ಜನತಾ ದಳ ಹಾಗೂ ಕಾಂಗ್ರೆಸ್ನ ಮೈತ್ರಿ ಸರ್ಕಾರ ತೂಗುಗತ್ತಿಯಲ್ಲಿ ನೇತಾಡುತ್ತಿರುವುದು ರಾಜ್ಯದ ಜನತೆಗೆ ಗೊತ್ತಿರುವ ವಿಚಾರವೆ. ಕೇವಲ 38 ಸ್ಥಾನಗಳನ್ನು ಗೆದ್ದ ಜನತಾ ದಳ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುತ್ತಿದೆ. ಇದಕ್ಕೆ 78 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಇದೀಗ ಈ ಮೈತ್ರಿ ಸರ್ಕಾರಕ್ಕೆ ಸ್ವತಃ ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಸಹೋದರನೇ ಮುಳುವಾಗಬಹುದೇ ಎಂಬ ಸಂದೇಹ ಮೂಡುತ್ತದೆ.
ಇಂದು ನಡೆದಿದ್ದ ಸಭೆಯೊಂದರಲ್ಲಿ ಕುಮಾರ ಸ್ವಾಮಿಯವರು ತನ್ನ ಸಹೋದರ ಹೆಚ್.ಡಿ.ರೇವಣ್ಣನಿಗೆ ಅವಮಾನ ಮಾಡಿದ ಘಟನೆ ನಡೆದಿದ್ದು, ಸರ್ಕಾರದ ಭವಿಷ್ಯ ಸ್ಪಷ್ಟವಾಗಿ ಗೋಚರಿಸುವಂತೆ ಮಾಡಿದ್ದಾರೆ. ಇಂದು ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಕೆಲ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಕರೆದಿದ್ದರು. ಈ ಸಭೆಗೆ ಕರೆಯದೆ ಬಂದ ಅಥಿತಿಯೋರ್ವರು ಭಾಗವಹಿಸಿದ್ದರು. ಅವರು ಮತ್ಯಾರೂ ಅಲ್ಲ, ಸ್ವತಃ ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಸಹೋದರ ಹಾಗೂ ಶಾಸಕ ರೇವಣ್ಣ.
ಅಪೇಕ್ಷಿತರಲ್ಲದಿದ್ದರೂ ಈ ಸಭೆಗೆ ಆಗಮಿಸಿದ್ದ ರೇವಣ್ಣ ಮುಖ್ಯಮಂತ್ರಿ ಕುಮಾರ ಸ್ವಾಮಿಗೆ ಕಿರಿಕಿರಿಯುಂಟುಮಾಡುತ್ತಿದ್ದರು. ಅಧಿಕಾರಿಗಳೊಂದಿಗೆ ಮಾತನಾಡುವಾಗ ಮಧ್ಯಪ್ರವೇಶಿಸಿ ಮಾತನಾಡುತ್ತಿದ್ದು ಕುಮಾರ ಸ್ವಾಮಿಗೆ ಇರಿಸು ಮುರಿಸು ಉಂಟುಮಾಡುತ್ತಿತ್ತು. ಕೆಲ ಹೊತ್ತು ಎಲ್ಲವನ್ನೂ ತಾಳ್ಮೆಯಿಂದ ನೋಡುತ್ತಿದ್ದ ಕುಮಾರ ಸ್ವಾಮಿ ನಂತರ ರೇವಣ್ಣನನ್ನು ದಬಾಯಿಸಿಯೇಬಿಟ್ಟರು. “ಯೇ ರೇವಣ್ಣ… ನೀನು ಮಾತನಾಡುವುದಿದ್ದರೆ ಪತ್ರಿಕಾ ಗೋಷ್ಟಿ ಕರೆದು ಮಾತನಾಡಪ್ಪಾ, ಸುಮ್ನೆ ಇಲ್ಲಿ ಮಾತಾಡೋಕೆ ಬಿಡು” ಎಂದು ದಬಾಯಿಸಿದರು.
ಇದು ರೇವಣ್ಣರಿಗೆ ಅವಮಾನಉಂಟುಮಾಡಿದ್ದಂತು ಮಾತ್ರ ಸುಳ್ಳಲ್ಲ. ಅತಿದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಅಧಿಕಾರಿಗಳು ಬಿಟ್ಟ ಕಣ್ಣು ಬಿಟ್ಟಂಗೆ ಇವರನ್ನು ನೋಡುತ್ತಿದ್ದರು. ಜನತಾ ದಳದ ನಾಯಕ ಹಾಗೂ ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಸಹೋದರ ರೇವಣ್ಣರಿಗೆ ತನ್ನ ಸಹೋದರನಿಂದಲೇ ಅವಮಾನವಾಗುತ್ತಿದ್ದನ್ನು ನೋಡಿದ ಅಧಿಕಾರಿಗಳು ದಂಗಾಗಿ ಹೋಗಿದ್ದರು. ಆದರೆ ರೇವಣ್ಣ ಮಾತ್ರ ಏನೂ ಆಗಿಲ್ಲವೆಂಬಂತೆ ತನ್ನಷ್ಟಕ್ಕೇ ಮಾತನಾಡತೊಡಗಿದರು.
ಇತ್ತೀಚೆಗೆ ಮುಖ್ಯಮಂತ್ರಿ ಕುಮಾರ ಸ್ವಾಮಿ ಹಾಗೂ ಸರ್ಕಾರದ ಆಡಳಿತ ವೈಖರಿಗಳಲ್ಲಿ ರೇವಣ್ಣ ಮೂಗುತೂರಿಸುತ್ತಿರುವುದು ಕುಮಾರ ಸ್ವಾಮಿ ಸಹಿತ ಮೈತ್ರಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದು ಭವಿಷ್ಯಕ್ಕೆ ಒಳ್ಳೆಯದಲ್ಲ ಎಂಬ ಸಂದೇಶವನ್ನು ಸ್ವತಃ ಜನತಾ ದಳದ ಮುಖಂಡರೇ ನೀಡಿದ್ದಾರೆ. ಅಷ್ಟಾಗಿಯೂ ಇದನ್ನು ಮುಂದುವರೆಸಿದ್ದ ರೇವಣ್ಣಗೆ ಸಿಎಂ ಸರಿಯಾಗಿಯೇ ಛಾಟಿ ಬೀಸಿದ್ದಾರೆ.
-ಏಕಲವ್ಯ