ಕರ್ನಾಟಕ ಕಾಂಗ್ರೆಸ್ ಪಕ್ಷದ ಚಾಣಕ್ಯ ಎಂದೇ ಗುರುತಿಸಿಕೊಂಡಿರುವ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರ ತಾಕತ್ತೂ ಈ ಬಾರಿ ಮುರಿಯುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ. ಕಳೆದ ಬಾರಿ ಡಿಕೆಶಿ ಸಾಮ್ರಾಜ್ಯಕ್ಕೆ ದಾಳಿ ಮಾಡಿದ್ದ ಐಟಿ ಇಲಾಖೆ ಇದೀಗ ಮತ್ತೆ ಡಿಕೆ ಶಿವಕುಮಾರ್ಗೆ ಶಾಕ್ ನೀಡಿದೆ. ಈ ಬಾರಿ ಐಟಿ ಇಲಾಖೆ ನೀಡಿದ ಶಾಕ್ಗೆ ಡಿಕೆ ಶಿವಕುಮಾರ್ ಅವರ ಸಾಮ್ರಾಜ್ಯ ಮತ್ತೆ ಅಧಃಪತನವಾಗುವ ಸಾಧ್ಯತೆಗಳು ಗೋಚರಿಸುತ್ತಿದೆ.
ಇತ್ತೀಚೆಗೆ ನೂತನ ಸರ್ಕಾರದಲ್ಲಿ ಫೈಟ್ ಮಾಡಿ ಖಾತೆ ಗಿಟ್ಟಿಸಿಕೊಂಡಿದ್ದ ಡಿಕೆ ಶಿವಕುಮಾರ್ ಅವರು ತಮ್ಮ ಸಚಿವ ಖಾತೆಯ ಜೊತೆ ಜೊತೆಗೆ ಶಾಸಕ ಸ್ಥಾನವನ್ನೂ ಕಳೆದುಕೊಂಡು ಜೈಲುಪಾಲಾಗುವ ಸಾಧ್ಯತೆಗಳೂ ಕಾಣುತ್ತಿದೆ. ಈ ಬಾರಿ ಅತಂತ್ರ ವಿಧಾನ ಸಭೆ ಸೃಷ್ಟಿಯಾದ ಸಂದರ್ಭದಲ್ಲಿ ಮುಂದೆ ಬಂದು ಸರ್ಕಾರ ನಡೆಸಲು ಮುತುವರ್ಜಿ ವಹಿಸಿದ್ದ ಡಿಕೆ ಶಿವಕುಮಾರ್ ನಂತರದ ದಿನಗಳಲ್ಲಿ ಸ್ವತಃ ಕಾಂಗ್ರೆಸ್ ನಾಯಕರಿಗೇ ಬೇಡವಾಗಿದ್ದರು. ತಾನು ನೀಡಿದ ಖಾತೆಗಳನ್ನು ನೀಡಿಲ್ಲ ಹಾಗೂ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಿಲ್ಲ ಎಂದು ಆರೋಪಿಸಿ ಪಕ್ಷದ ವಿರುದ್ಧವೇ ಮುನಿಸಿಕೊಂಡಿದ್ದರು.
ಇದೀಗ ಮತ್ತೆ ಐಟಿ ಇಲಾಖೆ ಡಿಕೆ ಶಿವಕುಮಾರ್ ಅವರ ಮೇಲೆ ಕೇಸ್ ದಾಖಲಿಸಿದ್ದು ಡಿಕೆಶಿವಕುಮಾರ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಹಿಂದೆ ಡಿಕೆ ಶಿವಕುಮಾರ್ ಅವರ ವಿರುದ್ಧ 3 ಕೇಸ್ ದಾಖಲಿಸಿದ್ದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಇದೀಗ ಮತ್ತೊಂದು ಕೇಸ್ ಜಡಿದಿದ್ದಾರೆ. ಐಟಿ ಕಾಯ್ದೆ ಸೆಕ್ಷನ್ 277,278 ಹಾಗೂ ಐಪಿಸಿ ಸೆಕ್ಷನ್ 193,199,120(ಬಿ) ಅಡಿ ಡಿಕೆ ಶಿವಕುಮಾರ್ ಅವರ ವಿರುದ್ಧ ದೂರು ದಾಖಲಾಗಿದೆ.
ಆಗಸ್ಟ್ 3ರಂದು ಡಿಕೆಶಿ ಸಹಿತ ಎಲ್ಲಾ ಆರೋಪಿಗಳಿಗೂ ಐಟಿ ಇಲಾಖೆ ಸಮನ್ಸ್ ನೀಡಿದೆ. ಸಾಕ್ಷ್ಯ ನಾಶದ ವಿಚಾರ ಹಾಗೂ ನೋಟು ಅಪನಗದೀಕರಣದ ವೇಳೆ ನಡೆಸಿದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ನಡೆದಿದ್ದ ಎಲ್ಲಾ ಪ್ರಕರಣಗಳು ಮೇಲಿಂದ ಮೇಲೆ ಡಿಕೆಶಿ ಮೇಲೆ ದಾಖಲಾಗಿದ್ದು ಈ ಬಗ್ಗೆ ಅಪರಾಧ ನ್ಯಾಯಾಲಯವು ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದೆ.
ಈ ಹಿಂದೆ ದಾಖಲಾಗಿದ್ದ ಅಷ್ಟೂ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಅವರು ಜಾಮೀನು ಪಡೆದುಕೊಂಡಿದ್ದರು. ಆದರೆ ಈ ಬಾರಿಯ ದೂರಿನಲ್ಲಿ ಡಿಕೆ ಶಿವಕುಮಾರ್ ಅವರ ವಿರುದ್ಧ ಪ್ರಬಲವಾದ ಪ್ರಯೋಗವಿದ್ದು ಜಾಮೀನು ದೊರಕುವುದು ಕಷ್ಟವಾಗಿದೆ. ಹೀಗಾಗಿ ಡಿಕೆಶಿ ಬಂಧನ ಖಚಿತ ಎಂದು ಹೇಳಲಾಗಿದೆ.
-ಏಕಲವ್ಯ