ಪಾಕಿಸ್ತಾನ ಭಾರತದ ವಿರುದ್ಧ ಸದಾ ಕತ್ತಿ ಮಸೆಯುತ್ತಿರುತ್ತದೆ. ಆದರೆ ಈ ಬಾರಿ ಪಾಕಿಸ್ತಾನ ಭಾರತವನ್ನು ವಿಶ್ವ ಸಮುದಾಯದ ಮುಂದೆ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಲು ಮಾಡಿದ ಪ್ಲಾನ್ ಉಲ್ಟಾ ಹೊಡೆದಿದ್ದು, ಟ್ವಿಟ್ಟರ್ ಕಂಪನಿ ಪಾಕ್ ರಕ್ಷಣಾ ಸಚಿವಾಲಯದ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಅಮಾನತು ಮಾಡಿದೆ.
ದೆಹಲಿ ವಿವಿಯ ಕವಲ್ ಪ್ರೀತ್ ಎಂಬುವವರು ನಮ್ಮ ಸಂವಿಧಾನದ ಜ್ಯಾತ್ಯಾತೀತ ಮೌಲ್ಯವನ್ನು ಸಾರುವ ಸಂದೇಶವನ್ನು ಹಿಡಿದಿರುವ ಫೋಟೋವನ್ನು ಟ್ವಿಟ್ಟರ್ನಲ್ಲಿ ಪ್ರಕಟಿಸಿದ್ದರು. ಆದರೆ ಪಾಕ್ ರಕ್ಷಣಾ ಸಚಿವಾಲಯ ಸೆಪ್ಟೆಂಬರ್ನಲ್ಲಿ ಈ ಫೋಟೋವನ್ನು ಫೋಟೋಶಾಪ್ನಲ್ಲಿ ಬದಲಿಸಿ ಭಾರತ ವಿರುದ್ಧ ತಪ್ಪು ಸಂದೇಶ ಬಿತ್ತರಿಸುವ ಫೋಟೋ ಪ್ರಕಟಿಸಿತ್ತು.
ಪಾಕ್ ರಕ್ಷಣಾ ಸಚಿವಾಲಯದ ಟ್ವೀಟ್ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಜತೆಗೆ ಟ್ವಿಟ್ಟರ್ಗೆ ದೂರು ಸಲ್ಲಿಸಿದ್ದರು. ಟ್ವಿಟ್ಟರ್ ಬಳಕೆದಾರರ ದೂರನ್ನು ಪರಿಶೀಲಿಸಿದ ಕಂಪನಿ ಈಗ ಪಾಕ್ ರಕ್ಷಣಾ ಸಚಿವಾಲಯದ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಅಮಾನತುಗೊಳಿಸಿದೆ. ಭಾರತವನ್ನು ಟೀಕಿಸಲು ತಿರುಚಿದ ಫೋಟೋವನ್ನು ಪ್ರಕಟಿಸುವ ಮೂಲಕ ಪಾಕಿಸ್ತಾನ ಮತ್ತೊಮ್ಮೆ ತನ್ನ ಮಾನವನ್ನು ಕಳೆದುಕೊಂಡು ತೀವ್ರ ಟೀಕೆಗೆ ಗುರಿಯಾಗಿದೆ.
ಆಗಿದ್ದು ಇಷ್ಟು @defencepk ಹೆಸರಿನಲ್ಲಿರುವ ಅಧಿಕೃತ ಟ್ಟಿಟ್ಟರ್ ಖಾತೆಯೊಂದು ನವೆಂಬರ್ 16 ರಂದು ಒಂದು ಯುವತಿಯೊಬ್ಬಳು ಪೋಸ್ಟರ್ ಹಿಡಿದುಕೊಂಡಿರುವ ಫೋಟೋ ಇರುವ ಟ್ವೀಟ್ ಪ್ರಕಟಿಸಿತ್ತು. ಯುವತಿಯು “ನಾನು ಭಾರತೀಯಳು, ಆದರೆ ನಾನು ಭಾರತವನ್ನು ವಿರೋಧಿಸುತ್ತೇನೆ ಎನ್ನುವ ಪೋಸ್ಟರ್ ಹಿಡಿದಿದ್ದಳು. ಈ ಟ್ವೀಟ್ ಗೆ ಪಾಕಿಸ್ತಾನ ಡಿಫೆನ್ಸ್,”ಭಾರತ ವಸಾಹತುಶಾಹಿ ದೇಶ ಎನ್ನುವುದು ಕೊನೆಗೂ ಭಾರತೀಯರಿಗೆ ಅರಿವಾಗಿದೆ” ಎಂದು ಶೀರ್ಷಿಕೆಯನ್ನು ಹಾಕಿತ್ತು.
ಈ ಟ್ವೀಟ್ ಪ್ರಕಟವಾಗಿದ್ದೆ ತಡ ಭಾರತೀಯರು ರೊಚ್ಚಿಗೆದ್ದು, ಪಾಕ್ ಡಿಫೆನ್ಸ್ ಸುಳ್ಳು ಸುದ್ದಿಯನ್ನು ಹರಡಿಸುತ್ತಿದೆ. ಭಾರತೀಯ ಯುವತಿಯ ಪೋಸ್ಟರ್ ತಿರುಚಿ ತನಗೆ ಬೇಕಾದಂತೆ ಎಡಿಟ್ ಮಾಡಿ ಪೋಸ್ಟ್ ಪ್ರಕಟಿಸಿದೆ. ಈ ಮೂಲಕ ಟ್ವಿಟ್ಟರ್ ನಿಯಮವನ್ನು ಉಲ್ಲಂಘಿಸಿದೆ ಎಂದು ಹೇಳಿ ರಿಪೋರ್ಟ್ ಮಾಡಲು ಆರಂಭಿಸಿದ್ದರು. ಸುದ್ದಿ ವೈರಲ್ ಆಗಿ ರಿಪೋರ್ಟ್ ಜಾಸ್ತಿ ಆಗುತ್ತಿದ್ದಂತೆ ಟ್ವಿಟ್ಟರ್ ಈಗ ಈ ಖಾತೆಯನ್ನು ಅಮಾನತಿನಲ್ಲಿಟ್ಟಿದೆ.
ಪಾಕ್ ಡಿಫೆನ್ಸ್ ಟ್ವೀಟ್ ಮಾಡಿದ್ದ ಫೋಟೋದಲ್ಲಿದ್ದ ಯುವತಿ ಈ ಹಿಂದೆ ಭಾರತದಲ್ಲಿ ಆಗುತ್ತಿದ್ದ ಕೋಮುಗಲಬೆಯನ್ನು ಖಂಡಿಸಿ ಮಸೀದಿಯೊಂದರ ಮುಂದೆ ಪೋಸ್ಟರ್ ಹಿಡಿದು ನಿಂತಿದ್ದಳು. ಈ ಪೋಸ್ಟರ್ ನಲ್ಲಿ ಭಾರತದ ಸಂವಿಧಾನಕ್ಕೆ ನಾನು ಗೌರವ ನೀಡುತ್ತೇನೆ ಎನ್ನುವ ವಾಕ್ಯವಿತ್ತು.
ಪಾಕಿಸ್ತಾನ ಭಾರತವನ್ನು ಟೀಕಿಸಲು ಹೋಗಿ ತನ್ನ ಮಾನವನ್ನು ಕಳೆದುಕೊಳ್ಳುವುದು ಇದೆ ಮೊದಲೆನಲ್ಲ. ಈ ಹಿಂದೆ ಸೆಪ್ಟೆಂಬರ್ ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ ಪ್ರತಿನಿಧಿ ಮಲೇಹಾ ಲೋಧಿ ಭಾರತದ ಕಾಶ್ಮೀರದಲ್ಲಿ ಹೇಗೆ ಹಿಂಸಾಚಾರ ನಡೆಯುತ್ತಿದೆ ಎನ್ನುವುದನ್ನು ವಿಶ್ವಕ್ಕೆ ತೋರಿಸಲು ಪೆಲೆಟ್ ಗನ್ನಿಂದ ಗಾಯಗೊಂಡಿದ್ದ ಯುವತಿ ಫೋಟೋವನ್ನು ಪ್ರದರ್ಶಿಸಿದ್ದರು. ಆದರೆ ಈ ಫೋಟೋ ಗಾಜಾ ಯುದ್ಧ ಸಂದರ್ಭದಲ್ಲಿನ ಫೋಟೋ ಎಂದು ಮಾಧ್ಯಮಗಳು ಪ್ರಕಟಿಸುವ ಮೂಲಕ ಪಾಕ್ ನೈಜ ಬಣ್ಣವನ್ನು ಬಯಲು ಮಾಡಿತ್ತು. ಗಾಜಾ ಯುದ್ಧದ ಸಂದರ್ಭದಲ್ಲಿ ಲ. 17 ವರ್ಷದ ಯುವತಿ ದಾವಿ ಅಬು ಜೊಮ್ ಗಾಯಗೊಂಡಿದ್ದಳು. ಈ ಫೋಟೋವನ್ನು ಪಾಕ್ ಅಧಿಕಾರಿ ಪ್ರದರ್ಶಿಸಿದ ಬಳಿಕ ವಿಶ್ವದಾದ್ಯಂತ ಪಾಕ್ ವಿರುದ್ಧ ಟೀಕೆಗಳು ವ್ಯಕ್ತವಾಗಿತ್ತು.
ಇದಾದ ಬಳಿಕ ಪಾಕಿಸ್ತಾನ ಸರ್ಕಾರ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ದೇಶದ ಪಾರಂಪರೆಯ ತಾಣಗಳ ವಿಡಿಯೋದಲ್ಲಿ ಅಫ್ಘಾನಿಸ್ತಾನದ ಮಸೀದಿಯನ್ನು ಪ್ರಕಟಿಸಿ ಎಡವಟ್ಟು ಮಾಡಿಕೊಂಡಿತ್ತು. ಪಾಕ್ ಸರ್ಕಾರದ ಅಧಿಕೃತ ಟ್ವಿಟ್ಟರ್ ಖಾತೆ ಯಲ್ಲಿ ಒಂದು ವಿಡಿಯೋ ಅಪ್ಲೋಡ್ ಆಗಿತ್ತು. ಈ ಪರಂಪರೆಯ ತಾಣಗಳನ್ನು ವಿವರಿಸುವ ವಿಡಿಯೋ ಗೆ ದೇಶದ ನಾಗರಿಕತೆ, ಪರಂಪರೆ, ಸಂಸ್ಕೃತಿಯನ್ನು ತೋರಿಸುವ ಸುಂದರ ದೃಶ್ಯಗಳು ಎನ್ನುವ ಶೀರ್ಷಿಕೆಯನ್ನು ಹಾಕಿತ್ತು. ಆದರೆ ಈ ವಿಡಿಯೋದಲ್ಲಿ ಅಫ್ಘಾನಿಸ್ತಾನದ ಪ್ರಸಿದ್ಧ ಹಜರ್ ಅಲಿ ಮಸೀದಿಯ ಫೋಟೋವನ್ನು ತೋರಿಸಿತ್ತು. ಈ ಫೋಟೋ ನೋಡಿದ ಜನರು ಪಾಕ್ ಸರ್ಕಾರದ ಎಡವಟ್ಟನ್ನು ತೋರಿಸಿದ ಕೂಡಲೇ ಈ ವಿಡಿಯೋ ಖಾತೆಯಿಂದ ಈಗ ಡಿಲೀಟ್ ಆಗಿತ್ತು.
ಪದೇ ಪದೇ ಭಾರತದ ಮಂದೆ ಮಾನಕಳೆದು ಕೊಂಡರೂ, ಇನ್ನೂ ಈ ಪಾಪಿ ಪಾಕ್ಗೆ ಬುದ್ದಿ ಬರುವುದು ಕಾಣುತ್ತಿಲ್ಲ.
-ಪವಿತ್ರ