ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಕಿತ್ತಾಟವೂ ಬಲು ಜೋರಾಗಿಯೇ ನಡೆಯುತ್ತಿದೆ. ಚುನಾವಣೆ ಗೆಲ್ಲಲು ಪಕ್ಷಗಳು ನಡೆಸುತ್ತಿರುವ ಕಸರತ್ತುಒಂದಲ್ಲ ಎರಡಲ್ಲ. ಸ್ವತಃ ಕಾಂಗ್ರೆಸ್ ಆಡಳಿತದಲ್ಲಿ ಇದ್ದರೂ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎದ್ದು ಕಾಣುತ್ತಿದೆ. ಕಾಂಗ್ರೆಸ್ ನ ಹಿಂದೂ ವಿರೋಧಿ ನೀತಿಗೆ ಬೇಸತ್ತ ರಾಜ್ಯದ ಜನತೆ ಈಗಾಗಲೇ ಹೊಸ ಸರಕಾರದ ರಚನೆಗೆ ಕಾಯುತ್ತಿರುವುದು ಸತ್ಯ. ಆದ್ದರಿಂದಲೇ ಕಾಂಗ್ರೆಸ್ ಗೆ ಈ ಬಾರಿ ಸೋಲಿನ ಭೀತಿ ಹೆಚ್ಚಿರುವುದು. ಸಿದ್ದರಾಮಯ್ಯನವರ ಸರ್ವಾಧಿಕಾರದ ಆಡಳಿತಕ್ಕೆ ಸ್ವತಃ ಕಾಂಗ್ರೆಸ್ ನಾಯಕರೇ ಅಸಮಧಾನಗೊಂಡು ಪಕ್ಷ ಬಿಟ್ಟು ಬೇರೆ ಪಕ್ಷಗಳ ಕಡೆ ಮುಖ ಮಾಡಿದ್ದಾರೆ.
ಟಿಕೆಟ್ ಹಂಚಿಕೆ ವಿಚಾರದಲ್ಲೂ ಸಿದ್ದರಾಮಯ್ಯನವರು ತಮಗೆ ಬೇಕಾದ ರೀತಿಯಲ್ಲಿ ಟಿಕೆಟ್ ನೀಡುತ್ತಿದ್ದು, ಇದರಿಂದ ಆಕ್ರೋಶಗೊಂಡ ಪಕ್ಷದ ಮುಖಂಡರು ಈಗಾಗಲೇ ಕಾಂಗ್ರೆಸ್ ಬಿಟ್ಟು ಪಕ್ಷಾಂತರ ಹೊರಟಿದ್ದಾರೆ. ಕಾಂಗ್ರೆಸ್ ನ ಹೈಕಮಾಂಡ್ ಕೂಡಾ ತನ್ನದೇ ಕೈಯಲ್ಲಿ ಇದೆ ಎಂಬಂತೆ ವರ್ತಿಸುತ್ತಿರುವ ಸಿದ್ದರಾಮಯ್ಯನವರಿಗೆ ಇದೀಗ ಭಾರೀ ಕಂಟಕವೊಂದು ಎದುರಾಗಿದೆ.!
ಎರಡು ಕ್ಷೇತ್ರ ಬೇಕೆಂದವರಿಗೆ ಕಿಕ್..!
ರಾಜ್ಯಾದ್ಯಂತ ಸಿದ್ದರಾಮಯ್ಯನವರ ವಿರುದ್ಧ ಜನರು ಪ್ರತಿಭಟಿಸುತ್ತಾ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳ ದೊಡ್ಡ ದಂಡೇ ನಿಂತಿದೆ. ಆದರೆ ಸಿದ್ದರಾಮಯ್ಯನವರು ಮಾತ್ರ ತಾನು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಸಿದ್ದರಾಮಯ್ಯನವರ ಈ ನಡೆಗೆ ಕಾಂಗ್ರೆಸ್ ನಲ್ಲೇ ವಿರೋಧ ವ್ಯಕ್ತ ವಾಗಿತ್ತು. ರಾಜ್ಯದ ಮುಖ್ಯಮಂತ್ರಿಯಾಗಿ ಈ ರೀತಿ ನಡೆದುಕೊಳ್ಳುವುದರಿಂದ ಪಕ್ಷಕ್ಕೂ ಮುಜುಗರ ಉಂಟಾಗಿತ್ತು. ಆದರೆ ಇದೀಗ ಕಾಂಗ್ರೆಸ್ ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದ್ದು, ಈ ಪಟ್ಟಿಯಲ್ಲಿ ಸ್ವತಃ ಸಿದ್ದರಾಮಯ್ಯನವರ ಹೆಸರನ್ನು ಬಿಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಿದ್ದರಾಮಯ್ಯನವರು ತಾನು ಚಾಮುಂಡೇಶ್ವರಿ ಮತ್ತು ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಹೇಳಿಕೊಂಡು ತಿರುಗಾಡುತ್ತಿದ್ದರು. ಆದರೆ ಈ ವಿಚಾರ ಕಾಂಗ್ರೆಸ್ ನಾಯಕರಲ್ಲೇ ಆಕ್ರೋಶಕ್ಕೆ ಕಾರಣವಾಗಿತ್ತು. ಆದ್ದರಿಂದ ಈ ವಿಚಾರ ಕಾಂಗ್ರೆಸ್ ಹೈಕಮಾಂಡಿಗೂ ತಿಳಿಸಿದ್ದರು. ಆದ್ದರಿಂದ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲೇ ಸಿದ್ದರಾಮಯ್ಯನವರ ಹೆಸರನ್ನು ಕೈಬಿಟ್ಟಿದ್ದು , ಸಿದ್ದರಾಮಯ್ಯನವರ ಸರ್ವಾಧಿಕಾರದ ನಡೆಗೆ ತಕ್ಕ ಪಾಠ ಕಲಿಸಿದಂತಾಗಿದೆ!!
ಬಂಡಾಯವೆದ್ದ ನಾಯಕರಿಗೂ ಇಲ್ಲ ಟಿಕೆಟ್ ಭಾಗ್ಯ..!
ಕಾಂಗ್ರೆಸ್ ನ ನೀತಿಯೇ ಹೀಗೆ ಎಂಬ ವಿಚಾರ ಸದ್ಯ ಎಲ್ಲರಿಗೂ ತಿಳಿದಿರಬಹುದು. ಯಾಕೆಂದರೆ ಜೆಡಿಎಸ್ ನಿಂದ ಬಂಡಾಯವೆದ್ದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಅಖಂಡ ಶ್ರೀನಿವಾಸ್ ಗೆ ಟಿಕೆಟ್ ನೀಡದ ಕಾಂಗ್ರೆಸ್ , ಪಕ್ಷದಲ್ಲಿ ಟಿಕೆಟ್ ನೀಡುವುದಾಗಿ ಆಸೆ ಹುಟ್ಟಿಸಿ ಇದೀಗ ಮೋಸ ಮಾಡಿದೆ. ಅಖಂಡ ಶ್ರೀನಿವಾಸ್ ಇತ್ತೀಚೆಗೆ ಜೆಡಿಎಸ್ ಮುಖಂಡರ ನಡೆಗೆ ಬೇಸತ್ತು ಕಾಂಗ್ರೆಸ್ ಸೇರಿದ್ದರು. ಆದರೆ ಇದೀಗ ಕಾಂಗ್ರೆಸ್ ನಿಂದಲೂ ಶ್ರೀನಿವಾಸ್ ರನ್ನು ಕಡೆಗಣಿಸಲಾಗಿದ್ದು, ಇವರ ಮುಂದಿನ ನಡೆ ಕಾದು ನೋಡಬೇಕಾಗಿದೆ.
ಅದೇನೇ ಆಗಲಿ , ಕಾಂಗ್ರೆಸ್ ನ ಮೊದಲ ಅಭ್ಯರ್ಥಿಗಳ ಪಟ್ಟಿ ಇಂದು ಬಿಡುಗಡೆಗೊಳ್ಳಲಿದ್ದು, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರನ್ನೇ ಕೈಬಿಡಲಾಗಿದ್ದು, ಸಿದ್ದರಾಮಯ್ಯನವರಿಗೆ ಭಾರೀ ತಲೆನೋವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯನವರು ಇದು ಫೇಕ್ ನ್ಯೂಸ್, ಕಾಂಗ್ರೆಸಿನ ಅಭ್ಯರ್ಥಿಗಳ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ, ಯಾರೋ ಉದ್ದೇಶ ಪೂರ್ವಕವಾಗಿ ಸುಳ್ಳು ಸುದ್ದಿ ಹರಡಿಸುತ್ತಿದಾರೆ ಎಂದು ಸಮಜಾಯಿಷಿ ಕೊಟ್ಟಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದ ಸಿಎಂ ಗೆ ಒಂದೇ ಒಂದು ಕ್ಷೇತ್ರವೂ ನೀಡದಿದ್ದರೆ ಮತ್ತೊಂದು ಬಾರಿಗೆ ಮುಖ್ಯ ಮಂತ್ರಿ ಆಗುವ ಸಿದ್ದಣ್ಣನ ತಿರುಕನ ಕನಸು ಭಗ್ನವಾದಂತಾಗುತ್ತದೆ. ಕುತೂಹಲ ಕೆರಳಿಸಿರುವ ಈ ಲಿಸ್ಟ್ ನ ಸತ್ಯಾಸತ್ಯತೆಗೆ ಶೀಘ್ರದಲ್ಲೇ ತೆರೆ ಬೀಳಲಿದೆ.
ಮೂಲ: ಪಬ್ಲಿಕ್ ಟಿ.ವಿ
–ಅರ್ಜುನ್