ಪಾಪಿ ಪಾತಾಳಕ್ಕೆ ಹೋದರೂ ಮೊಣಕಾಲುದ್ದ ನೀರು ಎನ್ನುವ ಗಾದೆಯ ಹಾಗೆ, ಕಾಂಗ್ರೆಸ್ ಪಕ್ಷದ ಯುವರಾಜ ರಾಹುಲ್ ಗಾಂಧಿ ಹೋದಲ್ಲೆಲ್ಲಾ ಸಮಸ್ಯೆಗಳೇ ಸೃಷ್ಟಿಯಾಗುತ್ತವೆ. ಅವರು ಕಾಲಿಟ್ಟಲ್ಲಿ ಎಲ್ಲಾ ಕಡೆಗಳಲ್ಲಿಯೂ ವಿವಾದಗಳು ಸರ್ವೇ ಸಾಮಾನ್ಯ. ವಿವಾದಾತ್ಮಕ ಹೇಳಿಕೆಗಳ ಮೂಲಕ ಸದಾ ನಕಾರಾತ್ಮಕವಾಗಿ ಸುದ್ದಿಯಾಗುವ, ಆ ಮೂಲಕ ಸಾರ್ವಜನಿಕರಿಂದ ಉಗಿಸಿಕೊಳ್ಳುವ ರಾಗಾ ಗೆ ಈಗ ಮತ್ತೊಂದು ಸಂಕಷ್ಟ ಸುತ್ತಿಕೊಂಡಿದೆ.
‘ಶಕ್ತಿ’ ವಿಷಯಕ್ಕೆ ಸಂಬಂಧಿಸಿದ ಹಾಗೆ ರಾಹುಲ್ ಗಾಂಧಿ ವಿವಾದಾತ್ಮಕವಾಗಿ ಮಾತನಾಡಿದ್ದು, ಅವರ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ರಾಹುಲ್ ಗಾಂಧಿ ಹಿಂದೂ ಧರ್ಮವನ್ನು, ಹಿಂದೂಗಳನ್ನು ಅವಮಾನಿಸುವ ಹೇಳಿಕೆ ನೀಡಿದ್ದಾರೆ. ಸಾರ್ವಜನಿಕ ವಲಯದಲ್ಲಿ ಸ್ತ್ರೀ ದ್ವೇಷ ಬಿತ್ತುವ ಕೆಲಸವನ್ನು ರಾಹುಲ್ ಗಾಂಧಿ ಮಾಡಿದ್ದಾರೆ. ಹಾಗೆಯೇ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ (ಇವಿಎಂ) ಬಳಕೆಯ ವಿಷಯವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್ನ ಘನತೆಯನ್ನು ಅಗೌರವಿಸುವ ಕಾರ್ಯವನ್ನು ಕಾಂಗ್ರೆಸ್ ನಾಯಕ ಮಾಡಿರುವುದಾಗಿ ಬಿಜೆಪಿ ದೂರಿನಲ್ಲಿ ಚುನಾವಣಾ ಆಯೋಗಕ್ಕೆ ತಿಳಿಸಿದೆ.
ಕೆಲ ದಿನಗಳ ಹಿಂದೆ ಮುಂಬೈನಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟದ ಸಭೆಯಲ್ಲಿ ‘ಶಕ್ತಿ’ ಗೆ ಸಂಬಂಧಿಸಿದ ಹಾಗೆ ರಾಹುಲ್ ಆಡಿರುವ ಮಾತುಗಳನ್ನು ಯಥಾವತ್ತಾಗಿ ದೂರಿನಲ್ಲಿ ತಿಳಿಸಲಾಗಿದೆ. ಆ ಮೂಲಕ ಶಕ್ತಿ ಎಂದು ಕರೆಯಲ್ಪಡುವ ಹಿಂದೂ ದೇವರಾದ ದುರ್ಗಾ ಮಾತೆಯ ಆರಾಧಕರನ್ನು ಅವಮಾನಿಸುವ, ಅವರ ವಿರುದ್ಧ ದ್ವೇಷ ಹರಡುವ ಕೆಲಸವನ್ನು ಮಾಡಿದ್ದಾರೆ ಎಂಬುದಾಗಿಯೂ ಬಿಜೆಪಿ ಆರೋಪಿಸಿದೆ.
ಈ ಸಮಾವೇಶದಲ್ಲಿ ರಾಗಾ ‘ಹಿಂದೂ ಧರ್ಮದಲ್ಲಿ ಒಂದು ಶಬ್ದವಿದೆ. ಅದುವೇ ಶಕ್ತಿ. ನಾವು ಆ ಶಕ್ತಿಯ ವಿರುದ್ಧ ಹೋರಾಟ ಮಾಡುತ್ತೇವೆ. ಆದರೆ ಸವಾಲು ಎಂದರೆ ಆ ಶಕ್ತಿ ಯಾವುದು ಎನ್ನುವುದು. ರಾಜನ ಆತ್ಮ ಇವಿಎಂ ಆಗಿದೆ. ಇದು ಸತ್ಯ. ರಾಜನ ಆತ್ಮ ಇವಿಎಂ ನಲ್ಲಿ ಇದೆ ಎಂದು ಅವರು ಪ್ರಧಾನಿ ಮೋದಿ ಅವರನ್ನು ಮತ್ತು ಡಿಜಿಟಲೈಸ್ಡ್ ವೋಟಿಂಗ್ ಮೆಥಡ್ ಅನ್ನು ವ್ಯಂಗ್ಯ ಮಾಡಿದ್ದಾರೆ. ಆ ಮೂಲಕ ಇವಿಎಂ ಪದ್ದತಿಯನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್ಗೂ ಅವಮಾನ ಎಸಗಿರುವುದಾಗಿದೆ.
ಹಿಂದೂಗಳಲ್ಲಿ ಶಕ್ತಿ ಎಂದೇ ಕರೆಯಲ್ಪಡುವ ದುರ್ಗಾ ಮಾತೆಯನ್ನು ಅತ್ಯಂತ ಪೂಜನೀಯ ಭಾವದಿಂದ ಜನರು ಕಾಣುತ್ತಾರೆ. ರಾಹುಲ್ ಗಾಂಧಿ ಹಿಂದೂಗಳು, ಹಿಂದೂ ಧರ್ಮ – ದೇವರುಗಳ ಬಗ್ಗೆ ಅಸಹ್ಯಕರವಾಗಿ ಮಾತನಾಡಿ, ಹಿಂದೂಗಳ ಭಾವನೆಗಳನ್ನು ಕೆರಳಿಸಿದ್ದಾರೆ. ಇದು ಅವರ ಮಾನಸಿಕ ದುರುದ್ದೇಶವನ್ನು ಸಾಬೀತು ಮಾಡಿದೆ. ಧರ್ಮಗಳ ನಡುವೆ ದ್ವೇಷ ಬಿತ್ತುವ ಕೆಲಸವನ್ನು ಕಾಂಗ್ರೆಸ್ ನಾಯಕ ಮಾಡಿರುವುದಾಗಿ ಬಿಜೆಪಿ ದೂರಿನಲ್ಲಿ ತಿಳಿಸಿದೆ.