ಮೈತ್ರಿ ಸರ್ಕಾರ ಬಂದಾಗಿನಿಂದ ಜಂಗಿ ಕುಸ್ತಿಗಳು ನಡೆಯುತ್ತನೇ ಇವೆ. ಒಂದಲ್ಲಾ ಒಂದು ಕಾರಣಕ್ಕಾಗಿ ಮೈತ್ರಿ ಸರ್ಕಾರದ ನಾಯಕರು ಪರಸ್ಪರ ಕಚ್ಚಾಡಿಕೊಳ್ಳುವಂತಾಗಿದೆ. ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ದೂರ ಇಡಬೇಕು ಎಂದು ಹಠ ಸಾಧಿಸಿದ ಕಾಂಗ್ರೆಸ್ ಹಾಗೂ ಜನತಾ ದಳ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸಿದರೂ ಇದೀಗ ಮುಸುಕಿನ ಗುದ್ದಾಟದಿಂದ ಹೊರಬರುತ್ತಿಲ್ಲ.
ಉಪಮುಖ್ಯಮಂತ್ರಿ ಸ್ಥಾನ ನಂತರ ಮಂತ್ರಿ ಸ್ಥಾನ, ನಂತರ ಖಾತೆ ಸಂಕಟ ಹೀಗೆ ಎಲ್ಲಾ ವಿಚಾರಗಳಲ್ಲೂ ಮೈತ್ರಿ ಸರ್ಕಾರದ ಜಗಳಗಳು ಬೀದಿಗೆ ಬರುತ್ತಿತ್ತು. ಇದೀಗ ಮತ್ತೆ ಗುದ್ದಾಟ ಶುರುವಾಗಿದೆ. ಸರ್ಕಾರ ನೆಟ್ಟಗಿರಲಿ ಎಂದು ಸಮನ್ವಯ ಸಮಿತಿ ರಚಿಸಿದರೆ ಇದೀಗ ಈ ಸಮನ್ವಯ ಸಮಿತಿಯಲ್ಲೇ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಸಹಿತ ಇತರೆ ನಾಯಕರಿಂದ ಸಮನ್ವಯ ಸಮಿತಿಯ ಸಭೆ ನಡೆದಿತ್ತು. ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಮುಖ್ಯಮಂತ್ರಿ ಕುಮಾರ ಸ್ವಾಮಿಗೆ ಷರತ್ತಿನ ಮೇಲೆ ಷರತ್ತನ್ನು ನೀಡಿದ್ದರು.
“ಸರ್ಕಾರ ಇರುವುದು ಕುಮಾರ ಸ್ವಾಮಿ ಕೈನಲ್ಲಿ. ಆದರೆ ಅವರು ಪದೇ ಪದೇ ಅವರ ಅಪ್ಪನ ಮನೆಗೆ ಓಡಿ ಹೋಗ್ತೀರ. ಇದು ಸಲ್ಲದು. ಇದರಿಂದ ಮೈತ್ರಿ ಸರ್ಕಾರಕ್ಕೆ ಪರಿಣಾಮ ಬೀರುತ್ತೆ. ಪದೇ ಪದೇ ಅಪ್ಪ ದೇವೇಗೌಡರ ಮನೆಗೆ ಹೋದರೆ ಅವರೇ ಸೂಪರ್ ಸಿಎಂ ಎಂಬ ಭಾವನೆ ಮೂಡುತ್ತೆ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತೆ. ಹೀಗಾಗಿ ಏನೇ ನಿರ್ಧಾರ ತೆಗೆದುಕೊಳ್ಳುವುದಿದ್ದರೂ ಸಂಪುಟ ಸಭೆಯಲ್ಲೇ ತೆಗೆದುಕೊಳ್ಳಬೇಕು” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ವಾರ್ನಿಂಗ್ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಈ ವಾರ್ನಿಂಗ್ ನೋಡಿ ಸ್ವತಃ ಕುಮಾರ ಸ್ವಾಮಿಯವರೇ ಬೆಚ್ಚಿ ಬಿದ್ದಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಪ್ರಧಾನಿ ದೇವೇಗೌಡರ ಮೇಲಿರುವ ಸಿಟ್ಟನ್ನು ಸಮಯ ಸಂದರ್ಭ ನೋಡಿ ಬಾಣ ಬಿಟ್ಟು ಅದರ ಹಾಗೆ ತೀರಿಸಿಕೊಳ್ಳುತ್ತಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ.
ಒಟ್ಟಾರೆ ಈ ಮೈತ್ರಿ ಸರ್ಕಾರದಲ್ಲಿ ಮತ್ತೆ ಗುದ್ದಾಟ ಆರಂಭವಾಗಿದ್ದು ಇದೀಗ ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಕುಟುಂಬದ ಬುಡಕ್ಕೇ ಸಿದ್ದರಾಮಯ್ಯ ಕೈ ಹಾಕಿದ್ದು ಈ ಹಿಂದಿನ ದೇವೇಗೌಡರ ಕುಟುಂಬದ ಮೇಲಿರುವ ಹಗೆಯನ್ನು ಸ್ಪಷ್ಟವಾಗಿ ಕಾಣಿಸುತ್ತಿದೆ.
-ಏಕಲವ್ಯ