ಬಿಜೆಪಿ ಬಹುಮತ ಪಡೆಯಲು ಸಾಧ್ಯ ಆಗದೇ ಇದ್ದರೂ ಯಡಿಯೂರಪ್ಪ ನವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಏರುವಂತೆ ಮಾಡಿಯೇ ಬಿಟ್ಟಿದೆ. ಆದರೆ ಇತ್ತ ಏನೂ ಮಾಡಲಾಗದ ಸ್ಥಿತಿಗೆ ಬಂದು ನಿಂತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತಿಭಟನೆ, ಹೋರಾಟ ಎಂದು ಹೇಳಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ತಮ್ಮ ಶಾಸಕರು ಬಿಜೆಪಿ ಪಾಳಯಕ್ಕೆ ಜಾರಬಹುದು ಎಂಬ ಭಯದಿಂದ ರೆಸಾರ್ಟ್ ರಾಜಕೀಯ ಆರಂಭಿಸಿದ ಕಾಂಗ್ರೆಸ್ ಡಿಕೆಶಿ ಯನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಿದೆ. ಆದರೆ ಬಿಜೆಪಿ ಮಾತ್ರ ರಾಜ್ಯಪಾಲರು ನೀಡಿರುವ ಕಾಲಾವಕಾಶದ ಮೊದಲೇ ನಾವು ಬಹುಮತ ಸಾಬೀತು ಪಡಿಸುತ್ತೇವೆ ಎಂದು ಧೈರ್ಯದಿಂದ ಹೇಳಿಕೊಂಡಿದ್ದು, ಇತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಭಯ ಶುರುವಾಗಿದೆ.
ಈಗಾಗಲೇ ಕೆಲ ಕೈ ಶಾಸಕರು ನಾಪತ್ತೆಯಾಗಿದ್ದು, ಕಾಂಗ್ರೆಸ್ ನ ಸಂಪರ್ಕಕ್ಕೆ ಸಿಗದೆ , ಇತ್ತ ಬಿಜೆಪಿಗೆ ಸೇರ್ಪಡೆಯೂ ಆಗದೆ ಬಹಳ ಕುತೂಹಲ ಕೆರಳಿಸಿದ್ದಾರೆ.ಆದರೆ ನಾಪತ್ತೆಯಾದವರು ಬಿಜೆಪಿ ಬೆಂಬಲಿಸುತ್ತಾರೆ ಎಂಬ ಭಯ ಕಾಂಗ್ರೆಸ್ ಗೆ ಹುಟ್ಟಿದ್ದು, ಇದ್ದ ಶಾಸಕರನ್ನು ಉಳಿಸಿಕೊಳ್ಳಲು ಪರದಾಡುತ್ತಿದೆ.
ಲಿಂಗಾಯತ ಶಾಸಕರ ಮೇಲೆ ಬಿಜೆಪಿ ಕಣ್ಣು..!
ರಾಜಕಾರಣವೇ ಹೀಗೆ , ಎಲ್ಲಿ ಏನಾಗುತ್ತದೆ ಎಂಬುದು ಯಾರಿಗೂ ತಿಳಿದಿರುವುದಿಲ್ಲ. ಅದರಂತೆಯೇ ಸದ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳಯದಲ್ಲಿ ಏನಾಗುತ್ತಿದೆ ಎಂದು ಮುಖಂಡರು ಯೋಚಿಸುತ್ತಿದ್ದಂತೆ ಇತ್ತ ಬಿಜೆಪಿ ನಾಯಕರು ಕಾಂಗ್ರೆಸ್ ನ ರಕ್ಷಣೆಯಲ್ಲಿರುವ ಕೈ ಶಾಸಕರ ಮೇಲೆ ಕಣ್ಣಿಟ್ಟಿದ್ದು, ಸ್ಪಷ್ಟ ಬಹುಮತಕ್ಕಾಗಿ ಮ್ಯಾಜಿಕ್ ನಂಬರ್ ಪಡೆಯಲು ಕೈ ಶಾಸಕರನ್ನು ತಮ್ಮತ್ತ ಸೆಳೆಯುವ ಕೆಲಸದಲ್ಲಿ ತೊಡಗಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಗೆದ್ದಿರುವ ಲಿಂಗಾಯತ ಶಾಸಕರ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಹೊಸ ತಂತ್ರ ರೂಪಿಸಿದೆ. ಅದರಂತೆಯೇ ಈಗಾಗಲೇ ಒಟ್ಟು ೮ ಶಾಸಕರು ಬಿಜೆಪಿ ಸೇರಲು ನಿರ್ಧರಿಸಿದ್ದು, ಕಾಂಗ್ರೆಸ್ ಗೆ ಶಾಕ್ ನೀಡಲಿದ್ದಾರೆ. ಹುಮುನಾಬಾದ್ ಶಾಸಕ ರಾಜಶೇಖರ ಬಿ ಪಾಟೀಲ್, ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪಗೌಡ ಪಾಟೀಲ್, ಸಿಂಧನೂರು ಕ್ಷೇತ್ರದ ಶಾಸಕ ವೆಂಕರರಾವ್ ನಾಡಗೌಡ, ಬಸವಕಲ್ಯಾಣದ ಶಾಸಕ ಬಿ.ನಾರಾಯಣರಾವ್, ಬೈಲಹೊಂಗಲ ಕ್ಷೇತ್ರದ ಶಾಸಕ ಮಹಾಂತೇಶ ಕೌಜಲಗಿ, ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ, ಲಿಂಗನಸೂರು ಶಾಸಕ ಡಿ.ಎಸ್.ಹೂಲಗೇರಿ ಸೇರಿ ಒಟ್ಟು ಎಂಟು ಶಾಸಕರು ಬಿಜೆಪಿಗೆ ಸೇರುವ ಮುನ್ಸೂಚನೆ ದೊರಕಿದ್ದು, ಲಿಂಗಾಯತರನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲು ಈ ಶಾಸಕರು ಮುಂದಾಗಿದ್ದಾರೆ.!
ಈಗಾಗಲೇ ಕಾಂಗ್ರೆಸ್ ನ ಎಲ್ಲಾ ಆದೇಶಗಳನ್ನು ಮೀರಿ ಕೆಲ ಶಾಸಕರು ಕಾಂಗ್ರೆಸ್ ಬಲೆಯಿಂದ ತಪ್ಪಿಸಿಕೊಂಡಿದ್ದು ಇವರೆಲ್ಲರೂ ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಂತೆಯೇ ಪಕ್ಷೇತರ ಶಾಸಕರು ಈಗಾಗಲೇ ಬಿಜೆಪಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿಕೊಂಡಿರುವುದರಿಂದ ಇನ್ನೇನು ಕೆಲವೇ ಕೆಲವು ಸ್ಥಾನ ಮಾತ್ರ ಬಿಜೆಪಿಗೆ ಅಗತ್ಯವಿದೆ. ಆದ್ದರಿಂದ ಆಪರೇಷನ್ ಕಮಲ ಮಾಡಲು ಮುಂದಾದ ಬಿಜೆಪಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಜಾರಿಕೊಂಡಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಸ್ಪಷ್ಟ ಬಹುಮತ ಸಾಬೀತು ಪಡಿಸಿ ಬಿಜೆಪಿ ಸರಕಾರ ರಚಿಸಲಿದೆ..!
–ಅರ್ಜುನ್