ನರೇಂದ್ರ ಮೋದಿಯವರು ಹಲವಾರು ಹೊಚ್ಚ ಹೊಸ ಯೋಜನೆಗಳಿಗೆ ನಾಂದಿ ಹಾಡಿ ಭಾರತವನ್ನು ಇನ್ನು ಅಭಿವೃದ್ಧಿಶೀಲ ರಾಷ್ಟ್ರವಾಗಿ ಕಟ್ಟುವ ಕನಸು ನನಸಾಗುವ ನಿಟ್ಟಿನಲ್ಲಿ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸ್ವತಃ ಕೈಯಲ್ಲಿ ಪೆÇರಕೆ ಹಿಡಿದು, ಸ್ವಚ್ಛಗೊಳಿಸಿ, ಸ್ವಚ್ಛಭಾರತ ಅಭಿಯಾನಕ್ಕೆ ಚಾಲನೆ ನೀಡುವ ಮೂಲಕ ದೇಶದ ಜನರಲ್ಲಿ ರೋಮಾಂಚನವುಂಟು ಮಾಡಿದ್ದಾರೆ!!
ಸ್ವಚ್ಛ ಭಾರತ ಅಭಿಯಾನ ಮಹಾತ್ಮ ಗಾಂಧೀಜಿಯವರ ಕಾಲದಲ್ಲೇ ಆರಂಭಗೊಂಡಿದ್ದರೂ, ಅದು ಹೆಚ್ಚು ಪ್ರಚಲಿತಕ್ಕೆ ಬಂದಿದ್ದು ಮಾತ್ರ 2015-2016ನೇ ಸಾಲಿನಲ್ಲಿ! ಈ ಅಭಿಯಾನವು ಅಧಿಕೃತವಾಗಿ 2 ಅಕ್ಟೋಬರ್ 2014 ನವದೆಹಲಿಯಲ್ಲಿ ಪ್ರಧಾನಮಂತ್ರಿ ರಾಜ್ ಘಾಟಿನಲ್ಲಿ ರಸ್ತೆಯೊಂದರನ್ನು ಗುಡಿಸುವುದರ ಮೂಲಕ ಈ ಮಹತ್ತರವಾದ ಯೋಜನೆಯನ್ನು ಆರಂಭಿಸಿದರು. ಹೆಚ್ಚಿನ ಸಾರ್ವಜನಿಕ ಪ್ರದೇಶಗಳಲ್ಲಿ ಕೊಳೆ, ಕಸಗಳನ್ನು ನೋಡಿ ತಾವೇನೂ ಮಾಡಲಾಗದೇ, ಅವುಗಳಿಗೆ ಅನಿವಾರ್ಯವಾಗಿ ಹೊಂದಿಕೊಂಡಂತಿದ್ದ ಬಹಳಷ್ಟು ಜನರಲ್ಲಿ ಆಶಾಭಾವನೆಗಳು ಚಿಗುರೊಡೆದಿವೆ.
ಸ್ವಚ್ಛ ಭಾರತ ಅಭಿಯಾನದ ಮೂಲ ಉದ್ದೇಶಗಳು:
* ಬಯಲು ಶೌಚ ನಿರ್ಮೂಲನೆ
* ಮಲ ಹೊರುವ ಪದ್ಧತಿಯ ಸಂಪೂರ್ಣ ನಿರ್ಮೂಲನೆ.
* 100% ಘನತ್ಯಾಜ್ಯಗಳ ನಿರ್ವಹಣೆ/ಮರುಬಳಕೆ/ಸಂಸ್ಕರಣೆ
* ಸಾರ್ವಜನಿಕರಲ್ಲಿ ನಿರ್ಮಲೀಕರಣಕ್ಕಾಗಿ ಮಾನಸಿಕ ಬದಲಾವಣೆ
* ಸಂಪೂರ್ಣ ಕೊಳಗೇರಿ ನಿರ್ಮೂಲನೆ.
* ಸಾರ್ವಜನಿಕರಲ್ಲಿ ನಿರ್ಮಲೀಕರಣ ಮತ್ತು ಸಾಮಾಜಿಕ ಸ್ವಾಸ್ಥ್ಯದ ನಡುವಿರುವ ಸಂಬಂಧದ ಬಗ್ಗೆ ಜನಜಾಗೃತಿ ಮೂಡಿಸುವುದು ಹಾಗೂ ಇತರೆ.
ಸ್ವಚತೆಯಿಂದ ಜೀವನದಲ್ಲಿ ಆರೋಗ್ಯ ಮತ್ತು ಅಭಿವೃಧಿಯನ್ನು ಹೊಂದಬಹುದು ಎನ್ನುವ ಗಾಂಧೀಜಿಯವರ ಮಾತನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಭಾರತ ಸರ್ಕಾರವು ಗಾಂಧೀ ಜಯಂತಿಯಂದೇ ಸ್ವಚ ಭಾರತ ಅಭಿಯಾನವನ್ನು ಆರಂಭಿಸಲು ನಿರ್ಧರಿಸಿತು. ಈ ಧ್ಯೇಯವು ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಒಳಗೊಂಡಿರುತ್ತದೆ. ನಗರದಲ್ಲಿ ನಗರಾಭಿವೃದ್ಧಿ ಸಚಿವಾಲಯ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ಕಾರ್ಯಗತಗೊಳಿಸುವ ಹೊಣೆ ಹೊತ್ತಿದೆ.
ನಗರ ಪ್ರದೇಶದ ಸ್ವಚ್ಛ ಭಾರತ ಅಭಿಯಾನ :
ಪ್ರತಿ ಪಟ್ಟಣವನ್ನು ಗಮನದಲ್ಲಿ ಇಟ್ಟುಕೊಂಡು 2.5 ಲಕ್ಷ ಸಾಮೂಹಿಕ ಶೌಚಾಲಯಗಳು, 2.6 ಲಕ್ಷ ಸಾರ್ವಜನಿಕ ಶೌಚಾಲಯಗಳು ಹಾಗೂ ಘನ ತ್ಯಾಜ್ಯ ನಿರ್ವಹಣೆ ಸೌಲಭ್ಯ , 1.04 ಕೋಟಿ ಕುಟುಂಬಗಳಿಗೆ ಒದಗಿಸುವ ಗುರಿ ಹೊಂದಿದೆ. ಈ ಯೋಜನೆಯಡಿ, ಸಮುದಾಯ ಶೌಚಾಲಯಗಳನ್ನು ಪ್ರತಿಮನೆಯಲ್ಲಿ ನಿರ್ಮಿಸಲು ಕಷ್ಟವಾಗಿರುವುದರಿಂದ ವಸತಿ ಪ್ರದೇಶಗಳಲ್ಲಿ ನಿರ್ಮಿಸಲಾಗುವುದು. ಸಾರ್ವಜನಿಕ ಶೌಚಾಲಯಗಳನ್ನು ಸಹ ಪ್ರವಾಸಿ ಸ್ಥಳಗಳು, ಮಾರುಕಟ್ಟೆಗಳು, ಬಸ್ ನಿಲ್ದಾಣಗಳಲ್ಲಿ, ರೈಲು ನಿಲ್ದಾಣಗಳು, ಇತ್ಯಾದಿ ಮಾಹಿತಿ ಗೊತ್ತುಪಡಿಸಿದ ಸ್ಥಳಗಳಲ್ಲಿ ನಿರ್ಮಿಸಲಾಗುವುದು.
ಸುಮಾರು 4.401 ಪಟ್ಟಣಗಳಲ್ಲಿ ಐದು ವರ್ಷಗಳ ಅವಧಿಯಲ್ಲಿ ನಡೆಸುವ
ಯೋಜನೆ ಇದಾಗಿದ್ದು, ಸುಮಾರು 62,009 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುವ ಸಾಧ್ಯತೆ ಇದೆ. ಕೇಂದ್ರವು 14.623 ಕೋಟಿ ರೂಪಾಯಿ ಒದಗಿಸುವ ಸಾಧ್ಯತೆ ಇದ್ದು, ಕೇಂದ್ರದ ಪಾಲಿನಲ್ಲಿ 7.366 ಕೋಟಿ ರೂಪಾಯಿಯನ್ನು ತ್ಯಾಜ್ಯ ವಿಲೇವಾರಿಗೆ, ಮನೆಯ ಶೌಚಾಲಯಗಳಿಗೆ 4.165 ಕೋಟಿ ರೂಪಾಯಿ , ಸಾರ್ವಜನಿಕ ಜಾಗೃತಿಗೆ 1,828 ಕೋಟಿ ರೂಪಾಯಿ ಮತ್ತು ಸಮುದಾಯ ಶೌಚಾಲಯಗಳಿಗೆ 655 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುವುದು. ಈ ಯೋಜನೆಯು ಬಯಲು ಮಲವಿಸರ್ಜನೆಯನ್ನು ನಿಲ್ಲಿಸುವುದು, ಅನಾರೋಗ್ಯಕರ ಶೌಚಾಲಯಗಳ ಪರಿವರ್ತನೆ ಒಳಗೊಂಡಿದೆ. ಮಲಹೊರುವ ಪದ್ಧತಿ ಯನಿರ್ಮೂಲನೆ, ಘನ ತ್ಯಾಜ್ಯ ನಿರ್ವಹನೆ ಮತ್ತು ಆರೋಗ್ಯಕರ ನೈರ್ಮಲ್ಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಜನರಲ್ಲಿ ಒಂದು ವರ್ತನೆಯ ಬದಲಾವಣೆ ತರುವ ಉದ್ದೇಶ ಹೊಂದಿದೆ.
ಗ್ರಾಮೀಣ ಪ್ರದೇಶದ ಸ್ವಚ್ಛ ಭಾರತ ಅಭಿಯಾನ :
ನಿರ್ಮಲ ಭಾರತ ಅಭಿಯಾನವನ್ನು ಸ್ವಚ ಭಾರತ ಅಭಿಯಾನ (ಗ್ರಾಮೀಣ) ಎಂದು ಮರುರೂಪು ಮಾಡಲಾಗಿದ್ದು, ಐದು ವರ್ಷಗಳಲ್ಲಿ ಭಾರತವನ್ನು ಒಂದು ಬಯಲು ಮಲವಿಸರ್ಜನೆ ರಹಿತ ದೇಶವನ್ನಾಗಿ ಮಾಡಲು ಉದ್ದೇಶಿಸಿದೆ. ಒಂದು ಲಕ್ಷ ಮೂವತ್ತು ನಾಲ್ಕು ಸಾವಿರ ಕೋಟಿ ರೂಪಾಯಿ ಅನ್ನು ದೇಶದಲ್ಲಿ ಸುಮಾರು 11 ಕೋಟಿ 11 ಲಕ್ಷ ಶೌಚಾಲಯಗಳ ನಿರ್ಮಾಣಕ್ಕೆ ಖರ್ಚು ಮಾಡಲಾಗುವುದು. ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ತ್ಯಾಜ್ಯವನ್ನು ಜೈವಿಕ ಗೊಬ್ಬರ ಮತ್ತು ಶಕ್ತಿಯ ವಿವಿಧ ರೂಪಗಳ ರೂಪಗಳಲ್ಲಿ ಪರಿವರ್ತಿಸಲು ಯೋಜಿಸಲಾಗಿದೆ. ದೇಶದಲ್ಲಿನ ಪ್ರತಿಯೊಂದು ಗ್ರಾಮ ಪಂಚಾಯತಿ, ಪಂಚಾಯತ್ ಸಮಿತಿ ಮತ್ತು ಜಿಲ್ಲಾ ಪರಿಷತ್ ಗಳಲ್ಲಿ ತ್ವರಿತ ಗತಿ ಇಂದ ನಡೆಸಲು ಉದ್ದೆಶಿಸಿದೆ. ಈ ಪ್ರಯತ್ನದಲ್ಲಿ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಹೆಚ್ಚಿನ ವಿಭಾಗಗಳಲ್ಲಿ ಸೆಳೆದುಕೊಂಡು ನಡೆಸುವ ಆಲೋಚನೆ ಮಾಡಲಾಗಿದೆ .
ಕಾರ್ಯಾಚರಣೆಯ ಭಾಗವಾಗಿ ಗ್ರಾಮೀಣ ಮನೆಗಳ ಶೌಚಾಲಯ ಘಟಕದ ವೆಚ್ಚ ನಿಬಂಧನೆಯನ್ನು 10,000 ದಿಂದ 12,000 ರೂಪಾಯಿಗೆ ಹೆಚ್ಚಿಸಲಾಗಿದೆ. ಇದರಿಂದ ನೀರಿನ ಲಭ್ಯತೆಯನ್ನು ಒದಗಿಸಲು ಅನುಕೂಲವಾಗುತ್ತದೆ. ಇಂತಹ ಶೌಚಾಲಯಗಳ ನಿರ್ಮಾಣದಲ್ಲಿ ಕೇಂದ್ರ ಪಾಲು 9,000 ರೂಪಾಯಿ ಮತ್ತು ರಾಜ್ಯದ ಪಾಲು 3,000 ರೂಪಾಯಿ ಆಗಿರುತ್ತದೆ. ಈಶಾನ್ಯ ರಾಜ್ಯಗಳು, ಜಮ್ಮು ಮತ್ತು ಕಾಶ್ಮೀರ ಮತ್ತು ವಿಶೇಷ ಪ್ರದೇಶ ಗಳ ಅಡಿಯಲ್ಲಿ ಬರುವ ರಾಜ್ಯಗಳಿಗೆ ಕೇಂದ್ರದ ಪಾಲು 10,800 ರೂಪಾಯಿ ಮತ್ತು ರಾಜ್ಯದ ಪಾಲು 1,200 ರೂಪಾಯಿ ಆಗಿರುತ್ತದೆ. ಇದಷ್ಟೇ ಅಲ್ಲದೆ ಇತರ ಮೂಲಗಳಿಂದ ಹೆಚ್ಚುವರಿ ಕೊಡುಗೆಗಳ ಅನುಮತಿ ಇರುತ್ತದೆ.
ಮೋದಿಯವರು ಸಾರ್ವಜನಿಕರಿಗೆ ತಮ್ಮ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಕರೆ ನೀಡಿರುವುದರ ಜೊತೆಗೆ ಅಂಬಾನಿ, ಸಚಿನ್ ತೆಂಡೂಲ್ಕರ್ರಂತಹ ಪ್ರಭಾವಿ ವ್ಯಕ್ತಿಗಳಿಗೆ ಒಂದು ಪ್ರದೇಶವನ್ನು ಸ್ವಚ್ಛಗೊಳಿಸುವುದು ಹಾಗೂ ಇನ್ನಿತರರಿಗೂ ಅದೇ ರೀತಿ ಮಾಡುವಂತೆ ಕರೆ ನೀಡುವ ಮೂಲಕ ಅಭಿಯಾನಕ್ಕೆ ಕೈಜೋಡಿಸಲು ಆಹ್ವಾನಿಸಿದ್ದರು. ಹೆಚ್ಚಿನವರು ಸಾರ್ವಜನಿಕವಾಗಿಯೂ ಈ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಸ್ವತಃ ಪ್ರಧಾನಿಯವರ ಒತ್ತಾಸೆ, ಇತರ ಪ್ರಮುಖರ ಹಾಗೂ ಸರ್ಕಾರೇತರ ಸಂಸ್ಥೆಗಳ ಬೆಂಬಲ, ಸಾರ್ವಜನಿಕರ ಸಹಭಾಗಿತ್ವ, ಜಾಲತಾಣ, ಮಾಧ್ಯಮಗಳ ಮೂಲಕ ಸ್ವಚ್ಛತೆಯ ವಿಷಯದ ಕುರಿತ ಪ್ರಚಾರ… ಆದರೆ ಈ ರೀತಿಯ ಕ್ರಮಗಳು ಕಸ ನಿರ್ವಹಣೆಯ ಹೊಣೆ ಹೊತ್ತಿರುವ ಸ್ಥಳೀಯ ಆಡಳಿತಗಳಿಗೆ ಹಾಗೂ ಎಲ್ಲೆಂದರಲ್ಲಿ ಕಸವನ್ನು ಬಿಸಾಡುತ್ತಿದ್ದ ಜನರಿಗೂ ಒಂದಷ್ಟು ಒತ್ತಡ ಉಂಟುಮಾಡಿದ್ದಂತೂ ನಿಜ!!
ಸ್ವಚ್ಛ ಭಾರತದ ಕನಸು…………..!!
* ದೇಶದ ಪ್ರತಿಯೊಂದು ಸಾರ್ವಜನಿಕ ಆಸ್ತಿಪಾಸ್ತಿಗಳು ಸ್ವಚ್ಛವಾಗಿದ್ದು ಅಲ್ಲಿನ ಪರಿಸರ ನಿರ್ಮಲವಾಗಿರಬೇಕು.
* ಪ್ರತಿಯೊಂದು ಮನೆ ಮತ್ತು ಪ್ರತಿಯೊಬ್ಬ ವ್ಯಕ್ತಿಯ ಒಳಗಿನ ಮನುಷ್ಯ ಜಾಗೃತನಾಗಬೇಕು ಸ್ವಚ್ಛತೆಯ ಅರಿವು ಮೂಡಬೇಕು.
* ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಸ್ವಚ್ಛತೆಯ ಅವಶ್ಯಕತೆ ದೇಶದ ಯುವಜನತೆಗೆ ಹೇಗೆ ಸಹಕಾರಿ ಎಂಬ ವಿಷಯ ತಿಳಿಸುವುದು.
* ಮನೆ, ಶಾಲೆ, ಆಸ್ಪತ್ರೆ, ಹಳ್ಳಿ, ನಗರ, ರಾಜ್ಯ ದೇಶ ಎಲ್ಲಿ ನೋಡಿದರು ಸ್ವಚ್ಛತೆ ಇರಬೇಕು. ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದಲ್ಲಿ ಮನುಷ್ಯರಿಗೆ ತಗುಲುವ ರೋಗಗಳಿಂದ ಮುಕ್ತಿ ದೊರೆಯುತ್ತದೆ.
* ಗಾಂಧೀಜಿ ಕಂಡ ಕನಸು ನೆನಸು ಮಾಡುವುದು. ಸ್ವಚ್ಛ ದೇಶವನ್ನು ನಿರ್ಮಾಣ ಮಾಡುವುದು. ಗಾಂಧೀಜಿಯವರ ಹುಟ್ಟು ಹಬ್ಬಕ್ಕೊಂದು ಅರ್ಥಕೊಡುವುದು.
* ದೇಶದ ಎಲ್ಲಾ ಜನರಲ್ಲಿ ಸ್ವಚ್ಛತೆಯ ಅರಿವು ಮೂಡಿಸಿ ದೇಶ ಕಟ್ಟುವ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಉತ್ತೇಜನ ನೀಡುವುದು.
* ದೇಶದಲ್ಲಿ ದಾರಿದ್ರ್ಯ ಬಡತನ ಹೋಗಲಾಡಿಸಿ ಎಲ್ಲರಿಗೂ ಸಮಬಾಳು ಸಮಪಾಲು ನೀಡುವುದು. ನಮ್ಮೊಳಗಿನ ಸ್ವಚ್ಛತೆಯ ಭಾವ ದೇಶಕ್ಕಾಗಿ ದುಡಿದು ಉತ್ತಮ ರಾಷ್ಟ್ರ ನಿರ್ಮಾಣ ಮಾಡಲು ಪಣತೊಡುವುದು.
‘ನಮ್ಮ ಸರ್ಕಾರದ ಮೇಲೆ ಭರವಸೆ ಇಲ್ಲದಿದ್ದರೂ ಸರಿ. ಮಹಾತ್ಮ ಗಾಂಧೀಜಿ ಅವರ ಮೇಲೆ ನಂಬಿಕೆ ಇಡಿ. ಗಾಂಧೀಜಿ ದೇಶವನ್ನು ಗುಲಾಮಗಿರಿಯಿಂದ ಮುಕ್ತಿಗೊಳಿಸಿದರು. ಆ ಮೂಲಕ ನಮ್ಮನ್ನು ಸ್ವತಂತ್ರಗೊಳಿಸಿದರು. ಸ್ವಚ್ಛ ಮತ್ತು ಸ್ವಸ್ಥ ಭಾರತ ಗಾಂಧೀಜಿ ಅವರ ಕನಸಾಗಿತ್ತು. ದೇಶವನ್ನು ಸ್ವಚ್ಛಗೊಳಿಸುವ ಮೂಲಕ ನಾವು ಅವರ ಕನಸನ್ನು ನನಸಾಗಿಸುತ್ತೇವೆ. ಸ್ವಚ್ಛ ಭಾರತ ಕಾರ್ಯ ಎಲ್ಲರಿಗೂ ಸೇರಿದ್ದು. ಇದಕ್ಕೆ ರಾಜಕೀಯ ಬಣ್ಣ ಸೇರಿಸುವುದು ಬೇಡ. ರಾಷ್ಟ್ರಭಕ್ತಿಯಿಂದ ಎಲ್ಲರೂ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಳ್ಳೋಣ. ಅಭಿಯಾನಕ್ಕೆ ಎಲ್ಲ ರಾಜ್ಯಗಳೂ ಸಹಕರಿಸಿದ್ದು, ಅವರೆಲ್ಲರಿಗೂ ನನ್ನ ಅಭಿನಂದನೆಗಳು’. ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ!!
ದೇಶದಲ್ಲಿ ಪ್ರತಿಯೊಬ್ಬರೂ ಎಲ್ಲ ಬಗೆಯ ಸ್ವಚ್ಛತೆಯ ಸೌಲಭ್ಯಗಳನ್ನು ಕಲ್ಪಿಸುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದ್ದು, ಜನರನ್ನು ಸ್ವಚ್ಛತೆಯೆಡೆಗೆ ಕರೆದೊಯ್ಯೂವ ಮಹತ್ವದ ಹೆಜ್ಜೆಗೆ ಅಣಿಯಾಗಿರುವ ಮಾನ್ಯ ಪ್ರಧಾನಮಂತ್ರಿಗಳು, ದೇಶದಲ್ಲಿಯ ಅನಾರೋಗ್ಯ ಹೊಡೆದೂಡಿಸಲು ಶ್ರಮವಹಿಸುತ್ತಿದ್ದಾರೆ. ನರೇಂದ್ರ ಮೋದಿಯ ಕಲ್ಪನೆಯಂತೆ ಸ್ವಚ್ಛ ಭಾರತ ಕನಸಿಗೆ ಪೂರಕವಾಗಿ ದೇಶದಲ್ಲಿ ಸ್ವಚ್ಛತೆಯ ಅಡಿಪಾಯ ಹಾಕಿದ್ದು, ಈ ಯೋಜನೆಯು ಅನುಪಾಲನೆಯಾದಲ್ಲಿ ದೇಶದ ಸ್ವಚ್ಛತೆಯ ಮಹತ್ವದ ಘಟ್ಟವೊಂದು ಹೊರಬರಲಿದೆ.
– ಅಲೋಖಾ