ರಾಜಕೀಯದಲ್ಲಿ ಯಾವಾಗ ಏನು ಆಗುತ್ತೆ ಅನ್ನೋದನ್ನು ಹೇಳೋದಕ್ಕೆ ಸಾಧ್ಯವಿಲ್ಲ. ಒಮ್ಮೆ ಶತ್ರುಗಳಾದವರು ಮತ್ತೊಮ್ಮೆ ಮಿತ್ರರಾಗಿರುತ್ತಾರೆ. ಇದು ರಾಜಕೀಯದಲ್ಲಿ ಕಾಮ್. ಇದೀಗ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣಾ ಸಂದರ್ಭದಲ್ಲೂ ಇದು ಮರುಕಳಿಸಿದೆ. ಅನೇಕ ವಿರೋಧ ಪಕ್ಷಗಳ ಮುಖಂಡರು ಮತ್ತೊಂದು ಪಕ್ಷಕ್ಕೆ ಜಂಪಿಂಗ್ ಆಗುವ ಮೂಲಕ ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು ಎಂಬುವುದನ್ನು ನಿರೂಪಿಸಿ ಬಿಟ್ಟಿದ್ದರು.
ದೇವೇಗೌಡರಿಗೆ ನಮೋ ಎಂದ ಮೋದಿ…!!!
ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯ ನಿಮಿತ್ತ ಇಂದಿನಿಂದ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ. ಇಂದು ಬೆಳಗ್ಗೆ ಸಂತೇಮಾರಳ್ಳಿಯಲ್ಲಿ ಚುನಾವಣಾ ಭಾಷಣ ಮುಗಿಸಿ ಅಲ್ಲಿಂದ ನೇರವಾಗಿ ಉಡುಪಿಗೆ ಆಗಮಿಸಿ 2ನೇ ಭಾಷಣವನ್ನು ಕೃಷ್ಣನ ನಗರಿ ಉಡುಪಿಯಲ್ಲಿ ಮಾಡಿದ್ದಾರೆ.
ಈ ವೇಳೆ ಭಾಷಣದ ಮಧ್ಯೆ ಮಾಜಿ ಪ್ರಧಾನಿ ದೇವೇಗೌಡರನ್ನು ಹಾಡಿ ಹೊಗಳಿದ್ದಾರೆ. “ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪುಣ್ಯಭೂಮಿ ಕರ್ನಾಟಕದ ಮಣ್ಣಿನ ಮಗ. ಅವರು ಕೇಳಿದಾಗಲೆಲ್ಲ ನಾನು ಅವರನ್ನು ಭೇಟಿಯಾಗುತ್ತಲೇ ಇರುತ್ತೇನೆ. ಯಾವತ್ತೂ ಅವರಿಗೆ ಸಮಯವಿಲ್ಲ ಎಂದು ಹೇಳಿಲ್ಲ. ಅವರು ಭೇಟಿಯಾಗಲು ಬಂದಾಗಲೆಲ್ಲಾ ಮನೆಯ ಬಾಗಿಲಿಗೆ ಬಂದು ಸ್ವಾಗತಿಸುತ್ತೇನೆ.
ಮಾತುಕತೆ ಮುಗಿದ ನಂತರ ನಾನೇ ಕಾರಿನ ತನಕ ಅವರನ್ನು ಬೀಳ್ಕೊಟ್ಟು ಬರುತ್ತೇನೆ. ಅವರು ವಿರೋಧ ಪಕ್ಷದ ನಾಯಕರಾಗಿದ್ದರೂ ಅವರ ಹೃದಯ ಶ್ರೀಮಂತಿಕೆ ಬಗ್ಗೆ ನನಗೆ ಅರಿವಿದೆ. ಆದರೆ ಈ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತ್ರ ಅಹಂಕಾರಿತನವನ್ನು ಮೆರೆಯುತ್ತಾರೆ. ದೇವೇಗೌಡರು ಓರ್ವ ಮಾಜಿ ಪ್ರಧಾನಿ. ಅವರಿಗೆ ಗೌರವ ನೀಡದೆ ಅವರನ್ನು ವಾಚಾಮಗೋಚರವಾಗಿ ನಿಂದಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಅಹಂಕಾರ ಅನ್ನೋದು ಇದರಿಂದ ಗೊತ್ತಾಗುತ್ತೆ.
ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ರಾಜಕೀಯ ಸಂಸ್ಕಾರ ಅನ್ನೋದೇ ಇಲ್ಲ. ಇದು ರಾಜಕೀಯ ಸಂಸ್ಕಾರನಾ..?ದೇಶದ ಮುತ್ಸದ್ದಿ ರಾಜಕಾರಣಿ ಬಗ್ಗೆ ಈ ರೀತಿ ನಿಂದಿಸುವುದು ಎಷ್ಟು ಸರಿ? ರಾಷ್ಟ್ರದ ಹಿರಿಯ ರಾಜಕಾರಣಿ ಬಗ್ಗೆ ಈ ರೀತಿಯ ವ್ಯಂಗ್ಯವಾಡೋದು ಸರೀನಾ?” ಎಂದು ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೈತ್ರಿ ಸುಳಿವು ನೀಡಿದರಾ ನಮೋ..?
ದೇವೇಗೌಡರನ್ನು ಈ ರೀತಿಯಾಗಿ ಹೊಗಳಿದ್ದು ಮುಂದಿನ ರಾಜಕೀಯ ಬದಲಾವಣೆಯ ಧಿಕ್ಕಿಗೆ ನಾಂದಿ ಹಾಡುತ್ತೇ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಮುಂದಿನ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅತಂತ್ರ ಫಲಿತಾಂಶ ಎದುರಾಗಲಿರುವ ಎಲ್ಲಾ ಸಾಧ್ಯತೆಗಳೂ ಇವೆ. ಹೀಗಾಗಿ ಪ್ರಧಾನಿ ಮೋದಿ ಮುಂದಿನ ಮೈತ್ರಿ ಸರ್ಕಾರಕ್ಕಾಗಿ ದೇವೇಗೌಡರನ್ನು ಈ ರೀತಿಯಾಗಿ ಹೊಗಳಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಈ ಹಿಂದೆಯೂ ದೇವೇಗೌಡರನ್ನು ಪ್ರಧಾನಿ ನರೇಂದ್ರ ಮೋದಿ ಆತ್ಮೀಯವಾಗಿಯೇ ಗೌರವಿಸುತ್ತಿದ್ದರು. ಎಂದು ಮಾಜಿ ಪ್ರದಾನಿ ದೇವೇಗೌಡರ ವಿರುದ್ಧ ಮಾತನಾಡಿಯೇ ಇಲ್ಲ. ಇದು ಇಂದು ಕೂಡಾ ಮುಂದುವರೆದಿದೆ ಅಷ್ಟೇ. ಇದರಲ್ಲಿ ಅಂತಹದ್ದೇನೂ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂಬುವುದು ಮತ್ತೆ ಕೆಲವರ ಸಮರ್ಥನೆ. ಆದರೆ ಪ್ರಧಾನಿ ಮೋದಿ ಈ ಹಿಂದೆಯೂ ದೇವೇಗೌಡರನ್ನು ಅಷ್ಟೇ ಪ್ರೀತಿಯಿಂದ ಗೌರವಿಸುತ್ತಿದ್ದರು ಎಂಬುವುದು ಅಷ್ಟೇ ಸತ್ಯ.
-ಸುನಿಲ್ ಪಣಪಿಲ