ಪ್ರಧಾನಿ ಮೋದಿ ಸಂಪುಟದ ಸಚಿವರೆಂದರೇ ಹಾಗೆ. ಒಂದಲ್ಲಾ ಒಂದು ವಿಶಿಷ್ಟವಾದ ಆಲೋಚನೆಗಳಿಂದಲೇ ಮನೆಮಾತಾದವರು. ಕೇವಲ ಅಧಿಕಾರದ ಚೌಕಟ್ಟು ಮಾತ್ರವಲ್ಲದೆ ಅದರ ವ್ಯಾಪ್ತಿಯಿಂದ ಹೊರಗಿರುವ ಅಂಶವನ್ನೂ ಹಿಡಿದುಕೊಂಡು ದೇಶದಲ್ಲೇ ಹೊಸ ಆಂದೋಲನಕ್ಕೆ ಕಾರಣರಾಗುತ್ತಾರೆ ಪ್ರಧಾನಿ ಮೋದಿ ಸಂಪುಟದ ಕೇಂದ್ರ ಸಚಿವರು. ಇದೀಗ ಅದೇ ಆಂದೋಲನ ಕನ್ನಡ ಚಿತ್ರರಂಗದ ಸ್ಟಾರ್ ನಟರ ಅಭಿಮಾನಿಗಳಲ್ಲಿ ಕಿತ್ತಾಡುವಂತೆ ಮಾಡಿದೆ.
ಹೌದು… ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಸಂಪುಟದ ಕ್ರೀಡಾ ಸಚಿವ ರಾಜವರ್ಧನ್ ರಾಥೋರ್ ಅವರು ಒಂದು ಆಂದೋಲನವನ್ನು ಆರಂಭಿಸಿದರು. ದೇಶದ ಜನತೆಯ ಆರೋಗ್ಯದ ದೃಷ್ಟಿಯಿಂದ ಫಿಟ್ ನೆಸ್ ಛಾಲೆಂಜ್ ಎಂಬ ಆಂದೋಲನವನ್ನು ಆರಂಭಿಸಿದ್ದರು. ನಾನು ಫಿಟ್ ದೇಶ ಫಿಟ್ ಎಂಬ ಘೋಷವಾಕ್ಯದೊಂದಿಗೆ ಈ ಆಂದೋಲನವನ್ನು ಆರಂಭಿಸಿದ್ದರು.
ಈ ಬಗ್ಗೆ ಮೊದಲು ವೀಡಿಯೋ ಮಾಡಿ ಟ್ವೀಟ್ ಮಾಡಿದ್ದ ರಾಥೋರ್ ಕ್ರಿಕೆಟಿಗ ವಿರಾಟ್ ಕೋಹ್ಲಿ ಸಹಿತ ಮೂವರಿಗೆ ಛಾಲೆಂಜ್ ಹಾಕಿದ್ದರು. ಚಾಲೆಂಜ್ ಸ್ವೀಕರಿಸಿದ್ದ ಕೋಹ್ಲಿ ಪ್ರಧಾನಿ ಮೋದಿಗೂ ಛಾಲೆಂಜ್ ಹಾಕಿದ್ದರು. ಹೀಗೆ ಫಿಟ್ನೆಸ್ ಛಾಲೆಂಜ್ ದೇಶದೆಲ್ಲೆಡೆ ಭಾರೀ ಸುದ್ಧಿಯಾಗಿತ್ತು. ಈಗಲೂ ದೇಶದೆಲ್ಲೆಡೆ ಈ ಆಂದೋಲನ ಬಹಳಾನೇ ಸುದ್ದಿ ಮಾಡುತ್ತಿದೆ.
Challenge accepted, Virat! I will be sharing my own #FitnessChallenge video soon. @imVkohli #HumFitTohIndiaFit https://t.co/qdc1JabCYb
— Narendra Modi (@narendramodi) May 24, 2018
ಈ ಆಂದೋಲನ ಇದೀಗ ಕನ್ನಡ ಚಿತ್ರರಂಗ ಇಬ್ಬರು ಸ್ಟಾರ್ ನಟರ ಅಭಿಮಾನಿಗಳ ಕಿತ್ತಾಟಕ್ಕೆ ಕಾರಣವಾಗಿದೆ. ಕನ್ನಡ ಚಿತ್ರರಂಗದ ಸ್ಟಾರ್ ನಟರಾಗಿರುವ ಕಿಚ್ಚ ಸುದೀಪ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಕಿತ್ತಾಟಕ್ಕೆ ಇದೀಗ ಈ ಆಂದೋಲನವೇ ಕಾರಣವಾಗಿದೆ.!
ಅಚ್ಚರಿಯಾದರೂ ಸತ್ಯ. ಇತ್ತೀಚೆಗೆ ಕ್ರಿಕೆಟಿಗ ವಿನಯ್ ಕುಮಾರ್ ಅವರು ಈ ಛಾಲೆಂಜನ್ನು ಕಿಚ್ಚ ಸುದೀಪ್ಗೆ ನೀಡಿದ್ದರು. ಈ ಛಾಲೆಂಜ್ ಸ್ವೀಕರಿಸಿದ್ದ ನಟ ಸುದೀಪ್ ಅದನ್ನು ನಂತರ ರಾಕಿಂಗ್ ಸ್ಟಾರ್ ಯಶ್ಗೆ ನೀಡಿದ್ದರು. ಎಲ್ಲವೂ ಅಂದುಕೊಂಡಂತೆಯೇ ಆಗಿತ್ತು. ಯಶ್ ಕೂಡಾ ಕಿಚ್ಚನ ಛಾಲೆಂಜನ್ನು ಸ್ವೀಕರಿಸಿ ಫಿಟ್ನೆಸ್ ಛಾಲೆಂಜ್ಗೆ ಸಾತ್ ನೀಡಿದ್ದರು.
ಆದರೆ ಯಡವಟ್ಟು ಆಗಿದ್ದೇ ಇಲ್ಲಿ. ಛಾಲೆಂಜ್ ಸ್ವೀಕರಿಸಿದ ರಾಕಿಂಗ್ ಸ್ಟಾರ್ ಯಶ್ ಸುದೀಪ್ಗೆ ವೀಡಿಯೋ ಮಾಡಿ ಟ್ವೀಟ್ ಮಾಡಿದ್ದರು. ಈ ವೀಡಿಯೋದಲ್ಲಿ “ಸುದೀಪ್” ಎಂದು ಕರೆದಿದ್ದಾರೆ ಅಷ್ಟೇ. ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಇದು ಪಿತ್ತ ನೆತ್ತಿಗೇರುವಂತೆ ಮಾಡಿದೆ. ಕೇವಲ ಸುದೀಪ್ ಎಂದು ಸಂಭೋದಿಸಿದ್ದೇ ಇಷ್ಟೆಲ್ಲಾ ವಿವಾದಕ್ಕೆ ಕಾರಣವಾಗಿದೆ. “ಕಿಚ್ಚ ಸುದೀಪಣ್ಣ ಯಶ್ಗಿಂತ ಮೊದಲು ಸಿನಿಮಾ ಇಂಡಸ್ಟ್ರೀಗೆ ಬಂದವರು. ಯಶ್ಗಿಂತ 10-12 ವರ್ಷ ಸುದೀಪ್ ಹಿರಿಯರು. ಆದರೆ ಯಶ್ ಸುದೀಪಣ್ಣನನ್ನು ಏಕವಚನದಲ್ಲಿ ಕರೆದಿದ್ದಾರೆ. ಇದು ಸುದೀಪ್ ಅಭಿಮಾನಿಗಳಿಗೆ ಬೇಸರವಾಗಿದೆ. ಈ ಕೂಡಲೇ ಯಶ್ ಸುದೀಪ್ ಬಳಿ ಕ್ಷಮೆ ಯಾಚಿಸಬೇಕು” ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಯಾಗಿ ಯಶ್ ಅಭಿಮಾನಿಗಳು ಕೂಡಾ ಛಾಟಿ ಬೀಸಿದ್ದಾರೆ. ಹೀಗೆ ಟ್ವಿಟರ್ನಲ್ಲಿ ವಾದ ಪ್ರತಿವಾದಗಳು ನಡೆಯುತ್ತಲೇ ಇದೆ. ಒಬ್ಬೊಬ್ಬ ಅಭಿಮಾನಿ ಒಂದೊಂತರಾ ಮಾತನಾಡುತ್ತಿದ್ದಾರೆ. ಇದು ಈಗ ಕನ್ನಡ ಸಿನಿ ರಂಗದ ಅತಿದೊಡ್ಡ ಸ್ಟಾರ್ ನಟರ ಅಭಿಮಾನಿಗಳ ನಡುವಿನ ಕಿತ್ತಾಟಕ್ಕೆ ಕಾರಣವಾಗಿದೆ.
ನಾನು ಫಿಟ್ ದೇಶ ಫಿಟ್ ಎಂಬ ಕನಸಿನೊಂದಿಗೆ ಆರಂಭವಾದ ಈ ಫಿಟ್ ನೆಸ್ ಚಾಲೆಂಜ್ ಇದೀಗ ಒಬ್ಬೊಬ್ಬ ಸ್ಟಾರ್ ನಟರ ನಡುವೆ ಹೆಸರು ಹೇಳಿಕೊಂಡು ಕಿತ್ತಾಟಕ್ಕೆ ಕಾರಣವಾಗಿದ್ದು ವಿಪರ್ಯಾಸವೇ ಸರಿ. ದೇಶದ ವಿಚಾರದಲ್ಲಿ ಸುಮ್ಮನಿದ್ದು ಬಿಡುವ ಈ ಅಭಿಮಾನಿಗಳು ಇದೀಗ ನಟರಿಗಾಗಿ ಬೊಬ್ಬೆ ಹೊಡೆಯುತ್ತಿದ್ದಾರೆ. ಹೀಗೇ ಆದರೆ ಮುಂದೊಂದು ದಿನ ದೇಶದ ಐಕ್ಯತೆಗೆ ಸಂಬಂಧಪಟ್ಟ ಪ್ರತಿ ವಿಚಾರದಲ್ಲೂ ಅಭಿಮಾನಿಗಳ ವಾರ್ ಆರಂಭವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
-ಸುನಿಲ್ ಪಣಪಿಲ