ಪ್ರಚಲಿತ

ನಾನು ಭಾರತ ಮಾತೆಯನ್ನು ಪೂಜಿಸುವವನು: ಪ್ರಧಾನಿ ಮೋದಿ

ಈ ಲೋಕಸಭಾ ಚುನಾವಣೆಯು ಶಕ್ತಿಯನ್ನು ನಾಶ ಮಾಡುವವರು ಮತ್ತು ಶಕ್ತಿಯನ್ನು ಉಳಿಸುವವರ ನಡುವಿನ ಹೋರಾಟವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಅವರು ತೆಲಂಗಾಣದಲ್ಲಿ ‌ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಬಿಜೆಪಿ, ಎನ್‌ಡಿಎ ವಿರೋಧಿ ಇಂಡಿ ಒಕ್ಕೂಟ ತನ್ನ ಪ್ರಣಾಳಿಕೆಯಲ್ಲಿ ಶಕ್ತಿಯನ್ನು ಮುಗಿಸುವ ಬಗ್ಗೆ ಹೇಳಿದೆ.‌ ಆದರೆ ನನಗೆ ಪ್ರತಿಯೊಬ್ಬ ತಾಯಿ, ಪ್ರತಿಯೊಬ್ಬ ಮಗಳು ಶಕ್ತಿಯ ಸ್ವರೂಪ. ನಾನು ಅವರನ್ನು ಪೂಜಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ನಮ್ಮ ದೇಶದ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಕಳೆದ ವರ್ಷ ಚಂದ್ರಯಾನ -3 ನಡೆಸಿ ಯಶಸ್ವಿಯಾಗಿದೆ. ನಾವು ಈ ಯಶಸ್ಸನ್ನು ಶಿವಶಕ್ತಿಗೆ ‌ಸಮರ್ಪಣೆ ಮಾಡಿದ್ದೇವೆ. ಆದರೆ ವಿರೋಧ ಪಕ್ಷಗಳು ಶಕ್ತಿಯನ್ನು ನಾಶ ಮಾಡುವ ಬಗ್ಗೆ ಮಾತನಾಡುತ್ತಿವೆ ಎಂದು ಅವರು ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭಾ ಚುನಾವಣಾ ದಿನಾಂಕ ಪ್ರಕಟವಾದ ಬಳಿಕ ಮುಂಬೈನಲ್ಲಿ ಇಂಡಿ ಒಕ್ಕೂಟ ತನ್ನ ಸಭೆಯನ್ನು ನಡೆಸಿತ್ತು. ಈ ಸಭೆಯಲ್ಲಿ ಇಂಡಿ ತನ್ನ ಪ್ರಣಾಳಿಕೆಯನ್ನು ಘೋಷಣೆ ಮಾಡಿದೆ. ತಮ್ಮ ಶಕ್ತಿ ವಿರುದ್ಧದ ಹೋರಾಟ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನಡೆಯುತ್ತದೆ ಎಂದು ಅವರು ಹೇಳಿದ್ದಾರೆ. ನನಗೆ ಪ್ರತಿಯೊಬ್ಬ ತಾಯಿ, ಪ್ರತಿಯೊಬ್ಬ ಮಗಳು ಸಹ ಶಕ್ತಿಯ ಸ್ವರೂಪ. ತಾಯಂದಿರೇ, ಸಹೋದರಿಯರೇ ನಾನು ನಿಮ್ಮನ್ನು ಶಕ್ತಿ ಎಂಬುದಾಗಿ ಪೂಜೆ ಮಾಡುತ್ತೇನೆ. ನಾನು ಭಾರತ ಮಾತೆಯನ್ನು ಪೂಜಿಸುವ ವ್ಯಕ್ತಿ ಎಂದು ಅವರು ಮಹಿಳೆಯರ ಬಗೆಗಿನ ತಮ್ಮ ಪೂಜ್ಯ ಭಾವನೆ, ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.

ಇಂಡಿ ಒಕ್ಕೂಟ ಪ್ರಣಾಳಿಕೆಯಲ್ಲಿ ಹೇಳಿರುವ ಶಕ್ತಿಯನ್ನು ನಾಶ ಮಾಡುವ ವಿಷಯವನ್ನು ನಾನು ಸವಾಲಾಗಿ ತೆಗೆದುಕೊಳ್ಳುತ್ತೇನೆ. ಮಹಿಳಾ ಸುರಕ್ಷತೆಗಾಗಿ ನನ್ನ ಜೀವನವನ್ನು ಪಣಕ್ಕಿಡಲು ನಾನು ಸಿದ್ಧ ಎಂದು ಪ್ರಧಾನಿ ಹೇಳಿದ್ದಾರೆ.

ಇನ್ನು ತೆಲಂಗಾಣದಲ್ಲಿ ಜನರು ಭಾರತೀಯ ಜನತಾ ಪಕ್ಷಕ್ಕೆ ಹೆಚ್ಚು ಸಂಖ್ಯೆಯಲ್ಲಿ ಬೆಂಬಲ ನೀಡಲು ಆರಂಭಿಸಿದ್ದಾರೆ. ಲೋಕಸಭಾ ಚುನಾವಣೆಯ ಈ ಹೊತ್ತಿನಲ್ಲಿ ತೆಲಂಗಾಣದಲ್ಲಿ ಬಿಜೆಪಿ ಅಲೆ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಆರ್‌ಎಸ್ ಪಕ್ಷಗಳು ಮಾಯವಾಗುತ್ತವೆ ಎಂದು ಪ್ರಧಾನಿ ಮೋದಿ ಅವರು ತಿಳಿಸಿದ್ದಾರೆ.

Tags

Related Articles

Close