“ರಾಜ್ಯದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಭಾರತೀಯ ಜನತಾ ಪಕ್ಷಕ್ಕೇ ಅಧಿಕಾರ ನಡೆಸಲು ಈ ಕಾಂಗ್ರೆಸ್-ಜೆಡಿಎಸ್ ಪಕ್ಷದ ನಾಯಕರು ಬಿಟ್ಟಿಲ್ಲ. ಇನ್ನು ಅತ್ಯಲ್ಪ ಮತಗಳನ್ನು ಪಡೆದು ಬೀಗುತ್ತಿರುವ ಈ ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿ ಎಷ್ಟು ದಿನ ಮುಂದುವರೆಯುತ್ತಾರೆ…” ಇದು ರಾಜ್ಯದ ಮೂಲೆ ಮೂಲೆಯಲ್ಲೂ ಕೇಳಿ ಬರುತ್ತಿರುವ ಮಾತುಗಳು. ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರಬಾರದು ಎಂಬ ಏಕೈಕ ಕಾರಣಕ್ಕಾಗಿ ಜನತಾ ದಳದ ನಾಯಕ ಹೆಚ್.ಡಿ.ಕುಮಾರ ಸ್ವಾಮಿಯವರನ್ನು ಮುಖ್ಯಮಂತ್ರಿಯನ್ನಾಗಿ ಘೋಷಿಸಿ ಕಾಂಗ್ರೆಸ್ ತಮ್ಮ ಬೆಂಬಲವನ್ನು ಬೇಷರತ್ತಾಗಿ ನೀಡಿತ್ತು.
ಕುಮಾರ ಸ್ವಾಮಿ ಕೂಡಾ ಕಡಿಮೆ ಸ್ಥಾನಗಳನ್ನು ಪಡೆದರೇನಂತೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿದೆಯಲ್ಲಾ ಎಂದು ಈ ಹಿಂದೆ ನೀಡಿದ್ದ ಆ ಎಲ್ಲಾ ಮಾತುಗಳನ್ನೂ ಮರೆತು ಅಧಿಕಾರದ ದಾಹಕ್ಕಾಗಿ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದಾರೆ. ಎಲ್ಲಿ ತಾವು ಮಾಡಿದ ಅಷ್ಟೂ ಹಗರಣಗಳು ಬಯಲಿಗೆ ಬಂದು ನಾವು ಕಂಬಿಎಣಿಸಬೇಕಾಗುತ್ತೋ ಎಂಬ ಭಯದಿಂದ ಕುಮಾರ ಸ್ವಾಮಿಗೆ ಬೆಂಬಲ ನೀಡಿತ್ತು ಕಾಂಗ್ರೆಸ್ ಪಕ್ಷ.
ಒಂದು ಕ್ಷಣ ಅತ್ತ ಇತ್ತ ಗಮನ ಹರಿಸದೆ ಮುಖ್ಯಮಂತ್ರಿ ಹುದ್ದೆಗಾಗಿ ನೇರವಾಗಿ “ನಾವು ಕಾಂಗ್ರೆಸ್ ಜೊತೆ ಕೈಜೋಡಿಸುತ್ತೇವೆ” ಎಂದು ಘೋಷಿಸಿಯೇ ಬಿಟ್ಟರು. 104 ಸ್ಥಾನಗಳನ್ನು ಪಡೆದು ಅತಿದೊಡ್ಡ ಪಕ್ಷವಾಗಿ ಮೆರೆದ ಭಾರತೀಯ ಜನತಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರೆ ಅಲ್ಲಿ ಮುಖ್ಯಮಂತ್ರಿ ಸ್ಥಾನ ಅಲಭ್ಯ. ಈ ಕಾರಣಕ್ಕಾಗಿಯೇ ಸುಲಭವಾಗಿ ಮುಖ್ಯಮಂತ್ರಿ ಸ್ಥಾನವನ್ನು ನೀಡಿದ್ದ ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದಾರೆ ಮುಖ್ಯಮಂತ್ರಿ ಕುಮಾರ ಸ್ವಾಮಿ.
ಆದರೆ ಇದೀಗ ಮುಖ್ಯಮಂತ್ರಿ ಕುಮಾರ ಸ್ವಾಮಿಗೆ ಕಾಂಗ್ರೆಸ್ ಭಾರೀ ಷರತ್ತನ್ನೇ ಇಟ್ಟಿದೆ. ಮುಖ್ಯಮಂತ್ರಿ ಸ್ಥಾನವೇನೋ ನಿಮಗೇ ಕೊಟ್ಟಿದ್ದೇವೆ. ಆದರೆ ನಾವು ಕೇಳುವ ಸಚಿವ ಸ್ಥಾನಗಳನ್ನು ನಮಗೆ ಬಿಟ್ಟುಕೊಡಬೇಕು ಎಂದು ಹಠ ಹಿಡಿದಿವೆ. ಇದು ಕುಮಾರ ಸ್ವಾಮಿ ಹಾಗೂ ದೊಡ್ಡ ಗೌಡರಿಗೆ ಭಾರೀ ತಲೆನೋವುಂಟು ಮಾಡಿದೆ.
ಇಂದು ಸಚಿವ ಸಂಪುಟ ರಚನೆ ಬಗ್ಗೆ ಮಾತುಕತೆ ನಡೆಸಲು ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಕುಮಾರ ಸ್ವಾಮಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜಾದ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಆದರೆ ಗುಲಾಂ ನಬಿ ಅಜಾದ್ ಅವರೂ ಈ ಸಂಬಂಧ ಒಲ್ಲೆ ಎಂದಿದ್ದಾರೆ ಎನ್ನಲಾಗಿದೆ.
ಈಗಾಗಲೇ ಕಾಂಗ್ರೆಸ್ ಪಕ್ಷ ಹಣಕಾಸು ಸಚಿವ ಸ್ಥಾನವನ್ನು ತಮಗೇ ಬೇಕು ಎಂದು ಪಟ್ಟು ಹಿಡಿದಿದೆ. ಮುಖ್ಯಮಂತ್ರಿ ಸ್ಥಾನವನ್ನು ನೀಡಿ ಹಣಕಾಸು ಸಹಿತ ಇನ್ನಿತರ ಪ್ರಮುಖ ಸ್ಥಾನಗಳನ್ನು ತಮ್ಮಲ್ಲೇ ಇಟ್ಟುಕೊಳ್ಳುವ ಪ್ಲಾನ್ ಕಾಂಗ್ರೆಸ್ ಪಕ್ಷದ್ದು.
ಪ್ರಮುಖ ಸ್ಥಾನಗಳಾದ ಸಮಾಜ ಕಲ್ಯಾಣ, ಇಂಧನ, ಹಣಕಾಸು, ಗೃಹ ಇಲಾಖೆ, ಬೃಹತ್ ಕೈಗಾರಿಕೆ, ಗ್ರಾಮೀಣಾಭಿವೃದ್ಧಿ,ಶಿಕ್ಷಣ ಖಾತೆ, ಜಲಸಂಪನ್ಮೂಲ ಇಲಾಖೆಗಳನ್ನು ತಮ್ಮಲ್ಲೇ ಇಟ್ಟುಕೊಳ್ಳಲು ಕಾಂಗ್ರೆಸ್ ಸಖತ್ ಪ್ಲಾನ್ ಹೂಡಿದೆ. ಇನ್ನು ಜನತಾ ದಳಕ್ಕೆ ಕೃಷಿ, ಕಂದಾಯ, ತೋಟಗಾರಿಕೆ, ರೇಷ್ಮೆ,ಸಹಕಾರ, ಕಾನೂನು-ಸಂಸದೀಯ,ಅರಣ್ಯ, ವಸತಿ, ಸಾರಿಗೆ ಹಾಗೂ ಕಾರ್ಮಿಕ ಸಚಿವ ಸ್ಥಾನಗಳನ್ನು ಬಿಟ್ಟುಕೊಡಲು ಪ್ಲಾನ್ ಹಾಕಿಕೊಂಡಿದೆ.
ಆದರೆ ಈ ಪ್ಲಾನ್ ಗೆ ಕುಮಾರ ಸ್ವಾಮಿ ಅಸಮ್ಮತಿ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಇಂದಿನ ದೆಹಲಿಯ ಸಭೆ ಸಫಲವಾಗಿಲ್ಲದಿದ್ದರೆ ಮತ್ತೆ ಒಂದು ವಾರ ಸಂಪುಟ ರಚನೆ ಕಾರ್ಯ ಮುಂದೂಡಬೇಕಾಗುತ್ತದೆ. ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿರುವ ಕಾರಣದಿಂದ ಈಗಲೇ ಎಲ್ಲಾ ನಿರ್ಧಾರವನ್ನು ತಳೆಯಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ಮೊದಲೇ ಕಾಂಗ್ರೆಸ್ ಮುಲಾಜಿಯಲ್ಲಿರುವ ಮುಖ್ಯಮಂತ್ರಿ ಕುಮಾರ ಸ್ವಾಮಿ ಇದೀಗ ಮತ್ತಷ್ಟು ಮುಲಾಜಿಗೆ ಸಿಲುಕಿಕೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿದೆ. ಈ ಮೂಲಕ ಮೈತ್ರಿ ಸರ್ಕಾರದ ಕಿತ್ತಾಟ ಆರಂಭವಾಗಿರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.
-ಸುನಿಲ್ ಪಣಪಿಲ