ವಿಶ್ವದಾದ್ಯಂತ ಘನ ತ್ಯಾಜ್ಯ ವಸ್ತುಗಳ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆ, ಅತಿ ಭರದಿಂದ ತಲೆಯೆತ್ತಿ ಮೆರೆಯುತ್ತಿರುವ ನಗರಗಳು, ತ್ಯಾಜ್ಯ ವಸ್ತುಗಳ ಹೆಚ್ಚಳಕ್ಕೆ ಮುಖ್ಯವಾದ ಕಾರಣಗಳು, ತ್ಯಾಜ್ಯ ವಸ್ತುಗಳ ವಿಲೇವಾರಿಗೆ ಇದು ದೊಡ್ಡ ಸವಾಲಾಗಿದೆ. ಪ್ರಗತಿ ಪರ ರಾಷ್ಟ್ರಗಳಿಗೆ ಇದು ಒಂದು ಭರಿಸಲಾಗದು ಸಮಸ್ಯೆಯಾಗಿದೆ. ನಿರುಪಯುಕ್ತ ಪ್ಲಾಸ್ಟಿಕ್ ಅನ್ನು ಸಿಕ್ಕ ಸಿಕ್ಕಲ್ಲಿ ಎಸೆಯುವುದರಿಂದ, ವಿಲೇವಾರಿಯ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವುದರಿಂದ ಇದರ ದುಷ್ಪರಿಣಾಮಗಳಿಗೆ ಕಾರಣವಾಗಿದೆ. ಇದೀಗ ಪ್ಲಾಸ್ಟಿಕ್ ಮುಕ್ತ ರಾಜ್ಯವನ್ನಾಗಿ ಮಾಡಬೇಕು ಎಂದು ಮಹಾರಾಷ್ಟ್ರ ಸರಕಾರ ಮುಂದಾಗಿದೆ!!
ಪ್ಲಾಸ್ಟಿಕ್ ನಿಷೇಧಕ್ಕೆ ಮುಂದಾದ ಮಹಾರಾಷ್ಟ್ರ ಸರಕಾರ!!
ಮಹಾರಾಷ್ಟ್ರ ಸರಕಾರ ರಾಜ್ಯಾದ್ಯಂತ ಹೇರಿರುವ ಪ್ಲಾಸ್ಟಿಕ್ ನಿಷೇಧವನ್ನು ಜಾರಿಗೆ ತಂದಿದೆ!!. ಹಾಗಾಗಿ ಯಾವುದೇ ಬಗೆಯ ಪ್ಲಾಸ್ಟಿಕ್ ವಸ್ತುಗಳನ್ನು, ಕ್ಯಾರಿ ಬ್ಯಾಗ್ ಅಥವಾ ಥರ್ಮಕೋಲ್ಗಳನ್ನು ಜನರು ಬಳಸುವಂತಿಲ್ಲ. ಈ ನಿಟ್ಟಿನಲ್ಲಿ ಮೊದಲ ಬಾರಿಗೆ ಅಪರಾಧ ಎಸಗುವವರಿಗೆ 5,000 ರೂ. ದಂಡ ಇದೆ!! ಎರಡನೇ ಬಾರಿ ಅಪರಾಧ ಎಸಗುವವರಿಗೆ 10,000 ರೂ. ದಂಡ ಇದೆ. ಮೂರನೇ ಬಾರಿ ಅಪರಾಧ ಎಸಗುವವರಿಗೆ 25,000 ರೂ. ದಂಡ ಮತ್ತು ಮೂರು ತಿಂಗಳ ಜೈಲು ಶಿಕ್ಷೆ ಇದೆ.
ಎಲ್ಲ ಹಿತಾಸಕ್ತಿದಾರರು ಈ ಕ್ರಮವನ್ನು ಬೆಂಬಲಿಸಿದರೆ ಮಾತ್ರವೇ ಪ್ಲಾಸ್ಟಿಕ್ ನಿಷೇಧ ರಾಜ್ಯದಲ್ಲಿ ಪರಿಪೂರ್ಣವಾಗಿ ಯಶಸ್ವಿಯಾದೀತು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. “ಯಾವ ಬಗೆಯ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಲಾಗದೋ, ನಿಯಂತ್ರಿಸಲಾಗದೋ, ಪುನರ್ ಬಳಕೆ ಮಾಡಲಾಗದೋ ಅಂಥವುಗಳನ್ನು ನಾವು ನಿಷೇಧಿಸಿದ್ದೇವೆ; ಆದುದರಿಂದ ಹೊಣೆಯರಿತ ಪ್ಲಾಸ್ಟಿಕ್ ಬಳಕೆಯನ್ನು ನಾವು ಉತ್ತೇಜಿಸುತ್ತಿದ್ದೇವೆ’ ಎಂದು ಫಡ್ನವೀಸ್ ಹೇಳಿದರು. ಈ ರಾಜ್ಯದ ಜನತೆ ‘ಪ್ಲಾಸ್ಟಿಕ್ ನಿಷೇಧ’ ಅಭಿಯಾನದಲ್ಲಿ ಸರಕಾರದ ಕೈಹಿಡಿದರೆ ಮಾತ್ರ ನಾವು ಯಶಸ್ವಿಯಾಗುತ್ತೇವೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ರಾಜ್ಯ ಪರಿಸರ ಸಚಿವ ರಾಮದಾಸ್ ಕದಂ ಅವರು ಕೂಡ ರಾಜ್ಯದ ಈ ನಿಲುವನ್ನು ಸ್ವಾಗತಿಸಿದ್ದು, ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಿರುವ 18ನೇ ರಾಜ್ಯ ಮಹಾರಾಷ್ಟ್ರ ಆಗಲಿದೆ ಎಂದು ಹೇಳಿದ್ದಾರೆ.
ಪ್ಲಾಸ್ಟಿಕ್ ನಿಷೇಧದಿಂದಾಗಿ ಈಗ ಪರಿಸರ ಹಾಳುಮಾಡುವವರ ಮೇಲೆ ಹೆಚ್ಚಿನ ಹೊಣೆಗಾರಿಕೆ ಇದೆ. ಇದೇ ವೇಳೆ ವ್ಯಾಪಾರ ವಹಿವಾಟುದಾರರಿಗೆ ಸ್ವಲ್ಪ ಮಟ್ಟಿನ ರಿಯಾಯಿತಿ ನೀಡಲಾಗಿದೆ. ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಬದಲಿಗೆ ಬಳಸಬಹುದಾದ ವಸ್ತುಗಳು ದೊಡ್ಡ ಮಟ್ಟದಲ್ಲಿ ಬಳಕೆಗೆ ಬರುವ ತನಕ ವ್ಯಾಪಾರಸ್ಥರಿಗೆ ಹಾನಿ ಆಗದಿರಲೆಂದು ರಿಯಾಯಿತಿ ತೋರಿಸಲಾಗಿದೆ ಎಂದು ಫಡ್ನವೀಸ್ ಹೇಳಿದರು.
ಸ್ಟಾಕ್ ಕ್ಲಿಯರೆನ್ಸ್ ಗೆ ಮೂರು ತಿಂಗಳ ಗಡುವು
ಇನ್ನು ಮಹಾರಾಷ್ಟ್ರದಲ್ಲಿ ಪ್ರಸ್ತುತ ಇರುವ ಪ್ಲಾಸ್ಟಿಕ್ ಕವರ್ ಮತ್ತು ಇತರೆ ವಸ್ತುಗಳ ಮಾರಾಟಗಾರರಿಗೆ ದೇವೇಂದ್ರ ಫಡ್ನವಿಸ್ ಸರ್ಕಾರ ದಾಸ್ತಾನು ಖಾಲಿ ಮಾಡಲು ಅಂತಿಮ ಗಡುವು ನೀಡಿದ್ದು, ಮೂರು ತಿಂಗಳೊಳಗೆ ದಾಸ್ತುನು ಖಾಲಿ ಮಾಡುವಂತೆ ಸೂಚಿಸಿದೆ. ಪ್ರಮುಖವಾಗಿ ಗುಜರಾತ್ ನಿಂದ ಪ್ಸಾಸ್ಟಿಕ್ ಕವರ್ ಗಳು ಮಹಾರಾಷ್ಟ್ರಕ್ಕೆ ಆಗಮಿಸುತ್ತಿದ್ದು, ಗಡಿಯಲ್ಲೇ ಇವುಗಳನ್ನು ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಳೆದ ಮಾರ್ಚ್ 23ರಂದು ಮಹಾರಾಷ್ಟ್ಕ ಸರ್ಕಾರ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆಗೆ ನಿಷೇಧ ಹೇರಿತ್ತು. ಇದೀಗ ಅದರ ಬಳಕೆ ಮೇಲೂ ನಿಷೇಧ ಹೇರುವ ಮೂಲಕ ಅಕ್ರಮ ಪ್ಲಾಸ್ಟಿಕ್ ತಯಾರಿಕರಿಗೆ ಬಿಸಿ ಮುಟ್ಟಿಸಿದೆ.
ಸರ್ಕಾರದ ಕ್ರಮಕ್ಕೆ ಬೆಂಬಲ ನೀಡುವಂತೆ ಜನರಿಗೆ ಶಿವಸೇನೆ ಕರೆ
ಇನ್ನು ಎನ್ ಡಿಎ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಶಿವಸೇನೆ ಪ್ಲಾಸ್ಚಿಕ್ ನಿಷೇಧ ವಿಚಾರವಾಗಿ ಸಿಎಂ ದೇವೇಂದ್ರ ಫಡ್ನವಿಸ್ ಅವರ ಬೆನ್ನಿಗೆ ನಿಂತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವಸೇನೆಯ ಆದಿತ್ಯಾ ಠಾಕ್ರೆ ರಾಜ್ಯಸರ್ಕಾರದ ಕ್ರಮ ಉತ್ತಮವಾಗಿದ್ದು, ಸರ್ಕಾರದ ಕ್ರಮಕ್ಕೆ ಬೆಂಬಲ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ. ಅಂತೆಯೇ ಸರ್ಕಾರದ ಈ ನಿರ್ಧಾರ ವಿಶ್ವಕ್ಕೆ ಮಾದರಿಯಾಗಲಿದೆ ಎಂದು ಶ್ಲಾಘಿಸಿದ್ದಾರೆ!!
ಕಳೆದ ವರ್ಷ ಭಾರಿ ಮಳೆ ಸುರಿದಾಗ ಪ್ಲಾಸ್ಟಿಕ್ ಮತ್ತು ಥರ್ಮೊಕೋಲ್ ತುಂಬಿದ್ದ ಕಾರಣದಿಂದ ಚರಂಡಿಗಳಲ್ಲಿ ನೀರು ಹರಿದು ಹೋಗದೆ ಬಹಳಷ್ಟು ಸಮಸ್ಯೆ ಸೃಷ್ಟಿಯಾಗಿತ್ತು. ಅಲ್ಲಿಂದ ಪ್ಲಾಸ್ಟಿಕ್ ನಿಷೇಧ ಜಾರಿಗೆ ಸಂಬಂಧಿಸಿದಂತೆ ಕೆಲಸ ಆರಂಭಿಸಿದ್ದಾಗಿ ಅವರು ಹೇಳಿದರು.
ಕರ್ನಾಟಕದಲ್ಲಿ ಕೂಡ ಪ್ಲಾಸ್ಟಿಕ್ ನಿಷೇಧಿಸಿ ಆದೇಶ ಹೊರಡಿಸಲಾಗಿದೆಯಾದರೂ ಕಟ್ಟುನಿಟ್ಟಾಗಿ ಇನ್ನೂ ಜಾರಿಯಾಗಿಲ್ಲ. ಹೂವು, ಹಣ್ಣು ಮಾರುವವರು ಅವ್ಯಾಹತವಾಗಿ ಇದನ್ನು ಬಳಸುತ್ತಲೇ ಇದ್ದಾರೆ, ಗ್ರಾಹಕರು ಕೂಡ ಒತ್ತಾಯ ಮಾಡಿ ಪ್ಲಾಸ್ಟಿಕ್ ಬ್ಯಾಗ್ನಲ್ಲಿಯೇ ನೀಡಬೇಕೆಂದು ದುಂಬಾಲು ಬೀಳುತ್ತಾರೆ. ಅಲ್ಲದೆ, ಮಾರುಕಟ್ಟೆಗೆ ಹೋಗುವಾಗ ಕೈಚೀಲ ತೆಗೆದುಕೊಂಡು ಹೋಗಬೇಕು ಎಂಬ ಕನಿಷ್ಠ ಜ್ಞಾನವೂ ಹಲವರಿಗಿಲ್ಲದಿರುವುದರಿಂದ ಕರ್ನಾಟಕದಲ್ಲಿ ಪ್ಲಾಸ್ಟಿಕ್ ನಿಷೇಧ ಸಂಪೂರ್ಣವಾಗಿ ಸಾಧ್ಯವಾಗಿಲ್ಲ.
ಪ್ಲಾಸ್ಟಿಕ್ ನಿಷೇಧ. ಭಾರತ ಸಂವಿಧಾನದ ಕಲಾಂ 48ಎ ಅನ್ವಯ, ಪ್ರತಿ ರಾಜ್ಯದಲ್ಲಿಯೂ ರಾಜ್ಯ ಸರಕಾರ ಪ್ಲಾಸ್ಟಿಕ್ ಸಂಬಂಧಿತ ಎಲ್ಲಾ ವಸ್ತುಗಳನ್ನು ನಿಷೇಧಿಸುವ ಜವಾಬ್ದಾರಿಯನ್ನು ಹೊಂದಿದೆ. ಪ್ಲಾಸ್ಟಿಕ್ ವಸ್ತುಗಳು, ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಗಳು, ಪ್ಲಾಸ್ಟಿಕ್ ಭಿತ್ತಿಪತ್ರಗಳು, ಪ್ಲಾಸ್ಟಿಕ್ ತೋರಣ, ಪ್ಲಾಸ್ಟಿಕ್ ತಟ್ಟೆ, ಫ್ಲೆಕ್ಸ್, ಬಾವುಟ, ಪ್ಲಾಸ್ಟಿಕ್ ಹಾಳೆ, ಪ್ಲಾಸ್ಟಿಕ್ ಚಮಚಾಗಳು, ಕ್ಲಿಂಗ್ ಫಿಲ್ಮ್ ಮತ್ತು ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆಗಳು ಮತ್ತು ಥರ್ಮಕೊಲ್ ನಿಂದ ತಯಾರಾದ ವಸ್ತುಗಳ ವ್ಯಾಪಕ ಬಳಕೆಯಿಂದಾಗಿ ಪರಿಸರಕ್ಕೆ ಹಾನಿ ಮತ್ತು ಮಾನವ ಮತ್ತಿತ್ತರ ಪ್ರಾಣಿಗಳ ಆರೋಗ್ಯಕ್ಕೆ ಅಪಾಯ ಉಂಟಾಗುತ್ತಿರುವುದರ ಜೊತೆಗೆ, ಚರಂಡಿಗಳ, ಮೋರಿಗಳ ಮತ್ತು ಒಳಚರಂಡಿಗಳ ಸರಾಗ ಹರಿಯುವಿಕೆಗೆ ಕೂಡ ಪ್ಲಾಸ್ಟಿಕ್ ಅಡ್ಡಿಯಾಗಿರುವುದು ಸಂಶಯಕ್ಕೆ ಆಸ್ಪದವೇ ಇಲ್ಲ. ಈ ಎಲ್ಲಾ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಸರಬರಾಜು, ಸಂಗ್ರಹಣೆ, ಮಾರಾಟ ಮತ್ತು ವಿತರಣೆ ಮಾಡುವುದನ್ನು ರಾಜ್ಯಾದ್ಯಂತ ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ನಿಷೇಧ ಉಲ್ಲಂಘಿಸುವವರ ಮೇಲೆ ಕ್ರಮ ವಹಿಸುವ ಅಧಿಕಾರವನ್ನು ಒಳಗೊಂಡ ವಿವರಗಳನ್ನು ಸರಕಾರದ ಪತ್ರದಲ್ಲಿ ಎಲ್ಲಾ ಜಿಲ್ಲಾ ಪಂಚಾಯತ್ ಗಳಿಗೆ ಕಳುಹಿಸಿಕೊಡಲಾಗಿದೆ.
ಇಷ್ಟೆಲ್ಲಾ ಆದರೂ ಇನ್ನೂ ಕೂಡ ಈ ಪ್ಲಾಸ್ಟಿಕ್ ಬಳಸುವುದಕ್ಕೆ ಜನ ಹಿಂಜರಿಯುತ್ತಿಲ್ಲ. ಅದಕ್ಕೆ ಕಾರಣ ಅಂಗಡಿಗಳಲ್ಲಿ ಇದನ್ನು ಪೂರೈಸುವುದು ಸಂಪೂರ್ಣವಾಗಿ ನಿಂತಿಲ್ಲ. ಹಲವು ಮಾಲ್ ಗಳಲ್ಲಿ ಕ್ಯಾರಿಬ್ಯಾಗ್ ಗೆ ಹೆಚ್ಚುವರಿ 5 ರೂಪಾಯಿ ವಿಧಿಸಿದರೂ ಜನ ಅದಕ್ಕೆ ಹಣ ಪಾವತಿಸಿ ಪ್ಲಾಸ್ಟಿಕ್ ಖರೀದಿಸುತ್ತಿದ್ದಾರೆ. ಆದರೆ ಕ್ಯಾರಿಬ್ಯಾಗ್ ಎಂಬ ಶಬ್ದಕ್ಕೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು, 2016 ರ ನಿಯಮ 3(ಸಿ) ರಲ್ಲಿ ನೀಡಿರುವ ವ್ಯಾಖ್ಯಾನದಲ್ಲಿ ಯಾವುದೇ ಸಾಮಾಗ್ರಿಗಳನ್ನು ಉಪಯೋಗಿಸುವ ಮೊದಲು ಪ್ಯಾಕ್ ಮಾಡಿ ಸೀಲ್ ಮಾಡಿರುವ ಪ್ಯಾಕೆಂಜಿಂಗ್ ಪ್ಲಾಸ್ಟಿಕ್ ಗಳು ಸೇರುವುದಿಲ್ಲ ಎಂದು ಹೇಳಲಾಗಿದೆ.ಇನ್ನಾದರೂ ಕರ್ನಾಟಕದಲ್ಲೂ ಪ್ಲಾಸ್ಟಿಕ್ ನಿಷೇಧ ಮಾಡಲು ಮುಂದಾದರೆ ಒಳಿತು!!
source: economictimes.indiatimes.com
- ಪವಿತ್ರ