಾಜರಿರುವ ವೇಳೆ ಕೇವಲ ೭೬ ಶಾಸಕರಿದ್ದು, ಇಬ್ಬರು ಶಾಸಕರು ನಾಪತ್ತೆಯಾಗಿದ್ದಾರೆ. ಆದ್ದರಿಂದ ಬಹುಮತ ಸಾಧಿಸಲು ೧೧೦ ಸ್ಥಾನಗಳು ಬಿಜೆಪಿಗೆ ಬೇಕಾಗಿದ್ದು, ಈಗಾಗಲೇ ೧೦೪ ಸ್ಥಾನಗಳು ಬಿಜೆಪಿ ಪಡೆದಿದ್ದು ಇನ್ನು ಕೇವಲ ೬ ಶಾಸಕರ ಬೆಂಬಲದ ಅವಶ್ಯಕತೆ ಇದೆ. ಆದ್ದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಶಾಸಕರನ್ನು ಯಾವುದೇ ಕಾರಣಕ್ಕೂ ಬಿಜೆಪಿಗೆ ಬೆಂಬಲ ನೀಡದಂತೆ ಆದೇಶಿಸಿದ್ದು, ಭಾರೀ ಕುತೂಹಲ ಕೆರಳಿಸಿದೆ. ಇತ್ತ ಇದೀಗ ಎಲ್ಲಾ ಶಾಸಕರು ಕಲಾಪಕ್ಕೆ ಹಾಜರಿರಬೇಕೆಂದು ಆದೇಶಿಸಿದ್ದರೂ ಕಾಂಗ್ರೆಸ್ ನ ಪ್ರತಾಪ್ ಗೌಡ ಮತ್ತು ಆನಂದ್ ಸಿಂಗ್ ಅವರು ಗೈರಾಗಿದ್ದಾರೆ. ಆದ್ದರಿಂದಲೇ ಭಾರೀ ಕುತೂಹಲ ಕೆರಳಿಸಿರುವ ಇಂದಿನ ಕಲಾಪ , ವಿಶ್ವಾಸ ಮತಯಾಚನೆಯಲ್ಲಿ ಯಾರಿಗೆ ಬೆಂಬಲ ಒದಗುತ್ತದೆ ಎಂಬುದು ಕಾದು ನೋಡಬೇಕಾಗಿದೆ..!
ಲಿಂಗಾಯತ ಶಾಸಕರ ನಡೆ ಯಡಿಯೂರಪ್ಪ ನವರ ಭವಿಷ್ಯ..!
ಈಗಾಗಲೇ ಲಿಂಗಾಯತ ಮಠಾಧೀಶರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಯಡಿಯೂರಪ್ಪ ನವರಿಗೆ ಬೆಂಬಲ ಸೂಚಿಸಿದ್ದು, ತಮ್ಮೆಲ್ಲಾ ಶಾಸಕರು ಬಿಜೆಪಿ ಪರವಾಗಿ ಇದ್ದಾರೆ ಎಂದು ಹೇಳಿಕೊಂಡಿದ್ದು, ಕಾಂಗ್ರೆಸ್ ಗೆ ಭಾರೀ ಆತಂಕ ಎದುರಾಗಿದೆ. ಇದೀಗ ಕಾಂಗ್ರೆಸ್ ಶಾಸಕರಾಗಿರುವ ಆನಂದ್ ಸಿಂಗ್ ಮತ್ತು ಪ್ರತಾಪ್ ಗೌಡ ಇಬ್ಬರೂ ಲಿಂಗಾಯತ ಸಮಾಜಕ್ಕೆ ಸೇರಿದವರಾಗಿರುವುದರಿಂದ ಇನ್ನೂ ಉಳಿದ ಇಪ್ಪತ್ತು ಲಿಂಗಾಯತ ಶಾಸಕರು ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳಯದಲ್ಲಿಯೇ ಇದ್ದಾರೆ. ಆದರೆ ಇಂದು ನಡೆಯುವ ಮತದಾನದ ವೇಳೆ ಈ ಶಾಸಕರು ಬಿಜೆಪಿಗೆ ಬೆಂಬಲ ನೀಡಿದ್ದೇ ಆದಲ್ಲಿ ಬಿಜೆಪಿ ಬಹುಮತ ಸಾಬೀತುಪಡಿಸಿ ಸರಕಾರ ರಚನೆ ಮಾಡುವುದು ಖಚಿತ..!
–ಅರ್ಜುನ್