ಪ್ರಚಲಿತ

ಶ್ರೀರಾಮನ ಪ್ರಾಣ ಪ್ರತಿಷ್ಠೆಯಂದು ಮನೆ ಮನೆಗಳಲ್ಲಿ ದೀಪ ಬೆಳಗಲು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮನವಿ

ಉತ್ತರ ಪ್ರದೇಶದ ಅಯೋಧ್ಯೆ ಇನ್ನೇನು ಕೆಲವೇ ತಿಂಗಳುಗಳಲ್ಲಿ ಐತಿಹಾಸಿಕ ಕ್ಷಣವೊಂದಕ್ಕೆ ಸಾಕ್ಷಿಯಾಗಲಿದೆ. ಬಹು ಶತಮಾನಗಳ ಬಳಿಕ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಶ್ರೀರಾಮನಿಗೆ ಸಿಕ್ಕಿದ್ದು, ತನ್ನ ಸ್ವಸ್ಥಾನದಲ್ಲಿ ಕುಳಿತು ಭಕ್ತ ಜನರಿಗೆ ಆಶೀರ್ವಾದ ಮಾಡುವ ಪುಣ್ಯ ದಿನಕ್ಕೆ ಜನರು ಕಾತರದಿಂದ ಕಾಯುತ್ತಿದ್ದಾರೆ ಎನ್ನುವುದು ಸತ್ಯ.

2024 ರ ಜನವರಿ 22 ರಂದು ಅಯೋಧ್ಯೆಯ ಭವ್ಯ ಶ್ರೀರಾಮನ ರಾಷ್ಟ್ರ ಮಂದಿರದಲ್ಲಿ ರಾಮ ಲಲ್ಲಾನನ್ನು ಪ್ರತಿಷ್ಠಾಪನೆ ಮಾಡುವುದಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈಗಾಗಲೇ ಮಾಹಿತಿ ನೀಡಿದೆ.‌ ಈ‌ ಸುಂದರ ಸಂದರ್ಭದಲ್ಲಿ ಪೂಜಿಸಿದ ಅಕ್ಷತೆಯ ಜೊತೆಗೆ ದೇಶದ ಸುಮಾರು ಹದಿನೈದು ಲಕ್ಷ ದೇಗುಲಗಳಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಟ್ರಸ್ಟ್ ಮನವಿ ಮಾಡಿದ್ದು, ಇದಕ್ಕಾಗಿ ಪೂಜಿಸಿದ ಅಕ್ಷತೆಗಳನ್ನು ದೇವಾಲಯಗಳಿಗೆ ತಲುಪಿಸುವ ಮಹತ್ವದ ಕೆಲಸವನ್ನು ವಿಶ್ವ ಹಿಂದೂ ಪರಿಷತ್ ಈಗಾಗಲೇ ವಹಿಸಿಕೊಂಡಿದೆ.

ಇದಾದ ಬಳಿಕ ಈಗ ಮತ್ತೊಂದು ಮನವಿ ಮಾಡಿದ್ದು, ಜನವರಿ 22 ರ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಸುಂದರ ಸಂದರ್ಭದಲ್ಲಿ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ನಡುವೆ ಪ್ರತಿ ಗ್ರಾಮ, ಮಹಲ್ಲಾ, ಕಾಲನಿ ಗಳ ದೇವಾಲಯಗಳಲ್ಲಿ ರಾಮ ಭಕ್ತರು ಭಜನೆ, ಕೀರ್ತನೆಗಳನ್ನು ನಡೆಸುವಂತೆ ತಿಳಿಸಿದ್ದಾರೆ. ಹಾಗೆಯೇ ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಸ್ಕ್ರೀನ್‌ಗಳನ್ನು ಅಳವಡಿಸುವ ಮೂಲಕ ಜನರಿಗೆ ನೇರ ದೃಶ್ಯಗಳನ್ನು ತೋರಿಸುವಂತೆಯೂ ಕೇಳಿಕೊಂಡಿದೆ. ಜೊತೆಗೆ ಶಂಖನಾದ, ಗಂಟೆನಾದ, ಆರತಿಗಳನ್ನು ‌ಬೆಳಗುವಂತೆಯೂ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ.

ಜೊತೆಗೆ ಈ‌ ಸಂದರ್ಭದಲ್ಲಿ ಶ್ರೀರಾಮ ಜಪ ‘ಶ್ರೀ ರಾಮ, ಜಯ ರಾಮ, ಜಯ ಜಯ ರಾಮ’ ವನ್ನು ನೂರಾರು ಎಂಟು ಬಾರಿ ಜಪಿಸುವ ಮೂಲಕ, ಶ್ರೀರಾಮನ ಪುಣ್ಯಾನುಗ್ರಹಕ್ಕೆ ಪಾತ್ರರಾಗುವಂತೆ ಕೇಳಿಕೊಂಡಿದೆ. ಹಾಗೆಯೇ ಹನುಮಾನ್ ಚಾಲೀಸಾ, ರಾಮ ರಕ್ಷಾ ಸ್ತೋತ್ರ, ಸುಂದರ ಕಾಂಡ ಇತ್ಯಾದಿಗಳ ಪಠಣ ನಡೆಸುವಂತೆಯೂ ಟ್ರಸ್ಟ್ ಮನವಿ ಮಾಡಿದೆ.

ಹಾಗೆಯೇ ಶ್ರೀರಾಮನ ಪ್ರಾಣ ಪ್ರತಿಷ್ಠೆ ನಡೆದ ದಿನದಂದು ಸಂಜೆ ವೇಳೆಗೆ ಪ್ರತಿ ಮನೆಯಲ್ಲಿಯೂ ದೀಪ ಬೆಳಗುವಂತೆಯೂ ಟ್ರಸ್ಟ್ ಕೋರಿದೆ.

ಪ್ರಧಾನಿ ಪಟ್ಟವನ್ನು ಅಲಂಕರಿಸಿದ ಮೋದಿ ಅವರು ಈ ದೇಶದಲ್ಲಿ ಹಲವಾರು ಮಹತ್ವದ ಬದಲಾವಣೆಗಳನ್ನು ತಂದಿದ್ದಾರೆ. ಹಲವಾರು ಐತಿಹಾಸಿಕ ಸಂದರ್ಭಗಳನ್ನು ಸೃಷ್ಟಿಸಿ ಭಾರತದ ಪರಂಪರೆ, ಇತಿಹಾಸ, ಸಂಸ್ಕೃತಿ ಇತ್ಯಾದಿಗಳಿಗೆ ಮರು ಜೀವ ನೀಡುವ ಕಾಯಕವನ್ನು ಮಾಡಿದ್ದಾರೆ. ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ಜೊತೆಗೆ ದೇಶದ ಅಭೂತಪೂರ್ವ ಸಂಸ್ಕೃತಿ, ಧಾರ್ಮಿಕತೆಯ ಅಭಿವೃದ್ಧಿಯ ಗುರಿಯನ್ನೂ ತಲುಪಿ, ವಿಶ್ವ ವೇ ಭಾರತವನ್ನು ತಿರುಗಿ ನೋಡುವ ಹಾಗೆ ಮಾಡಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಕೋಟ್ಯಂತರ ರಾಮಭಕ್ತರ ಬಹುಕಾಲದ ಕನಸಾಗಿದ್ದು,‌ ಅದನ್ನು ಸಾಧಿಸುವ ಮೂಲಕ ಜನರ ಭಾವನೆಗಳಿಗೆ ಜೀವ ತುಂಬುತ್ತಿದ್ದಾರೆ ಎನ್ನುವುದು ಸ್ಪಷ್ಟ.

Tags

Related Articles

Close