ಒಂದು ಕಡೆ ಸಾಲ ಮನ್ನಾಕ್ಕಾಗಿ ವಿರೋಧ ಪಕ್ಷ ಭಾರತೀಯ ಜನತಾ ಪಕ್ಷ ಹೋರಾಟ ನಡೆಸುತ್ತಿದೆ. ಮತ್ತೊಂದು ಕಡೆ ಸಾಲಮನ್ನಾ ಮಾಡಲು ಮಿತ್ರಪಕ್ಷ ಕಾಂಗ್ರೆಸ್ ನಾಯಕರ ಆಕ್ಷೇಪ. ಇವೆಲ್ಲದರ ಮಧ್ಯೆ ಸರ್ಕಾರದ ಖಜಾನೆಯು ಖಾಲಿ ಖಾಲಿ. ತನ್ನ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ರಾಜ್ಯದ ರೈತರ ಸಂಪೂರ್ಣ ಸಾಲಮನ್ನಾದ ಭರವಸೆಯ ಭಾರ ಇನ್ನೊಂದು ಕಡೆ.ಈ ಎಲ್ಲಾ ಸಂಕಷ್ಟದ ಮಧ್ಯೆ ಸಿಲುಕಿಕೊಂಡು ವಿಲ ವಿಲ ಒದ್ದಾಡುತ್ತಿದ್ದಾರೆ ನಮ್ಮ ಕರ್ನಾಟಕದ ಮುಖ್ಯಮಂತ್ರಿ ಕುಮಾರ ಸ್ವಾಮಿ.
ಮೋದಿ ಮುಂದೆ ರಚ್ಚೆ ಹಿಡಿದ ಕುಮಾರಸ್ವಾಮಿ..!
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ನೀತಿ ಆಯೋಗದ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಧಾನ ಮಂತ್ರಿ ನರೇಂದ್ರ ಬಳಿ ತನ್ನ ಸಾಲ ಮನ್ನಾ ಸಂಕಷ್ಟಗಳನ್ನು ಪರೋಕ್ಷವಾಗಿ ಹೇಳಿದ್ದಾರೆ. “ನಾನು ರಾಜ್ಯದ ರೈತರ ಸಾಲಮನ್ನಾ ಮಾಡಬೇಕೆಂದಿದ್ದೇನೆ. ಇದಕ್ಕಾಗಿ ತಾವು ಕೇಂದ್ರಸರ್ಕಾರದಿಂದ ೫೦%ರಷ್ಟು ಹಣ ನೀಡಬೇಕು. ನಾನು ಈ ಕಾರ್ಯಕ್ಕೆ ಇಳಿದಾಗಿದೆ. ಹೀಗಾಗಿ ತಾವು ನೀಡಲೇಬೇಕು” ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ನೀತಿ ಆಯೋಗದ ಸಭೆಯಲ್ಲಿ ಪಟ್ಟು ಹಿಡಿದಿದ್ದಾರೆ.
ಹಿಂದಿನಿಂದಲೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವ ರಾಜ್ಯಕ್ಕೂ ಕೂಡ ಸಾಲ ಮನ್ನಕ್ಕಾಗಿ ಹಣ ನೀಡಿಲ್ಲ. ಸ್ವತಃ ಭಾರತೀಯ ಜನತಾ ಪಕ್ಷದ ಅಧಿಕಾರ ಇರುವ ಅನೇಕ ರಾಜ್ಯಗಳಲ್ಲಿ ಕೂಡಾ ಸಾಲ ಮನ್ನಾಕ್ಕಾಗಿ ಹಣ ನೀಡಿಲ್ಲ. ಇದೀಗ ಕರ್ನಾಟಕ ದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹಠಕ್ಕೆ ಬಿದ್ದವರ ಹಾಗೆ ಕೇಂದ್ರ ಸರಕಾರದ ಬಳಿ ಕೇಳುತ್ತಿದ್ದಾರೆ. ಈ ಮೂಲಕ ತನ್ನ ಅಸಹಾಯಕತೆಯನ್ನು ಪ್ರದರ್ಶಿಸಿದ್ದಾರೆ.
ಕುಮಾರಸ್ವಾಮಿ ಪ್ಲಾನಿಂಗ್ ಏನು..?
ಈ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿದೊಡ್ಡ ಪಕ್ಷವಾಗಿ ಅಧಿಕಾರ ಹಿಡಿದು ಯಡಿಯೂರಪ್ಪ ನವರು ಮುಖ್ಯಮಂತ್ರಿ ಯಾಗಿ ಹೇಳಿದಂತೆ ೨೪ಗಂಟೆಯಲ್ಲಿ ರಾಜ್ಯದ ರೈತರ ಸಾಲ ಮನ್ನಾ ಘೋಷಣೆ ಮಾಡಿದ್ದರು. ಇದು ನಂತರ ಬಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಆದರೂ ಜನರ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಸಾಲ ಮನ್ನಾ ಮಾಡುತ್ಥೇವೆ ಎಂದು ಹೇಳಿಕೊಂಡೇ ಬರುತ್ತಿದ್ದಾರೆ. ಇದೀಗ ಸಾಲ ಮನ್ನಾ ಕಷ್ಟ ಎಂದು ತಿಳಿದ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಾಲು ಹಿಡಿಯಲು ಆರಂಭಿಸಿದ್ದಾರೆ. ಶತಾಯ ಗತಾಯ ಸಾಲ ಮನ್ನಾ ಮಾಡಲೇಬೇಕು ಎಂಬ ನಿರ್ಧಾರಕ್ಕೆ ಬಂದಿರುವ ಕುಮಾರಸ್ವಾಮಿ ಇದೀಗ ಮೋದಿಯವರ ಬಳಿ ಬಳಸಿಕೊಳ್ಳಲು ಮುಂದಾಗಿದ್ದಾರೆ. ಒಂದು ವೇಳೆ ಮೋದಿಯವರು ಎಂದಿನಂತೆ ಈ ಬೇಡಿಕೆಗೆ ಮಣಿಯದಿದ್ದರೆ ಮೋದಿ ವಿರುದ್ದವೇ ಗೂಬೆ ಕೂರಿಸಿ ಕೇಂದ್ರ ಸರ್ಕಾರದ ವಿರುದ್ದ ಆಂದೋಲನ ನಡೆಸಲು ತಂತ್ರ ರೂಪಿಸೋದು ಕುಮಾರಸ್ವಾಮಿ ಲೆಕ್ಕಾಚಾರ.
– ಏಕಲವ್ಯ