ಪ್ರಚಲಿತ

ದೀಪಾವಳಿಗೆ ಅಯೋಧ್ಯೆಯ ಸರಯೂ ತಟದಲ್ಲಿ ಬೆಳಗಲಿವೆ 21 ಲಕ್ಷ ಮಣ್ಣಿನ ದೀಪಗಳು

ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣದ ಕಾರ್ಯಗಳು ಆರಂಭವಾಗಿ, ಅಲ್ಲಿಗೆ ಹೊಸತೊಂದು ಜೀವ ಚೈತನ್ಯ ಬಂದಂತಾಗಿದೆ. ಕೇಂದ್ರದಲ್ಲಿ ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶದಲ್ಲಿ ಸಿ ಎಂ ಯೋಗಿ ಆದಿತ್ಯನಾಥ್ ಅವರ ಆಡಳಿತದಲ್ಲಿ ಅಯೋಧ್ಯೆಯ ಸಂಪೂರ್ಣ ಚಿತ್ರಣವೇ ಬದಲಾಗಿ, ಅಯೋಧ್ಯೆ ಹೊಳೆಯುವಂತಾಗಿದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ.

ಐತಿಹಾಸಿಕ, ಪೌರಾಣಿಕ ಹಿನ್ನೆಲೆಯುಳ್ಳ ಅಯೋಧ್ಯೆಯಲ್ಲಿ ದೀಪಾವಳಿಯ ಸಮಯದಲ್ಲಿ ದೀಪೋತ್ಸವ ನಡೆಯುವುದು ವಾಡಿಕೆ. ಈ ಹಿಂದಿನಿಂದಲೂ ಅಯೋಧ್ಯೆಯಲ್ಲಿ ದೀಪೋತ್ಸವದ ಮೂಲಕ ದೀಪಾವಳಿಯನ್ನು ಆಚರಣೆ ಮಾಡುವ ಪರಿಪಾಠ ನಡೆದುಕೊಂಡು ಬಂದಿದ್ದು, ಈ ಬಾರಿಯ ದೀಪಾವಳಿಗೂ ಲಕ್ಷಾಂತರ ಸಂಖ್ಯೆಯ ದೀಪಗಳನ್ನು ಉರಿಸಿ, ದೀಪದ ಹಬ್ಬ ದೀಪಾವಳಿಯನ್ನು ಆಚರಣೆ ಮಾಡಲು ಅಯೋಧ್ಯೆ ಸಜ್ಜಾಗುತ್ತಿದೆ.

ಐವತ್ತೊಂದು ಘಾಟ್ ಗಳು, ಇಪ್ಪತ್ತೊಂದು ಲಕ್ಷ ಮಣ್ಣಿನ ಹಣತೆಗಳು, ಇಪ್ಪತ್ತೈದು ಸಾವಿರ ಮಣ್ಣಿನ ಹಣತೆಗಳು, ಅಯೋಧ್ಯೆಯ ಐಹಿತ್ಯವನ್ನು ‌ತಿಳಿಸುವ ಬೃಹದಾಕಾರದ ಡಿಜಿಟಲ್ ಸ್ಕ್ರೀನ್‌ಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ನಗರವನ್ನು ಒಪ್ಪ ಓರಣವಾಗಿಸಿ ಸೌಂದರ್ಯವನ್ನು ಹೆಚ್ಚಿಸುವ ಕೆಲಸ ಹೀಗೆ ಎಲ್ಲಾ ಕಾರ್ಯಗಳು ದೀಪೋತ್ಸವದ ಹಿನ್ನೆಲೆಯಲ್ಲಿ ಭರದಿಂದ ಸಾಗುತ್ತಿವೆ. ಸಂಬಂಧಿಸಿದ ಇಲಾಖೆಗಳು ಮತ್ತು ಜಿಲ್ಲಾಡಳಿತ ಈ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ರೂಪಿಸುವ ಕೈಂಕರ್ಯದಲ್ಲಿ ನಿರತವಾಗಿವೆ.

ಅಯೋಧ್ಯೆಯಲ್ಲಿ ಈ ಬಾರಿಯ ದೀಪೋತ್ಸವವನ್ನು ಐತಿಹಾಸಿಕವಾಗಿಸುವ ನಿಟ್ಟಿನಲ್ಲಿ ಭರಪೂರ ಸಿದ್ಧತೆಗಳು ನಡೆಯುತ್ತಿವೆ. ಈ ದೀಪೋತ್ಸವ ವನ್ನು ವಿಶ್ವ ದಾಖಲೆ ಮಾಡುವುದು ಬಹುತೇಕ ಖಚಿತ ಎಂಬಂತೆ ಸಿದ್ಧತೆಗಳು ಭರ್ಜರಿಯಾಗಿ ನಡೆಯುತ್ತಿವೆ. ಅಧಿಕಾರಿಗಳು ಹೇಳುವಂತೆ, ಇಪ್ಪತ್ತೊಂದು ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ವಿಶ್ವ ದಾಖಲೆ ಬರೆಯುವ ಗುರಿ ಹೊಂದಲಾಗಿದೆ.

ಸರಯು ‌ನದಿ ತೀರದ ಐವತ್ತೊಂದು ಘಾಟ್‌ಗಳಲ್ಲಿ ಇಪ್ಪತ್ತನಾಲ್ಕು ಲಕ್ಷ ದೀಪಗಳನ್ನಿಡುವ ವ್ಯವಸ್ಥೆಯಾಗುತ್ತಿದೆ. ನವೆಂಬರ್ 12 ರಿಂದ ತೊಡಗಿದ ಹಾಗೆ ಮೂರು ದಿನಗಳ ಕಾಲ ಈ ದೀಪೋತ್ಸವ ನಡೆಯಲಿದೆ. ಕಾರ್ಯಕ್ರಮದಲ್ಲಿ ಸುಮಾರು ಇಪ್ಪತ್ತೈದು ಸಾವಿರ ಸ್ವಯಂಸೇವಕರು ದೀಪ ಬೆಳಗಿಸಲಿದ್ದಾರೆ. ಉತ್ತರ ಪ್ರದೇಶ ಸರ್ಕಾರವು ದೀಪಾವಳಿಯ ಒಂದು ದಿನ ಮೊದಲಾಗಿ ಈ ದೀಪೋತ್ಸವವನ್ನು ಆಯೋಜನೆ ಮಾಡುತ್ತದೆ. ಮುಸ್ಸಂಜೆ ಸಂದರ್ಭದಲ್ಲಿ ದೀಪಗಳು ಬೆಳಗಲಿವೆ. ವಿದ್ಯಾರ್ಥಿಗಳು, ಸ್ವಯಂಸೇವಕರು ದೀಪ ಬೆಳಗುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

Tags

Related Articles

Close