ಬಿಜೆಪಿಯಲ್ಲಿ ಅಮಿತ್ ಷಾ ಚಾಣಕ್ಯನಾದರೆ ನಮ್ಮಲ್ಲಿ ಡಿಕೆ ಶಿವಕುಮಾರ್ ಕೂಡ ಚಾಣಕ್ಯನೇ ಎಂದು ಬೀಗುತ್ತಿರುವ ಕಾಂಗ್ರೆಸ್ಗೆ ಇದೀಗ ಮುಜುಗರ ಉಂಟಾಗಿದೆ. ಯಾಕೆಂದರೆ ಬಿಜೆಪಿಯ ಆಪರೇಷನ್ ಕಮಲದ ಭೀತಿಯಿಂದ ಕಂಗಾಲಾದ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಶಾಸಕರನ್ನು ಡಿಕೆಶಿ ನೇತ್ರತ್ವದಲ್ಲಿ ರೆಸಾರ್ಟ್ ನಲ್ಲಿ ಕೂಡಿ ಹಾಕಿದ್ದರು. ಬಹುಮತ ಸಾಧಿಸಲು ಸಾಧ್ಯವಾಗದ ಬಿಜೆಪಿ ತಮ್ಮ ಶಾಸಕರನ್ನು ಸೆಳೆಯಬಹುದು ಎಂಬ ಭಯದಿಂದ ತಮ್ಮದೇ ಶಾಸಕರ ಮೇಲೆ ನಂಬಿಕೆಯಿಲ್ಲದ ಮುಖಂಡರು ರಾಜ್ಯದಲ್ಲಿ ಮಾತ್ರವಲ್ಲದೆ ಹೈದರಾಬಾದ್ಗೂ ಕರೆದುಕೊಂಡು ಹೋಗಿ ಶಾಸಕರನ್ನು ಹೊಟೇಲ್ ನಲ್ಲಿ ಕೂಡಿಹಾಕಿದ್ದರು. ಈ ಬಗ್ಗೆ ಕಾಂಗ್ರೆಸ್ ಸಭೆಯಲ್ಲೇ ವಿರೋಧ ವ್ಯಕ್ತಪಡಿಸಿದ ಕೈ ಶಾಸಕರು ಇದೀಗ ಮತ್ತೆ ಡಿಕೆಶಿ ವಿರುದ್ಧ ಹರಿಹಾಯ್ದಿದ್ದಾರೆ..!
ನಂಬಿಕೆ ಇಲ್ಲದೇ ಟಿಕೆಟ್ ಏಕೆ ನೀಡುತ್ತೀರಿ..?!
ಕಾಂಗ್ರೆಸ್ ನಿಂದ ಗೆದ್ದ ಶಾಸಕರನ್ನು ಮತ್ತು ಜೆಡಿಎಸ್ ಶಾಸಕರನ್ನು ಬಿಜೆಪಿಯಿಂದ ತಪ್ಪಿಸಿಕೊಳ್ಳಲು ತಂತ್ರ ರೂಪಿಸಿದ್ದ ಕೈ ನಾಯಕರು ರೆಸಾರ್ಟ್ ರಾಜಕೀಯ ನಡೆಸಿದ್ದರು. ಜನರ ಮಧ್ಯೆ ಇರಬೇಕಾದ ಗೆದ್ದ ಶಾಸಕರು ಈ ರೀತಿ ರೆಸಾರ್ಟ್ ಗಳಲ್ಲಿ ವಾಸ್ತವ್ಯ ಹೂಡಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಆದ್ದರಿಂದಲೇ ಹೈದರಾಬಾದ್ ಹೊಟೇಲ್ ನಲ್ಲಿಯೇ ಡಿಕೆಶಿ ವಿರುದ್ಧ ಅಸಮಧಾನಗೊಂಡ ಶಾಸಕರು ಬಹಿರಂಗವಾಗಿಯೇ ವಿರೋಧಿಸಿದ್ದರು. ಆದರೂ ಇವೆಲ್ಲವನ್ನೂ ಸಹಿಸಿಕೊಂಡು ಬಂದಿದ್ದ ಡಿಕೆಶಿ ಗೆ ಇದೀಗ ಮತ್ತೆ ಮುಖಭಂಗವಾಗಿದೆ.
ಒಂದೆಡೆ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರ ರಚಿಸಲು ತಯಾರಿ ನಡೆಸಿದ್ದು ನಾಳೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದರೆ ಇದೀಗ ಮತ್ತೆ ಆಕ್ರೋಷಗೊಂಡ ಕೈ ಶಾಸಕರು ಕಾಂಗ್ರೆಸ್ ಮತ್ತು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ನಮ್ಮ ಮೇಲೆ ನಂಬಿಕೆ ಇಲ್ಲದೇ ಇದ್ದರೆ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ಏಕೆ ನೀಡಿದ್ದೀರಿ? ನೀವು ಮಾತ್ರ ಮನೆಯಲ್ಲೇ ರಾತ್ರಿ ಕಳೆದು ನಮ್ಮನ್ನು ರೆಸಾರ್ಟ್ ಗಳಲ್ಲಿ ಕೂಡಿಹಾಕಿದ್ದೀರಿ ಎಂದು ಹಿಗ್ಗಾಮುಗ್ಗಾ ಝಾಡಿಸಿದ ಕೈ ಶಾಸಕರು ಕಾಂಗ್ರೆಸ್ ಗೆ ಮತ್ತೊಂದು ಶಾಕ್ ನೀಡಿದ್ದಾರೆ..!
ಸಿದ್ದರಾಮಯ್ಯ ವಿರುದ್ಧವೂ ಕೈ ಶಾಸಕರಿಂದ ಆಕ್ರೋಶ..!
ರೆಸಾರ್ಟ್ ನಲ್ಲಿ ಇದ್ದ ಎಲ್ಲಾ ಶಾಸಕರ ರಕ್ಷಣೆಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದ ಡಿಕೆ ಶಿವಕುಮಾರ್ ವಿರುದ್ಧ ಈಗಾಗಲೇ ಎರಡೆರಡು ಬಾರಿ ತಮ್ಮ ಆಕ್ರೋಶ ಹೊರಹಾಕಿದ ಶಾಸಕರು ಮಾಜಿ ಸಿಎಂ ಸಿದ್ದರಾಮಯ್ಯನವರ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ನೀವು ಕರೆದುಕೊಂಡು ಹೋದಲ್ಲೆಲ್ಲಾ ನಾವು ನಿಮಗೆ ಬೆಂಬಲಕ್ಕೆ ನಿಂತಿದ್ದೇವೆ, ಆದರೆ ನಿಮಗೆ ಮಾತ್ರ ನಮ್ಮ ಮೇಲೆ ನಂಬಿಕೆಯೇ ಇಲ್ಲ ಎಂದು ಅಸಮಧಾನ ಹೊರಹಾಕಿದ ಶಾಸಕರು ಕೊನೆಯ ಗಳಿಗೆಯಲ್ಲಿ ಕಾಂಗ್ರೆಸ್ ಗೆ ಹೊಡೆತ ನೀಡಿದ್ದಾರೆ. ಇದರಿಂದ ನಾಳೆ ಪ್ರಮಾಣವಚನಕ್ಕೂ ತೊಂದರೆಯುಂಟಾಗಬಹುದು ಎಂಬ ಭೀತಿಯಿಂದ ಇದ್ದ ಕಾಂಗ್ರೆಸ್ ಮತ್ತೆ ತಮ್ಮ ತಪ್ಪು ಮರೆಮಾಚಲು ಪ್ರಯತ್ನಿಸುತ್ತಿದೆ…!
ಒಟ್ಟಾರೆಯಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಾಡಿಕೊಂಡಿರುವ ಮೈತ್ರಿ ಸ್ವತಃ ಈ ಎರಡೂ ಪಕ್ಷಗಳ ಶಾಸಕರಿಗೆ ಇಷ್ಟ ಇಲ್ಲದೇ ಇದ್ದರೂ ಮುಖಂಡರ ಒತ್ತಡಕ್ಕೆ ಮಣಿದು ಸುಮ್ಮನಿರುವಂತಾಗಿದೆ..!
–ಅರ್ಜುನ್