ಪ್ರಚಲಿತ

ರಾಷ್ಟ್ರದ ಪ್ರತಿಷ್ಠೆಯ ಗುರಿಯೊಂದಿಗೆ ನಡೆಯುತ್ತಿದ್ದೇವೆ: ಪ್ರಧಾನಿ ಮೋದಿ

ಬಹು ಕೋಟಿ ಜನರ ಆರಾಧ್ಯ ದೈವ ಪ್ರಭು ಶ್ರೀರಾಮನನ್ನು ಅಯೋಧ್ಯೆಯ ಜನ್ಮಭೂಮಿಯ ಭವ್ಯ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಬಹಳ ಮುಖ್ಯವಾದ ಸಾಧನೆ ಇದು ಎಂದರೂ ತಪ್ಪಾಗಲಾರದೇನೋ. ಇಡೀ ರಾಷ್ಟ್ರಕ್ಕೆ ರಾಷ್ಟ್ರವೇ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮ ಜನ್ಮಭೂಮಿ ವಿಚಾರಕ್ಕೆ ನ್ಯಾಯ ಒದಗಿಸಿರುವುದಾಗಿ ಶ್ರೀರಾಮ ಭಕ್ತರು ಸಂತಸದಲ್ಲಿ ಇದ್ದಾರೆ.

ರಾಮನ ಬಳಿಕ ಈಗ ಪ್ರಧಾನಿ ಮೋದಿ ಅವರು ದೇಶದ ಬಗ್ಗೆ ಮಾತನಾಡಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಮುಗಿದಿದೆ. ಈಗ ರಾಷ್ಟ್ರದ ಪ್ರತಿಷ್ಠೆಯನ್ನು ಹೊಸ‌ ಎತ್ತರಕ್ಕೆ ಕೊಂಡೊಯ್ಯುವ ಸಮಯ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಧಾನಿ ಅವರು ಉತ್ತರ ಪ್ರದೇಶದ ಬುಂದೇಲ್‌ಶಹರ್‌ನಲ್ಲಿ ಹತ್ತೊಂಬತ್ತು ಸಾವಿರದ ನೂರು ಕೋಟಿ ರೂ. ಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ್ದು, ದೇಶವನ್ನು ಅಭಿವೃದ್ಧಿಯ ಹೊಸ ಉತ್ತುಂಗಕ್ಕೆ ಏರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ದೇಶದ ಅಭಿವೃದ್ಧಿ ಕೇವಲ ಕೆಲವೇ ಪ್ರದೇಶಗಳಿಗೆ ಸೀಮಿತವಾದಂತಿತ್ತು. ರಾಷ್ಟ್ರದ ಹಲವು ಭಾಗಗಳು ಅಭಿವೃದ್ಧಿಯಿಂದ ವಂಚಿತವಾಗಿದ್ದವು. ಉತ್ತರ ಪ್ರದೇಶ ದೇಶದಲ್ಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾದರೂ, ಇಲ್ಲಿ ಅಭಿವೃದ್ಧಿಯ ವಿಚಾರದಲ್ಲಿ ಮಾತ್ರ ಏಳಿಗೆ ಇರಲಿಲ್ಲ. ಪ್ರಗತಿ ವಂಚಿತ ರಾಜ್ಯವಾಗಿತ್ತು. ಇದಕ್ಕೂ ಮುನ್ನ ಇಲ್ಲಿ ಆಡಳಿತ ನಡೆಸಿದವರು ಕೇವಲ ಆಡಳಿತಗಾರರ ಹಾಗೆ ವರ್ತಿಸಿದ್ದು, ಇಲ್ಲಿನ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡದೇ ಹೋದದ್ದು ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.

ನಮ್ಮ ಸರ್ಕಾರದ ಮುಖ್ಯ ಗುರಿ, ಆದ್ಯತೆ ದೇಶದ ರೈತರ ಕಲ್ಯಾಣವಾಗಿದೆ. ನಮ್ಮ ಕೇಂದ್ರ ಸರ್ಕಾರ ದೇಶದ ಎಲ್ಲಾ ರೈತರ ಕುಟುಂಬಕ್ಕೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ‌. ಇದಕ್ಕಾಗಿ ಸರ್ಕಾರ ಸಾವಿರಾರು ಲಕ್ಷ ಕೋಟಿ ರೂಪಾಯಿಗಳನ್ನು ಬಳಕೆ ಮಾಡುತ್ತಿದೆ. ದೇಶದಲ್ಲಿ ಇಂದು ರೈತರಿಗೆ ಮುನ್ನೂರು ರೂ. ಗಳಿಗೂ ಕಡಿಮೆ ಹಣದಲ್ಲಿ ಯೂರಿಯಾ ದೊರೆಯುವ ಹಾಗೆ ಮಾಡಲಾಗಿದೆ. ವಿಶ್ವದ ಹಲವು ರಾಷ್ಟ್ರಗಳಲ್ಲಿ ಯೂರಿಯಾ ಖರೀದಿಗೆ ಮೂರು ಸಾವಿರ ರೂ. ಗಳಿಗಿಂತಲೂ ಹೆಚ್ಚು ಬೆಲೆ ನೀಡಬೇಕಿದೆ ಎಂದು ಅವರು ಹೇಳಿದ್ದಾರೆ.

Tags

Related Articles

Close