ಜಮ್ಮು ಕಾಶ್ಮೀರ ಭಾರತಕ್ಕೆ ಸಂಬಂಧಿಸಿದ್ದಾದರೂ ಅದರ ಮೇಲೆ ಪಾಕಿಸ್ತಾನ ತನ್ನ ಹಿಡಿತ ಸಾಧಿಸಲು ಬಹಳ ಹಿಂದಿನಿಂದಲೂ ವ್ಯರ್ಥ ಪ್ರಯತ್ನ ಮಾಡುತ್ತಲೇ ಬಂದಿದೆ. ಭಯೋತ್ಪಾದನೆ ಮೂಲಕ ಭಾರತದ ಮುಕುಟಮಣಿ ಜಮ್ಮು ಕಾಶ್ಮೀರವನ್ನು ತನ್ನ ವಶಕ್ಕೆ ಪಡೆಯಲು ಅದೆಷ್ಟೋ ಮಂಗನಾಟವಾಡಿದೆ. ಪಾಕಿಸ್ತಾನದ ಈ ಅತಿರೇಕದ ವರ್ತನೆ ಮತ್ತು ಭಾರತದೊಳಗಿದ್ದೇ ಕಾಶ್ಮೀರವನ್ನು ಪಾಕಿಗಳಿಗೆ ಒಪ್ಪಿಸುವ ಹುನ್ನಾರ ನಡೆಸುವ ಅದೆಷ್ಟೋ ದುರುಳರಿಗೆ ಕೇಂದೇರ ಸರ್ಕಾರ ಅರಗಿಸಿಕೊಳ್ಳಲಾಗದ ಶಾಕ್ ನೀಡಿತ್ತು.
ಆರ್ಟಿಕಲ್ 370 ರದ್ದತಿ ಮೂಲಕ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ತೊಡೆದು ಹಾಕಿ, ಕಾಶ್ಮೀರಿಗರಿಗೂ ತಾವು ಭಾರತೀಯರು ಎಂಬ ಭಾವನೆ ಮತ್ತು ಅರಿವು ಮೂಡಿಸುವಲ್ಲಿ ಕೇಂದ್ರ ಸರ್ಕಾರ ಯಶಸ್ಸು ಪಡೆದಿದೆ. ಆದರೆ ಈ ವಿರುದ್ಧ ಕೆಲವು ದುಷ್ಟರು ಕೇಂದ್ರ ಸರ್ಕಾರದ ಈ ನಿಲುವಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಎರಡು ದಿನಗಳ ಹಿಂದಷ್ಟೇ ಜಮ್ಮು ಕಾಶ್ಮೀರದ ಆರ್ಟಿಕಲ್ 370 ರದ್ದತಿಯ ಕೇಂದ್ರದ ನಿಲುವು ಸರಿಯಾಗಿದೆ. ಭಾರತದಲ್ಲಿ ಇರುವ ಎಲ್ಲಾ ರಾಜ್ಯಗಳಿಗೂ ಸಮನಾದ ಕಾನೂನು, ನೀತಿ ನಿಯಮಗಳು ಕಾಶ್ಮೀರಕ್ಕೂ ಅನ್ವಯವಾಗುತ್ತದೆ ಎಂದು ಭಾರತ ಸರ್ಕಾರದ ಈ ಆದೇಶವನ್ನು ಎತ್ತಿ ಹಿಡಿದಿತ್ತು.
ಇದು ಭಾರತದಲ್ಲಿರುವ ದೇಶವಿರೋಧಿಗಳಿಗೆ ಸಹ್ಯ ಆಗದಿದ್ದರೆ ಅದು ದೊಡ್ಡ ವಿಷಯವಲ್ಲ. ಆದರೆ ಈ ನೀತಿಗೆ ಸಂಬಂಧಿಸಿದ ಹಾಗೆ ಜಮ್ಮು ಕಾಶ್ಮೀರದ ಜೊತೆಗೆ ಯಾವುದೇ ಸಂಬಂಧ ಇರದ ಪಾಕಿಸ್ತಾನ ಮೂಗು ತೂರಿಸಿದೆ. ಭಾರತದ ಪರಮೋಚ್ಚ ಸುಪ್ರೀಂ ಕೋರ್ಟ್ ಜಮ್ಮು ಕಾಶ್ಮೀರದ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಲುವನ್ನು ಎತ್ತಿ ಹಿಡಿದಿರುವುದು ಉಗ್ರ ರಾಷ್ಟ್ರ ಪಾಕ್ಗೆ ಉರಿವಲ್ಲಿಗೆ ಉಪ್ಪಿಟ್ಟಂತಾಗಿದೆ.
ಸುಪ್ರೀಂ ಕೋರ್ಟ್ನ ನಿಲುವಿನ ಬಗ್ಗೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾತನಾಡಿದ್ದು, ಇದು ಕಾಶ್ಮೀರದ ಸಮಸ್ಯೆಯನ್ನು ಮತ್ತಷ್ಟು ಕ್ಲಿಷ್ಟಕರವಾಗಿಸುತ್ತದೆ ಎಂದು ಹೇಳಿದ್ದಾರೆ. ಹಾಗೆಯೇ ಭಾರತದ ಸುಪ್ರೀಂ ಕೋರ್ಟ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾರೆ. ಸುಪ್ರೀಂ ಕೋರ್ಟ್ನ ಈ ನಿಲುವು ಕಾಶ್ಮೀರದ ಬಹುಕಾಲದ ವಿವಾದವನ್ನು ಪರಿಹರಿಸುವ ಬದಲು ಇನ್ನಷ್ಟು ಜಟಿಲಗೊಳಿಸುತ್ತದೆ ಎನ್ನುವ ಮೂಲಕ ತನ್ನ ಅಸಮಾಧಾನ ಹೊರ ಹಾಕಿದ್ದಾರೆ. ಸದ್ಯ ಈತ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಹಕ್ಕಿಯಾಗಿದ್ದಾರೆ.
ಹಾಗೆಯೇ ನಮ್ಮ ಪಕ್ಷ ಕಾಶ್ಮೀರದ ಜನರಿಗೆ ರಾಜತಾಂತ್ರಿಕ, ನೈತಿಕ, ರಾಜಕೀಯವಾಗಿ ಬೆಂಬಲ ನೀಡುತ್ತದೆ ಎಂದಿದ್ದಾರೆ. ಕಾಶ್ಮೀರದ ಜನರಿಗೇ ಇಲ್ಲದ ಸಮಸ್ಯೆ ಪಾಕಿಸ್ತಾನಕ್ಕೆ ಇರುವುದು ನಿಜಕ್ಕೂ ಹಾಸ್ಯಾಸ್ಪದ. ತನ್ನ ಬೇಳೆ ಬೇಯಿಸಲು ಸಾಧ್ಯ ವಾದ ದಂತೆ ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ನಿಲುವು, ಪಾಕ್ಗೆ ನುಂಗಲಾರದ ತುತ್ತಾಗಿದೆ ಎನ್ನುವುದಕ್ಕೆ ಇದು ಸಾಕ್ಷಿಯೇ ಸರಿ.